Homeಮುಖಪುಟಹೊನ್ನಾಳಿ ಶಾಸಕರ ‘ಫೋನ್-ಇನ್ ಫಜೀತಿ ಪ್ರಸಂಗ'

ಹೊನ್ನಾಳಿ ಶಾಸಕರ ‘ಫೋನ್-ಇನ್ ಫಜೀತಿ ಪ್ರಸಂಗ’

- Advertisement -
- Advertisement -
‘ನರ್ಸ್ ಪ್ರೇಮ ಪ್ರಸಂಗ’ ಖ್ಯಾತಿಯ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯರ ನಸೀಬೇ ಅದ್ಯಾಕೊ ನೆಟ್ಟಗಿದ್ದಂತೆ ಕಾಣುತ್ತಿಲ್ಲ. ಕೈಯಿಟ್ಟಲ್ಲೆಲ್ಲ ಬಿಸಿ ಅನುಭವವೇ ತಾಕುತ್ತಿವೆ. ಯಡ್ಯೂರಪ್ಪನವರ ಸಂಪುಟದಲ್ಲಿ ಇನ್ನೇನು ಮಂತ್ರಿ ಆಗಿಯೇಬಿಟ್ಟೆ ಅಂತ ಅಣಿಯಾಗಿದ್ದ ರೇಣುಕಾಚಾರಿಯವರಿಗೆ ಹೈಕಮಾಂಡ್ ದೊಡ್ಡ ಶಾಕ್ ಕೊಟ್ಟಿತ್ತು.

ಇವರ ಮೇಲಿರುವ ಅಕ್ಕರೆಗಿಂತ ಹೆಚ್ಚಾಗಿ ಕಳೆದಸಲ ಮಂತ್ರಿಗಿರಿ ಸಿಗಲಿಲ್ಲವೆಂದು ಬೇಳೂರು ಜೊತೆ ಸೇರಿ ಗೋವಾ ಹೈಡ್ರಾಮಾ ಸೃಷ್ಟಿಸಿದ್ದ ರೇಣುಕಾಚಾರ್ಯರ ಐಲಾಟಗಳಿಗೆ ಬೆದರಿ ಪಾಪಾ ಯಡ್ಯೂರಪ್ಪನವರೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂಬ ನಿರಾಶ್ರಿತ ಶಿಬಿರವೊಂದನ್ನು ವ್ಯವಸ್ಥೆ ಮಾಡಿ ಸದ್ಯಕ್ಕೆ ಸಮಾಧಾನ ಮಾಡಿದ್ದಾರೆ. ಆದರೆ ಅಲ್ಲೂ ಯಡವಟ್ಟುಗಳೇ ರೇಣುಕಾರನ್ನು ಕಾಡುತ್ತಿವೆ.

ಕೊರೊನಾ ಹರಡಿಸುತ್ತಿದ್ದಾರೆಂಬ ಕೋಮುಭ್ರಮೆಯಲ್ಲಿ ಮುಸ್ಲಿಮರನ್ನು ಗುಂಡಿಟ್ಟು ಕೊಲ್ಲಬೇಕು ಎಂಬರ್ಥದ ಬೇಜವಾಬುದಾರಿ ಹೇಳಿಕೆ ಕೊಟ್ಟು ಹಿಗ್ಗಾಮುಗ್ಗಾ ತರಾಟೆಗೆ ತುತ್ತಾಗಿದ್ದ ರೇಣುಕಾಚಾರಿ, ಮೊನ್ನೆ ‘ಕೊರೊನಾ ವಾರಿಯರ್ಸ್’ ಆಶಾ ಕಾರ್ಯಕರ್ತೆಯರನ್ನು ದೈಹಿಕ ಅಂತರವಿಲ್ಲದೆ ಕಿಷ್ಕಿಂಧೆಯಂತಹ ಕೋಣೆಯಲ್ಲಿ ತುರುಕಿ ಅವರ ಮುಂದೆ ಭಾಷಣ ಬಿಗಿಯಲು ಹೋಗಿ ಖುದ್ದು ಯಡ್ಯೂರಪ್ಪನವರಿಂದಲೇ ‘ಲಾಸ್ಟ್ ವಾರ್ನಿಂಗ್’ಗೆ ತುತ್ತಾಗಿದ್ದೂ ಉಂಟು. ಇದೀಗ ಮೀಡಿಯಾಗಳ ಮುಂದೆ ಬೊಗಳೆ ಬಿಲ್ಡಪ್ ತೆಗೆದುಕೊಳ್ಳಲು ಹೋಗಿ ಮಾಜಿ ಶಾಸಕ ಶಾಂತನಗೌಡರ ಕೈಗೆ ತಗುಲಿಕೊಂಡು ಕಣ್ಣ್ ಕಣ್ಣು ಬಿಡುತ್ತಿದ್ದಾರೆ.

