ದೇಶವನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಚಕಾರ ಎತ್ತುತ್ತಿಲ್ಲ. ಕಳೆದ ವರ್ಷ 1.5 ಕೋಟಿ ಉದ್ಯೋಗಗಳು ಕಡಿತವಾದವು. ಇದನ್ನು ಪ್ರಸ್ತಾಪಿಸದೆ ಬೇಡದ ವಿಷಯಗಳನ್ನು ಮಾತನಾಡುತ್ತಾರೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟೀಕೆ ವ್ಯಕ್ತಪಡಿಸಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ರಾಹುಲ್, ನಿರುದ್ಯೋಗ ದೇಶದ ಬಹುದೊಡ್ಡ ಸಮಸ್ಯೆ. ಈ ಸಂಬಂಧ ನಾವು ಪ್ರಧಾನಿಯನ್ನು ಹಲವು ಬಾರಿ ಪ್ರಶ್ನಿಸಿದ್ದೇವೆ. ಈ ಬಗ್ಗೆ ಪ್ರಧಾನಿ ಒಂದೇ ಒಂದು ಪದವನ್ನು ಮಾತನಾಡಿಲ್ಲ ಎಂದು ಆರೋಪಿಸಿದರು.
ಹಣಕಾಸು ಸಚಿವರು ಲೋಕಸಭೆಯಲ್ಲಿ ಸುದೀರ್ಘ ಭಾಷಣ ಮಾಡಿದರು. ಆದರೆ ನಿರುದ್ಯೋಗ ಕಡಿಮೆ ಮಾಡುವ ಮತ್ತು ಉದ್ಯೋಗ ನೀಡುವ ಕುರಿತು ಒಂದು ಪದವನ್ನೂ ಹೇಳಲಿಲ್ಲ. ಹಾಗೆಯ ಪ್ರಧಾನಿ ಮೋದಿ ಪ್ರಮುಖ ಸಮಸ್ಯೆಗಳು, ವಿಷಯಗಳ ಬಗ್ಗೆ ಮಾತನಾಡುತ್ತಿಲ್ಲ ಎಂದು ದೂರಿದರು.
ಪ್ರಮುಖ ವಿಷಯಗಳು ಪ್ರಸ್ತಾಪ ಮಾಡಿದಾಗ ಪ್ರಧಾನಿ ನರೇಂದ್ರ ಮೋದಿ ಮಾರ್ಗ ಬದಲಿಸುತ್ತಾರೆ. ಆದರೆ ಕಾಂಗ್ರೆಸ್, ಜವಾಹರಲಾಲ್ ನೆಹರು ಮತ್ತು ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾರೆ. ಪ್ರಮುಖ ವಿಷಯಗಳನ್ನು ಕೈಬಿಡುತ್ತಾರೆ ಎಂದು ಲೇವಡಿ ಮಾಡಿದರು.