Homeಮುಖಪುಟರಾಹುಲ್‍ಗಾಂಧಿಯ `ನ್ಯಾಯ್' ಸ್ವಾಗತಾರ್ಹ. ಆದರೆ, ಕೇಳಲೇಬೇಕಾದ ಪ್ರಶ್ನೆಗಳಿವೆ.....

ರಾಹುಲ್‍ಗಾಂಧಿಯ `ನ್ಯಾಯ್’ ಸ್ವಾಗತಾರ್ಹ. ಆದರೆ, ಕೇಳಲೇಬೇಕಾದ ಪ್ರಶ್ನೆಗಳಿವೆ…..

- Advertisement -
- Advertisement -

| ನ್ಯಾಯಪಥ ಸಂಪಾದಕೀಯ |

ಸೋಮವಾರ ಮಾರ್ಚ್ 25ನೇ ತಾರೀಖಿನಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ‘ನ್ಯಾಯ’ ಎನ್ನುವ ಕನಿಷ್ಠ ಆದಾಯ ಯೋಜನೆಯನ್ನು ಘೋಷಿಸಿದರು. ಜನೆವರಿ ತಿಂಗಳಲ್ಲಿ ಮೊದಲ ಬಾರಿ ಇದರ ಬಗ್ಗೆ ಮಾತನಾಡಿದ್ದರೂ ಅನೇಕ ಪ್ರಶ್ನೆಗಳು ಹಾಗೆಯೇ ಉಳಿದುಕೊಂಡಿದ್ದವು. ಎರಡು ತಿಂಗಳ ನಂತರ ಮಾಡಿದ ಈ ಘೋಷಣೆಯ ನಂತರವೂ ಪ್ರಶ್ನೆಗಳು ಹಾಗೆಯೇ ಉಳಿದುಕೊಂಡಿವೆ.

ಏನಿದು ‘ನ್ಯಾಯ?’ ‘ನ್ಯೂನತಮ್ ಆದಾಯ್ ಯೋಜನಾ’ ಅಂದರೆ ಕನಿಷ್ಠ ಆದಾಯ ಯೋಜನೆ. ರಾಹುಲ್‍ಗಾಂಧಿ ಘೋಷಿಸಿದ ಪ್ರಕಾರ ಭಾರತದ ಆರ್ಥಿಕವಾಗಿ ಕೆಳಗಿರುವ 20% ಕುಟುಂಬಗಳಿಗೆ ಹಣಸಹಾಯ. ಯಾವುದೇ ಕುಟುಂಬವು ತಿಂಗಳಿಗೆ 12 ಸಾವಿರಕ್ಕಿಂತಲೂ ಕಡಿಮೆ ಆದಾಯ ಹೊಂದಿದ್ದಲ್ಲಿ ಆ ಕುಟುಂಬಕ್ಕೆ ಸರಕಾರದಿಂದ 12 ಸಾವಿರಕ್ಕಿಂತ ಎಷ್ಟು ಕಡಿಮೆ ಇದೆಯೋ, ಅಷ್ಟು ಹಣ ನೀಡಲಾಗುವುದು. ಈ 20% ಕುಟುಂಬಗಳ ಸರಾಸರಿ ಆದಾಯ 6,000/- ಆಗಿರುವುದರಿಂದ ಆ 20% ಅಂದರೆ 5 ಕೋಟಿ ಕುಟುಂಬಗಳಿಗೆ ಪ್ರತಿತಿಂಗಳು 6,000/ ಧನಸಹಾಯ. ಅಂದರೆ ಒಂದು ಕುಟುಂಬಕ್ಕೆ ಪ್ರತೀ ವರ್ಷ 72,000/-, ತಗಲುವ ಒಟ್ಟು ವೆಚ್ಚ 3.6 ಲಕ್ಷ ಕೋಟಿ ರೂಪಾಯಿಗಳು, ಅದು ಭಾರತದ ವಾರ್ಷಿಕ ಬಜೆಟ್‍ನ 13%, ಜಿಡಿಪಿಯ 2%.

