ನಟ ಪುನೀತ್ ರಾಜ್ಕುಮಾರ್ ಅವರ ಸಾವಿಗೆ ಕಾರಣವನ್ನು ನಾರಾಯಣ ಹೆಲ್ತ್ನ ಕಾರ್ಯನಿರ್ವಾಹಕ ನಿರ್ದೇಶಕ ಡಾ.ದೇವಿಶೆಟ್ಟಿ ತಿಳಿಸಿದ್ದಾರೆ ಎಂದು ವಾಟ್ಸ್ಆಪ್ಗಳಲ್ಲಿ ಹಂಚಿಕೊಳ್ಳಲಾಗಿರುವ ಮಾಹಿತಿಯು ತಪ್ಪಾಗಿದೆ. ಈ ರೀತಿಯಲ್ಲಿ ದೇವಿಶೆಟ್ಟಿ ಅವರು ಯಾವುದೇ ಮಾಹಿತಿಯನ್ನು ನೀಡಿಲ್ಲ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
“ಅತಿ ಹೆಚ್ಚು ಫಿಟ್ನೆಸ್ನಿಂದಾಗಿ ಪುನೀತ್ ಸಾವನ್ನಪ್ಪಿದ್ದಾರೆ” ಎಂಬ ವಿಚಾರವನ್ನು ಈ ಮೆಸೇಜ್ ಒಳಗೊಂಡಿದೆ. ಇದರ ಕುರಿತು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ಪತ್ರಿಕೆಯು ದೇವಿ ಶೆಟ್ಟಿ ಅವರಲ್ಲಿ ವಿಚಾರಿಸಿದ್ದು, “ಈ ರೀತಿಯ ಯಾವುದೇ ಸಂದೇಶವನ್ನು ನಾನು ನೀಡಿಲ್ಲ. ಜನರನ್ನು ದಿಕ್ಕು ತಪ್ಪಿಸಲು ನನ್ನ ಹೆಸರು ಬಳಸಿಕೊಳ್ಳಲಾಗುತ್ತಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ವಾಟ್ಸ್ ಆಪ್ ಮೆಸೇಜ್ ಹೀಗಿದೆ:
ಡಾ.ದೇವಿ ಶೆಟ್ಟಿ
ನನ್ನೆಲ್ಲ ಸ್ನೇಹಿತರಿಗೆ….
ಕೆಲವು ವರ್ಷಗಳಿಂದ ನನಗೆ ವೈಯಕ್ತಿಕವಾಗಿ ಪರಿಚಯವಿದ್ದ 8ರಿಂದ 9 ಮಂದಿ ಅಗಲಿದ್ದಾರೆ, ಅದರಲ್ಲಿ ನಲವತ್ತು ವರ್ಷ ವಯಸ್ಸಿಗೆ ಸಾವನ್ನಪ್ಪಿದ, ಅತಿಯಾದ ಫಿಟ್ನೆಟ್ ಮಾಡುತ್ತಿದ್ದ ಕೆಲವು ಸೆಲಬ್ರಟಿಗಳೂ ಇದ್ದಾರೆ. ಫಿಟ್ನೆಸ್, ಸಿಕ್ಸ್ಫ್ಯಾಕ್ಸ್ ಇತ್ಯಾದಿಗಳ ಕಡೆಗೆ ಅವರು ನೋಡುತ್ತಿದ್ದರು. ಈ ಪಟ್ಟಿಗೆ ಈಗ ಪುನೀತ್ ರಾಜ್ಕುಮಾರ್ ಸೇರಿದ್ದಾರೆ.
