ಉಡುಪಿ : ಕೋವಿಡ್ ಕರ್ಫ್ಯೂ, ಲಾಕ್ ಡೌನ್ನಿಂದ ಕಳೆದೆರಡು ವರ್ಷದಿಂದ ತಮ್ಮ ಜೀವನಾಧಾರ ಕಸಬು ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಕರಾವಳಿಯ ಯಕ್ಷಗಾನ ಕಲಾವಿದರು ಮತ್ತೆ ಎದುರಾಗಿರುವ ರಾತ್ರಿ ಹಾಗು ವಾರಾಂತ್ಯದ ನಿರ್ಬಂಧದಿಂದ ಕಂಗಾಲಾಗಿದ್ದಾರೆ. ಪರಿಸ್ಥತಿ ಹೀಗೇ ಮುಂದುವರಿದರೆ ತಮ್ಮ ಕುಟುಂಬಗಳು ಬೀದಿಗೆ ಬೀಳುವ ಆತಂಕದಿಂದ ಶುಕ್ರವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಯಕ್ಷಗಾನ ಕಲಾವಿದರು ರಾತ್ರಿ ವೇಳೆ ಯಕ್ಷಗಾನ ಪ್ರದರ್ಶನಕ್ಕೆ ರಿಯಾಯತಿ ನೀಡಬೇಕೆಂದು ಆಗ್ರಹಿಸಿ ಧರಣಿ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಮುಂದೆ ಸೇರಿದ್ದ ಯಕ್ಷಗಾನದ ನೂರಾರು ಹವ್ಯಾಸಿ ಮತ್ತು ವೃತ್ತಿಪರ ಕಲಾವಿದರು, ಐದಾರು ಸಾವಿರದಷ್ಟು ಜನರು, ನಮಗೆ ಯಕ್ಷಗಾನ ಬಿಟ್ಟರೆ ಬೇರೆ ಉದ್ಯೋಗ ಗೊತ್ತಿಲ್ಲ. ಲಾಕ್ಡೌನ್ನಿಂದ ಎರಡು ವರ್ಷ ಮನೆಯಲ್ಲಿಯೆ ಕುಳಿತ್ತಿದ್ದೆವು. ತಂದೆ, ತಾಯಿ, ಹೆಂಡತಿ, ಮಕ್ಕಳಿಗೆ ಒದೊಂತ್ತು ಗಂಜಿ ಹಾಕಲು ಆಗುತ್ತಿಲ್ಲ. ಸರ್ಕಾರ ನಮ್ಮ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಕಲೆ, ಕಲಾವಿದರಿಗೆ ದ್ರೋಹವಾದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ವಿಷ ಸೇವಿಸಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಅಳಲು ತೋಡಿಕೊಂಡರು.
ಕಟ್ಟು ನಿಟ್ಟಿನ ರಾತ್ರಿ ಕರ್ಪ್ಯೂನಿಂದ ರಾತ್ರಿ 10ರ ಬಳಿಕ ಯಕ್ಷಗಾನ ಪ್ರದರ್ಶನ ಮಾಡಲಾಗುತ್ತಿಲ್ಲ. ಹೆಚ್ಚಿನ ಯಕ್ಷಗಾನ ನಡೆಯುವುದೆ ಶನಿವಾರ ಮತ್ತು ರವಿವಾರ. ವಿಕ್ ಎಂಡ್ ಕರ್ಫ್ಯೂನಿಂದಾಗಿ ವಾರದ ಕೊನೆಯ ಪ್ರದರ್ಶನ ಸ್ಥಗಿತ ಗೊಳಿಸಬೇಕಾಗಿದೆ. ಹೀಗಾದರೆ ಯಕ್ಷಗಾನದಿಂದಲೆ ಬದುಕು ಕಟ್ಟಿಕೊಂಡಿರುವ ನಮ್ಮ ಕುಟುಂಬಗಳು ಅನಾಥವಾಗುತ್ತವೆ. ರಾತ್ರಿ 12ರ ತನಕವಾದರೂ ಸರ್ಕಾರ ಯಕ್ಷಗಾನಕ್ಕೆ ಅನುಮತಿ ಸರ್ಕಾರ ಕೊಡಬೇಕು. ಈಗಾಗಲೆ ದಿನಾಂಕ ನಿಗದಿತವಾಗಿರುವ ಪ್ರದರ್ಶನಗಳಿಗೆ ಒಪ್ಪಿಗೆ ನೀಡಬೇಕು. ಕಠಿಣ ಕರ್ಫ್ಯೂ ಜಾರಿಗೊಳಿಸಿದರೆ ಅಸಹಾಯಕ ಕಲಾವಿದರ ಜೀವನಕ್ಕೆ ಭದ್ರತೆ ಒದಗಿಸುವ ಪರ್ಯಾಯ ವ್ಯವಸ್ದೆ ಮಾಡಬೇಕೆಂದು ಜಿಲ್ಲಾಧಿಕಾರಿ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ನೀಡಿದರು.
ಕರೋನಾ ಹಾವಳಿಯಿಂದ ಕಳೆದೆರಡು ವರ್ಷದಿಂದ ಟೆಂಟ್ ಮೇಳ, ಬಯಲಾಟ ನಡೆಯದೆ ಯಕ್ಷಗಾನ ಕಲಾವಿದರು ಕಷ್ಟ-ನಷ್ಟ ಅನುಭವಿಸಿದ್ದಾರೆ. ಕೊರೋನಾ ಆತಂಕ ಸ್ವಲ್ಪ ಕಡಿಮೆಯಾಗಿ ಮೇಳಗಳ ತಿರುಗಾಟ ಆರಂಭಿಸಿದ್ದು ಕಲಾವಿದರು ನಿಟ್ಟುಸಿರು ಬಿಡುವಂತಾಗಿತ್ತು. ಚೇತರಿಸಿಕೊಳ್ಳುವಷ್ಟರಲ್ಲೆ ಕೋವಿಡ್ ಮೂರನೆ ಅಲೆ ನಿಯಂತ್ರಣಕ್ಕೆಂದು ಸರ್ಕಾರ ಮತ್ತೆ ಹೇರಿರುವ ಕಠಿಣ ನಿಯಮಗಳು ಯಕ್ಷಗಾನದ ನಟರು ಮತ್ತು ನೇಪಥ್ಯದ ಕಲಾವಿದರ ದಿಕ್ಕೆಡಿಸಿಬಿಟ್ಟಿದೆ. ಡಿಸೆಂಬರ್ ತಿಂಗಳಲ್ಲಿ ಆರಂಭವಾಗಿದ್ದ ಮೇಳಗಳ ತಿರುಗಾಟ ಒಂದು ತಿಂಗಳು ಕಳೆಯುವಷ್ಟರಲ್ಲೆ ನಿಲ್ಲಿಸಬೇಕಾಗಿ ಬಂದಿರುವುದು ಯಕ್ಷಗಾನ ಅವಲಂಬಿತ ಕಸುಬುಗಾರರಲ್ಲಿ ಆತಂಕ ಸೃಷ್ಟಿಸಿದೆ.
ಇದನ್ನೂ ಓದಿ; ಕ್ಷಮೆ ಕೇಳಿದರೂ ಮುಗಿಯದ ಕೊರಗಜ್ಜ ಪ್ರಕರಣ: ಇಬ್ಬರ ಬಂಧನ