ಜನವರಿ 26 ರಂದು ಕೆಂಪುಕೋಟೆಯಲ್ಲಿ ನಡೆದ ಅಹಿತಕರ ಘಟನೆಯ ಪ್ರಮುಖ ಆರೋಪಿ ಗ್ಯಾಂಗ್ಸ್ಟರ್ ಲಖ್ಬೀರ್ ಸಿಂಗ್ (ಲಖಾ ಸಿಧನಾ) ರೈತ ಹೋರಾಟವನ್ನು ಬೆಂಬಲಿಸಿ ರ್ಯಾಲಿ ನಡೆಸಲು ಕರೆ ನೀಡಿದ್ದಾನೆ. ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಗ್ರಾಮವಾದ ಬತಿಂಡಾ ಜಿಲ್ಲೆಯ ಮೆಹ್ರಾಜ್ನಲ್ಲಿ ರ್ಯಾಲಿ ನಡೆಸುತ್ತೇವೆ ಎಂದು ಹೇಳಿಕೆ ನೀಡಿದ್ದಾನೆ.
ಶುಕ್ರವಾರ ರಾತ್ರಿ ಪೋಸ್ಟ್ ಮಾಡಿದ ಫೇಸ್ಬುಕ್ ವಿಡಿಯೋವೊಂದರಲ್ಲಿ, ಬತಿಂಡಾ ಜಿಲ್ಲಾ ಕೇಂದ್ರ ಕಚೇರಿಯಿಂದ 35 ಕಿ.ಮೀ ದೂರದಲ್ಲಿರುವ ಮೆಹ್ರಾಜ್ನಲ್ಲಿರುವ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವಂತೆ ಲಖಾ ಸಿಧನಾ ಮನವಿ ಮಾಡಿದ್ದಾನೆ.
ಮೂರು ಕೃಷಿ ಕಾನೂನುಗಳ ವಿರುದ್ಧದ ಹೋರಾಟವನ್ನು ಬಲಪಡಿಸಲು ರೈತ ಒಕ್ಕೂಟದ ನಾಯಕರು ಕೇಂದ್ರದ ವಿರುದ್ಧ ಒಗ್ಗಟ್ಟಿನಿಂದ ಇರಬೇಕು ಎಂದು ಹೇಳಿದ್ದಾನೆ.
ಇದನ್ನೂ ಓದಿ: ಮಾಜಿ ಗ್ಯಾಂಗ್ಸ್ಟರ್ ಲಖಾ ಸಿಧಾನಾ – ಜ. 26 ರ ಹಿಂಸಾಚಾರದ ಇನ್ನೊಬ್ಬ ರೂವಾರಿ?
ಬತಿಂಡಾ ಜಿಲ್ಲೆಯ ಸಿದ್ಧನಾ ಗ್ರಾಮದ ನಿವಾಸಿ ಲಖಾ ಸಿಧನಾ ಜನವರಿ 26 ರಿಂದ ಪರಾರಿಯಾಗಿದ್ದು, ರ್ಯಾಲಿಯಲ್ಲಿ ಭಾಗಿಯಾಗುವುದಾಗಿ ಸುಳಿವು ನೀಡಿದ್ದಾನೆ.
ಈ ಹಿಂದೆ ಲಖಾ ಸಿಧನಾ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಜೊತೆಗೆ ದೆಹಲಿ ಪೊಲೀಸರ ವಿವಿಧ ತಂಡಗಳು ಪಂಜಾಬ್ ಹರಿಯಾಣ ಮತ್ತು ದೆಹಲಿಯಲ್ಲಿ ಶೋಧ ಕಾರ್ಯ ನಡೆಸಿದ್ದವು.
ಬತಿಂಡಾ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಜಸ್ಕರನ್ ಸಿಂಗ್ ಮಾತನಾಡಿ, “ಲಖಾ ಸಿಧನಾ ಬಗ್ಗೆ ಜಿಲ್ಲಾ ಪೊಲೀಸರಿಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಮೆಹ್ರಾಜ್ನಲ್ಲಿ ರ್ಯಾಲಿಯನ್ನು ಯೊಜಿಸಲಾಗಿದೆ ಎಂಬುದು ತಿಳಿದುಬಂದಿದೆ. ಆತನನ್ನು ಬಂಧಿಸುವುದು ದೆಹಲಿ ಪೊಲೀಸರ ಕರ್ತವ್ಯವಾಗಿದೆ. ಆದರೆ ಬತಿಂಡಾ ಪೊಲೀಸರಿಗೆ ಇದರಲ್ಲಿ ಯಾವುದೇ ಪಾತ್ರವಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಾನೂ ರಾಮ ಮಂದಿರ ಕಟ್ಟಿಸುತ್ತಿದ್ದೇನೆ: ವಿಪಕ್ಷ ನಾಯಕ ಸಿದ್ದರಾಮಯ್ಯ