ಆಗಿದ್ದಿಷ್ಟು. ಮೊನ್ನೆ ವಿಜಯವಾಣಿ ಪತ್ರಿಕೆ ಆಯೋಜಿಸಿದ್ದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ರೇಣುಕಾಚಾರ್ಯರ ‘ಲಾಕ್ ಡೌನ್ ಸಂಕಷ್ಟದಲ್ಲಿರುವ ಜನರಿಗಾಗಿ ತಾನು ತನ್ನ ಸ್ವಂತ ಹಣದಿಂದ ನೆರವು ನೀಡುತ್ತಿದ್ದೇನೆ. ಈಗಾಗಲೇ ಹತ್ತರಿಂದ ಹದಿನೈದು ಸಾವಿರ ರೇಷನ್ ಕಿಟ್ ವಿತರಿಸಿದ್ದೇನೆ. ಪ್ರತಿದಿನ ನೂರಾರು ಜನಕ್ಕೆ ಊಟ ಹಾಕಿಸುತ್ತಿದ್ದೇನೆ. ಇದೆಲ್ಲನ್ನು ನನ್ನ ಸ್ವಂತ ದುಡ್ಡಿನಿಂದಲೆ ಖರ್ಚು ಮಾಡಿದ್ದೇನೆ’ ಅಂತೆಲ್ಲ ದಾನಶೂರನ ಕಾಸ್ಟ್ಯೂಮು ಹಾಕಿಕೊಂಡು ಮಾತಾಡುತ್ತಿದ್ದರು.

ಆಗ ಅದೇ ಕಾರ್ಯಕ್ರಮಕ್ಕೆ ಫೋನಾಯಿಸಿದ ಮಾಜಿ ಶಾಸಕ ಶಾಂತನಗೌಡರು, ‘ಸ್ವಾಮಿ ಶಾಸಕರೇ, ನಾವೂ ಇದೇ ಹೊನ್ನಾಳಿ ತಾಲೂಕಿನಲ್ಲಿ ವಾಸವಿದ್ದೇವೆ. ಜನರ ಸಂಕಟಗಳಿಗೆ ಸ್ಪಂದಿಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಲೆ ಸಾಕಷ್ಟು ತಿರುಗಾಟವನ್ನೂ ಮಾಡುತ್ತಿದ್ದೇವೆ. ಅದೆಲ್ಲಿ ಹತ್ತದಿನೈದು ಸಾವಿರ ಕಿಟ್ ಕೊಟ್ಟಿದ್ದೀರಿ? ಅದ್ಯಾವಾಗ ಸ್ವಂತ ಖರ್ಚಿನಲ್ಲಿ ಊಟ ಹಾಕಿಸಿದ್ದೀರಿ? ಜನ ಈ ಪರಿ ನರಳಾಡುತ್ತಿರುವ ಸಂದರ್ಭದಲ್ಲು ಇಂಥಾ ಸುಳ್ಳುಗಳ ಮೂಲಕ ಇಮೇಜ್ ಸೃಷ್ಟಿಸಿಕೊಳ್ಳುವುದು ಎಷ್ಟು ಸರಿ. ಜನರ ಬವಣೆಗಿಂತ ನಿಮಗೆ ಇಂಥಾ ಗಿಮಿಕ್ ರಾಜಕಾರಣವೇ ಮುಖ್ಯವಾಯ್ತೆ? ನಿಜಕ್ಕು ನೀವು ಇಷ್ಟೆಲ್ಲ ವೈಯಕ್ತಿಕ ನೆರವು ನೀಡಿದ್ದರೆ ಅದನ್ನು ಎಲ್ಲರೆದುರು ಸಾಬೀತು ಮಾಡಿ, ನಾವೇ ಮುಂದೆ ನಿಂತು ನಿಮ್ಮ ಕಾರ್ಯ ಶ್ಲಾಘಿಸುತ್ತೇವೆ. ಸನ್ಮಾನವನ್ನೂ ಮಾಡುತ್ತೇವೆ’ ಎಂದು ಪ್ರಶ್ನೆಗಳ ಸುರಿಮಳೆಗರೆದಿದ್ದಾರೆ.

ಮಾಜಿ ಶಾಸಕ ಶಾಂತನಗೌಡರು

ಆದರೆ ಅದಕ್ಕೆಲ್ಲ ಜಗ್ಗದ ರೇಣುಕಾರು ‘ನಾನು ಸುಳ್ಳು ಹೇಳುತ್ತಿಲ್ಲ. ಇದರಲ್ಲೆಲ್ಲ ನೀವು ರಾಜಕಾರಣ ಮಾಡಲು ಬರಬೇಡಿ. ಬೇಕಿದ್ದರೆ ತಾಲೂಕಾಫೀಸಿಗೆ ಬನ್ನಿ ಎಲ್ಲರೆದುರು ಸಾಬೀತು ಮಾಡ್ತೀನಿ’ ಅಂತ ಸವಾಲು ಹಾಕಿದ್ದರು. ಅಷ್ಟರಲ್ಲಿ ಲೈವ್ ಫೋನ್ ಇನ್ ಕಾರ್ಯಕ್ರಮದ ಕರೆ ‘ತಾಂತ್ರಿಕ’(!) ದೋಷದಿಂದ ಕಟ್ ಆಗಿದೆ.

ಕೊರೊನಾ ಪರಿಹಾರ ನೀಡದೇ ಶಾಸಕ ರೇಣುಕಾಚಾರ್ಯರಿಂದ ಬಿಟ್ಟಿ ಪ್ರಚಾರ.. ಮಾಜಿ ಶಾಸಕ ಶಾಂತನಗೌಡರಿಂದ ತರಾಟೆ.. ಚರ್ಚೆಗೆ ಬಾರದೇ ಓಡಿ ಹೋಗಿದ್ದೇಕೆ ಎಂಬ ಆಕ್ರೋಶ.#Renukacharya #Honnalli #Shantangowdaru

Posted by Naanu Gauri on Tuesday, April 28, 2020

ಅಂದಹಾಗೆ, ಕೆಲದಿನಗಳ ಹಿಂದಷ್ಟೆ ಇನ್ನೊಂದು ಪತ್ರಿಕೆಯವರ ಫೋನ್ ಇನ್ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯರು ಭಾಗವಹಿಸಿದ್ದರು. ಆಗಲೂ ಮಾಜಿ ಶಾಸಕರು ಕರೆ ಮಾಡಿ ಇಂಥಾ ಪ್ರಶ್ನೆ ಕೇಳುತ್ತಿದ್ದಂತೆಯೇ ‘ತಾಂತ್ರಿಕ’ ದೋಷದಿಂದ ಕಟ್ ಆಗಿತ್ತು. ಎಂಥಾ ಕಾಕತಾಳೀಯ!

