ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಅಭೂತಪೂರ್ವ ಗೆಲುವು ದಾಖಲಿಸಿದ ನಂತರ ನರೇಂದ್ರ ಮೋದಿಯವರು ಟ್ವಿಟ್ಟರ್ನಲ್ಲಿ ತನ್ನ ಹೆಸರಿನೊಂದಿಗೆ ಹಾಕಿಕೊಂಡಿದ್ದ ಚೌಕಿದಾರ್ ಬಿರುದು ತೆಗೆದುಹಾಕಿದ್ದಾರೆ.
https://twitter.com/narendramodi?s=17
ಮೋದಿಯವರಿಗೆ ಬೆಂಬಲ ಸೂಚಿಸುವ ಸಲುವಾಗಿ ಟ್ವಿಟ್ಟರ್ ಮತ್ತು ಫೇಸ್ಬುಕ್ನಲ್ಲಿ ತನ್ನ ಹೆಸರಿನೊಂದಿಗೆ ಹಾಕಿಕೊಂಡಿದ್ದ ಚೌಕಿದಾರ್ ಎಂದು ಸೇರಿಸಿಕೊಂಡಿದ್ದ ಹಲವು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಸಹ ಚೌಕಿದಾರ್ ಪದ ತೆಗೆಯುವಂತೆ ನರೇಂದ್ರ ಮೋದಿಯವರು ಮನವಿ ಮಾಡಿದ್ದಾರೆ.
ರಫೇಲ್ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಮೋದಿಯವರು ಭ್ರಷ್ಟಾಚಾರ ನಡೆಸಿದ್ದಾರೆ. ಅನಿಲ್ ಅಂಬಾನಿಯವರಿಗೆ 30 ಸಾವಿರ ಕೋಟಿ ರೂ ಲೂಟಿ ಹೊಡೆಯಲು ಅನುವು ಮಾಡಿಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದರು. ಜೊತೆಗೆ “ಚೌಕಿದಾರ್ ಚೋರ್ ಹೈ” ಘೋಷಣೆಯನ್ನು ಪ್ರಚಾರಕ್ಕೆ ತಂದು ತನ್ನೆಲ್ಲಾ ಪ್ರಚಾರ ಭಾಷಣದಲ್ಲಿ “ಚೌಕಿದಾರ್ ಚೋರ್ ಹೈ” ಕೂಗಲು ಆರಂಭಿಸಿದ್ದರು.
ಇದಕ್ಕೆ ತಿರುಗೇಟು ನೀಡಲು ನರೇಂದ್ರ ಮೋದಿಯವರು ‘ಮೈ ಭೀ ಚೌಕಿದಾರ್’ ಎಂಬ ಅಭಿಯಾನ ಆರಂಭಿಸಿದ್ದರು. ಆ ಸಂದರ್ಭದಲ್ಲಿ ಮೋದಿಯವರು ಟ್ವಿಟ್ಟರ್ನಲ್ಲಿ ತನ್ನ ಹೆಸರಿನೊಂದಿಗೆ ಚೌಕಿದಾರ್ ಎಂಬ ಬಿರುದು ಸೇರಿಸಿಕೊಂಡಿದ್ದರು. ಪ್ರಧಾನಿಯನ್ನನುಸರಿಸಿ ಹಲವು ಕಾರ್ಯಕರ್ತರು ಮತ್ತು ಬಿಜೆಪಿ ಮುಖಂಡರು ಸಹ ತಮ್ಮ ಹೆಸರಿನ ಹಿಂದೆ ಚೌಕಿದಾರ್ ಎಂದು ಸೇರಿಸಿಕೊಂಡಿದ್ದರು.