ಅಪ್ರಾಪ್ತ ಮತ್ತು ವಯಸ್ಕ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ, ಭಾರತೀಯ ಕುಸ್ತಿ ಫೆಡರೇಷನ್ ಮುಖ್ಯಸ್ಥ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ನನ್ನು ಬಂಧಿಸಬೇಕೆಂದು ಹೋರಾಟ ನಡೆಸುತ್ತಿರುವ ಕುಸ್ತಿಪಟುಗಳ ಮೇಲೆ ದೆಹಲಿ ಪೊಲೀಸರು ತೋರಿಸುವ ದರ್ಪಕ್ಕೆ ಜನಾಕ್ರೋಶ ವ್ಯಕ್ತವಾಗಿದೆ.
ಕರ್ನಾಟಕದ ಅನೇಕ ಜನರು ಈ ಘಟನೆಯನ್ನು ಖಂಡಿಸಿದ್ದಾರೆ. ನೂತನ ಸಂಸತ್ ಭವನದ ಉದ್ಘಾಟನೆಯ ವೈಭವದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರವಿದ್ದರೆ, ದೇಶಕ್ಕಾಗಿ ಪದಕಗಳನ್ನು ತಂದುಕೊಟ್ಟ ಕುಸ್ತಿಪಟುಗಳು ಬಂಧನಕ್ಕೊಳಗಾಗಿದ್ದಾರೆ.
ಸಾಮಾಜಿಕ ಮಾಧ್ಯಮಗಳ ಮೂಲಕ ಆಕ್ರೋಶ ಹೊರಹಾಕುತ್ತಿರುವ ಜನತೆ, ಮೋದಿ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿದ್ದಾರೆ. ದೇಶಕ್ಕಾಗಿ ಪದಕಗಳನ್ನು ತಂದ ಕುಸ್ತಿಪಟುಗಳ ಸಾಧನೆಯನ್ನು ಸ್ಮರಿಸಿದ್ದಾರೆ. ಕುಸ್ತಿಪಟುಗಳನ್ನು ಬೆಂಬಲಿಸಿ ಬೆಂಗಳೂರಿನಲ್ಲಿ ಪ್ರತಿಭಟನೆಯೂ ನಡೆದಿದೆ.
“ಕಲ್ಲಿನ ಕಟ್ಟಡದೊಳಗೆ ನಿಂತು ಭಾರತಮಾತೆಗೆ ಜೈ ಎನ್ನುವವರಿಗೆ ಬೀದಿಯಲ್ಲಿ ಭಾರತ ಮಾತೆಯರನ್ನು ಎಳೆದಾಡುತ್ತಿರುವುದು ಕಾಣುತ್ತಿಲ್ಲವಲ್ಲ, ನಾಚಿಕೆಗೇಡು. ಬಂಧಿಸಲಾದ ಎಲ್ಲ ಕುಸ್ತಿಪಟುಗಳು ಮತ್ತು ಹೋರಾಟಗಾರ್ತಿಯರನ್ನು ಬಿಡುಗಡೆ ಮಾಡಲೇಬೇಕು. ಲೈಂಗಿಕ ದೌರ್ಜನ್ಯದ ವಿರುದ್ಧ ಕ್ರಮ ಜರುಗಿಸಬೇಕು” ಎಂದು ಲಿಂಗತ್ವ ಅಲ್ಪಸಂಖ್ಯಾತ ಹೋರಾಟಗಾರ್ತಿ ಮಲ್ಲು ಕುಂಬಾರ್ ಆಗ್ರಹಿಸಿದ್ದಾರೆ.
“ಅಂದು ಈ ಮಹಿಳಾ ಕುಸ್ತಿಪಟುಗಳು ದೇಶಕ್ಕೆ ಪದಕದ ಜೊತೆ ಕೀರ್ತಿ ಹೊತ್ತು ತಂದರು. ಇಂದು ನ್ಯಾಯ ಬೇಡಿದ್ದೆ ತಪ್ಪಾಗಿ, ಹೊಡೆದು ಬಡಿದು ಚಿತ್ರಹಿಂಸೆ ನೀಡಿ ಅವರನ್ನು ಜೈಲಿಗೆ ಅಟ್ಟುತ್ತಿದ್ದಾರೆ. ಎಂಥ ದರಿದ್ರ ಆಡಳಿತದಲ್ಲಿ ನಾವಿಂದು ಬದುಕುತ್ತಿದ್ದೇವೆ. ಹೆಣ್ಣುಮಕ್ಕಳಿಗೆ ಗೌರವ ಕೊಡದವನು ಯಾವ ರಾಜದಂಡ ಹಿಡಿದರೇನು ಪ್ರಯೋಜನ?” ಎಂದು ಮಂಜುನಾಥ್ ಎಂಬವರು ಪ್ರಶ್ನಿಸಿದ್ದಾರೆ.