ಇತ್ತ ಇದನ್ನು ಗಂಭೀರವಾಗಿ ತೆಗೆದುಕೊಂಡ ಶಾಂತನಗೌಡರು ಏಪ್ರಿಲ್ 27ರ ಸೋಮವಾರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಮತ್ತಿತರ ಮುಖಂಡರ ಜೊತೆ ಸೀದಾ ತಹಶೀಲ್ದಾರ್ ತುಷಾರ್ ಬಿ.ಹೊಸೂರರ ಮುಂದೆ ಹಾಜರಾಗಿ ‘ಇಡೀ ತಾಲೂಕಿನಲ್ಲಿ ಲಾಕ್ ಡೌನ್ ಶುರುವಾದ ನಂತರ ಎಷ್ಟು ಜನರಿಗೆ ರೇಷನ್ ಕಿಟ್ ವಿತರಿಸಲಾಗಿದೆ. ಅದರಲ್ಲಿ ಶಾಸಕ ರೇಣುಕಾಚಾರ್ಯರ ತಮ್ಮ ಸ್ವಂತ ಹಣದಿಂದ ಎಷ್ಟು ಕಿಟ್ ಕೊಟ್ಟಿದ್ದಾರೆ? ದಿನಂಪ್ರತಿ ಇನ್ನೂರು ಮುನ್ನೂರು ಜನಕ್ಕೆ ಎಲ್ಲಿ ಊಟ ಹಾಕುತ್ತಿದ್ದಾರೆ? ತುಸು ಮಾಹಿತಿ ಕೊಡಿ ಸ್ವಾಮಿ’ ಎಂದು ಕೇಳಿದ್ದಾರೆ. ಆಗ ತಿಳಿದುಬಂದ ಸತ್ಯವೆಂದರೆ, ಲಾಕ್ ಡೌನ್ ಸಂತ್ರಸ್ತರಿಗೆ ನೀಡಲು ಸರ್ಕಾರ ಮತ್ತು ವಿವಿಧ ಸಂಘಸಂಸ್ಥೆಗಳು ನೀಡಿದ ಕಿಟ್ ಮತ್ತು ಸೌಲಭ್ಯಗಳನ್ನು ಜನಪ್ರತಿನಿಧಿಯಾಗಿ ಹಸ್ತಾಂತರ ಮಾಡಿದ್ದು ಬಿಟ್ಟರೆ ರೇಣುಕಾಚಾರಿಯವರು ವೈಯಕ್ತಿಕವಾಗಿ ಸ್ವಂತ ಹಣದಿಂದ ಏನನ್ನೂ ಮಾಡಿಲ್ಲ!

ಅದೇ ವೇಳೆಯಲ್ಲಿ ಶಾಸಕ ಸಾಹೇಬರು ತಹಶೀಲ್ದಾರ್ ಆಫೀಸಿನ ಪಕ್ಕದಲ್ಲೆ ಒಂದಷ್ಟು ಅಧಿಕಾರಿಗಳ ಜೊತೆ ಸಭೆಯಲ್ಲಿದ್ದರು. ಕೂಡಲೇ ಶಾಂತನಗೌಡರು ರೇಣುಕಾಚಾರಿಯವರಿಗೆ ಫೋನಾಯಿಸಿ ‘ನೀವು ಹಾಕಿದ ಸವಾಲಿನಂತೆ ನಾವೀಗ ತಹಶೀಲ್ದಾರ್ ಕಚೇರಿಯಲ್ಲೆ ಇದ್ದೇವೆ. ಬನ್ನಿ ಚರ್ಚೆಗೆ’ ಎಂದು ಕರೆದಿದ್ದಾರೆ. ಆಗ ತಡಬಡಾಯಿಸಿಹೋದ ರೇಣುಕಾಚಾರಿಯವರು ‘ನಾನು ಹಾಗೆ ಹೇಳಿಯೇ ಇಲ್ಲ, ನೀವು ತಪ್ಪಾಗಿ ಅರ್ಥ ಮಾಡಿಕೊಂಡಿದ್ದೀರಿ, ನೀವು ಬೇಕಂತ ರಾಜಕಾರಣ ಮಾಡ್ತಿದೀರಿ’ ಎಂದು ತಿಪ್ಪೆ ಸಾರಿಸುವ ಪ್ರಯತ್ನ ಮಾಡಿದ್ದಾರೆ.

