Homeಸಿನಿಮಾರಾಜಾ ರವಿವರ್ಮನ ಕುಂಚದಂಚಿನ ಕ್ರಾಂತಿಯ ರಂಗು

ರಾಜಾ ರವಿವರ್ಮನ ಕುಂಚದಂಚಿನ ಕ್ರಾಂತಿಯ ರಂಗು

- Advertisement -
- Advertisement -

ತಲುಪಲೇಬೇಕಾದ ಸತ್ಯಕ್ಕೆ ಅಡೆತಡೆಗಳು ಜಾಸ್ತಿ. ಸುಳ್ಳು ಸಮೀಪಿಸಿದಷ್ಟು ಸಲೀಸಾಗಿ ಅದು ನಮ್ಮನ್ನು ತಲುಪದು. ನಮ್ಮ ಜೊತೆಗೇ ಕಾಲುನೀಡಿ ಹೆಜ್ಜೆಹಾಕುತ್ತಿರುವ ವರ್ತಮಾನದ ಸುಳ್ಳು ನಿಜಗಳ ನಡುವಿನ ಅಂತರವೇ ಇಷ್ಟೊಂದು ವಿಪರೀತವಿರುವಾಗ ಆಗಿಹೋದ, ನಾವ್ಯಾರು ಸಾಕ್ಷಿಯಾಗದ ಇತಿಹಾಸದಲ್ಲಿರುವ ಸತ್ಯಗಳಿಗೆ ಅದಿನ್ನೇನೆಲ್ಲಾ ಶೋಷಣೆಗಳಿರಬೇಡ; ತಡೆಗೋಡೆಗಳ ನಿರ್ಬಂಧವಿರಬೇಡ. ಪೂರ್ವಗ್ರಹ ಮತ್ತು ಸ್ವಾರ್ಥಗಳ ಹಳುವಿಗೆ ಸಿಲುಕದ ಚಿತ್ರಿಕೆಗಳು ಮಾತ್ರ ಇತಿಹಾಸಕ್ಕೆ ಪುರಾಣವನ್ನು ಆರೋಪಿಸದೆ ಇತಿಹಾಸವಾಗಿಯೇ ಕಟ್ಟಿಕೊಡಬಲ್ಲವು. ಅಂತಹ ದೃಶ್ಯಕಾವ್ಯದ ಸಾಲಿನಲ್ಲಿ ನಿಲ್ಲುವಂತಹ ಸಿನಿಮಾ ಹಿಂದಿಯ `ರಂಗ್ ರಸಿಯಾ’. ಇದರ ಇಂಗ್ಲಿಷ್ ಅವತರಿಣಿಕೆಯ ಹೆಸರು `ದಿ ಕಲರ್ಸ್ ಆಫ್ ಫ್ಯಾಶನ್’. `ಮಂಗಲ್ ಪಾಂಡೆ-ದಿ ರೈಸಿಂಗ್’ನಂತಹ Pಚಿಣioಣಡಿiಛಿ ಊisಣoಡಿiಛಿಚಿಟ ಸಿನಿಮಾ ನೀಡಿದ್ದ ಕೇತನ್ ಮೆಹ್ತಾ ನಿರ್ದೇಶನದ ಈ ಸಿನಿಮಾದ ಇಂಗ್ಲಿಷ್ ಅವತರಿಣಿಕೆ 2008ರಲ್ಲೇ ಲಂಡನ್ ಸಿನಿಮೋತ್ಸವದಲ್ಲಿ ಬಿಡುಗಡೆಯಾದರು ಹಿಂದಿ ರೂಪ ಇಂಡಿಯಾದಲ್ಲಿ ಬಿಡುಗಡೆಯಾದದ್ದು 2014ರಲ್ಲಿ. ಆ ಕಥೆಯ ಮಡಿಕೆಯಲ್ಲಿರುವ ಸತ್ಯಗಳು ಕಲಾ ಜಗತ್ತಿನ ಕುರಿತಾಗಿ ನಮಗಿರುವ ಇತಿಹಾಸದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುತ್ತವೆ.
