ವಿವಾದಿತ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲೇಬೇಕೆಂದು ಹಠ ಹಿಡಿದು ಕಳೆದ 17 ದಿನಗಳಿಂದ ಯಾವುದೇ ದೌರ್ಜನ್ಯಕ್ಕೂ ಜಗ್ಗದೆ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಅನ್ನದಾತರಲ್ಲಿ ಇದುವರೆಗೂ 11 ಮಂದಿ ರೈತರು ಸಾವನ್ನಪ್ಪಿದ್ದಾರೆ.
ಕೃಷಿ ಕಾಯ್ದೆಗಳ ಕುರಿತು, ಕೇಂದ್ರ ಸರ್ಕಾರ ಮತ್ತು ರೈತರ ಪ್ರತಿನಿಧಿಗಳ ನಡುವೆ ಕನಿಷ್ಠ ಐದು ಸುತ್ತಿನ ಔಪಚಾರಿಕ ಮಾತುಕತೆಗಳು ನಡೆದಿವೆ. ಮುಖ್ಯವಾಗಿ ಪಂಜಾಬ್ ಮತ್ತು ಹರಿಯಾಣದ ರೈತರು ರಾಷ್ಟ್ರ ರಾಜಧಾನಿಯ ವಿವಿಧ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಪಡಿಸುದು ತಮ್ಮ ಪ್ರಮುಖ ಬೇಡಿಕೆ ಎಂದು ಹೇಳಿರುವ ರೈತ ಒಕ್ಕೂಟಗಳು, ಕಾನೂನುಗಳಲ್ಲಿ ತಿದ್ದುಪಡಿ ಮಾಡುತ್ತೇವೆ ಎನ್ನುವ ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ಒಪ್ಪಿಕೊಂಡಿಲ್ಲ.
ಇದನ್ನೂ ಓದಿ: ರೈತರು ಮಾತುಕತೆಯಿಂದ ಹೊರನಡೆದರು ಎಂಬ ಸಚಿವರ ಮಾತು ದೊಡ್ಡ ಸುಳ್ಳು: ರೈತ ಸಂಘಟನೆಗಳ ಹೇಳಿಕೆ
ಕಳೆದ 17 ದಿನಗಳಲ್ಲಿ ಅನಾರೋಗ್ಯದಂತಹ ವಿವಿಧ ಕಾರಣಗಳಿಂದಾಗಿ ಪ್ರತಿಭಟನಾ ನಿರತ 11 ರೈತರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿರುವ ಮಾಧ್ಯಮ ವರದಿಯನ್ನು ಉಲ್ಲೇಖಿಸಿ, “ಕೃಷಿ ಕಾನೂನುಗಳನ್ನು ಸರ್ಕಾರ ಹಿಂಪಡೆಯಲು ರೈತರು ಇನ್ನೂ ಎಷ್ಟು ಬಲಿದಾನಗಳನ್ನು ಮಾಡಬೇಕಾಗುತ್ತದೆ?” ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
कृषि क़ानूनों को हटाने के लिए हमारे किसान भाइयों को और कितनी आहुति देनी होगी? pic.twitter.com/GSnazbYDoA
— Rahul Gandhi (@RahulGandhi) December 12, 2020
ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್ ಸುರ್ಜೇವಲಾ ಕೂಡ ಟ್ವೀಟ್ ಮಾಡಿದ್ದು, “ಕಳೆದ 17 ದಿನಗಳಲ್ಲಿ 11 ರೈತ ಬಾಂಧವರು ಹುತಾತ್ಮರಾಗಿದ್ದರೂ, ಮೋದಿ ಸರ್ಕಾರ ಪಶ್ಚಾತ್ತಾಪ ಪಡುತ್ತಿಲ್ಲ. ಅವರು (ಸರ್ಕಾರ) ಇನ್ನೂ ತಮಗೆ ಹಣ ಒದಗಿಸುವವರ ಜೊತೆ ನಿಂತಿದ್ದಾರೆ. ಅನ್ನದಾತರೊಂದಿಗೆ ಅಲ್ಲ” ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ನಿಲ್ಲದ ರೈತ ಹೋರಾಟ: 100 ಪತ್ರಿಕಾಗೋಷ್ಟಿ, 700 ಸಭೆಗಳ ಮೂಲಕ ಪ್ರಚಾರಕ್ಕೆ ಹೊರಟ ಬಿಜೆಪಿ!
ಜೊತೆಗೆ ’ರಾಜಧರ್ಮ (ಸಾಂವಿಧಾನಿಕ ಜವಾಬ್ದಾರಿ) ದೊಡ್ಡದೋ ಅಥವಾ ಹಠ ದೊಡ್ಡದೋ ಎಂಬುದನ್ನು ದೇಶ ತಿಳಿಯಲು ಬಯಸುತ್ತದೆ’ ಎಂದು ರಾಹುಲ್ ಗಾಂಧಿಯವರು ಉಲ್ಲೇಖಿಸಿರುವ ಮಾಧ್ಯಮ ವರದಿಯನ್ನು ಟ್ಯಾಗ್ ಮಾಡಿರುವ ಸುರ್ಜೆವಾಲಾ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಕಾಯ್ದೆ 2020, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ 2020 ರ ರೈತ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ- 2020 ಇವುಗಳನ್ನು ವಿರೋಧಿಸಿ ರೈತರು ಕಳೆದ 17 ದಿನಗಳಿಂದ ಪ್ರತಿಭಟಿಸುತ್ತಿದ್ದಾರೆ.
ಸೆಪ್ಟೆಂಬರ್ನಲ್ಲಿ ಜಾರಿಗೆ ಬಂದ ಮೂರು ಕೃಷಿ ಕಾನೂನುಗಳನ್ನು ಕೃಷಿ ಕ್ಷೇತ್ರದ ಪ್ರಮುಖ ಸುಧಾರಣೆಗಳೆಂದು ಸರ್ಕಾರವು ಪದೇ ಪದೇ ಹೇಳುತ್ತಿದೆ.
ಆದಾಗ್ಯೂ, ಪ್ರತಿಭಟನಾ ನಿರತ ರೈತರು ಹೊಸ ಕಾನೂನುಗಳು ಕನಿಷ್ಟ ಬೆಂಬಲ ಬೆಲೆ ತೆಗೆದು ಹಾಕುತ್ತದೆ ಮತ್ತು ಕಾರ್ಪೊರೇಟ್ ಕಂಪನಿಗಳಿಗೆ ಲಾಭ ಮಾಡಿಕೊಡುತ್ತವೆ. ರೈತರನ್ನು ಕಂಪನಿಗಳ ಕೆಳಗೆ ಕೆಲಸ ಮಾಡುವಂತೆ ಮಾಡುತ್ತವೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.