ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂಬ ಚರ್ಚೆಗಳ ಬೆನ್ನೆಲ್ಲೆ ಅವರು ಇಂದು ನವದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮುಖಂಡರಾದ ರಾಹುಲ್ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ರವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
2024ರ ಚುನಾವಣೆ ನೀಲನಕ್ಷೆಗೆ ಸಜ್ಜುಗೊಳಿಸುವುದಕ್ಕೆ ಪ್ರಶಾಂತ್ ಕಿಶೋರ್ ಒತ್ತು ನೀಡಿದರೆ, ಈ ವರ್ಷದ ಅಂತ್ಯದಲ್ಲಿ ನಡೆಯುವ ಗುಜರಾತ್ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷದ ಪರ ಕೆಲಸ ಮಾಡುವಂತೆ ಕೆಲ ಮುಖಂಡರು ಒತ್ತಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಪಕ್ಷದ ವಿರುದ್ಧ ಅದರಲ್ಲಿಯೂ ಗಾಂಧಿ ಕುಟುಂಬದ ವಿರುದ್ಧ ಟೀಕೆ ಮಾಡುತ್ತಿದ್ದ ಪ್ರಶಾಂತ್ ಕಿಶೋರ್ ಈಗ ಮತ್ತೆ ಗಾಂಧಿ ಕುಟುಂಬದ ಜೊತೆ ಮುಂದಿನ ಚುನಾವಣೆಗಳ ಕುರಿತು ಮಾತುಕತೆ ನಡೆಸುತ್ತಿದ್ದಾರೆ. ಹೊರಗಿನಿಂದ ಬೆಂಬಲ ನೀಡುವ ಬದಲು ನೇರವಾಗಿ ಕಾಂಗ್ರೆಸ್ ಸೇರುವಂತೆ ಒತ್ತಾಯಿಸಲಾಗಿದೆ ಎನ್ನಲಾಗುತ್ತಿದ್ದು, ಈ ಕುರಿತು ಮೇ ತಿಂಗಳಿನಲ್ಲಿ ಕಿಶೋರ್ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್ಡಿಟಿವಿ ವರದಿ ಮಾಡಿದೆ.
ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡುವಂತೆ ಪ್ರಶಾಂತ್ ಕಿಶೋರ್ ಮೇಲೆ ಒತ್ತಡ ಹೇರಲಾಗುತ್ತಿರುವುದು ನಿಜ. ಆದರೆ ಕೇವಲ ಅದೊಂದು ಚುನಾವಣೆ ಮಾತ್ರವಲ್ಲದೇ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಬೃಹತ್ ಯೋಜನೆ ರೂಪಿಸುವುದು ಪ್ರಶಾಂತ್ ಕಿಶೋರ್ರವರ ಮಹತ್ವಕಾಂಕ್ಷೆಯಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿರುವುದಾಗಿ ವರದಿ ಹೇಳಿದೆ. ಈಗ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಜೊತೆ ಮಾತುಕತೆ ಮುಂದುವರೆಸಲು ಬಯಸಿದ್ದು ಈ ಎಲ್ಲದರ ಕುರಿತು ಮೇ 02 ರಂದು ಪ್ರಶಾಂತ್ ಕಿಶೋರ್ ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನಲಾಗಿದೆ.
2021ರಲ್ಲಿ ಜುಲೈನಲ್ಲಿ ಪ್ರಶಾಂತ್ ಕಿಶೋರ್ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂಬ ಚರ್ಚೆಗಳು ಆರಂಭವಾಗಿದ್ದವು. ಮುಖ್ಯವಾಗಿ ರಾಹುಲ್ ಗಾಂಧಿ ಮತ್ತು ಪ್ರಶಾಂತ್ ಕಿಶೋರ್ ಹಲವು ಸುತ್ತಿನ ಮಾತುಕತೆ ನಡೆಸಿದ್ದರು. ಆದರೆ ಆನಂತರ ಹಲವು ಭಿನ್ನಾಭಿಪ್ರಾಯಗಳ ಕಾರಣಕ್ಕೆ ಮಾತುಕತೆ ಮುರಿದು ಬಿದ್ದಿತ್ತು. ಆನಂತರ ಕಾಂಗ್ರೆಸ್ ನಾಯಕತ್ವದ ವಿರುದ್ಧ ಪ್ರಶಾಂತ್ ಕಿಶೋರ್ ಹಲವಾರು ಟೀಕೆಗಳನ್ನು ಮಾಡಿದ್ದರು.
