ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಜೂನ್ 29 ಮತ್ತು 30ರಂದು ಹಿಂಸಾಚಾರದಿಂದ ಕೂಡಿರುವ ಮಣಿಪುರ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ಪಕ್ಷ ಮಂಗಳವಾರ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ”ರಾಹುಲ್ ಗಾಂಧಿ ಅವರು ಮಣಿಪುರ ಭೇಟಿಯ ಸಮಯದಲ್ಲಿ ಅವರು ಪರಿಹಾರ ಶಿಬಿರಗಳಿಗೆ ಭೇಟಿ ನೀಡಲಿದ್ದಾರೆ. ಇಂಫಾಲ್ ಮತ್ತು ಚುರಾಚಂದಪುರದಲ್ಲಿ ವಿವಿಧ ಸಮುದಾಯಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.
Sh. @RahulGandhi ji will be visiting Manipur on 29-30 June. He will visit relief camps and interact with civil society representatives in Imphal and Churachandpur during his visit.
Manipur has been burning for nearly two months, and desperately needs a healing touch so that the…
— K C Venugopal (@kcvenugopalmp) June 27, 2023
”ಮಣಿಪುರವು ಸುಮಾರು ಎರಡು ತಿಂಗಳುಗಳಿಂದ ಹೊತ್ತಿ ಉರಿಯುತ್ತಿದೆ. ಸಮಾಜವು ಸಂಘರ್ಷದಿಂದ ಶಾಂತಿಯತ್ತ ಸಾಗಬೇಕಿದೆ. ಅದಕ್ಕೆ ಸಂತೈಸುವ ಸ್ಪರ್ಶ ಬೇಕಿದೆ. ಆ ಮೂಲಕ ಗಾಯವನ್ನು ಗುಣಪಡಿಸುವ ಅಗತ್ಯವಿದೆ. ಇದು ಮಾನವೀಯ ದುರಂತವಾಗಿದೆ. ದ್ವೇಷವಲ್ಲವನ್ನಲ್ಲ, ಪ್ರೀತಿಯನ್ನು ಶಕ್ತಿಯನ್ನಾಗಿಸುವುದು ನಮ್ಮ ಜವಾಬ್ದಾರಿಯಾಗಿದೆ” ಎಂದು ಅವರು ಬರೆದುಕೊಂಡಿದ್ದಾರೆ.
ಮೇ 3 ರಂದು ಈಶಾನ್ಯ ರಾಜ್ಯದಲ್ಲಿ ಭುಗಿಲೆದ್ದ ಹಿಂಸಾಚಾರದಿಂದ 100 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪರಿಶಿಷ್ಟ ಪಂಗಡದ ಸ್ಥಾನಮಾನಕ್ಕಾಗಿ ಮೈತಿ ಸಮುದಾಯದ ಬೇಡಿಕೆಯ ವಿರುದ್ಧ ಪ್ರತಿಭಟಿಸಲು ಗುಡ್ಡಗಾಡು ಜಿಲ್ಲೆಗಳಲ್ಲಿ ‘ಬುಡಕಟ್ಟು ಸಮುದಾಯದವರು ಒಗ್ಗಟ್ಟಿನ ಮೆರವಣಿಗೆ’ಯ ಸಂದರ್ಭದಲ್ಲಿ ಘರ್ಷಣೆಗಳು ಭುಗಿಲೆದ್ದವು.
ಈ ಜನಾಂಗೀಯ ಹಿಂಸಾಚಾರದಿಂದ ರಾಜ್ಯ ಅಕ್ಷರಶಃ ತತ್ತರಿಸಿಹೋಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಈ ವರೆಗೂ ಮಣಿಪುರಕ್ಕೆ ಭೇಟಿ ನೀಡಿಲ್ಲ, ಒಂದೇ ಒಂದು ಮಾತು ಕೂಡ ಆಡುತ್ತಿಲ್ಲ ಎಂದು ವಿರೋಧ ಪಕ್ಷಗಳು ಟೀಕಿಸುತ್ತಿವೆ.