ಆದರೆ ಯಾವಾಗ ಶಾಂತನಗೌಡರು ಪ್ರವಾಹ ಸಂತ್ರಸ್ತ ನಿಧಿಯನ್ನು ಚರ್ಚೆಯೊಳಗೆ ಎಳೆದುತಂದು ‘ಕಳೆದ ವರ್ಷ ನಮ್ಮ ಜನ ಪ್ರವಾಹಕ್ಕೆ ತುತ್ತಾದಾಗ ಅವರ ನೆರವಿಗೆಂದು ಸಾರ್ವಜನಿಕರಿಂದ ಸಂಗ್ರಹವಾದ ಸುಮಾರು ನಲವತ್ತೇಳು ಲಕ್ಷ ಹಣ ಇವತ್ತಿಗೂ ಹೊನ್ನಾಳಿ ತಹಶೀಲ್ದಾರರ ಅಕೌಂಟಿನಲ್ಲೆ ಕೊಳೆಯುತ್ತಾ ಬಿದ್ದಿದೆ. ಜನರ ಬಗ್ಗೆ ಕಾಳಜಿ ಇದ್ದಿದ್ದರೆ ಇಷ್ಟೊತ್ತಿಗೆ ಅದು ಸಂತ್ರಸ್ತರ ಕೈಸೇರುವಂತೆ ಮಾಡುವುದು ಶಾಸಕರಾಗಿ ನಿಮ್ಮ ಕರ್ತವ್ಯವಾಗಿತ್ತು. ಅದನ್ನೇ ನೀವು ಮಾಡಿಲ್ಲ. ಈಗ ಸ್ವಂತ ಹಣದಿಂದ ನೆರವು ನಿಡ್ತಿದೀನಿ ಅಂತ ಸುಳ್ಳು ಹೇಳ್ಕೊಂಡು ತಿರುಗಾಡ್ತಿದೀರಾ’ ಅಂತ ತರಾಟೆಗೆ ತೆಗೆದುಕೊಂಡರೊ ಆಗ ರೇಣುಕಾರು ತಬ್ಬಿಬ್ಬಾಗಿದ್ದಾರೆ. (ಪ್ರವಾಹದ ಸಂದರ್ಭದಲ್ಲಿ ಮೊಣಕಾಲುದ್ದದ ನೀರಿನಲ್ಲಿ ತೆಪ್ಪ ನಡೆಸುತ್ತಾ ತಾನು ಸಂತ್ರಸ್ತರ ರಕ್ಷಣೆ ಮಾಡಿದೆ ಎಂದು ಬಿಂಬಿಸಿಕೊಳ್ಳಲು ಹೋಗಿ ಸಿಕ್ಕಾಪಟ್ಟೆ ಟ್ರೋಲ್‌ಗು ತುತ್ತಾಗಿದ್ದರು)

