ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಇತರ ಇಬ್ಬರು ಕಾಂಗ್ರೆಸ್ ಸದಸ್ಯರಾದ ರಾಜೀವ್ ಸತವ್ ಮತ್ತು ರೇವಂತ್ ರೆಡ್ಡಿ ಅವರು ಇಂದು ನಡೆದ ರಕ್ಷಣಾ ಸಂಸದೀಯ ಸಮಿತಿ ಸಭೆಯ ನಡುವೆಯೇ ಎದ್ದು ಹೊರ ನಡೆದಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ರಕ್ಷಣಾ ಸಂಸದೀಯ ಸಮಿತಿ ಸಭೆಯಲ್ಲಿ ಸೈನಿಕರನ್ನು ಹೇಗೆ ಉತ್ತಮವಾಗಿ ಸಜ್ಜುಗೊಳಿಸಬೇಕು ಎಂಬುದರ ಕುರಿತು ಚರ್ಚಿಸುವ ಬದಲು, ಸಶಸ್ತ್ರ ಪಡೆಗಳ ಸಮವಸ್ತ್ರಗಳ ಬಗ್ಗೆ ಚರ್ಚೆ ನಡೆಸುತ್ತಾ ಸಮಯವನ್ನು ವ್ಯರ್ಥ ಮಾಡಲಾಯಿತು ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಸಭೆಯಲ್ಲಿ ಭೂ ಸೇನೆ, ಜಲಸೇನೆ ಮತ್ತು ವಾಯುಸೇನೆಯ ಸಮವಸ್ತ್ರದ ಬಗ್ಗೆ ಸಮಿತಿ ಚರ್ಚಿಸುತ್ತಿದ್ದು, ಚರ್ಚೆ ನಡುವೆ ಮಧ್ಯಪ್ರವೇಶಿಸಿದ ರಾಹುಲ್ ಗಾಂಧಿ, ಇದನ್ನು ಸಶಸ್ತ್ರ ಪಡೆಗಳ ಹಿರಿಯ ರಕ್ಷಣಾ ಅಧಿಕಾರಿಗಳು ನಿರ್ಧರಿಸಬಹುದು ಎಂದು ಹೇಳಿದ್ದಾರೆ. ಜೊತೆಗೆ ಎಲ್ಎಸಿ (ಲಡಾಖ್ ಗಡಿ)ಯಲ್ಲಿ ಹೋರಾಡುತ್ತಿರುವ ಸೈನಿಕರ ವಿಷಯವನ್ನು ಮಾತಾಡಲು ಮುಂದಾಗಿದ್ದರು.
ಈ ಸಮಯದಲ್ಲಿ ಸಮಿತಿಯ ಅಧ್ಯಕ್ಷ, ಬಿಜೆಪಿ ಸಂಸದ ಜುವಾಲ್ ಓರಮ್, ರಾಹುಲ್ ಗಾಂಧಿಯವರಿಗೆ ಮಾತನಾಡಲು ಅನುಮತಿಸಲಿಲ್ಲ ಹಾಗಾಗಿ ಅವರು ಸಭೆಯಿಂದ ಹೊರನಡೆದರು ಎಂದು ಮೂಲಗಳು ಮಾಹಿತಿ ನೀಡಿವೆ.
ಇದನ್ನೂ ಓದಿ: ಮೋದಿ ಸರ್ಕಾರಕ್ಕೆ ಬಂಡವಾಳಶಾಹಿಗಳೇ ಆಪ್ತ ಸ್ನೇಹಿತರು: ರಾಹುಲ್ ಗಾಂಧಿ
’ರಾಜಕೀಯ ನಾಯಕತ್ವವು ರಾಷ್ಟ್ರೀಯ ಭದ್ರತೆಯ ವಿಷಯಗಳು ಮತ್ತು ಲಡಾಖ್ನಲ್ಲಿ ಚೀನಿಯರ ವಿರುದ್ಧ ಹೋರಾಡುತ್ತಿರುವ ರಕ್ಷಣಾ ಪಡೆಗಳನ್ನು ಹೇಗೆ ಬಲಪಡಿಸುವುದು ಎಂಬುದರ ಕುರಿತು ಚರ್ಚಿಸಬೇಕು’ ಎಂದು ರಾಹುಲ್ ಗಾಂಧಿ ಹೇಳಿದರು. ಇದರ ನಂತರ ಅವರಿಗೆ ತಮ್ಮ ಮಾತು ಮುಂದುವರಿಸಲು ಅವಕಾಶ ನೀಡಿಲ್ಲ.
ರಾಹುಲ್ ಗಾಂಧಿ ಸಭೆಯನ್ನು ಸಮಯ ವ್ಯರ್ಥ ಎಂದು ಹೇಳಿ ಹೊರ ನಡೆಯುತ್ತಿದ್ದಂತೆ, ಅವರ ಹಿಂದೆಯೇ ಕಾಂಗ್ರೆಸ್ ಸದಸ್ಯ ರಾಜೀವ್ ಸತವ್ ಮತ್ತು ರೇವಂತ್ ರೆಡ್ಡಿ ಕೂಡ ಹೊರನಡೆದಿದ್ದಾರೆ ಎನ್ನಲಾಗಿದೆ.
ಈ ಹಿಂದೆಯೂ ಕಾಂಗ್ರೆಸ್ ಮುಖಂಡ ಹಲವಾರು ಭಾರಿ ದೇಶದ ಗಡಿಯನ್ನು ಕಾಪಾಡುವ ಸೈನಿಕರ ದುಃಸ್ಥಿತಿಯ ವಿಷಯ, ಶೀತದಲ್ಲಿ ಸೈನಿಕರು ಪರದಾಡುವ ಕುರಿತು ಧ್ವನಿ ಎತ್ತಿದ್ದರು. ಪ್ರಧಾನಿ ನರೇಂದ್ರ ಮೋದಿಯವರ ಪ್ರಯಾಣಕ್ಕೆಂದು ಸುಮಾರು 8,400 ಕೋಟಿ ವ್ಯಯಿಸಿ ಐಷಾರಾಮಿ ವಿಮಾನದ ವ್ಯವಸ್ಥೆ ಮಾಡಿರುವ ಸರ್ಕಾರ, ನಮ್ಮ ದೇಶದ ಸೈನಿಕರಿಗೆ ಬುಲ್ಲೆಟ್ಪ್ರೂಫ್ ಟ್ರಕ್ ಒದಗಿಸಲು ನಿರಾಕರಿಸಿದೆ” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿ ಸರ್ಕಾರವನ್ನು ಟೀಕಿಸಿದ್ದರು.
ಪ್ರಧಾನಮಂತ್ರಿ ತನಗಾಗಿ 8,400 ಕೋಟಿ ಮೌಲ್ಯದ ವಿಮಾನವನ್ನು ಖರೀದಿಸಿದ್ದಾರೆ. ಈ ದುಡ್ಡಿನಲ್ಲಿ ಸಿಯಾಚಿನ್-ಲಡಾಕ್ ಗಡಿಯಲ್ಲಿರುವ ನಮ್ಮ ಸೈನಿಕರಿಗೆ ಏನೆಲ್ಲಾ ಖರೀದಿಸಬಹುದು? ಪ್ರಧಾನಿಯವರು ಕೇವಲ ತನ್ನ ಬಗ್ಗೆ ಮಾತ್ರ ಯೋಚಿಸುತ್ತಾರೆ” ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದರು.