“ಎಲ್ಲರಿಗೂ ಗೊತ್ತಿರುವಂತೆ ಬಂಗಾಳಿಗಳು ಅತಿ ಬುದ್ಧಿವಂತರು. ಪಂಜಾಬಿಗಳು ಮತ್ತು ಜಾಟ್ಗಳು ಕೇವಲ ದೈಹಿಕವಾಗಿ ಮಾತ್ರ ಶಕ್ತರು, ಅವರಿಗೆ ಮಿದುಳಿಲ್ಲ” ಎಂದು ತ್ರಿಪುರದ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಭಾನುವಾರ ಅಗರ್ತಲಾದ ಪ್ರೆಸ್ ಕ್ಲಬ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿನ ಪ್ರತಿಯೊಂದು ಸಮುದಾಯವೂ ಸಹ ತನ್ನದೇ ಆದ ವಿಶೇಷ ಲಕ್ಷಣಗಳನ್ನು ಹೊಂದಿದೆ ಎಂದು ಹೇಳಿದರು.
ಮುಖ್ಯಮಂತ್ರಿಗಳ ಹೇಳಿಕೆಯಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
‘ಬುದ್ಧಿವಂತಿಕೆಯ ವಿಚಾರದಲ್ಲಿ ಬಂಗಾಳಿಗಳಿಗೆ ಯಾರೂ ಸಾಟಿಯಾಗಲಾರರು. ಎಲ್ಲರಿಗೂ ತಿಳಿದಿರುವಂತೆ ಬಂಗಾಳಿಗಳು ಅತೀ ಬುದ್ಧಿವಂತರು. ಇದೇ ಅವರ ಗುರುತಾಗಿದೆ, ಆದರೆ ಪಂಜಾಬಿಗಳು ಮತ್ತು ಜಾಟ್ಗಳು ದೈಹಿಕವಾಗಿ ಸಮರ್ಥರು’ ಎಂದು ವೀಡಿಯೋದಲ್ಲಿ ಹೇಳಲಾಗಿದೆ.
ಸಾಮಾನ್ಯವಾಗಿ ಮಾತನಾಡುವಾಗ ಪಂಜಾಬ್ ಜನರನ್ನು ಪಂಜಾಬಿ, ಸರ್ದಾರ್ ಎಂದು ಹೇಳುತ್ತೇವೆ. ಅವರನ್ನು ದೈಹಿಕ ಸಾಮರ್ಥ್ಯದಿಂದ ಯಾರೊಬ್ಬರೂ ಗೆಲ್ಲಲಾಗುವುದಿಲ್ಲ. ಆದರೆ ಅವರು ಬುದ್ಧಿಹೀನರು. ಹರಿಯಾಣದಲ್ಲಿ ಜಾಟ್ಗಳು ಹೆಚ್ಚಾಗಿದ್ದಾರೆ. ಅಲ್ಲಿನ ಜನರು ಅವರ ಕುರಿತು ‘ಇವರು ದೈಹಿಕವಾಗಿ ಆರೋಗ್ಯವಂತರು. ಆದರೆ ಬುದ್ಧಿಹೀನರು’ ಎನ್ನುತ್ತಾರೆ. ಯಾರಾದರೂ ಜಾಟ್ರನ್ನು ಎದುರಿಸಬೇಕಾದರೆ ಅವರ ಮನೆಯಿಂದ ಗನ್ ತರಬೇಕಾಗುತ್ತದೆ ಎಂದು ಬಿಪ್ಲಬ್ ಹೇಳಿದ್ದಾರೆ.
ಬಿಪ್ಲಬ್ ದೇಬ್ರವರ ಈ ವಿವಾದಾತ್ಮಕ ಹೇಳಿಕೆಗೆ ಪ್ರಬಲ ವಿರೋಧ ವ್ಯಕ್ತವಾಗಿದೆ. ಈ ಹೇಳಿಕೆಯನ್ನು ಖಂಡಿಸಿ, ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ.
शर्मनाक व दुर्भाग्यपूर्ण!
भाजपा के मुख्यमंत्री, त्रिपुरा,बिप्लब देव ने पंजाब के सिख भाइयों व हरियाणा के जाट समाज को अपमानित कर उनका “दिमाग़ कम” बताया
ये भाजपा की औछी मानसिकता है।
खट्टरजी व दुष्यंत चौटाला चुप्प क्यों हैं?
मोदी जी और नड्डाजी कहाँ हैं?
माफ़ी माँगे, कार्यवाही करें pic.twitter.com/whI8QOyKVk— Randeep Singh Surjewala (@rssurjewala) July 20, 2020
ಈ ಹೇಳಿಕೆ ನಾಚಿಕೆ ಮತ್ತು ದುರದೃಷ್ಟಕರವಾಗಿದೆ. ತ್ರಿಪುರದ ಬಿಜೆಪಿ ಮುಖ್ಯಮಂತ್ರಿ ಬಿಪ್ಲಬ್ ದೇವ್ ಅವರು ಪಂಜಾಬ್ನ ಸಿಖ್ ಸಹೋದರರನ್ನು ಮತ್ತು ಹರಿಯಾಣದ ಜಾಟ್ ಸಮುದಾಯವನ್ನು ಅವಮಾನಿಸಿ, ಅವರನ್ನು ಬುದ್ದಿ ಇಲ್ಲದವರು ಎಂದು ಕರೆದಿದ್ದಾರೆ. ಇದು ಬಿಜೆಪಿಯ ಮನಸ್ಥಿತಿಯಾಗಿದೆ.
ಖಟ್ಟರ್ಜಿ ಮತ್ತು ದುಶ್ಯಂತ್ ಚೌತಲಾ ಏಕೆ ಸುಮ್ಮನಿದ್ದೀರಿ?
ಮೋದಿ ಜಿ ಮತ್ತು ನಾಡ್ಡಜಿ ಎಲ್ಲಿದ್ದೀರಿ?
ಕ್ಷಮೆಯಾಚಿಸಿ, ಕ್ರಮ ತೆಗೆದುಕೊಳ್ಳಿ ಎಂದು ರಣದೀಪ್ ಸಿಂಗ್ ಆಗ್ರಹಿಸಿದ್ದಾರೆ.
ಬಿಪ್ಲಬ್ ಕುಮಾರ್ ಈ ಹಿಂದೆಯೂ ‘ಮಹಾಭಾರತ ಕಾಲದಲ್ಲಿ ಉಪಗ್ರಹ ಮತ್ತು ದೂರದರ್ಶನವಿತ್ತು ಎಂದು ಹೇಳಿಕೆ ನೀಡಿ ಇತ್ತೀಚೆಗೆ ವಿವಾದಕ್ಕೆ ಸಿಲುಕಿದ್ದರು.
ಇದನ್ನೂ ಓದಿ: ಕೊರೊನಾದಿಂದ ಒಂದೂ ಸಾವು ಕಾಣದ ಭಾರತದ ಅದೃಷ್ಠಶಾಲಿ ರಾಜ್ಯಗಳಿವು!