ಈ ಘೋಷಣೆಯಿಂದ ಆದ ಮೊದಲ ಬದಲಾವಣೆ- ಎಲ್ಲಾ ಪಕ್ಷಗಳು ಚುನಾವಣೆಯ ಸಮಯದಲ್ಲಿ ರಾಜಕೀಯ ಪಕ್ಷಗಳು ಮಾತನಾಡಬೇಕಿರುವ ಅಸಲೀ ವಿಷಯಗಳ ಬಗ್ಗೆ ಮಾತನಾಡಲಾರಂಭಿಸಿವೆ. ಭಯೋತ್ಪಾದನೆ, ರಾಷ್ಟ್ರೀಯ ಸುರಕ್ಷತೆಯಂತಹ ಎಲ್ಲರ ಒಮ್ಮತವಿರುವ ವಿಷಯಗಳಲ್ಲಿ ಸುಖಾಸುಮ್ಮನೇ ಅರಚಾಡಿ, ಸುಳ್ಳು ಹೇಳಿ, ಅಸಲೀ ಸಮಸ್ಯೆಗಳನ್ನು ಮರೆಸಲು ಯತ್ನಿಸುತ್ತಿದ್ದರು. ಈ ಘೋಷಣೆಯಿಂದ ಅದು ಬದಲಾಗಿ, ರಾಹುಲ್ ಗಾಂಧಿ ಘೋಷಿಸಿರುವ ಯೋಜನೆಯ ಬಗ್ಗೆ, ಇಂತಹ ಯೋಜನೆಗಳ ಬಗ್ಗೆ ಈ ಸರಕಾರದ ಪ್ರದರ್ಶನದ ಬಗ್ಗೆ ಸೂಕ್ತ ಪ್ರಶ್ನೆಗಳನ್ನು ಎಲ್ಲರೂ ಎತ್ತಲಾರಂಭಿಸಿದ್ದಾರೆ.

ಈ ಘೋಷಣೆಯಿಂದ ಆದ ಇನ್ನೊಂದು ಬದಲಾವಣೆ- ‘ಭಾರತದ ಬಡಜನರ’ ಮೇಲೆ ಮತ್ತೊಮ್ಮೆ ಗಮನ ಕೇಂದ್ರೀಕೃತವಾಗಿದೆ. ಮಧ್ಯಮ ಮತ್ತು ಉಚ್ಚ ವರ್ಗದ ಜನರಿಗೆ ಕಲ್ಯಾಣ ಯೋಜನೆಗಳ ಬಗ್ಗೆ ಅಸಮಾಧಾನ ಇರುವುದರಿಂದ, ಅವರನ್ನು ಮೆಚ್ಚಿಸಲು ನಮ್ಮ ರಾಜಕೀಯ ಪಕ್ಷಗಳು ಕಲ್ಯಾಣ ಯೋಜನೆಗಳನ್ನು ಘೋಷಿಸಲು ಹಿಂಜರಿಯುವುದು ವಾಸ್ತವ. 2004 ರಲ್ಲಿ ಕಾಂಗ್ರೆಸ್ ಪಕ್ಷವು ‘ಆಮ್‍ಆದ್ಮಿ’ ಯ ವಿಷಯವನ್ನು ತಂದಿದ್ದೂ ಇದೇ ಕಾರಣಕ್ಕೆ.

ಈ ವಿಷಯಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಪಕ್ಷಕ್ಕೆ ಪ್ರಶ್ನೆಗಳನ್ನು ಕೇಳಲೇಬೇಕಿದೆ. ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗುವುದಕ್ಕಿಂತ ಮುಂಚೆ ಯಾವ ಕಾರಣಕ್ಕೂ ನಂಬಲೇಬಾರದು. ಕಳೆದ ಬಾರಿ ಮೋದಿ ಅವರು ಪ್ರತಿ ಖಾತೆಗೆ 15 ಲಕ್ಷದ ಮಾತುಗಳನ್ನಾಡಿದ್ದರು, ವರ್ಷಕ್ಕೆ ಎರಡು ಕೋಟಿ ಉದ್ಯೋಗದ ಸೃಷ್ಟಿಯ ಬಗ್ಗೆ ಮಾತನಾಡಿದ್ದರು, ರೈತರ ಆದಾಯವನ್ನು ದ್ವಿಗುಣಗೊಳಿಸುವ ಬಗ್ಗೆ ಮಾತನಾಡಿದ್ದರು. ಆದರೆ ಯಾವುದೇ ಯೋಜನೆಗೆ ನೀಲನಕ್ಷೆಯನ್ನು ನೀಡಿರಲಿಲ್ಲ. ಈಗ ಆ ಭರವಸೆಗಳ ಬಗ್ಗೆ ಮಾತನಾಡುವುದನ್ನೇ ಬಿಟ್ಟಿದ್ದಾರೆ. ಹಾಗಾಗಿ ಕಾಂಗ್ರೆಸ್ ಪಕ್ಷ ಇವೆಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವ ತನಕ ಬೇತಾಳದಂತೆ ಬೆನ್ನಟ್ಟಬೇಕಿದೆ.