ಲೇಖಕಿ ಪಲ್ಲವಿ ಇಡೂರು ಪ್ರತಿಕ್ರಿಯಿಸಿ, “ನನ್ನಂತಹ ಕೋಟ್ಯಂತರ ಮಂದಿಯ ಮನಸ್ಸು ಬಿಜೆಪಿ ಅಥವಾ ಬಲಪಂಥೀಯರ ಅಸಹ್ಯದ ರಾಜಕಾರಣದೆಡೆಗೆ ತಿರುಗುವುದಿಲ್ಲ, ಆದರೆ ಅದಾಗಲೇ ಭಕ್ತಿಯಲ್ಲಿ ಮಿಂದೇಳುತ್ತಿರುವ ಅಸಹ್ಯದ ಹುಳುಗಳು ಬದಲಾಗುತ್ತಾರೆ ಎನ್ನುವ ಭ್ರಮೆಯೂ ನನಗಿಲ್ಲ. ಇನ್ನು ಅವರನ್ನು ದಿನ ಬೆಳಗಾದರೆ ಖಂಡಿಸುತ್ತಾ ಕೂರುವುದರಿಂದ ನನ್ನ ಮಾನಸಿಕ ಸ್ಥಿತಿ ಒತ್ತಡಕ್ಕೊಳಗಾಗಿ ಜೀವನಕ್ಕೆ ಮಾರಕವೇ ಹೊರತು ಬೇರೆ ಉಪಯೋಗವಂತೂ ಆಗಲಾರದು. ಮನುಷ್ಯ ಪ್ರತಿಯೊಬ್ಬನೂ ಪ್ರತಿಕ್ರಿಯಿಸುವುದು ತನಗೆ ಬಿಸಿಯ ಅನುಭವವಾದಾಗಲೇ! ನಾವೆಷ್ಟೇ ಎಚ್ಚರಿಸಿದರೂ ಎಚ್ಚರಗೊಳ್ಳಲಾರರು” ಎಂದು ವಿಷಾದಿಸಿದ್ದಾರೆ.
“ಈಗ ಹೀಗೆ ಬೀದಿಯಲ್ಲಿ ನಿಂತು ಪ್ರತಿಭಟಿಸುತ್ತಿರುವ ದೇಶದ ಅತ್ಯುನ್ನತ ಕ್ರೀಡಾಪಟುಗಳು ಅವರ ಸಾಧನೆಯ ಸಲುವಾಗಿಯಾದರೂ ಚರ್ಚೆಗೊಳಗಾಗುತ್ತಿದ್ದಾರೆ. ನನ್ನಂತವರು ಹೀಗೆ ಬೀದಿಗಿಳಿದರೆ ಕೇಳುವವರೇ ಇರುವುದಿಲ್ಲ. ಕಹಿ ಅನಿಸಬಹುದು ಆದರೆ ಇದೇ ಸತ್ಯ. ಇಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಸಾಲಿಡಾರಿಟಿಯ ಪೋಸ್ಟ್ಗಳನ್ನು ಬರೆಯಲೂ ನಮಗೆ ಕಮ್ಯುನಿಟಿ ಸ್ಟಾಂಡರ್ಡ್ ಫಿಕ್ಸ್ ಮಾಡಲಾಗಿದೆ. ಇಂತದ್ದೊಂದು ಕೈಕಾಲು ಮುರಿದುಕೊಂಡ ಪ್ರಜಾಪ್ರಭುತ್ವದಲ್ಲಿ ಒಗ್ಗಟ್ಟಿನ ವಿರೋಧ ಮತಗಟ್ಟೆಯಲ್ಲಷ್ಟೇ ತೋರಿಸಲು ಸಾಧ್ಯ ಅನ್ನುವ ದಿವ್ಯಸತ್ಯದ ಅರಿವಾಗಿರುವುದಕ್ಕೇ ಮಾತಿಗಿಂತ ಕೃತಿ ಮೇಲೆನ್ನಿಸಿರುವುದು. ಅಂದಹಾಗೆ ಒಂದುಕಾಲದಲ್ಲಿ ಬಿಜೆಪಿಯ ಪ್ರಧಾನಮಂತ್ರಿಯವರ ಆರಾಧಕರಾಗಿದ್ದ ಈ ಕ್ರೀಡಾಪಟುಗಳು ತಮ್ಮ ಹಕ್ಕಿಗಾಗಿ ತಮ್ಮದೇ ಸರ್ಕಾರದ ಮುಂದೆ ಹೀಗೆ ಬೀದಿ ಬದಿಯಲ್ಲಿ ತುಳಿತಕ್ಕೊಳಗಾಗಬೇಕಾದ ಈ ಪರಿಸ್ಥಿತಿಯನ್ನು ನೋಡುವಾಗ ನೋವಾಗುವುದಂತೂ ನಿಜ. ಸಂವೇದನೆಯನ್ನು ಕಳೆದುಕೊಂಡಿರುವ ಈ ದೇಶದ ಭಕ್ತರು ಬೇಗ ಎಚ್ಚೆತ್ತುಕೊಂಡು ದೇಶ ಉಳಿಸಲಿ ಅನ್ನುವುದಷ್ಟೇ ನನ್ನ ಈ ಕ್ಷಣದ ಆಸೆ” ಎಂದು ಆಶಿಸಿದ್ದಾರೆ.