ಬಿಜೆಪಿ ಇನ್ನು ಹಲವು ವರ್ಷಗಳ ಕಾಲ ಭಾರತದ ರಾಜಕೀಯದ ಕೇಂದ್ರವಾಗಲಿದೆ… ಈ ಹಿಂದೆ ಕಾಂಗ್ರೆಸ್ ಇದ್ದಂತೆ ಈಗ ಬಿಜೆಪಿ ಕೂಡಾ ಗೆದ್ದರೂ, ಸೋತರೂ ಎಲ್ಲಿಯೂ ಹೋಗುವುದಿಲ್ಲ. ಆದರೆ ಸಮಸ್ಯೆ ಇರುವುದು ರಾಹುಲ್ ಗಾಂಧಿಗೆ. ಬಹುಶಃ ಜನರು ಬಿಜೆಪಿಯನ್ನು ಕಿತ್ತೊಗೆಯುತ್ತಾರೆ ಎಂದು ಅವರು ಭಾವಿಸುತ್ತಾರೆ, ಅದು ಆಗುತ್ತಿಲ್ಲ, ಆ ಅರಿವು ರಾಹುಲ್ ಗಾಂಧಿಗೆ ಇಲ್ಲ” ಎಂದು ಪ್ರಶಾಂತ್ ಕಿಶೋರ್ 2021ರ ಅಕ್ಟೋಬರ್ನಲ್ಲಿ ರಾಹುಲ್ ಗಾಂಧಿ ಮೇಲೆ ವಾಗ್ದಾಳಿ ನಡೆಸಿದ್ದರು.
“ಕಾಂಗ್ರೆಸ್ ಪ್ರತಿನಿಧಿಸುವ ಚಿಂತನೆ ಮತ್ತು ಅದಕ್ಕಿರುವ ಸಾಮರ್ಥ್ಯವು ಪ್ರಬಲ ಪ್ರತಿಪಕ್ಷಕ್ಕೆ ಅತ್ಯಗತ್ಯ. ಆದರೆ ಕಾಂಗ್ರೆಸ್ನ ನಾಯಕತ್ವವು ವ್ಯಕ್ತಿಯೊಬ್ಬರ ದೈವಿಕ ಹಕ್ಕಲ್ಲ. ವಿಶೇಷವಾಗಿ ಕಳೆದ 10 ವರ್ಷಗಳಲ್ಲಿ ಪಕ್ಷವು 90% ಕ್ಕಿಂತ ಹೆಚ್ಚು ಚುನಾವಣೆಗಳನ್ನು ಸೋತಿದೆ. ವಿರೋಧ ಪಕ್ಷವು ತನ್ನ ನಾಯಕತ್ವವನ್ನು ಪ್ರಜಾಸತ್ತಾತ್ಮಕವಾಗಿ ನಿರ್ಧರಿಸಲಿ ಎಂದು ಡಿಸೆಂಬರ್ ವೇಳೆಗೆ ಪ್ರಶಾಂತ್ ಕಿಶೋರ್ ನುಡಿದಿದ್ದರು. ಪ್ರಶಾಂತ್ ಕಿಶೋರ್ರವರ ಎಷ್ಟೆಲ್ಲಾ ಟೀಕೆಗಳ ನಡುವೆಯೂ ರಾಹುಲ್ ಗಾಂಧಿ ತಾಳ್ಮೆ ವಹಿಸಿದ್ದಾರೆ ಹೊರತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದು ಈಗ ಮತ್ತೊಂದು ಸುತ್ತಿನ ಮಾತುಕತೆಗೆ ಅನುಕೂಲವಾಗಲಿದೆ ಎನ್ನಲಾಗುತ್ತಿದೆ. ಅದೇ ಸಂದರ್ಭದಲ್ಲಿ ಪ್ರಶಾಂತ್ ಕಿಶೋರ್ ಸಹ ಕಾಂಗ್ರೆಸ್ ಮನಸ್ಸು ಮಾಡಿದ್ದರೆ 2024ರಲ್ಲಿ ಬಿಜೆಪಿಯನ್ನು ಸೋಲಿಸಲು ಸಾಧ್ಯ ಎಂದು ಉಚ್ಚರಿಸಿದ್ದಾರೆ.