ಜೀವನದಲ್ಲಿ ಯಾವುದೇ ವಿಷಯದಲ್ಲಾದರೂ ಅತಿಯಾದದ್ದನ್ನು ತಪ್ಪಿಸುವುದು ಮಂತ್ರವಾಗಬೇಕು. ಶೂನ್ಯವಾಗಿರಬೇಕು ಅಥವಾ ನೂರನ್ನು ತಲುಪಬೇಕು ಎಂಬ ರೀತಿಯ ಅತಿಯಾದ ಅಲೋಚನೆ ಸರಿಯಾದದ್ದಲ್ಲ. ಇಪ್ಪತ್ತು ನಿಮಿಷಗಳ ಮಧ್ಯಮ ಪ್ರಮಾಣದ ವ್ಯಾಯಾಮ ಮಾಡಿರಿ, ನಿಮ್ಮ ಪೂರ್ವಜರು ತಿನ್ನುತ್ತಿದ್ದುದನ್ನು ಮಾತ್ರ ತಿನ್ನಿರಿ, ನಿಮ್ಮ ಊರಿನಲ್ಲಿರುವ ಸ್ಥಳೀಯ ಮತ್ತು ಕಾಲಕ್ಕೆ ಅನುಗುಣವಾದ ಆಹಾರವನ್ನು ಸೇವಿಸಿ, ಪೂರ್ಣ 7 ಗಂಟೆಗಳ ನಿದ್ದೆ ಮಾಡಿರಿ, ನಿಮ್ಮ ದೇಹಕ್ಕೆ ಸ್ಟೀರಾಯ್ಡ್ಗಳನ್ನು ನೀಡದೆ ಗೌರವಿಸಿರಿ…. ಇತ್ಯಾದಿಗಳನ್ನು ನೀವು ಮಾಡಬೇಕಾಗಿದೆ.
ನೀವು ಬೆಳೆದಿದ್ದನ್ನು ಸಣ್ಣ ಪ್ರಮಾಣದಲ್ಲಿ ತಿನ್ನಿ, 20 ನಿಮಿಷದಿಂದ 30 ನಿಮಿಷಗಳವರೆಗೆ ವ್ಯಾಯಾಮ ಮಾಡಿ… ಒಳ್ಳೆಯ ನಡಿಗೆ ಮಾಡಿ. ನೀವು ಕುಡಿಯುತ್ತಿದ್ದರೆ, ವಾರಕ್ಕೆ ಒಂದೆರಡು ಪೆಗ್ಗಳಿಗೆ ಮಿತಿಗೊಳಿಸಿ. ‘ಕೆಲವು ದಿನ ಧೂಮಪಾನವನ್ನು ಬಿಡಬೇಡಿ’. ಯಾವುದಾದರೂ ಇರಲಿ, ಮಿತವಾಗಿರಲಿ. ನಿಮ್ಮ ದಿನಚರಿಯಲ್ಲಿ ಸ್ವಲ್ಪ ಮೌನ, ಧ್ಯಾನವನ್ನು ಸೇರಿಸಿ. ಅತ್ಯಂತ ಮುಖ್ಯವಾಗಿ, ನಿಮ್ಮ ದೇಹವನ್ನು ಆಲಿಸಿ. ಅದನ್ನು ಅರ್ಥಮಾಡಿಕೊಳ್ಳಿ.
40ರ ಹೊತ್ತಿಗೆ ದೇಹವು ಬಹಳಷ್ಟು ಬದಲಾವಣೆಗಳಿಗೆ ಒಳಗಾಗುತ್ತಿದೆ, 50 ವರ್ಷಗಳಿಗೆ ಇನ್ನೂ ಹೆಚ್ಚು, 60 ನಂತರ ನಿಮ್ಮ ದೇಹವು ನಿಧಾನಗೊಳ್ಳಲು ಪ್ರಾರಂಭಿಸುತ್ತದೆ, 70ರ ಮೇಲೆ, ನಿಮ್ಮ ದೇಹವು ಸ್ಥಗಿತಗೊಳ್ಳಲು ಪ್ರಾರಂಭಿಸುತ್ತದೆ, 80ರ ಮೇಲೆ ಪ್ರತಿ ವರ್ಷ ಬೋನಸ್ ಆಗಿದೆ…. ನೀವು 40 ಅಥವಾ 50 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, ನೀವು ಆರೋಗ್ಯವಂತರಾಗಿದ್ದರೆ ಕೃತಜ್ಞರಾಗಿರಿ…
ಹೀಗೆಹಲವು ಸಂಗತಿಗಳನ್ನು ದೇವಿ ಶೆಟ್ಟಿ ಅವರ ಹೆಸರಲ್ಲಿ ಹರಿಬಿಡಲಾಗಿದೆ.
ಇದನ್ನೂ ಓದಿರಿ: ಪುನೀತ್ ಎಂದ ಕೂಡಲೇ ಕಣ್ಣೆದುರಿಗೆ ಬರುವುದು ಡಾ.ರಾಜ್ ವ್ಯಕ್ತಿತ್ವ