ಅದು ಭಾರತೀಯ ಆಧುನಿಕ ಕಲಾಜಗತ್ತಿನ ಪಿತಾಮಹಾ ರಾಜಾ ರವಿವರ್ಮನ ಬದುಕನ್ನಾಧರಿಸಿದ ಬಯೋಪಿಕ್. ನಮ್ಮ ಇತಿಹಾಸಕ್ಕೊಂದು ಕೆಟ್ಟ ಚಾಳಿ ಇದೆ. ಘಟನಾ ಸರಣಿಗಳನ್ನು ವಸ್ತುನಿಷ್ಠವಾಗಿ ಕಟ್ಟಿಕೊಡದೆ, ತನಗೆ ಬೇಕಾದ್ದನ್ನು ಮಾತ್ರ, ಬೇಕಾದ ಬಗೆಯಲ್ಲಿ ದಾಖಲಿಸಿಕೊಂಡು ಮುಂದಿನ ತಲೆಮಾರುಗಳಿಗೆ ಆ ಅರ್ಧಸತ್ಯವನ್ನಷ್ಟೆ ದಾಟಿಸಿಬಿಡುವ ಚಾಳಿ. ರವಿವರ್ಮನನ್ನು ನಾನು ಇಂತಹುದೇ ಇತಿಹಾಸದ ಮೂಲಕ ಗ್ರಹಿಸಿದ್ದು ಸಹಾ ಅರ್ಧಂಬರ್ಧವಾಗಿಯೇ. ಆತನೊಬ್ಬ ಅದ್ಭುತ ಚಿತ್ರಕಲಾವಿದ, ಭಾರತದ ಕಲಾವಂತಿಕೆಯನ್ನು ವಿದೇಶಿಗರ ಮುಂದೆ ಎತ್ತಿಹಿಡಿದವ, ಬಣ್ಣಗಳನ್ನು ಪಳಗಿಸಿ ಅವುಗಳಿಗೆ ಜೀವ ತುಂಬುವ ಈ ಕುಂಚಬ್ರಹ್ಮನಿಗೆ ಭಾರತೀಯರು ತಮ್ಮ ಅಭಿಮಾನವನ್ನು ಧಾರೆ ಎರೆದಿದ್ದರು, ಇತ್ಯಾದಿಯಾಗಿ ಗ್ರಹಿಸಿದ್ದೆನೆ ಹೊರತು ತನ್ನ ಕಲಾಕೃತಿಗಳ ಮೂಲಕ ಆತ ಹುಟ್ಟುಹಾಕಿದ ಸಾಮಾಜಿಕ ಕ್ರಾಂತಿ, ಸ್ತ್ರೀವಾದದ ಹೊಸ ಮನ್ವಂತರ, ಅದಕ್ಕೆ ಪ್ರತಿಯಾಗಿ ಕಂದಾಚಾರಿಗಳಿಂದ ಆತ ಅನುಭವಿಸಿದ ಯಾತನೆ, ಆಗಿನ ಕಾಲಕ್ಕೆ ಬ್ರಿಟಿಷ್ ಚಮಚಾಗಿರಿಯಲ್ಲೆ ನೆಲೆ ಭದ್ರ ಮಾಡಿಕೊಂಡಿದ್ದ ದೇಸಿ ಬಂಡವಾಳಿಗರು ಆತ ಮತ್ತು ಆತನ ಕಲಾಕೃತಿಗಳಿಗೆ ಮಾಡಿದ ದ್ರೋಹಗಳ ಬಗ್ಗೆ ನನಗೆ ಅಂದಾಜೇ ಇರಲಿಲ್ಲ. ರಂಗ್ ರಸಿಯಾ ಸಿನಿಮಾ ರವಿವರ್ಮನ ಅಂತಹ ಮತ್ತೊಂದು ಮಗ್ಗುಲನ್ನು ಮನೋಜ್ಞವಾಗಿ ಪರಿಚಯಿಸಿದ್ದಲ್ಲದೆ ಇವತ್ತು ಇಂಡಿಯಾದಲ್ಲಿ ನಡೆಯುತ್ತಿರೊ ಯಥಾಸ್ಥಿತಿವಾದಿಗಳ ಅತಿರೇಕಗಳನ್ನು ಸಾರಾಸಗಟಾಗಿ ಅರ್ಥ ಮಾಡಿಕೊಳ್ಳಲು ಐತಿಹ್ಯಪೂರ್ಣ ಹಿನ್ನೋಟವನ್ನೂ ಕಟ್ಟಿಕೊಟ್ಟಿತು.
