ರಾಜಸ್ಥಾನದ ರಾಜಧಾನಿ ಜೈಪುರದಿಂದ 177 ಕಿ.ಮೀ ದೂರದಲ್ಲಿರುವ ಕರೌಲಿ ಜಿಲ್ಲೆಯ ಅರ್ಚಕರೊಬ್ಬರನ್ನು ಭೂ ವಿವಾದಕ್ಕೆ ಸಂಬಂಧಿಸಿದಂತೆ ಸೀಮೆ ಎಣ್ಣೆ ಹಾಗೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಕರೌಲಿ ಜಿಲ್ಲೆಯ ಸಪೋತ್ರಾದಲ್ಲಿ 50 ವರ್ಷದ ಅರ್ಚಕ ಬಾಬು ಲಾಲ್ ವೈಷ್ಣವ್ ‘ರಾಧಾ ಕೃಷ್ಣ ದೇವಾಲಯದ ಟ್ರಸ್ಟ್ಗೆ’ ಸೇರಿದ ಸುಮಾರು 5.2 ಎಕರೆ ಭೂಮಿಯನ್ನು ಹೊಂದಿದ್ದರು. ದೇವಾಲಯದ ಟ್ರಸ್ಟ್ಗಳಿಗೆ ಸೇರಿದ ಈ ರೀತಿಯ ಭೂಮಿಯನ್ನು ಸಾಮಾನ್ಯವಾಗಿ ಉಸ್ತುವಾರಿ ಪುರೋಹಿತರಿಗೆ ಅವರ ಬಳಕೆಗಾಗಿ ನೀಡಲಾಗುತ್ತದೆ.
ಅಂತಹ ಭೂಮಿಯನ್ನು ರಾಜಸ್ಥಾನದಲ್ಲಿ ಮಂದಿರ ಮಾಫಿ ಎಂದು ಕರೆಯಲಾಗುತ್ತದೆ. ಈ ಜಮೀನು ರಾಜಸ್ಥಾನದ ಗ್ರಾಮ ದೇವಾಲಯಗಳ ಉಸ್ತುವಾರಿ ವಹಿಸುವ ಪುರೋಹಿತರಿಗೆ ಆದಾಯದ ಮೂಲವಾಗಿರುತ್ತದೆ. ಆದರೆ ಕರೌಲಿಯಲ್ಲಿ ಇದು ವಿವಾದದ ಮೂಲವಾಯಿತು.
ಇದನ್ನೂ ಓದಿ: ರಾಮನಗರ: ಅಂತರ್ಧರ್ಮೀಯ ಪ್ರೇಮ – ಯುವಕನ ಮರ್ಯಾದಗೇಡು ಹತ್ಯೆ?
ಅರ್ಚಕ ಬಾಬು ಲಾಲ್ ವೈಷ್ಣವ್ ಜಮೀನಿನಲ್ಲಿ ತನಗಾಗಿ ಒಂದು ಮನೆಯನ್ನು ನಿರ್ಮಿಸಲು ಬಯಸಿದ್ದರು. ನಿರ್ಮಾಣವನ್ನು ಪ್ರಾರಂಭಿಸುವ ಸಲುವಾಗಿ, ಭೂಮಿಯನ್ನು ಸಮತಟ್ಟುಗೊಳಿಸಿದ್ದರು. ಇದಕ್ಕೆ ಗ್ರಾಮದ ಮೀನಾ ಸಮುದಾಯದ ಗುಂಪಿನ ಜನರು ಇದನ್ನು ಆಕ್ಷೇಪಿಸಿ ಭೂಮಿಯನ್ನು ತಮ್ಮದಾಗಿಸಿಕೊಂಡರು. ಆದರೆ ಗ್ರಾಮದ ಹಿರಿಯರು ಅರ್ಚಕರ ಪರವಾಗಿ ತೀರ್ಪು ನೀಡಿದ್ದರು ಆಗ ಭೂ ವಿವಾದ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು.
ಸಾವನ್ನಪ್ಪುವುದಕ್ಕಿಂತ ಮುನ್ನ ಪೊಲೀಸರ ಮುಂದೆ ಹೇಳಿಕೆ ದಾಖಲಿಸಿರುವ ಅರ್ಚಕ , ವಿವಾದಿತ ಸ್ಥಳದಲ್ಲಿ ಮಲಗಿದ್ದ ತನ್ನ ಮೇಲೆ ಮತ್ತು ಬಾಜ್ರಾ ತೆನೆಗಳ ಮೇಲೆ ಆರು ಜನರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದಿದ್ದಾರೆ. ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಅರ್ಚಕರನ್ನು ಜೈಪುರದ ಎಸ್ಎಂಎಸ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅರ್ಚಕ ಹೆಸರಿಸಿದ್ದ ಕೈಲಾಶ್ ಮೀನಾ, ಶಂಕರ್ ಮೀನಾ, ನಮೋ ಮೀನಾ ಮತ್ತು ಇತರ ಮೂವರಲ್ಲಿ ಪ್ರಮುಖ ಆರೋಪಿ ಕೈಲಾಶ್ ಮೀನಾ ಎನ್ನುವವರನ್ನು ಬಂಧಿಸಿದ್ದಾರೆ.
“ಶವದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ನಾವು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದೇವೆ ಮತ್ತು ಪ್ರಧಾನ ಆರೋಪಿ ಕೈಲಾಶ್ ಮೀನಾ ಅವರನ್ನೂ ವಶಕ್ಕೆ ತೆಗೆದುಕೊಂಡಿದ್ದೇವೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ಹರ್ಜಿ ಲಾಲ್ ಯಾದವ್ ಎನ್ಡಿಟಿವಿಗೆ ತಿಳಿಸಿದ್ದಾರೆ.