ಅಷ್ಟೊತ್ತಿಗೆ ತನ್ನ ತಾಳ್ಮೆ ಕಳೆದುಕೊಂಡ ರೇಣುಕಾಚಾರಿಯವರು ‘ಇದನ್ನೆಲ್ಲ ಕೇಳಕ್ಕೆ ನೀನ್ಯಾರು? ಮುಖ್ಯಮಂತ್ರಿಯಾ, ಪ್ರಧಾನಮಂತ್ರಿಯಾ, ರಾಷ್ಟ್ರಪತಿಯಾ? ನಿನಗೇನು ಹಕ್ಕಿದೆ’ ಅಂತೆಲ್ಲ ಏಕವಚನದಲ್ಲೆ ತನ್ನ ಸ್ಥಾನದ ಘನತೆಯನ್ನು ಮರೆತು, ತನಗಿಂತ ಹಿರಿವಯಸ್ಸಿನ ಒಬ್ಬ ಮಾಜಿ ಶಾಸಕನ ಮೇಲೆ ರೇಗಾಡಿದ್ದಾರೆ. ತಹಶೀಲ್ದಾರರ ಸಮ್ಮುಖದಲ್ಲೆ ಇಬ್ಬರ ನಡುವೆ ಬಿಸಿಬಿಸಿ ಮಾತಿನ ಚಕಮಕಿ ನಡೆದಿದೆ. ನಂತರ ಯಥಾ ಪ್ರಕಾರ ರೇಣುಕಾಚಾರಿಯವರು ಫೋನ್ ಕಟ್ ಮಾಡಿದ್ದಾರೆ.

ಈ ಸುದ್ದಿ ತಾಲೂಕಿನಾದ್ಯಂತ ಹರಡುತ್ತಿದ್ದಂತೆಯೇ ಅದಕ್ಕೆ ಬೇರೊಂದು ಆಯಾಮವೂ ಸೇರಿಕೊಂಡಿದೆ. ತಮ್ಮ ಸಮುದಾಯದ ಹಿರಿಯ ರಾಜಕಾರಣಿಯನ್ನು ಏಕವಚನದಲ್ಲಿ ನಿಂದಿಸಿದ ಪಂಚಮಸಾಲಿ ಸಮುದಾಯದ ರೇಣುಕಾಚಾರಿಯ ವಿರುದ್ಧ ಸಾದರ ಲಿಂಗಾಯತರು ಗರಂ ಆಗಿದ್ದಾರೆಂಬ ಗುಲ್ಲೂ ಹರಡಿದೆ. ಕಾಂಗ್ರೆಸ್ ಪಕ್ಷವೂ ಶಾಸಕನ ಈ ದುರ್ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿ ಇವತ್ತು ದಾವಣಗೆರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಲು ಮುಂದಾಗಿದೆ.

ತಮ್ಮನ್ನು ತಾವು ಯಡ್ಯೂರಪ್ಪನವರ ಮಾನಸಪುತ್ರ ಅಂತ ಪ್ರೊಜೆಕ್ಟ್ ಮಾಡಿಕೊಂಡ ಶಿವಮೊಗ್ಗದ ಆಯುರ್ವೇದಿಕ್ ಕಾಲೇಜಿನ ಒಡೆಯ ರೇಣುಕಾಚಾರ್ಯರಿಗೆ ಹೊನ್ನಾಳಿಯಲ್ಲಿ ಗಟ್ಟಿ ನೆಲೆ ಸಿಕ್ಕಿದ್ದೇ ಯಡ್ಯೂರಪ್ಪನವರ ನಾಮಬಲದಿಂದ. ಆದರೆ ಬಿಜೆಪಿಯೊಳಗೆ ಸ್ವತಃ ಯಡ್ಯೂರಪ್ಪನವರೂ ಆಲ್ ಪವರ್‌ಫುಲ್ ಅಲ್ಲ. ಅವರೂ ದಿನನಿತ್ಯ ಸ್ಥಳೀಯ ತ್ರಿವಳಿಗಳು (ಮೂರು ಡಿಸಿಎಂಗಳು) ಮತ್ತು ಹೈಕಮ್ಯಾಂಡ್‌ನ ತ್ರಿವಳಿಗಳನ್ನು ಎದುರಿಸುತ್ತಲೇ ಇರಬೇಕು. ಕೊರೊನಾ ರೋಗ ವಕ್ಕರಿಸದಿದ್ದರೆ ಇಷ್ಟೊತ್ತಿಗಾಗಲೆ ಅವರನ್ನು ಸಿಎಂ ಗಾದಿಯಿಂದ ಕೆಳಗಿಳಿಸಿ ಅಲ್ಲಿಗೆ ಅರೆಸ್ಸೆಸ್ ಮೂಲದ ಬಿ.ಎಲ್.ಸಂತೋಷ್‌ರನ್ನು ಕೂರಿಸುತ್ತಾರೆಂಬ ವದಂತಿಗಳೂ ಹರಡಿ ಬೆಳೆಯುತ್ತಿದ್ದವು.