ಈ ಘೋಷಣೆ ಮತದಾರರನ್ನು ತನ್ನತ್ತ ಸೆಳೆಯಲು ಮಾಡಿದ ತಂತ್ರವೇ ಎನ್ನುವ ಪ್ರಶ್ನೆಯನ್ನು ಕೈಬಿಡುವ. ಉತ್ತರ ಎಲ್ಲರಿಗೂ ಗೊತ್ತು, ಆದರೆ ಭರವಸೆ ನೀಡಿದ ಭರದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದು ಈ ನೀತಿಗಳನ್ನು ಜಾರಿಗೊಳಿಸಿದಲ್ಲಿ ಲಾಭ ಆಗುವುದು ಬಡವರಿಗೆ. ಈ ಯೋಜನೆಯಿಂದ ಬಡವರು ಸೋಮಾರಿಗಳಾಗುವುದಿಲ್ಲವೇ ಎನ್ನುವ ಮೂರ್ಖ ಪ್ರಶ್ನೆಯನ್ನು ಕೈಬಿಡುವ. ತಮ್ಮ ಜೀವನಮಟ್ಟವನ್ನು ಹೆಚ್ಚಿಸಲು ಎಲ್ಲರೂ ದುಡಿಯುತ್ತಲೇ ಇರುತ್ತಾರೆ ಹಾಗೂ ಒಂದು ವೇಳೆ ಈ ಯೋಜನೆ ಅನ್ವಯವಾದರೆ ಅವರ ಪ್ರಯತ್ನಕ್ಕೆ ಚೈತನ್ಯ ಬರುವುದು ಸರಳ ಸತ್ಯ. ಸದ್ಯಕ್ಕೆ ಈಗಾಗಲೇ ಕೇಂದ್ರ ಸರಕಾರದ ಅನೇಕ ಕಲ್ಯಾಣ ಯೋಜನೆಗಳು ಜಾರಿಯಲ್ಲಿವೆ, ಈ ಯೋಜನೆ ಜಾರಿಯಾದಲ್ಲಿ ಸದ್ಯಕ್ಕೆ ಜಾರಿಯಲ್ಲಿರುವ ಯೋಜನೆಗಳನ್ನು ಕೈಬಿಡಲಾಗುತ್ತದೆಯೇ ಅಥವಾ ಎಲ್ಲ ಕಲ್ಯಾಣ ಯೋಜನೆಗಳೊಂದಿಗೆ ಹೆಚ್ಚುವರಿಯಾಗಿ ಇದನ್ನು ಅನುಷ್ಠಾನಗೊಳಿಸಲಾಗುತ್ತದೆಯೇ ಎನ್ನುವುದನ್ನು ಸ್ಪಷ್ಟಪಡಿಸದೇ ಇರುವುದು ಅಪರಾಧವಾಗಿ ಕಾಣಿಸಿಕೊಳ್ಳುತ್ತದೆ.

