“ಎಲ್ಲರಿಗೂ ಗೊತ್ತಿರುವಂತೆ ಬಂಗಾಳಿಗಳು ಅತಿ ಬುದ್ಧಿವಂತರು. ಪಂಜಾಬಿಗಳು ಮತ್ತು ಜಾಟ್ಗಳು ಕೇವಲ ದೈಹಿಕವಾಗಿ ಮಾತ್ರ ಶಕ್ತರು, ಅವರಿಗೆ ಮಿದುಳಿಲ್ಲ” ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ತ್ರಿಪುರದ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ತನ್ನ ಹೇಳಿಕೆಗಾಗಿ ಕ್ಷಮೆ ಕೇಳಿದ್ದಾರೆ.
ಇಂದು ಬೆಳಿಗ್ಗೆ ಸರಣಿ ಟ್ವೀಟ್ಗಳನ್ನು ಮಾಡಿದ ಅವರು “ಯಾರನ್ನೂ ನೋಯಿಸುವ ಉದ್ದೇಶದಿಂದ ಆ ಹೇಳಿಕೆ ನೀಡಿಲ್ಲ. ನನಗೆ ಹಲವಾರು ಪಂಜಾಬಿ ಮತ್ತು ಜಾಟ್ ಸ್ನೇಹಿತರಿದ್ದಾರೆ. ಅವರುಗಳ ಸಾಧನೆಗಾಗಿ ಹೆಮ್ಮೆ ಇದೆ” ಎಂದು ಬರೆದುಕೊಂಡಿದ್ದಾರೆ.
अगरतला प्रेस क्लब में आयोजित एक कार्यक्रम में मैंने अपने पंजाबी और जाट भाइयों के बारे मे कुछ लोगों की सोच का जिक्र किया था। मेरी धारणा किसी भी समाज को ठेस पहुंचाने की नहीं थी।
मुझे पंजाबी और जाट दोनों ही समुदायों पर गर्व है। मैं खुद भी काफी समय तक इनके बीच रहा हूँ।— Biplab Kumar Deb (@BjpBiplab) July 21, 2020
“ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಂಜಾಬಿ ಮತ್ತು ಜಾಟ್ ಸಮುದಾಯಗಳ ಕೊಡುಗೆಗಳನ್ನು ನಾನು ಯಾವಾಗಲೂ ಸ್ಮರಿಸುತ್ತೇನೆ. ಭಾರತವನ್ನು ಮುನ್ನಡೆಸುವಲ್ಲಿ ಈ ಎರಡು ಸಮುದಾಯಗಳು ವಹಿಸಿರುವ ಪಾತ್ರದ ಬಗ್ಗೆ ಪ್ರಶ್ನೆ ಎತ್ತುವುದನ್ನು ನಾನು ಊಹಿಸಲೂ ಸಾಧ್ಯವಿಲ್ಲ” ಎಂದು ದೇಬ್ ಟ್ವೀಟ್ ಮಾಡಿದ್ದಾರೆ.
“ಕೆಲವು ಜನರು ಅವರ ಬಗ್ಗೆ ಹೊಂದಿರುವ ಅಭಿಪ್ರಾಯಗಳನ್ನು ನಾನು ವ್ಯಕ್ತಪಡಿಸಿದ್ದೇನೆ. ನಾನು ಪಂಜಾಬಿ ಮತ್ತು ಜಾಟ್ ಸಮುದಾಯಗಳ ಬಗ್ಗೆ ಹೆಮ್ಮೆಪಡುತ್ತೇನೆ. ನಾನು ಅವರ ನಡುವೆ ಸ್ವಲ್ಪ ಸಮಯದವರೆಗೆ ವಾಸಿಸಿದ್ದೇನೆ. ನನ್ನ ಹೇಳಿಕೆಯು ಯಾರೊಬ್ಬರ ಭಾವನೆಗಳಿಗೆ ನೋವುಂಟು ಮಾಡಿದರೆ, ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ ”ಎಂದು ಅವರು ತಿಳಿಸಿದ್ದಾರೆ.
ಭಾನುವಾರ ಅಗರ್ತಲಾದ ಪ್ರೆಸ್ ಕ್ಲಬ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ‘ಬುದ್ಧಿವಂತಿಕೆಯ ವಿಚಾರದಲ್ಲಿ ಬಂಗಾಳಿಗಳಿಗೆ ಯಾರೂ ಸಾಟಿಯಾಗಲಾರರು. ಎಲ್ಲರಿಗೂ ತಿಳಿದಿರುವಂತೆ ಬಂಗಾಳಿಗಳು ಅತೀ ಬುದ್ಧಿವಂತರು. ಇದೇ ಅವರ ಗುರುತಾಗಿದೆ, ಆದರೆ ಪಂಜಾಬಿಗಳು ಮತ್ತು ಜಾಟ್ಗಳು ದೈಹಿಕವಾಗಿ ಸಮರ್ಥರು’ ಆದರೆ ಅವರಿಗೆ ಮೆದುಳಿಲ್ಲ’ ಎಂದು ಹೇಳಿದ್ದರು.
ಸಾಮಾನ್ಯವಾಗಿ ಮಾತನಾಡುವಾಗ ಪಂಜಾಬ್ ಜನರನ್ನು ಪಂಜಾಬಿ, ಸರ್ದಾರ್ ಎಂದು ಹೇಳುತ್ತೇವೆ. ಅವರನ್ನು ದೈಹಿಕ ಸಾಮರ್ಥ್ಯದಿಂದ ಯಾರೊಬ್ಬರೂ ಗೆಲ್ಲಲಾಗುವುದಿಲ್ಲ. ಆದರೆ ಅವರು ಬುದ್ಧಿಹೀನರು. ಹರಿಯಾಣದಲ್ಲಿ ಜಾಟ್ಗಳು ಹೆಚ್ಚಾಗಿದ್ದಾರೆ. ಅಲ್ಲಿನ ಜನರು ಅವರ ಕುರಿತು ‘ಇವರು ದೈಹಿಕವಾಗಿ ಆರೋಗ್ಯವಂತರು. ಆದರೆ ಬುದ್ಧಿಹೀನರು’ ಎನ್ನುತ್ತಾರೆ. ಯಾರಾದರೂ ಜಾಟ್ರನ್ನು ಎದುರಿಸಬೇಕಾದರೆ ಅವರ ಮನೆಯಿಂದ ಗನ್ ತರಬೇಕಾಗುತ್ತದೆ ಎಂದು ಬಿಪ್ಲಬ್ ಹೇಳಿದ್ದಾರೆ.
ಬಿಪ್ಲಬ್ ದೇಬ್ರವರ ಈ ವಿವಾದಾತ್ಮಕ ಹೇಳಿಕೆಗೆ ಪ್ರಬಲ ವಿರೋಧ ವ್ಯಕ್ತವಾಗಿತ್ತು. ಈ ಹೇಳಿಕೆಯನ್ನು ಖಂಡಿಸಿ, ಕ್ಷಮೆ ಕೇಳಬೇಕೆಂದು ಆಗ್ರಹಿಸಿ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ಪಂಜಾಬಿಗಳು ಮತ್ತು ಜಾಟ್ಗಳು ದೈಹಿಕವಾಗಿ ಶಕ್ತರು; ಆದರೆ ಅವರಿಗೆ ಮಿದುಳಿಲ್ಲ: ತ್ರಿಪುರ ಸಿಎಂ ಬಿಪ್ಲಬ್ ದೇಬ್ ವಿವಾದ