ಪ್ರಧಾನಿ ನರೇಂದ್ರ ಮೋದಿ ಅವರು ಜಾತಿ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ, ಆದರೆ ಅವರು ಹಿಂದುಳಿದ ವರ್ಗದ ಜನರಿಗೆ ನ್ಯಾಯ ಒದಗಿಸಲು ಬಯಸುವುದಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಅವರು ಮೋದಿಯ ‘ಒಬಿಸಿ ಸಿಎಂ’ ಹೇಳಿಕೆಗೆ ಪ್ರತಿಕ್ರಿಯಿಸಿ ಹೇಳಿದ್ದಾರೆ.
ಮಂಗಳವಾರ ರಾತ್ರಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಪ್ರಧಾನಿ ಮೋದಿ, ತೆಲಂಗಾಣದ ಹಿಂದುಳಿದ ಸಮುದಾಯಗಳಿಗೆ ಸೇರಿದ ಬಿಜೆಪಿ ಪಕ್ಷದ ಮುಖ್ಯಮಂತ್ರಿಗೆ ಕ್ಷಣಗಣನೆಯು ನಗರದ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಿಂದ ಪ್ರಾರಂಭವಾಗಿದೆ ಎಂದು ಹೇಳಿದ್ದರು. ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ಅವರು ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿದ್ದರು.
ಅದಕ್ಕೆ ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ ಒವೈಸಿ, ಹಿಂದುಳಿದ ಮುಸ್ಲಿಮರಿಗೆ ಮೀಸಲಾತಿಯನ್ನು ತೆಗೆದುಹಾಕುವುದಾಗಿ ಪ್ರಧಾನಿ ಮೋದಿ ಭರವಸೆ ನೀಡುತ್ತಾರೆ. 27% OBCಗಳಿಗೆ ಮೀಸಲಾತಿ ನೀಡುವುದನ್ನು ವಿರೋಧಿಸುತ್ತಾರೆ. ಪ್ರಧಾನಿ ಅವರು ಜಾತಿ ಗುರುತಿನ ಮೇಲೆ ಮತಗಳನ್ನು ಕೇಳುತ್ತಿದ್ದಾರೆ. ಆದರೆ ಅವರು ಒಬಿಸಿಗಳಿಗೆ ನ್ಯಾಯ ಒದಗಿಸಲು ಬಯಸುವುದಿಲ್ಲ. ಭಾರತೀಯ ರಾಜಕೀಯದಲ್ಲಿ ಮುಸ್ಲಿಮರು ಕಡಿಮೆ ಪ್ರಾತಿನಿಧ್ಯವನ್ನು ಹೊಂದಿದ್ದಾರೆ ಎಂದು ನಾನು ಹೇಳಿದಾಗ ನನ್ನನ್ನು ದೇಶವಿರೋಧಿ ಮತ್ತು ಕೋಮುವಾದಿ ಎಂದು ಕರೆಯಲಾಗುತ್ತದೆ. ಮೋದಿ ಹತಾಶರಾಗಿದ್ದಾರೆ ಮತ್ತು ಅದನ್ನು ಅವರ ಹೇಳಿಕೆಗಳು ತೋರಿಸುತ್ತಿದೆ ಎಂದು ಒವೈಸಿ ಹೇಳಿದ್ದಾರೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು ಬಿಆರ್ಎಸ್ನ್ನು ಟೀಕಿಸಿದ ಮೋದಿ, ಈ ಪಕ್ಷಗಳು ಎಂದಿಗೂ ಹಿಂದುಳಿದ ಜಾತಿಯ ಅಭ್ಯರ್ಥಿಯನ್ನು ತೆಲಂಗಾಣದಲ್ಲಿ ಮುಖ್ಯಮಂತ್ರಿಯನ್ನಾಗಿ ಮಾಡುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹಿಂದುಳಿದ ಸಮುದಾಯದ ಬಿಜೆಪಿ ನಾಯಕನನ್ನು ಸಿಎಂ ಮಾಡುವುದಾಗಿ ಹೇಳಿದ್ದಾರೆ.
ನ.30ರಂದು ತೆಲಂಗಾಣ ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಆತ್ಮ ಗೌರವ ಸಭೆ ಉದ್ದೇಶಿಸಿ ಮೋದಿ ಮಾತನಾಡಿದ್ದರು.
ಹೈದರಾಬಾದ್ಗೆ ಬರುವುದು ಯಾವಾಗಲೂ ವಿಶೇಷವಾಗಿದೆ ಮತ್ತು ನಗರದ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣಕ್ಕೆ ಬರುವುದು ಮತ್ತೂ ವಿಶೇಷವಾಗಿದೆ. 2013ರಲ್ಲಿ ನಡೆದ ಇಲ್ಲಿನ ನನ್ನ ರ್ಯಾಲಿಯನ್ನು ನಾನು ಎಂದಿಗೂ ಮರೆಯಲಾರೆ. ಆ ಸಮಯದಲ್ಲಿ OBC ಪ್ರಧಾನ ಮಂತ್ರಿಯನ್ನು ಆಯ್ಕೆ ಮಾಡುವ ಬಗ್ಗೆ ಹೇಳಲಾಗಿತ್ತು. ಇಂದು ಇದೇ ಸ್ಥಳದಿಂದ ಹಿಂದುಳಿದ ಸಮುದಾಯಗಳಿಗೆ ಸೇರಿದ ತೆಲಂಗಾಣದ ಬಿಜೆಪಿ ಸಿಎಂಗೆ ಕ್ಷಣಗಣನೆ ಆರಂಭವಾಗಿದೆ ಎಂದು ಹೇಳಿದ್ದರು.
ಇದನ್ನು ಓದಿ: ಮಾದ್ಯಮ ಪ್ರತಿನಿಧಿಗಳಿಂದ ಎಲೆಕ್ಟ್ರಾನಿಕ್ ಸಾಧನಗಳ ಜಪ್ತಿ: ಮಾರ್ಗಸೂಚಿ ರಚಿಸಲು ಸುಪ್ರೀಂಕೋರ್ಟ್ ಸೂಚನೆ