ಲಿಂಗಾಯತರು ಬಂಡಾಯವೇಳಬಾರದು ಎಂಬ ಕಾರಣಕ್ಕೆ ಉಮೇಶ್ ಕತ್ತಿ, ನಿರಾಣಿ, ಶೆಟ್ಟರ್, ಉದಾಸಿ, ರಾಜು ಕಾಗೆ ಮೊದಲಾದ ಲಿಂಗಾಯತ ಲೀಡರುಗಳನ್ನು ಮುಂದಿಟ್ಟುಕೊಂಡೇ ಯಡ್ಯೂರಪ್ಪನವರ ಕೆಳಗಿಳಿಸಲು ನೀಲನಕ್ಷೆ ಸಿದ್ಧವಾಗಿತ್ತೆಂದು ಬಿಜೆಪಿ ಮೂಲಗಳು ಹೇಳುತ್ತಿದ್ದವು. ಯಡ್ಯೂರಪ್ಪನವರ ಮಗ ವಿಜಯೇಂದ್ರನ ವಿರುದ್ಧ ಹರಿದಾಡಿದ ಪತ್ರದ ಹಕೀಕತ್ತು ಕೂಡಾ ಇದೇ ಯೋಜನೆಯ ಭಾಗವಾಗಿದ್ದು, ಕರ್ನಾಟಕದ ಕುರಿತಂತೆ ಕೇಂದ್ರ ಬಿಜೆಪಿ ಸರ್ಕಾರ ತೋರುತ್ತಿರುವ ಮಲತಾಯಿ ಧೋರಣೆಗು ಯಡ್ಯೂರಪ್ಪನವರ ಮೇಲಿರುವ ಮುನಿಸೇ ಕಾರಣ ಎನ್ನಲಾಗುತ್ತಿದೆ. ಆದರೆ ಕೊರೊನಾ ಬಂದಿದ್ದರಿಂದ ಸದ್ಯದ ಮಟ್ಟಿಗೆ ಆ ಪ್ರಯತ್ನಗಳು ತೆರೆಮರೆಗೆ ಸರಿದಿವೆ. ಅವು ಯಾವುದೇ ಕ್ಷಣದಲ್ಲಾದರು ಮತ್ತೆ ಗರಿಗೆದರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಇದೇ ರೇಣುಕಾಚಾರಿಯವರನ್ನು ಕಂಗೆಡಿಸುತ್ತಿರುವ ಸಂಗತಿ. ಯಡ್ಯೂರಪ್ಪನವರೇ ಬಿಜೆಪಿಯೊಳಗೆ ಮೂಲೆಗುಂಪಾದರೆ ಅವರ ಹಿಂಬಾಲಕರಾದ ತಮಗೆ ಭವಿಷ್ಯ ಇಲ್ಲ ಎನ್ನುವ ಆತಂಕ ಅವರನ್ನು ಕಾಡುತ್ತಿದೆ. ಹಾಗಾಗಿ ಆದಷ್ಟು ತನ್ನ ಸ್ವಂತ ಇಮೇಜ್ ಬೆಳೆಸಿಕೊಂಡು ಸೇಫ್ ಆಗಬೇಕೆಂದು ಹೀಗೆಲ್ಲ ಸರ್ಕಸ್ ಮಾಡಲು ಹೋಗಿ ಯಡವಟ್ಟುಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.


ಇದನ್ನೂ ಓದಿ: ಕಾನೂನು ಸಚಿವ ಮಾಧುಸ್ವಾಮಿಯವರಲ್ಲಿ ಒಂದು ಬಿನ್ನಹ : ಎಚ್.ಎಸ್ ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....