ಜುಲೈ 18 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ವಿರೋಧ ಪಕ್ಷಗಳ ಮೈತ್ರಿ ಅಭ್ಯರ್ಥಿ ಯಶವಂತ್ ಸಿನ್ಹಾರಿಗೆ ಹಿನ್ನಡೆಯಾಗುವ ಬೆಳವಣಿಗೆಗಳು ನಡೆದಿವೆ. ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಮೈತ್ರಿ ಪಕ್ಷವಾದ ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷ (SBSP)ವು ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮುರವರನ್ನು ಬೆಂಬಲಿಸುವುದಾಗಿ ಘೋಷಿಸಿದೆ.
ಪಕ್ಷದ ಮುಖಂಡ ಓಂ ಪ್ರಕಾಶ್ ರಾಜ್ಬಾರ್ ಮಾತನಾಡಿ, ಪಕ್ಷದ ಆರು ಶಾಸಕರು ಮತ್ತು ಪದಾಧಿಕಾರಿಗಳ ಜೊತೆ ಮಾತನಾಡಿ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದಿದ್ದಾರೆ. 2019ರವರೆಗೂ ಎನ್ಡಿಎ ಜೊತೆಗಿದ್ದ ಅವರು 2019ರ ಚುನಾವಣೆಗೂ ಮುನ್ನ ಅಖಿಲೇಶ್ ಯಾದವ್ ಬಣ ಸೇರಿದ್ದರು.
ಇನ್ನೊಂದೆಡೆ ಜಾರ್ಖಂಡ್ನಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಸರ್ಕಾರ ರಚಿಸಿರುವ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷವು ಸಹ ದ್ರೌಪದಿ ಮುರ್ಮುರವರನ್ನು ಬೆಂಬಲಿಸುವುದಾಗಿ ಘೋಷಿಸಿದೆ. ಇದಕ್ಕೆ ಮುಖ್ಯ ಕಾರಣ ಜಾರ್ಖಂಡ್ನಲ್ಲಿ ಶೇ.26 ರಷ್ಟು ಬುಡಕಟ್ಟು ಸಮುದಾಯದವರು ಇರುವುದೇ ಆಗಿದೆ.
ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಸ್ವತಃ ಬುಡಕಟ್ಟು ಸಮುದಾಯದವರು. ಅವರು ಹಲವು ವಿಚಾರಗಳಲ್ಲಿ ಎನ್ಡಿಎ ವಿರುದ್ಧವಿದ್ದರೂ ಸಹ ರಾಷ್ಟ್ರಪತಿ ಚುನಾವಣೆಯ ಸಂದರ್ಭದಲ್ಲಿ ಅವರನ್ನೆ ಬೆಂಬಲಿಸಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: Explained: ಭಾರತದ ರಾಷ್ಟ್ರಪತಿ ಆಯ್ಕೆಯನ್ನು ಹೇಗೆ ಮಾಡಲಾಗುತ್ತದೆ?
ದ್ರೌಪದಿ ಮುರ್ಮು ಮೂಲತಃ ಒಡಿಸ್ಸಾದವರಾದರೂ ಕೆಲಕಾಲ ಅವರು ಜಾರ್ಖಂಡ್ನ ರಾಜ್ಯಪಾಲರಾಗಿದ್ದರು. ಈ ಎಲ್ಲಾ ಕಾರಣಗಳಿಗಾಗಿ ಜೆಎಂಎಂ ಪಕ್ಷವು ಎನ್ಡಿಎ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಘೋಷಿಸಿದೆ.
ಕಳೆದ ವಾರ ಮಹರಾಷ್ಟ್ರದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಪಕ್ಷ ಸಹ ತನ್ನ ಸಂಸದರ ಒತ್ತಡದ ಕಾರಣದಿಂದಾಗಿ ದೌಪದಿ ಮುರ್ಮುರವರನ್ನು ಬೆಂಬಲಿಸುವುದಾಗಿ ಘೋಷಿಸಿದೆ.
ಇದನ್ನೂ ಓದಿ; ದ್ರೌಪದಿ ಮುರ್ಮು ಬೆಂಬಲಿಸುವಂತೆ ಉದ್ಧವ್ ಮೇಲೆ ಒತ್ತಡ ಹೇರಿಕೆ: ಯಶವಂತ ಸಿನ್ಹಾ