ನುಡಿನಮನ
ರೊದ್ದಂ ನರಸಿಂ
(20 ಜುಲೈ 1933, – 14 ಡಿಸೆಂಬರ್ 2020)
ವಿಜ್ಞಾನ ಮತ್ತು ಮಾನವಿಕ ಶಾಸ್ತ್ರಗಳ ನಡುವೆ ಇರುವ ಕಂದರವನ್ನು ಮೀರಲು ಕೆಲವೇ ವಿಜ್ಞಾನಿಗಳಿಗೆ ಸಾಧ್ಯ. ಅಂತಹವರಲ್ಲಿ ಪ್ರೊ ರೊದ್ದಂ ನರಸಿಂಹ ಒಬ್ಬರು. ಫ್ಲುಯಿಡ್ ಡೈನಾಮಿಕ್ಸ್ನ ವಿಜ್ಞಾನದಲ್ಲಿ ಮುಂಚೂಣಿಯ ಹೆಸರಾಗಿದ್ದ ನರಸಿಂಹ ಅವರಿಗೆ ಮಾನವಿಕ ಶಾಸ್ತ್ರದಲ್ಲಿ ಆಳವಾದ ಆಸಕ್ತಿ ಇತ್ತು. ಆದೇ ಆಸಕ್ತಿ ಅವರನ್ನು ವಿಜ್ಞಾನದ ತತ್ವಶಾಸ್ತ್ರದ ಕಡೆಗೆ ಕೊಂಡೊಯ್ಯಿತು. ವಿಜ್ಞಾನಕ್ಕೆ ವಿವಿಧ ಪರಂಪರೆಗಳಲ್ಲಿ ಇರುವ ವಿಭಿನ್ನ ದೃಷ್ಟಿಕೋನಗಳ ಬಗ್ಗೆ ಅವರು ವಿಶೇಷವಾಗಿ ಆಕರ್ಷಿತರಾಗಿದ್ದರು. ಅವರು ಎಲ್ಲರೊಂದಿಗೆ ಸುಲಭವಾಗಿ ಬೆರೆಯಬಲ್ಲವರಾಗಿದ್ದರು ಹಾಗೂ ಅತ್ಯಂತ ಕ್ಲಿಷ್ಟಕರವಾದ ವಿಷಯಗಳ ಸಾರವನ್ನು ಸರಳವಾದ ಪದಗಳಲ್ಲಿ ಹೇಳಿಕೊಡಬಲ್ಲ ವಿಶಿಷ್ಟ ಸಾಮರ್ಥ್ಯ ಉಳ್ಳವರಾಗಿದ್ದರು. ಅದರಿಂದ, ಅವರೊಂದಿಗೆ ಮಾಡಿದ ಸಹಜ ಮಾತುಕತೆಗಳೂ ಸಹ ವಿಶಿಷ್ಟ ಒಳನೋಟಗಳನ್ನು ಒದಗಿಸುತ್ತಿದ್ದವು. ಕೆಲವೇ ತಿಂಗಳುಗಳ ಹಿಂದೆ ರಸ್ತೆ ಬದಿಯಲ್ಲಿ ನಿಂತು ಮಾಡಿದ ಮಾತುಕತೆಯಲ್ಲಿ ತಿಳಿದಿದ್ದೇನೆಂದರೆ, ಭಾರತದಲ್ಲಿ ಶಿಕ್ಷೆಯ ರೂಪದಲ್ಲಿ ವ್ಯಕ್ತಿಗಳ ಮೂಗನ್ನು ಕತ್ತರಿಸಲಾಗುತ್ತಿತ್ತಂತೆ ಮತ್ತು ಮೂಗು ಕತ್ತರಿಸುವ ಪಾರಂಪರಿಕ ಭಾರತೀಯ ವಿಧಾನವು ಪ್ಲಾಸ್ಟಿಕ್ ಸರ್ಜರಿಯ ಪಾರಂಪರಿಕ ವಿಧಾನದ ಬೆಳವಣಿಗೆಗೆ ಕೊಡುಗೆ ನೀಡಿದ್ದನ್ನು ಹೇಳಿದ್ದರು. ಮೂಗು ಕತ್ತರಿಸಿಕೊಂಡ ವ್ಯಕ್ತಿಗಳನ್ನು ಒಂದು ವರ್ಷದ ಬಳಿಕ ನೋಡಿದಾಗ ಮೂಗು ಅದೇ ಸ್ಥಾನಕ್ಕೆ ಮರಳಿ ಬಂದಿದ್ದನ್ನು ನೋಡಿ ಬ್ರಿಟಿಷರು ಆಶ್ಚರ್ಯಚಕಿತರಾಗಿದ್ದರು ಎಂಬುದರ ಬಗ್ಗೆಯೂ ಹೇಳಿದ್ದರು.