ರವಿವರ್ಮ, ಇಲ್ಲಿಗೆ ಅಜಮಾಸು ನೂರೈವತ್ತು ವರ್ಷಗಳ ಹಿಂದೆ ಬಾಳಿದ ಮನುಷ್ಯ. ಆಗ ಭಾರತ ಬ್ರಿಟಿಷ್ ವಸಾಹತುಷಾಹಿ ಹಿಡಿತದಲ್ಲಿತ್ತು ಎನ್ನುವುದು ಎಷ್ಟು ಸತ್ಯವೋ, ಮೂಢ ಕಂದಾಚಾರಿಗಳ ಕಪಿಮುಷ್ಟಿಯಲ್ಲಿತ್ತು ಎನ್ನುವುದೂ ಅಷ್ಟೇ ಸತ್ಯ. ಆತ ಕೇರಳದ ಪ್ರಾಂತೀಯ ರಾಜ ಮನೆತನವೊಂದರ ಅಳಿಯ. ಆದರೂ ಅಸ್ಪೃಶ್ಯ ಜಾತಿಯ ಕಾಮಿನಿ ಎಂಬ ಸುಂದರಿಯನ್ನು ತನ್ನ ಕಲಾಕೃತಿಗೆ ರೂಪದರ್ಶಿಯಾಗಿಸಿಕೊಳ್ಳುವ ಮೂಲಕ ಕಂದಾಚಾರವನ್ನು ಧಿಕ್ಕರಿಸಿದ. ಅದಕ್ಕಾಗಿ ತನ್ನ ಮೇಲ್ವರ್ಗದ ಸಮುದಾಯದಿಂದ ಮತ್ತು ಸ್ವತಃ ತನ್ನ ಮಡದಿಯಿಂದ ತಿರಸ್ಕøತನಾದರು ಕಲೆ ಮತ್ತು ಕಲಾಸ್ಫೂರ್ತಿಯ ವಿಚಾರದಲ್ಲಿ ತಾನಿಟ್ಟ ಆ ಕ್ರಾಂತಿಕಾರಿ ಹೆಜ್ಜೆಯ ಬಗ್ಗೆ ಯಾವತ್ತೂ ಅಳುಕು ಪಡಲಿಲ್ಲ. ನಂತರ, ಕಲೆಯ ಕತ್ತುಹಿಸುಕುವ ಅಂಥಾ ವಾತಾವರಣದಲ್ಲಿ ಇರಲಾಗದೆ ಮುಂಬೈ ನಗರಿಯತ್ತ ಮುಖ ಮಾಡುತ್ತಾನೆ.
ಅಲ್ಲೂ ಆತ ತನ್ನ ಕಲಾಕೃತಿಗಳಿಗೆ ಸ್ಫೂರ್ತಿಯಾಗಿ ಅಯ್ಕೆ ಮಾಡಿಕೊಳ್ಳುವುದು, ಈ ಸಮಾಜದ ಬಲಿಪಶುವಾಗಿ ಈ ಸಮಾಜದಿಂದಲೇ ನಿಕೃಷ್ಟವಾಗಿ ಕಾಣಲ್ಪಡುವ ಒಬ್ಬ ವೇಶ್ಯೆಯನ್ನು! ಹೆಸರು ಸುಗಂಧ. ಅವಳನ್ನೇ ತನ್ನ ಕಲಾಕೃತಿಗಳ ಪ್ರೇರಣೆಯಾಗಿಸಿಕೊಂಡು ಸರಸ್ವತಿ, ಲಕ್ಷ್ಮಿಯರಂತಹ ಹಿಂದೂ ಧಾರ್ಮಿಕ ಪುರಾಣದ ದೇವತೆಗಳನ್ನಲ್ಲದೆ ಮಹಾಭಾರತ, ರಾಮಾಯಣದ ಸನ್ನಿವೇಶಗಳನ್ನು ಬಣ್ಣಗಳಲ್ಲಿ ಬಂಧಿಯಾಗಿಸುತ್ತಾನೆ. ತನ್ನ ಕೃತಿಗಳು ಅರಮನೆಯಲ್ಲೊ, ಐಷಾರಾಮಿ ಸಂಗ್ರಹಾಲಯಗಳಲ್ಲೊ ತೂಗುಹಾಕಿಸಿಕೊಂಡು ಕೆಲವೇ ಜನರ ಸ್ವತ್ತಾಗಿ ಶ್ರೇಷ್ಠ ಕಲಾಕೃತಿಗಳು ಅನ್ನಿಸಿಕೊಳ್ಳುವುದಕ್ಕಿಂತ ಸಾಮಾನ್ಯ ಜನರ ಕಣ್ಣುಗಳಿಗು ಎಟಕಿ, ಅವರ ಅಭಿವ್ಯಕ್ತಿಗಳಿಗೆ ತೆರೆದುಕೊಳ್ಳುವ ಸಾರ್ಥಕ ಕೃತಿಗಳಾಗಬೇಕೆನ್ನುವುದು ರವಿವರ್ಮನ ಹಂಬಲ. ಇವತ್ತು ಮನೆಮನೆಗಳಲ್ಲಿ ದೇವಾನುದೇವತೆಗಳ ಮೂರ್ತ ಆಕಾರಗಳುಳ್ಳ ಫೋಟೊಗಳು ರಾರಾಜಿಸುತ್ತಿವೆ. ಆದರೆ ಹಿಂದೂ ಪುರಾಣಗಳಲ್ಲಿ ಕೇವಲ ವರ್ಣನೆಯಾಗಿದ್ದ, ದೇವಾಲಯಗಳ ಮೂರ್ತಿ ಕೆತ್ತನೆಯ ಹೊರತು ಸಾಮಾನ್ಯ ಜನರ ಕಲ್ಪನೆಯಿಂದ ದೇವರ ರೂಪವನ್ನೆ ಕಿತ್ತುಕೊಂಡಿದ್ದ ಆ ಕಾಲಘಟ್ಟದಲ್ಲಿ ಜನರ ಕಲ್ಪನಾ ವಲಯದೊಳಕ್ಕೆ ‘ಮನುಷ್ಯರೂಪಿ’ ದೇವರನ್ನು ರವಿವರ್ಮ ತರಲು ಮುಂದಾದದ್ದು ದೊಡ್ಡ ಕ್ರಾಂತಿಯೇ ಆಗಿತ್ತು. ತನ್ನ ಕಲಾಕೃತಿಗಳ ಮೂಲಕ ಸಾಮಾನ್ಯ ಜನ ಮತ್ತು ದೇವರ ನಡುವಿನ ಅಂತರವನ್ನು ಕಿರಿದುಗೊಳಿಸಿದ ಅವನ ಕ್ರಮ, ಅಷ್ಟೂದಿನ ಮಧ್ಯವರ್ತಿಗಳ ಸೋಗು ಹಾಕಿಕೊಂಡು ಸುಲಿಗೆ ಮಾಡುತ್ತಿದ್ದ ಕಂದಾಚಾರಿಗಳ ಕಣ್ಣು ಕೆಂಪಗಾಗುವಂತೆ ಮಾಡಿತ್ತು. ಹಾಗಾಗಿ ದೇವರನ್ನು ಮನುಷ್ಯ ರೂಪಿನಲ್ಲಿ ಚಿತ್ರಿಸಿದ್ದು ಧರ್ಮನಿಂದನೆ, ಅದರಲ್ಲೂ ಒಬ್ಬ ವೇಶ್ಯೆಯ ರೂಪನ್ನು ಹಿಂದೂ ದೇವತೆಗಳಿಗೆ ಲೇಪಿಸಿದ್ದು ಧರ್ಮದ್ರೋಹ, ಪುರಾಣ ಪಾತ್ರಗಳನ್ನು ಅಶ್ಲೀಲವಾಗಿ ಚಿತ್ರಿಸಿ ಜನರ ಭಾವನೆಗಳನ್ನು ಘಾಸಿಗೊಳಿಸಿದ್ದಾನೆ ಅಂತೆಲ್ಲ ರವಿವರ್ಮನ ಮೇಲೆ ಕೇಸು ದಾಖಲಿಸಿ ನ್ಯಾಯಾಲಯದ ಕಟಕಟೆಗು ತಂದು ನಿಲ್ಲಿಸುತ್ತಾರೆ.