“ನಿಮ್ಮ ಆತ್ಮವಂಚನೆಗೆ, ಅಷಾಢಭೂತಿತನಕ್ಕೆ ಕೊನೆಯೇ ಇಲ್ಲವೇ ಮಿಸ್ಟರ್ ಪಿಎಂ?” ಎಂದು ಪತ್ರಕರ್ತ ಶಶಿ ಸಂಪಳ್ಳಿ ಪ್ರಶ್ನಿಸಿದ್ದಾರೆ.
“ಸರ್ವಾಧಿಕಾರಿ ಆಡಳಿತದಲ್ಲಿ ಇದೆಲ್ಲಾ ಸಹಜವಾಗಿಯೇ ನಡೆಯುವ ಘಟನಾವಳಿಗಳು ನ್ಯಾಯ ಎಲ್ಲಿದೆ?” ಎಂದು ಯುವ ಹೋರಾಟಗಾರ ಹನುಮೇಶ್ ಗುಂಡೂರು ಪ್ರತಿಕ್ರಿಯಿಸಿದ್ದಾರೆ.
“ಲೈಂಗಿಕ ಕಿರುಕುಳ ನೀಡಿರುವ ಆರೋಪಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅಂಜಿಕೆಯಿಲ್ಲದೆ ಬೀದಿ ಸುತ್ತುತ್ತಿದ್ದಾನೆ. ಸಂತ್ರಸ್ತ ಹೆಣ್ಮಕ್ಳು ಲಾಠಿ, ಬೂಟುಗಳ ಪೆಟ್ಟು ತಿಂದು ಬಂಧಿಯಾಗಿದ್ದಾರೆ. ದೇಶಕ್ಕೆ ಪದಕ, ಹೆಮ್ಮೆ ತಂದ ಕುಸ್ತಿಪಟುಗಳ ಪರಿಸ್ಥಿತಿಯೇ ಹೀಗಾದರೆ, ನ್ಯಾಯಕ್ಕಾಗಿ ಜನಸಾಮಾನ್ಯರು ಧ್ವನಿ ಎತ್ತಿದರೆ ಅವರ ಪಾಡೇನು? ಮಿಸ್ಟರ್ ಮೋದಿ ಅಮಿತ್ ಷಾ ಅವರೇ, ಬೇಟಿ ಬಚಾವೋ, ಬೇಟಿ ಪಡಾವೋ ಎಂಬ ಘೋಷವಾಕ್ಯಕ್ಕೆ ಅರ್ಥವಿದೆಯಾ?” ಎಂದು ಯುವ ಪತ್ರಕರ್ತೆ ಧನಲಕ್ಷ್ಮಿ ಪೋಸ್ಟ್ ಮಾಡಿದ್ದಾರೆ.