ಐದು ರಾಜ್ಯಗಳ ಚುನಾವಣಾ ಫಲಿತಾಂಶದ ನಂತರ ಇಂಡಿಯಾ ಟುಡೇ ಚಾನೆಲ್ ಜೊತೆ ಮಾತನಾಡಿದ್ದ ಪ್ರಶಾಂತ್ ಕಿಶೋರ್ “ಕಾಂಗ್ರೆಸ್ ಸಂಪೂರ್ಣ ಮನಸ್ಸು ಮಾಡಿದರೆ ಕೇವಲ ಎರಡು ವರ್ಷದಲ್ಲಿ ಅಂದರೆ 2024 ರಲ್ಲಿ ಬಿಜೆಪಿಯನ್ನು ಸೋಲಿಸಲು ಸಾಧ್ಯ” ಎಂದು ನುಡಿದಿದ್ದರು.
“ಬಿಜೆಪಿ ಮತ್ತು ಮೋದಿ ಎಷ್ಟೇ ಪ್ರಭಾವಿಯಾಗಿದ್ದರೂ ಈಶಾನ್ಯ ಭಾರತ ಮತ್ತು ದಕ್ಷಿಣ ಭಾರತದ 200 ಸ್ಥಾನಗಳಲ್ಲಿ (ಬಿಹಾರ, ಪ.ಬಂಗಾಳ, ಒಡಿಸ್ಸಾ, ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಕೇರಳ) ಇಂದಿಗೂ 50 ಸೀಟು ಪಡೆಯಲು ತಿಣುಕಾಡುತ್ತಿದೆ. ಅಂದರೆ ಬಿಹಾರ, ಓಡಿಸ್ಸಾ ಮತ್ತು ಬಂಗಾಳದಲ್ಲಿ ಬಿಜೆಪಿ ಯಶಸ್ವಿಯಾಗಿದ್ದರೂ ಸಹ 50ಕ್ಕಿಂತ ಹೆಚ್ಚು ಸೀಟು ಪಡೆಯಲು ಸಾಧ್ಯವಾಗುತ್ತಿಲ್ಲ. ಬಿಜೆಪಿಗೆ ಬಿಹಾರದಲ್ಲಿ 18, ಬಂಗಾಳದಲ್ಲಿ 18, ಒಡಿಸ್ಸಾದಲ್ಲಿ 12, ತೆಲಂಗಾಣದಲ್ಲಿ 4-5 ಬಿಜೆಪಿ ಸಂಸದರಿದ್ದಾರೆ ಅಷ್ಟೆ. ಅಂದರೆ 150 ರಷ್ಟು ಸೀಟುಗಳು ಇಂದಿಗೂ ವಿರೋಧ ಪಕ್ಷಗಳ ಕೈಯಲ್ಲಿವೆ. ಅವರೆಲ್ಲರೂ ಬಿಜೆಪಿಯನ್ನು ವಿರೋಧಿಸುತ್ತಿದ್ದಾರೆ” ಎಂದು ಪ್ರಶಾಂತ್ ಕಿಶೋರ್ ತಿಳಿಸಿದ್ದರು.