ಇನ್ನು ಎಲ್ಲರೂ ಕೇಳುತ್ತಿರುವ ಪ್ರಶ್ನೆ, ಈ ಯೋಜನೆಗೆ ಬೇಕಾಗಿರುವ 3.6 ಲಕ್ಷ ಕೋಟಿ ಬರುವುದು ಎಲ್ಲಿಂದ? ಇದು ವಿತ್ತೀಯ ಹೊರೆಯಾಗುವುದಿಲ್ಲವೇ? ಇದು ಕಷ್ಟಸಾಧ್ಯವಾದರೂ ಅಸಾಧ್ಯವಂತೂ ಅಲ್ಲ. ಹಾಗೂ 7ನೇ ವೇತನ ಆಯೋಗ ಸರಕಾರೀ ನೌಕರರ ವೇತನ ಹೆಚ್ಚಿಸಿ ವರ್ಷಕ್ಕೆ 1 ಲಕ್ಷ ಕೋಟಿಗಿಂತಲೂ ಹೊರೆಯಾದಾಗ ಈ ಪ್ರಶ್ನೆ ಏಕೆ ಏಳುವುದಿಲ್ಲ ಎನ್ನುವುದನ್ನು ಗಮನಿಸಬೇಕಿದೆ. ಪ್ರತಿ ವರ್ಷ ಮೂರು ಲಕ್ಷ ಕೋಟಿಗಿಂತಲೂ ಹೆಚ್ಚಿನ ಸಾಲವನ್ನು ಕಾರ್ಪೋರೇಟ್‍ಗಳಿಗೆ ಮನ್ನಾ ಮಾಡಿದಾಗ ಈ ಪ್ರಶ್ನೆ ಏಕೆ ಏಳುವುದಿಲ್ಲ? ಈ ಪ್ರಶ್ನೆಗಳು ಸರಿಯಾಗಿದ್ದರೂ ಈ ಪ್ರಶ್ನೆಗಳಿಂದ ದುಡ್ಡೆಲ್ಲಿಂದ ಬರುವುದು ಎನ್ನುವ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಕಾರ್ಪೋರೇಟ್‍ಗಳಿಗೆ ನೀಡುವ ಸಾಲ ಮನ್ನಾ, ತೆರಿಗೆ ಮನ್ನಾದಂತಹ ಕೊಡುಗೆಗಳಿಗೆ ಕಡಿವಾಣ ಹಾಕುವ ಧೈರ್ಯವನ್ನು ಕಾಂಗ್ರೆಸ್ ಪಕ್ಷ ಪ್ರದರ್ಶಿಸುವುದೇ? ಹಾಗೂ ಈ ಯೋಜನೆಯ ಎಲ್ಲ ವೆಚ್ಚವನ್ನು ಕೇಂದ್ರ ಸರಕಾರವೇ ಭರಿಸುವುದೇ ಅಥವಾ ರಾಜ್ಯ ಸರಕಾರಗಳ ಮೇಲೆಯೂ ಹೊರೆ ಬೀಳುವುದೇ ಎನ್ನುವುದರ ಬಗ್ಗೆಯೂ ಕಾಂಗ್ರೆಸ್ ಪಕ್ಷ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕಿದೆ. ಹಾಗೂ ವೆಚ್ಚವನ್ನು ಭರಿಸಲು ಹೊಸ ತೆರಿಗೆಗಳನ್ನು ಪರಿಚಯಿಸಲಾಗುವುದೇ?

ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಆಸ್ತಿಗೆ ತೆರಿಗೆ ವಿಧಿಸಲಾಗುತ್ತದೆ ಹಾಗೂ ವಾರಸುದಾರಿಕೆ ತೆರಿಗೆಯೂ ಹಲವಾರು ದೇಶಗಳಲ್ಲಿ ಚಾಲ್ತಿಯಲ್ಲಿದೆ. 100 ಕೋಟಿ ಆಸ್ತಿ ಹೊಂದಿದವರಿಗೆ ಈ ಎರಡೂ ತೆರಿಗೆಗಳನ್ನು ವಿಧಿಸುವುದು ತಪ್ಪಾಗಲಾರದು. ಆ ತೆರಿಗೆಯ ಹಣದಿಂದ ಈ ಯೋಜನೆಯ ವೆಚ್ಚವನ್ನು ಸುಲಭವಾಗಿ ಭರಿಸಬಹುದು. ಆದರೆ ನಮ್ಮ ರಾಜಕೀಯ ಪಕ್ಷಗಳಿಗೆ ಈ ಕ್ರಮವನ್ನು ಕೈಗೊಳ್ಳುವ ಧೈರ್ಯ ಮತ್ತು ಇಚ್ಛಾಶಕ್ತಿ ಇದೆಯೇ? ಇದ್ದರೆ ಅದನ್ನು ಬಹಿರಂಗಪಡಿಸಬಲ್ಲರೆ? ಇವ್ಯಾವ ಇರಾದೆಗಳೂ ಇಲ್ಲದೇ ಹಣ ಹೊಂದಿಸುವುದು ಹೇಗೆ ಎಂದು ಹೇಳದೇ ಹೋದರೆ ಇದನ್ನು ಇನ್ನೊಂದು ಚುನಾವಣಾ ‘ಜುಮ್ಲಾ’ ಎಂತಲೇ ಪರಿಗಣಿಸಬೇಕಾಗುತ್ತದೆ.

