ಗಣಿಗಾರಿಕೆ ವಿರೋಧಿ ಮತ್ತು ಬುಡಕಟ್ಟು ಹಕ್ಕುಗಳ ಹೋರಾಟಗಾರ್ತಿ 28 ವರ್ಷದ ಹಿಡ್ಮೆ ಮಾರ್ಖಂ ಅವರನ್ನು ಬಿಡುಗಡೆಗೊಳಿಸುವಂತೆ ಪೋಸ್ಟ್ಕಾರ್ಡ್ ಅಭಿಯಾನವನ್ನು ಟ್ವಿಟರ್ನಲ್ಲಿ ಪ್ರಾರಂಭಿಸಲಾಗಿದೆ.
ಬುಡಕಟ್ಟು ಸಮುದಾಯದ ಹೋರಾಟಗಾರ್ತಿಯನ್ನು ಬಂಧಿಸಿರುವ ಛತ್ತೀಸ್ಗಢದ ಬಸ್ತಾರ್ ಜಿಲ್ಲೆಯ ಜಗದಲ್ಪುರ ಕೇಂದ್ರ ಕಾರಾಗೃಹದ ಅಧಿಕಾರಿಗಳಿಗೆ ಪೋಸ್ಟ್ಕಾರ್ಡ್ ಕಳುಹಿಸಲು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ನೆಟ್ಟಿಗರಿಗೆ ಮನವಿ ಮಾಡಲಾಗುತ್ತಿದೆ.
ದಕ್ಷಿಣ ಛತ್ತೀಸ್ಗಢದ ದಾಂತೇವಾಡ ಜಿಲ್ಲೆಯ ಬರ್ಗಮ್ ಗ್ರಾಮದ 28 ವರ್ಷದ ಹೋರಾಟಗಾರ್ತಿಯನ್ನು ಕಳೆದ ವರ್ಷ ಮಾರ್ಚ್ 9 ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸ್ಮರಣಾರ್ಥ ನಡೆದ ಕಾರ್ಯಕ್ರಮವೊಂದರಲ್ಲಿ ಬಂಧಿಸಲಾಗಿತ್ತು. ದಂತೇವಾಡದ ಸಮೇಲಿ ಗ್ರಾಮದಲ್ಲಿ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಅರೆಸೇನಾಪಡೆ, ಸ್ಥಳೀಯ ಪೊಲೀಸರು ಮತ್ತು ಜಿಲ್ಲಾ ಮೀಸಲು ಗಾರ್ಡ್ (ಡಿಆರ್ಜಿ) ಅಧಿಕಾರಿಗಳ ದೊಡ್ಡ ಗುಂಪು ಮಾರ್ಖಂ ಅವರನ್ನು ಕರೆದೊಯ್ದರು.
ಆದರೆ ಇದು ಅಪಹರಣ ಎಂದು ಪೀಪಲ್ಸ್ ಯೂನಿಯನ್ ಆಫ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಆರೋಪಿಸಿತ್ತು. ಆದರೆ ಪೊಲೀಸರು ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ. ತರುವಾಯ ಅವರ ಮೇಲೆ UAPA ಅಡಿಯಲ್ಲಿ ಆರೋಪ ಹೊರಿಸಲಾಯಿತು.
ಇದನ್ನೂ ಓದಿ: ಛತ್ತಿಸ್ಗಢ ಆದಿವಾಸಿ ಹಕ್ಕುಗಳ ಹೋರಾಟಗಾರ್ತಿ ಹಿಡ್ಮೆ ಮಾರ್ಖಂ ಬಿಡುಗಡೆಗೆ ಒತ್ತಾಯ: ಸಿಎಂ ಗೆ ಪತ್ರ
ಹಿಡ್ಮೆ ಮಾರ್ಖಂ ಅವರು ಸಂಘರ್ಷ ಪೀಡಿತ ಬಸ್ತಾರ್ ಪ್ರದೇಶದಲ್ಲಿ ಆದಿವಾಸಿಗಳ ಹಕ್ಕುಗಳಿಗಾಗಿ ದೀರ್ಘಕಾಲ ಹೋರಾಡುತ್ತಿದ್ದಾರೆ. ಸ್ಥಳೀಯ ಪೋಲೀಸರು, ಅರೆಸೇನಾ ಪಡೆಗಳು ಮತ್ತು ಈ ಪ್ರದೇಶದ ಮಾವೋವಾದಿಗಳು ಎಲ್ಲರ ವಿರುದ್ಧ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದರು.
‘ಜೈಲ್ ಬಂದಿ ರಿಹೈ ಸಮಿತಿ’ಯ ಕನ್ವೀನರ್ ಆಗಿರುವ ಹಿಡ್ಮೆ ಮಾರ್ಖಂ ರಾಜ್ಯಪಾಲರು, ಮುಖ್ಯಮಂತ್ರಿ, ಪೊಲೀಸ್ ವರಿಷ್ಠಾಧಿಕಾರಿ, ಕಲೆಕ್ಟರ್ ಮತ್ತು ಇತರ ಅಧಿಕಾರಿಗಳನ್ನು ಭೇಟಿ ಮಾಡಿ, ಜೈಲುಗಳು ಮತ್ತು ಪೊಲೀಸ್ ಶಿಬಿರಗಳಲ್ಲಿ ಬಂಧಿಸಲ್ಪಟ್ಟ ಮತ್ತು ಶಿಕ್ಷೆಗೊಳಗಾದ ಅಮಾಯಕ ಆದಿವಾಸಿಗಳ ಬಿಡುಗಡೆಗಾಗಿ ಹಲವಾರು ಹೋರಾಟವನ್ನು ನಡೆಸಿದ್ದಾರೆ.
ಈ ಪೋಸ್ಟ್ಕಾರ್ಡ್ ಅಭಿಯಾನವು ಜಗದಲ್ಪುರ ಜೈಲು ಅಧಿಕಾರಿಗಳಿಗೆ ಪತ್ರ ಬರೆಯಲು ಮತ್ತು ಹಿಡ್ಮೆ ಮಾರ್ಖಂ ಅವರ ಬಂಧನದ ವಿರುದ್ಧ ಒಗ್ಗಟ್ಟನ್ನು ಪ್ರದರ್ಶಿಸಲು ಮನವಿ ಮಾಡಿದೆ.