ಉಳಿದ 350ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಯಾವುದೇ ಪಕ್ಷವಾದರೂ ಅಂದರೆ ಆಪ್, ತೃಣಮೂಲ ಕಾಂಗ್ರೆಸ್ ಅಥವಾ ಮರುಹುಟ್ಟಿನ ಕಾಂಗ್ರೆಸ್ ಪಕ್ಷವಾಗಲಿ 120 ಸೀಟುಗಳನ್ನು ಗೆದ್ದುಕೊಂಡಲ್ಲಿ ರಾತ್ರೋರಾತ್ರಿ ಸಂಪೂರ್ಣ ಪರಿಸ್ಥಿತಿ ಬದಲಾಗಲಿದೆ. ಸೈದ್ದಾಂತಿಕವಾಗಿ ಹೇಳಬಹುದಾದರೆ ಕೇವಲ 2 ವರ್ಷದಲ್ಲಿ ಬಿಜೆಪಿಯನ್ನು ಸೋಲಿಸಬಹುದಾಗಿದೆ. ಕಾಂಗ್ರೆಸ್ ಥರದ ಪಕ್ಷ 120 ಸೀಟುಗಳನ್ನು ಗೆಲ್ಲಲಾಗುವುದಿಲ್ಲ ಎಂದು ಹೇಳಲು ಸಾಧ್ಯವೇ? ಈಗ 50 ಕ್ಷೇತ್ರಗಳಲ್ಲಿ ಗೆದ್ದಿರುವ ಕಾಂಗ್ರೆಸ್ ಇನ್ನು ಎರಡು ವರ್ಷಗಳಲ್ಲಿ ಅದನ್ನು ಡಬಲ್ ಮಾಡುವುದು ಸಾಧ್ಯವಿದೆ ಎಂದು ಪ್ರಶಾಂತ್ ಕಿಶೋರ್ ಲೆಕ್ಕಾಚಾರ ಹಾಕಿದ್ದಾರೆ.
ಅದಕ್ಕಾಗಿ ಕಾಂಗ್ರೆಸ್ ಅನ್ನು ಪುನಃ ಸ್ಥಾಪಿಸಬೇಕಾಗಿದೆ. ಅದರ ಆತ್ಮ, ಮುನ್ನೋಟ ಮತ್ತು ಸೈದ್ದಾಂತಿಕತೆಯನ್ನು ಇಟ್ಟುಕೊಂಡು ಉಳಿದೆಲ್ಲವನ್ನು ಬದಲಿಸಬೇಕಿದೆ. ಕಾಂಗ್ರೆಸ್ ಮನಸ್ಸು ಮಾಡಿ ಕೆಲಸ ಮಾಡಿದರೆ ಇದನ್ನು ಸಾಧಿಸಬಹುದು. ಬಿಜೆಪಿ ಸೋಲಿಸಲು ಇತರ ವಿರೋಧ ಪಕ್ಷಗಳ ಬೆಂಬಲ ಖಂಡಿತ ಬೇಕಾಗಿದೆ. ಅದಕ್ಕಾಗಿ ಮೊದಲಿಗೆ ಕಾಂಗ್ರೆಸ್ ಪ್ರತಿಪಕ್ಷಗಳ ಎದುರು ಬಿಜೆಪಿಯನ್ನು ಸೋಲಿಸುವ ಮುನ್ನೋಟವನ್ನು ಮುಂದಿಡಬೇಕು. ಎರಡನೇದಾಗಿ ಇದರಿಂದ ಅತಿ ಹೆಚ್ಚು ಲಾಭ ತನಗಾಗಲಿದೆ ಎನ್ನುವುದನ್ನು ಮನಗಾಣಬೇಕು ಮತ್ತು ಮೂರನೇಯದಾಗಿ ಬಿಜೆಪಿಯನ್ನು ಮಣಿಸಿದ ನಂತರ ಯಾರು ನಾಯಕತ್ವ ವಹಿಸಬೇಕು ಎಂಬುದನ್ನು ಪಡೆದ ಸೀಟುಗಳ ಆಧಾರದಲ್ಲಿ ನಿರ್ಧರಿಸಬೇಕು. ಆದರೆ ಕಾಂಗ್ರೆಸ್ ಇಂದು ಇದಕ್ಕೆ ವಿರುದ್ಧವಾಗಿ ಚಿಂತಿಸುತ್ತಿದೆ. ಬಹುದೊಡ್ಡ ಪಕ್ಷವಾಗಿ ಕಾಂಗ್ರೆಸ್ಗೆ ಖಂಡಿತ ಅನುಕೂಲಗಳಿವೆ, ಅದು ತನ್ನ ಚಿಂತನೆಯನ್ನು ಅದಲು ಬದಲು ಮಾಡಿದರೆ ಖಂಡಿತ ಬಿಜೆಪಿಯನ್ನು ಸೋಲಿಸಲು ಸಾಧ್ಯ ಎಂದು ಕಿಶೋರ್ ವಿಶ್ವಾಸ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಇದನ್ನೂ ಓದಿ: 2014ರಲ್ಲಿ ಮೋದಿ ಗೆಲುವಿಗಾಗಿ ದುಡಿದ, ಈಗ ಮೋದಿ ವಿರುದ್ಧವೇ ತೊಡೆ ತಟ್ಟಿರುವ ಈ ಪ್ರಶಾಂತ್ ಕಿಶೋರ್ ಯಾರು?