ನಿಜಕ್ಕೂ ಇಂತಹದೊಂದು ಯೋಜನೆಯು ಜಾರಿಗೆ ಬರುವುದಾದರೆ, ಅದು ಹಲವು ರೀತಿಯ ಸಕಾರಾತ್ಮಕ ಬೆಳವಣಿಗೆಗಳನ್ನು ತರಲಿದೆ. ದೇಶದ ಜನರಲ್ಲಿನ ಅತ್ಯಂತ ತಳದಲ್ಲಿರುವ ಶೇ.25ರಷ್ಟು ಜನರಿಗೆ ಒಂದಷ್ಟಾದರೂ ಘನತೆಯಿಂದ ಬದುಕುವ ಅವಕಾಶ ಕಲ್ಪಿಸುತ್ತದೆ. ಅಷ್ಟು ಬೃಹತ್ ಪ್ರಮಾಣದ ಜನರು ಮಾರುಕಟ್ಟೆಯಲ್ಲಿ ಇನ್ನಷ್ಟು ಸರಕುಗಳನ್ನು ಕೊಳ್ಳುವುದು, ಆರ್ಥಿಕತೆಗೆ ಲಾಭ ತಂದುಕೊಡುವುದೇ ಹೊರತು, ಅದು ಹೊರೆಯಾಗುವುದಿಲ್ಲ.

ವಿಶ್ವದ ಅನೇಕ ದೇಶಗಳಲ್ಲಿ ಬೇಸಿಕ್ ಯುನಿವರ್ಸಲ್ ಸ್ಕೀಮ್, ಸೋಷಿಯಲ್ ಸೆಕ್ಯುರಿಟಿ ಸ್ಕೀಮ್ ಮುಂತಾದ ಯೋಜನೆಗಳು ಚಾಲ್ತಿಯಲ್ಲಿವೆ. ಆದರೆ ಗಮನಿಸಬೇಕಾದದ್ದೇನೆಂದರೆ, ಎಲ್ಲ ದೇಶಗಳು ಎರಡನೇ ಮಹಾಯುದ್ಧದಲ್ಲಿ ಗೆದ್ದು ಸೋತು, ಬಸವಳಿದು, ಬಡತನ, ನಿರುದ್ಯೋಗದ ಸಮಸ್ಯೆಗಳನ್ನು ತಮ್ಮ ಸಮರ್ಥ ಆರ್ಥಿಕ ನೀತಿಗಳಿಂದ ಎದುರಿಸಿ ಅಭಿವೃದ್ಧಿ ಹೊಂದಿದ ದೇಶಗಳ ಪಟ್ಟಿಯಲ್ಲಿ ಬರುತ್ತವೆ. ಆ ಎಲ್ಲ ದೇಶಗಳು ಶಿಕ್ಷಣ, ಆರೋಗ್ಯಕ್ಕೆ ಹಾಗೂ ಉದ್ಯೋಗ ಸೃಷ್ಟಿಗೆ ಒತ್ತು ನೀಡಿ ತದನಂತರ ಇಂತಹ ಯೋಜನೆಗಳನ್ನು ತಂದಿದ್ದು. ಈ ಎಲ್ಲಾ ಪ್ರಶ್ನೆಗಳ ಮೇಲೆ ಚರ್ಚೆ ನಡೆಯಬೇಕಿದೆ. ಎಲ್ಲಾ ಪಕ್ಷಗಳು ಈ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ. ಉತ್ತರ ನೀಡುವಂತೆ ರಾಜಕೀಯ ಪಕ್ಷಗಳನ್ನು ಬೇತಾಳನಂತೆ ಕಾಡುವುದು ನಮ್ಮ ಮಾಧ್ಯಮಗಳ ಮತ್ತು ನಮ್ಮ ಇಂದಿನ ಕರ್ತವ್ಯ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...