ಭಾರತದ ಪ್ರಧಾನಿ ಹೇಡಿಯಂತೆ ವರ್ತಿಸುತ್ತಿದ್ದಾರೆ. ಅವರು ನಮ್ಮ ದೇಶವನ್ನು ನಿರಾಶೆಗೊಳಿಸಿದರು ಎಂದು ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ, ಕೋವಿಡ್ ನಿರ್ವಹಣೆಯ ಕುರಿತು ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
ಈಗ ಸಂಭವಿಸಿರುವ ಕೋವಿಡ್ ದುರಂತಗಳಿಗೆ ಯಾರು ಜವಾಬ್ದಾರಿ (ಜಿಮ್ಮೆದಾರ್ ಕೌನ್) ಎಂಬ ಆಂದೋಲನ ಆರಂಭಿಸಿರುವ ಅವರು, “ಭಾರತದಲ್ಲಿ ನಾಯಕತ್ವದ ಬಿಕ್ಕಟ್ಟು ಮತ್ತು ಸಾಂಕ್ರಾಮಿಕ ಸಮಯದಲ್ಲಿ ಪ್ರಧಾನಮಂತ್ರಿಯವರ ಆಡಳಿತದ ಅಸಮರ್ಥತೆಯನ್ನು ಇಡೀ ಜಗತ್ತು ಕಂಡಿದೆ ಎಂದು ಪ್ರತಿಪಾದಿಸಿದ್ದಾರೆ.
ಕೋವಿಡ್ ಎರಡನೇ ಅಲೆ ಅಪ್ಪಳಿಸಿದಾಗ ಅವರು ಹಿಂದೆ ಸರಿದರು ಮತ್ತು ಅತಿ ಕೆಟ್ಟ ಕಾಲ ತಾನಾಗಿಯೇ ಸರಿದು ಹೋಗಲು ಕಾದು ಕುಳಿತರು. ಈ ರೀತಿಯಾಗಿ ತಾವೊಬ್ಬ ಹೇಡಿ ಎಂಬುದನ್ನು ತೋರಿಸಿಕೊಟ್ಟರು ಎಂದು ಪ್ರಿಯಾಂಕ ಆರೋಪಿಸಿದ್ದಾರೆ.
“ಪ್ರಧಾನಿಗಳಿಗೆ ಭಾರತೀಯರು ಮುಖ್ಯವಲ್ಲ, ರಾಜಕೀಯ ಮುಖ್ಯ. ಅವರಿಗೆ ಸತ್ಯ ಮುಖ್ಯವಲ್ಲ ಪ್ರೊಪಗಂಡಾ ಮುಖ್ಯ. ಭಾರತದಲ್ಲಿ ಸಂಭವಿಸಿದ ಸಾವು ನೋವುಗಳಿಗೆ ಯಾರು ಹೊಣೆ ಎಂದು ಭಾರತೀಯರೆಲ್ಲರೂ ಕೇಳುವ ಸಮಯ ಬಂದಿದೆ” ಎಂದು ಅವರು ಬರೆದ ಪತ್ರದಲ್ಲಿ ಕಟುವಾಗಿ ಟೀಕಿಸಿದ್ದಾರೆ.
ಬಿಕ್ಕಟ್ಟಿನ ಸಮಯದಲ್ಲಿ ಸತ್ಯವನ್ನು ಎದುರಿಸುವುದು, ಜವಾಬ್ದಾರಿಯನ್ನು ಹೊತ್ತುಕೊಳ್ಳುವುದು ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳುವುದು ಉತ್ತಮ ಆಡಳಿತ. ದುರದೃಷ್ಟವಶಾತ್, ಮೋದಿ ಸರ್ಕಾರ ಇವುಗಳಲ್ಲಿ ಯಾವುದನ್ನೂ ಮಾಡಲಿಲ್ಲ. ಬದಲಿಗೆ, ಸಾಂಕ್ರಾಮಿಕ ರೋಗದ ಆರಂಭದಿಂದಲೂ, ಇದು ಸತ್ಯವನ್ನು ಮರೆಮಾಚಲು ಮತ್ತು ಜವಾಬ್ದಾರಿಯಿಂದ ತಪ್ಪಿಸಲು ಎಲ್ಲ ಪ್ರಯತ್ನಗಳನ್ನು ಮಾಡಿತು” ಎಂದು ಅವರು ಆರೋಪಿಸಿದ್ದಾರೆ.
If only…#ZimmedarKaun pic.twitter.com/Qy5FpTl9iP
— Priyanka Gandhi Vadra (@priyankagandhi) June 12, 2021
“ಇದರ ಪರಿಣಾಮವಾಗಿ, ಎರಡನೇ ಅಲೆಯೂ ಅಪ್ಪಳಿಸಿದಾಗ ಸರ್ಕಾರವು ನಿಷ್ಕ್ರಿಯ ಸ್ಥಿತಿಗೆ ಇಳಿಯಿತು. ಈ ನಿಷ್ಕ್ರಿಯತೆಯು ವೈರಸ್ ಹೆಚ್ಚು ಉಗ್ರತೆಯಿಂದ ಹರಡಲು ಮತ್ತು ವಿವರಿಸಲಾಗದ ಸಾವು ನೋವುಗಳಿಗೆ ಕಾರಣವಾಯಿತು” ಎಂದು ಪ್ರಿಯಾಂಕಾ ಹೇಳಿದ್ದಾರೆ.
ಭಾರತ ಮತ್ತು ಪ್ರಪಂಚದಾದ್ಯಂತದ ತಜ್ಞರು ನೀಡಿದ ಅಸಂಖ್ಯಾತ ಎಚ್ಚರಿಕೆಗಳನ್ನು ಪ್ರಧಾನಿ ಕೇಳಿಸಿಕೊಂಡಿದ್ದರೆ ಅಥವಾ ಆರೋಗ್ಯ ಸಂಸದೀಯ ಸಮಿತಿಯ ಶಿಫಾರಸುಗಳನ್ನು ಆಲಿಸಿದ್ದರೆ ನಾವು ಬೆಡ್, ಆಮ್ಲಜನಕ, ಔಷಧಿಗಳಿಗಾಗಿ ಒದ್ದಾಡಬೇಕಾದ ಪರಿಸ್ಥಿತಿ ಬರುತ್ತಿರಲಿಲ್ಲ. ಲಸಿಕೆಗಳನ್ನು ವಿದೇಶಕ್ಕೆ ಕಳಿಸದೇ ಇದ್ದಿದ್ದರೆ ಭಾರತದ ಇನ್ನಷ್ಟು ಜೀವಗಳನ್ನು ಉಳಿಸಬಹುದಿತ್ತು ಎಂದು ಅವರು ಕಿಡಿಕಾರಿದ್ದಾರೆ.