ಕೋರ್ಟ್ ಆವರಣದಲ್ಲೆ ಅವನ ಮೇಲೆ ಹಲ್ಲೆ ಮಾಡುತ್ತಾರೆ, ಅವನ ಪ್ರಿಂಟಿಂಗ್ ಪ್ರೆಸ್ ಗೆ ಬೆಂಕಿಯಿಟ್ಟು ಧ್ವಂಸ ಮಾಡುತ್ತಾರೆ, ಆತ ಮನೆಯಿಂದ ಹೊರಬರುವುದಕ್ಕು ಆಗದಂತೆ ಅವನ ವಿರುದ್ಧ ಪ್ರತಿಭಟನೆಗಳನ್ನು ಹೆಣೆಯುತ್ತಾರೆ. ನಗ್ನತೆ ಎಂದರೆ ಕೇವಲ ಅಶ್ಲೀಲತೆ ಮಾತ್ರವಲ್ಲ, ಅದರಲ್ಲಿ ಸೌಂದರ್ಯದ ರಸಿಕತೆಯೂ ಇರುತ್ತೆ. ಪ್ರಪಂಚಕ್ಕೆ ಕಾಮಶಾಸ್ತ್ರದ ಕೊಡುಗೆ ಕೊಟ್ಟ ನೆಲದ ದೇವಾಲಯಗಳು ತಮ್ಮ ಮೈಮೇಲೆ ‘ಮೈಥುನ’ದ ಕಲಾವಂತಿಕೆಯನ್ನು ಹೊತ್ತುಕೊಂಡರು ಪವಿತ್ರ ಎನಿಸಿಕೊಂಡಿವೆಯೇ ಹೊರತು ಮೈಲಿಗೆಯೆನಿಸಿಲ್ಲ. ಸ್ತ್ರೀಯನ್ನು ತಮ್ಮ ಕಾಮತೃಷೆಯ ವಸ್ತುವಾಗಿಸಿಕೊಂಡವರಿಗೆ ಅವಳ ಸೌಂದರ್ಯ ಅಶ್ಲೀಲತೆಯಾಗಿ ಕಾಣಿಸುತ್ತದೆಯೇ ವಿನಾಃ ಸೌಂದರ್ಯೋಪಾಸಕರಿಗಲ್ಲ. ಇನ್ನು ಶತಶತಮಾನಗಳಿಂದ ಶೂದ್ರ ಸಮುದಾಯಗಳನ್ನು ದೇವಾಲಯಗಳಿಂದ ಹೊರಗಿಟ್ಟು ಅವರ ಮನಸ್ಸಿನಲ್ಲಿ ದೇವರ ಆಕಾರಕ್ಕೆ ಆಸ್ಪದವನ್ನೇ ಕೊಡದ ಸಮಾಜದ ಅಸಮಾನತೆಯನ್ನು ಧಿಕ್ಕರಿಸಿ ದೇವರನ್ನೆ ಅಂತವರ ಬಳಿಹೊಯ್ದ ರವಿವರ್ಮ ಧರ್ಮದ್ರೋಹಿ ಆಗುವುದಕ್ಕೆ ಸಾಧ್ಯವೇ ಇಲ್ಲ. ಹರಿಜನರಿಗೆ ದೇವಾಲಯ ಪ್ರವೇಶವನ್ನು ಮೇಲ್ವರ್ಗಗಳು ನಿರಾಕರಿಸಿದ್ದನ್ನು ಪ್ರತಿಭಟಿಸಿ ಅಂತಹ ದೇವಾಲಯಗಳಿಗೆ ಪ್ರತಿಯಾಗಿ ಹರಿಜನ ದೇವಾಲಯಗಳನ್ನು ನಿರ್ಮಿಸುವ ಮೂಲಕ ದೇವರನ್ನೆ ತಳಸಮುದಾಯದವರ ಬಳಿ ಕರೆತಂದ ನಾರಾಯಣ ಗುರುಗಳ ಧಾರ್ಮಿಕ ರೂಪದ ಸಾಮಾಜಿಕ ಚಳವಳಿ ರವಿವರ್ಮನ ಈ ಹೆಜ್ಜೆಯೊಂದಿಗೆ ಸಾಮ್ಯತೆ ಹೊಂದುತ್ತದೆ. ಇಂತಹ ತರ್ಕಗಳೆಲ್ಲ ವಾದ ಪ್ರತಿವಾದಿಸಲ್ಪಟ್ಟ ನಂತರ ನ್ಯಾಯಾಲಯ ಕೂಡ ಆತನನ್ನು ಆರೋಪಮುಕ್ತ ಗೊಳಿಸುತ್ತದೆ. ಅಷ್ಟರಲ್ಲಾಗಲೆ ರವಿವರ್ಮನೊಳಗಿನ ಕಲಾವಿದ ಈ ಜಂಜಡಗಳಿಂದ ಜರ್ಝರಿತನಾಗಿರುತ್ತಾನೆ. ಇವತ್ತು ಅವನನ್ನು ಕೊಂಡಾಡುವ ಇದೇ ಸಮಾಜ ಅವತ್ತು ಅವನ ಕಲಾಪ್ರೌಢಿಮೆಯನ್ನು ಅರ್ಥ ಮಾಡಿಕೊಂಡಿದ್ದರೆ ಅವನ ಕುಂಚ ಇನ್ನೂ ಎಂತೆಂಥ ಕಲಾಕುಸುಮಗಳನ್ನು ಅರಳಿಸುತ್ತಿತ್ತೊ. ಈ ಸಮಾಜ ಅದೇ ತಪ್ಪನ್ನು ಇವತ್ತಿಗೂ ಪುನರಾವರ್ತಿಸುತ್ತಿದೆ. ಆದರೆ ರವಿವರ್ಮನ ಜಾಗದಲ್ಲಿ ಎಂ.ಎಫ್. ಹುಸೇನೊ, ಅಮೀರ್ ಖಾನೊ, ಶಿಲುಬೆಗೇರುತ್ತಿದ್ದಾರಷ್ಟೆ!