ಕೇಂದ್ರದ ಮೋದಿ ಸರ್ಕಾರ ಮತ್ತು ರಾಜ್ಯದಲ್ಲಿ ಎನ್ ಬಿರೇನ್ ಸಿಂಗ್ ನೇತೃತ್ವದ-ಬಿಜೆಪಿ ಸರ್ಕಾರದಿಂದ ಹಿಂಸಾಚಾರವನ್ನು ತಡೆಯಲು ವಿಫಲವಾಗಿದೆ ಎಂಬ ಟೀಕೆಗೆ ಗುರಿಯಾಗಿವೆ.
”ರಾಜ್ಯ ಸರ್ಕಾರವು ತನ್ನ ನೌಕರರಿಗೆ ” ನೋ ವರ್ಕ್, ನೋ ಪೇ” ನೀತಿಯನ್ನು ಜಾರಿಗೊಳಿಸಿರುವ ನಿರ್ಧಾರವು ಬಲವಂತದ ಶಾಂತಿಯನ್ನು ಸಾಧಿಸುವ “ಭಯೋತ್ಪಾದಕ ತಂತ್ರ”ವಾಗಿದೆ ಎಂದು ಬುಡಕಟ್ಟು ಗುಂಪಿನ ಉನ್ನತ ಸಂಸ್ಥೆಯಾದ ಕುಕಿ ಇನ್ಪಿ ಮಂಗಳವಾರ ಹೇಳಿದೆ.
ರಾಜ್ಯದಲ್ಲಿ ಹಿಂಸಾಚಾರದಿಂದಾಗಿ ಅನಧಿಕೃತ ರಜೆಯಲ್ಲಿರುವ ನೌಕರರ ಪಟ್ಟಿಯನ್ನು ಸಿದ್ಧಪಡಿಸುವಂತೆ ಸರ್ಕಾರ ತನ್ನ ಎಲ್ಲಾ ಇಲಾಖೆಗಳಿಗೆ ಮಂಗಳವಾರ ಸೂಚಿಸಿದೆ.
”ಅಧಿಕೃತ ರಜೆಯಿಲ್ಲದೆ ತಮ್ಮ ಕರ್ತವ್ಯಕ್ಕೆ ಹಾಜರಾಗದ ಎಲ್ಲಾ ಉದ್ಯೋಗಿಗಳಿಗೆ ಯಾವುದೇ ಕೆಲಸ ಅಥವಾ ವೇತನವನ್ನು ನೀಡಲಾಗುವುದಿಲ್ಲ ಎಂದು ಮಣಿಪುರ ಸರ್ಕಾರ ತನ್ನ ಉದ್ಯೋಗಿಗಳಿಗೆ ತಿಳಿಸಲಾಗಿದೆ” ಎಂದು ಸರ್ಕಾರ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
”ಮಣಿಪುರ ಸರ್ಕಾರದ ಸುಮಾರು ಒಂದು ಲಕ್ಷ ಉದ್ಯೋಗಿಗಳಲ್ಲಿ 65,000 ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ ಮತ್ತು ಪರಿಹಾರ ಶಿಬಿರಗಳಲ್ಲಿದ್ದಾರೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಕಿ ಇನ್ಪಿ ಪ್ರಧಾನ ಕಾರ್ಯದರ್ಶಿ ಖೈಖೋಹೌಹ್ ಗಂಗ್ಟೆ ಅವರು ಸಮುದಾಯದ ಜನರು ಇಂಫಾಲ್ಗೆ ಹಿಂತಿರುಗಿದರೆ ಅದು ”ಸಾವಿನ ಬಲೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಣಿಪುರ ಹಿಂಸಾಚಾರದ ಗಮನ ಬೇರೆಡೆ ಸೆಳೆಯಲು ಏಕರೂಪ ನಾಗರಿಕ ಸಂಹಿತೆ ಹೇಳಿಕೆ ನೀಡಿದ ಮೋದಿ: ಪ್ರತಿಪಕ್ಷಗಳ ಟೀಕೆ