ಟಿಎಂಸಿಯ ಮಮತಾ ಬ್ಯಾನರ್ಜಿ, ಎನ್ಸಿಪಿಯ ಶರದ್ ಪವಾರ್, ಆಪ್ನ ಅರವಿಂದ್ ಕೇಜ್ರಿವಾಲ್, ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ, ತಮಿಳುನಾಡಿನ ಸ್ಟಾಲಿನ್ ಜೊತೆ ಉತ್ತಮ ಸಂಬಂಧ ಹೊಂದಿರುವ ಪ್ರಶಾಂತ್ ಕಿಶೋರ್ 2024ರ ಮುಂಚೆ ಈ ಎಲ್ಲಾ ವಿರೋಧ ಪಕ್ಷಗಳನ್ನು ಬಿಜೆಪಿ ವಿರುದ್ಧ ಐಕ್ಯ ಶಕ್ತಿಯಾಗಿ ಅಣಿನೆರೆಸಲು ಕಿಶೋರ್ ಬಯಸಿದ್ದಾರೆ. ಇದರ ಭಾಗವಾಗಿ ಅವರು ಇತ್ತೀಚೆಗೆ ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ನಾಯಕ ನಿತೀಶ್ ಕುಮಾರ್ರವರನ್ನು ಸಹ ಭೇಟಿ ಮಾಡಿದ್ದಾರೆ. ಎರಡು ವರ್ಷಗಳ ಹಿಂದೆ ಜೆಡಿಯುನಿಂದ ಉಚ್ಛಾಟಿತರಾಗಿದ್ದ ಪ್ರಶಾಂತ್ ಕಿಶೋರ್ ವೈಮನಸ್ಸು ಮರೆತು ನಿತೀಶ್ ಕುಮಾರ್ರವರನ್ನು ಭೇಟಿ ಮಾಡಿರುವುದು ಅವರ ನರೇಂದ್ರ ಮೋದಿ ವಿರುದ್ಧ ವಿರೋಧ ಪಕ್ಷಗಳನ್ನು ಗಟ್ಟಿಗೊಳಿಸುವ ಪ್ರಯತ್ನದ ಭಾಗ ಎನ್ನಲಾಗುತ್ತಿದೆ. ಈಗ ಕಾಂಗ್ರೆಸ್ ನಾಯಕತ್ವದ ಜೊತೆ ಮಾತುಕತೆ ಪುನಃ ಆರಂಭಿಸಿದ್ದಾರೆ. ಫಲಿತಾಂಶ ಏನಾಗಲಿದೆ ಎಂದು ಕಾದು ನೋಡಬೇಕಿದೆ.
ಎತ್ತನ ಮಾಮರ ಎತ್ತನ ಕೋಗಿಲೆ, ಎತ್ತನಿಂದೆತ್ತ ಸಂಬಂಧವಯ್ಯ, ನರಹತ್ಯೆಯನ್ನೇ ತನ್ನ ರಾಜಕೀಯ ಬಂಡವಾಳ ಮಾಡಿಕೊಂಡ ನರೇಂದ್ರ ಮೋದಿ ಎಲ್ಲಿ, ವೈದಿಕ ಧರ್ಮದ ಆಚರಣೆಗಳ ವಿರುದ್ಧ ಹೋರಾಡಿ ದಲಿತರ ವಿಮೋಚನೆ ಮಾಡಿದ ಅಂಬೇಡ್ಕರ್ ಎಲ್ಲಿ, ಇಳಯರಾಜ ಒಂದು ಬಾರಿ ಬಾಬಾಸಾಹೇಬ ಅಂಬೇಡ್ಕರ್ ಅವರ ಜೀವನ ಚರಿತ್ರೆ ಓದಿ ನಂತರ ಅವರ ವ್ಯಕ್ತಿತ್ವದ ಹೊಂದಾಣಿಕೆಯನ್ನು ಬೇರೆಯವರ ಜೊತೆ ಮಾಡಲಿ…