ರಂಜಿತ್ ದೇಸಾಯಿಯವರ ರಾಜಾ ರವಿವರ್ಮ ಕೃತಿಯನ್ನಾಧರಿಸಿದ ಈ ಸಿನಿಮಾವನ್ನು ನಿರ್ದೇಶಕ ಕೇತನ್ ಮೆಹ್ತಾ ರವಿವರ್ಮನ ಕಲಾಕೃತಿಗಳಷ್ಟೆ ನವಿರಾಗಿ ಕಟ್ಟಿಕೊಡಲು ಯತ್ನಿಸಿದ್ದಾರೆ. ರವಿವರ್ಮನ ಪಾತ್ರದಲ್ಲಿ ರಣದೀಪ್ ಹೂಡಾ ಗಮನ ಸೆಳೆಯುವುದು ನಿಜವಾದರು ಇಡೀ ಸಿನಿಮಾವನ್ನು ಆವರಿಸುವುದು ಸುಗಂಧಾ ಪಾತ್ರದ ಒಳಹೊಕ್ಕ ನಂದನಾ ಸೇನ್. ವೇಶ್ಯೆಯ ಪಾತ್ರದಲ್ಲಿ ರವಿವರ್ಮನ ಕಲಾರಸಿಕತೆಗೆ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡು, ಆತನ ಊರ್ವಶಿ-ಪುರೂರವ ಪ್ರೇಮಕಾವ್ಯದ ಕಲ್ಪನೆಗೆ ರೂಪವಾಗಲು ತನ್ನ ಸ್ತ್ರೀ ಸೌಂದರ್ಯವನ್ನು ಕ್ಯಾಮೆರಾ ಮುಂದೆ ತೆರೆದಿಟ್ಟು ನಗ್ನಳಾಗುವ ಆಕೆಯ ವೃತ್ತಿಪರತೆ ಸಿನಿಮಾದ ಅದ್ಭುತ ಕ್ಷಣಗಳಲ್ಲಿ ಒಂದು. ಮೂಲ ರವಿವರ್ಮನ ಕಲಾಕೃತಿಗಳಲ್ಲಿ ಕಾಣಸಿಗುವಂತೆ ಈ ದೃಶ್ಯದಲ್ಲು ಅಶ್ಲೀಲತೆಯನ್ನು ಹಿಮ್ಮೆಟ್ಟಿಸಿ ಸೌಂದರ್ಯ ರಸಿಕತೆಯೆ ನೋಡಗರ ಮನಸ್ಸನ್ನು ಆವರಿಸುವಂತೆ ಮಾಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.