ಪ್ರೊ ನರಸಿಂಹ ಅವರು ತಮ್ಮ ವ್ಯಕ್ತಿತ್ವವನ್ನು ನೆಲದ ಬೇರುಗಳ ಜೊತೆಗೆ ಉಳಸಿಕೊಂಡಿದ್ದರಿಂದ, ಪ್ರಾಚೀನ ಭಾರತೀಯ ವಿಜ್ಞಾನದ ಸಾಧನೆಗಳ ನೈಜವಾದ ಪ್ರತಿಪಾದನೆಗಳು ಮತ್ತು ಅತಿರಂಜಿತ ಪ್ರತಿಪಾದನೆಗಳ ನಡುವಿನ ವ್ಯತ್ಯಾಸವನ್ನು ಸುಲಭವಾಗಿ ಕಂಡುಹಿಡಿಯಬಲ್ಲವರಾಗಿದ್ದರು. ಅವರು ಪ್ರಾಚೀನ ಭಾರತದ ನಿರ್ದಿಷ್ಟ ಪಠ್ಯಗಳನ್ನು ಉಲ್ಲೇಖಿಸಬಲ್ಲವರಾಗಿದ್ದರು; ಉದಾಹರಣೆಗೆ ಕ್ರಿ,ಪೂ ಆರನೇ ಶತಮಾನದ ಸುಲ್ವ ಸೂತ್ರ: ಅದು ಉದ್ದದ ವರ್ಗ (ಸ್ಕ್ವೇರ್ ಆಫ್ ಲೆಂತ್) ಹಾಗೂ ಅಗಲದ ವರ್ಗದ (ಸ್ಕ್ವೇರ್ ಆಫ್ ಬ್ರೆಡ್ತ್) ಮೊತ್ತವು ಕರ್ಣರೇಖೆಯ ವರ್ಗಕ್ಕೆ (ಸ್ಕ್ವೇರ್ ಆಫ್ ಡಯಾಗನಲ್) ಸಮನಾಗಿರುತ್ತೆ ಎಂಬುದರ ಸಾರ, ಮುಂದೆ ಪೈಥಾಗರಸ್ ಥಿಯೋರಮ್ ಆಗಿ ವರ್ಣಿಸಲಾಯಿತು ಎಂದು ವಿವರಿಸಿದ್ದರು. ಅದೇ ಸಮಯದಲ್ಲಿ, ಪ್ರಾಚೀನ ಭಾರತೀಯ ವಿಜ್ಞಾನದ ವೈಭವ-ಆಡಂಬರದ ಕಲ್ಪನೆಗಳು ಒಬ್ಬ ವಿಜ್ಞಾನಿಯಾಗಿ ಅವರ ಕೆಲಸದ ಮೇಲೆ ಪ್ರಭಾವ ಬೀರುವ ಪ್ರಶ್ನೆ ಎಂದೂ ಬರಲಿಲ್ಲ, ಅದರಲ್ಲೂ ವಿಶೇಷವಾಗಿ, ಎನ್ಎಎಲ್ನಲ್ಲಿ ಲೈಟ್ ಕೊಂಬ್ಯಾಟ್ ಏರ್ಕ್ರಾಫ್ಟ್ನ ರಚನೆಯಲ್ಲಿ ಅವರ ಒಂದು ಪಾತ್ರವಿತ್ತು, ಅಲ್ಲಿಯೂ ಪ್ರಾಚೀನ ಕಲ್ಪನೆಗಳು ಪ್ರಭಾವ ಬೀರಲಿಲ್ಲ.
ವಿಜ್ಞಾನ ಮತ್ತು ವಿಜ್ಞಾನದ ಆಡಳಿತದಲ್ಲಿ ಅವರ ಸಾಧನೆಗಳಿಗಿಂತ, ಸಮಾಜದ ಎಲ್ಲಾ ಸ್ತರದ ಜನರೊಂದಿಗೆ ಬೆರೆದು, ಅವರು ವಿದ್ಯಾರ್ಥಿಗಳಾಗಿರಲಿ, ಜೊತೆಗೆ ಕೆಲಸ ಮಾಡುವವರಾಗಿರಲಿ, ದೊಡ್ಡ ಸಾಧನೆ ಮಾಡಿದ ವಿಜ್ಞಾನಿಗಳಾಗಿರಲಿ ಅಥವಾ ಯಾವುದೇ ಪರಿಚಯಸ್ಥರಾಗಿರಲಿ, ಅವರೆಲ್ಲರ ಜೊತೆಗೆ ವಿಜ್ಞಾನದ ಬಗ್ಗೆ ಮಾತನಾಡುವ ಅವರ ಸಾಮರ್ಥ್ಯದಿಂದಲೇ ಅವರನ್ನು ನೆನಪಿಸಿಕೊಳ್ಳಲಾಗುವುದು. ಇದನ್ನು ಮಾಡಲು ಸಾಧ್ಯವಾಗಿದ್ದು ಕೇವಲ ವಿಜ್ಞಾನದ ಮೇಲಿದ್ದ ಪಾಂಡಿತ್ಯದಿಂದ ಅಲ್ಲ, ಅದಕ್ಕಿಂತ ಮುಖ್ಯವಾಗಿ, ಕಲಿಯಲು ಮತ್ತು ಕಲಿಸಲು ಅವರಿಗೆ ಜೀವನದುದ್ದಕ್ಕೂ ಇದ್ದ ಬದ್ಧತೆಯ ಕಾರಣದಿಂದ.
ಪ್ರೊ. ನರೇಂದ್ರ ಪಾಣಿ
ಬೆಂಗಳೂರಿನ ಎನ್ಐಎಎಸ್ ಸಂಸ್ಥೆಯ ಸಮಾಜ ಶಾಸ್ತ್ರ ವಿಭಾಗದ ಡೀನ್