“ಅಗೋ ಅಲ್ಲಿ ನೋಡಿ ಭವ್ಯ ಸಂಸತ್ತು, ಸಂವಿಧಾನವನ್ನು ಪಕ್ಕಕ್ಕೆ ಎಸೆದು ನಮ್ಮ ಕೋಟ್ಯಾಂತರ ರೂಪಾಯಿ ತೆರಿಗೆ ಹಣದಲ್ಲಿ ಕಟ್ಟಿಸಿ ಸ್ವಂತ ಮನೆಯಂತೆ ಗೃಹ ಪ್ರವೇಶ ಮಾಡಿದ ಕೆಟ್ಟ ಪ್ರಧಾನಿ. ಇಲ್ಲಿ ನೋಡಿ, ನಮ್ಮ ದೇಶದ ಹೆಮ್ಮೆಯ ಕುಸ್ತಿಪಟುಗಳು. ದೇಶದ ಹೆಮ್ಮೆ ಎಂದು ಟೀ ಕುಡಿಯಲು, ಸೆಲ್ಫಿ ತೆಗೆದುಕೊಳ್ಳಲು ಕರೆದ ಸೋಗಲಾಡಿಗೆ ಈಗ ಇವರು ಯಾರು ನೆನಪಿಲ್ಲ. ರಸ್ತೆಯಲ್ಲಿ ಹೀಗೇ ಹೀನಾಯವಾಗಿ ಎಳೆದಾಡುತ್ತಿದ್ದರೂ ಬಿಜೆಪಿಯ ಯಾವ ಮಹಿಳಾ ನಾಯಕಿಯು ತುಟಿ ಬಿಚ್ಚಿಲ್ಲ. ಇವರು ಕೇಳುತ್ತಿರುವುದು ಕೂಡ ಏಳು ಹೆಣ್ಣು ಮಕ್ಕಳ ಮೇಲೆ ಅದರಲ್ಲೂ ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಒಬ್ಬ ಬಿಜೆಪಿ ಸಂಸದನ ವಿರುದ್ಧ ಕ್ರಮ! ಅದು ಬಿಜೆಪಿ ಸಾಧ್ಯವಿಲ್ಲ. ಆತ ಮುಂದಿನ ತಿಂಗಳು ಅಯೋಧ್ಯೆಯಲ್ಲಿ ಬೃಹತ್ ರ್ಯಾಲಿ ನಡೆಸುತ್ತಿದ್ದಾನೆ. ನೆನಪಿಡಿ ನೀವು ರೈತರನ್ನು ಹೀಗೆ ನಡೆಸಿಕೊಂಡಿದ್ದಿರಿ, ಕೊನೆಗೆ ಏನಾಯಿತು?” ಎಂಬ ಸಂದೇಶವನ್ನು ಶರಣು ಎಂಬವರು ಹಂಚಿಕೊಂಡಿದ್ದಾರೆ.
“ಅವರೆಲ್ಲಾ ದೇಶವನ್ನು ಪ್ರತಿನಿಧಿಸಿ, ದೇಶದ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಹಾರಿಸುವ ಕನಸು ಹೊತ್ತು ಕುಸ್ತಿಪಟುಗಳಾಗಲು ಮುಂದಾದವರು. ಅಪ್ರಾಪ್ತ ವಯಸ್ಸಿನಲ್ಲೇ ಅಭ್ಯಾಸ ನಿರತರಾಗಿ, ವಿಶೇಷ ಕೋಚಿಂಗ್ ಪಡೆದು ಕುಸ್ತಿಪಟುಗಳಾಗಿ ದೇಶಕ್ಕೆ ಒಲಂಪಿಕ್ ನಲ್ಲಿ ಪದಕವನ್ನೂ ತಂದುಕೊಟ್ಟ ಭಾರತಾಂಬೆಯ ಹೆಮ್ಮೆಯ ಕುವರಿಯರು. ಲೈಂಗಿಕ ದೌರ್ಜನ್ಯ ಎಸಗಿದ್ದಾರೆನ್ನುವ ಆರೋಪ ಹೊರಿಸಿರುವ ಮಹಿಳಾ ಕುಸ್ತಿಪಟುಗಳು ತಮಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಧರಣಿ ನಡೆಸುತ್ತಿದ್ದಾರೆ. ಆದರೆ ಬಿಜೆಪಿ ಸರಕಾರ ತನ್ನ ಸಂಸದನ ಪರವಾಗಿ ನಿಂತು ಈ ಹೆಣ್ಣುಮಕ್ಕಳನ್ನೇ ಬಂಧಿಸಿದೆ ಇಂದು? ಇದೆಂತಹ ಅನ್ಯಾಯ ಸ್ವಾಮಿ, ಈ ದೇಶದಲ್ಲಿ ಕಾನೂನು ಇದೆಯೋ ಇಲ್ಲವೋ? ಲೈಂಗಿಕ ದೌರ್ಜನ್ಯ ಆಗಿದೆ ಎಂದು ನೊಂದು ಪ್ರತಿಭಟಿಸುವ ಈ ಹೆಣ್ಣು ಮಕ್ಕಳನ್ನು ಹಾದಿಬೀದಿಯಲ್ಲಿ ಪ್ರಾಣಿಗಳಂತೆ ಎಳೆದೊಯ್ಯುತ್ತಿರುವುದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಲ್ಲವೇ?” ಎಂದು ಸುಬ್ರಮಣ್ಯ ಭಟ್ ಕೇಳಿದ್ದಾರೆ.