ವಿಚಾರಣೆಯ ವೇಳೆ ವಕೀಲರು ಪ್ರಶ್ನೆಗಳ ಮೂಲಕ ಸುಗಂಧಿಗೆ ಮುಜುಗರ ತಂದಿತ್ತಾಗ ಆಕೆ ನೊಂದು ನುಡಿಯುವ “ನನ್ನಂತ ನತದೃಷ್ಟೆಯನ್ನು ಆ ವ್ಯಕ್ತಿ ದೇವತೆಯಾಗಿಸಿದ. ಆದರೆ ನಿಮ್ಮ ಸಮಾಜ ಏನು ಮಾಡಿತು? ನನ್ನನ್ನು ವೇಶ್ಯೆಯಾಗಿಸಿ ಖುಷಿಪಟ್ಟಿತು!” ಮಾತು ಸಿನಿಮಾದ ವೈಚಾರಿಕ ಸೌಂದರ್ಯವನ್ನು ಕಟ್ಟಿಕೊಡುತ್ತದೆ. ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುವ ಸುಗಂಧಿ ಈ ಸಮಾಜದ ಸ್ತ್ರೀ ಬಲಿಪಶು ಪರಂಪರೆಯ ರೂಪಕವಾಗಿ ಕಾಡುತ್ತಾಳೆ. ಆಕೆಯ ಸಾವಿನ ನಂತರವು ಸಿನಿಮಾ ಕೊಂಚಹೊತ್ತು ಸರಿದಾಡುತ್ತದಾದರು ಗಂಭೀರ ನೋಡುಗರಿಗೆ ಸುಗಂಧಿಯ ಪಾತ್ರ ನಿರ್ಗಮನವೇ ಸಿನಿಮಾದ ದಿ ಎಂಡ್‍ನಂತೆ ಕಾಡುತ್ತದೆ. ಸುಗಂಧಿ ಯಾವ ಪರಿ ಪ್ರೇಕ್ಷಕನನ್ನು ಆವರಿಸುತ್ತಾಳೆಂದರೆ ಒಂದು ಹಂತದಲ್ಲಿ ಸಿನಿಮಾದ ಹೀರೊ ರವಿವರ್ಮನೆ ಆಕೆಯ ಪಾಲಿನ ಖಳನಾಯಕನಂತೆ ಭಾಸವಾಗಿಬಿಡುತ್ತಾನೆ. ನನಗಂತೂ ಹಾಗನ್ನಿಸಿತು. ಬಹುಶ ಸಿನಿಮಾ ನೋಡಿದರೆ ಅಥವಾ ಈಗಾಗಲೇ ನೋಡಿದ್ದರೆ ನಿಮಗೂ ಹಾಗೇ ಅನ್ನಿಸಬಹುದು. ಸಮಯ ಸಿಕ್ಕಾಗ ಒಮ್ಮೆ ಆ ಸಿನಿಮಾ ನೋಡಿ.

– ಗಿರೀಶ್ ತಾಳಿಕಟ್ಟೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೇರಿಕಾದಲ್ಲಿ ಅದಾನಿ ಮತ್ತು ಆಪ್ತರ ಮೇಲಿನ ಕ್ರಿಮಿನಲ್ ಕೇಸ್ ರದ್ದು: ‘ರಾಜಿ ಮಾಡಿಕೊಂಡ ಪ್ರಧಾನಿ ಭಾರತದ ಹಿತಾಸಕ್ತಿ ಮಾರಾಟ ಮಾಡಿದ್ದಾರೆ’ ಎಂದ ರಾಹುಲ್ ಗಾಂಧಿ 

ನವದೆಹಲಿ: ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ಅದಾನಿ ವಿರುದ್ಧದ ಪ್ರಮುಖ ಕ್ರಿಮಿನಲ್ ಆರೋಪಗಳನ್ನು ಅಮೆರಿಕದ ಫೆಡರಲ್ ನ್ಯಾಯಾಧೀಶರು ಶಾಶ್ವತವಾಗಿ ವಜಾಗೊಳಿಸಿದ ಬೆನ್ನಲ್ಲೇ, ವಿಪಕ್ಷ ನಾಯಕ ರಾಹುಲ್...

ಕರ್ನಾಟಕ SIR | ‘ಲಾಜಿಕಲ್ ಡಿಸ್ಕ್ರಿಪೆನ್ಸಿ’ ಬಗ್ಗೆ ತುಟಿ ಬಿಚ್ಚದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಆಗಸ್ಟ್ 7ರಂದು ಚುನಾವಣಾ ಆಯೋಗ ಹೊರಡಿಸಿದ ಪ್ರಕಟಣೆಯ ಪ್ರಕಾರ, ಗಣತಿ ನಮೂನೆ ಅಥವಾ ಎನ್ಯುಮರೇಶನ್ ಫಾರಂ ಸಲ್ಲಿಕೆ ದಿನಾಂಕ ಆಗಸ್ಟ್...

‘ಆಹಾರ ಸುರಕ್ಷತೆ – ಔಷಧ ಆಡಳಿತ ಇಲಾಖೆ’ಯಿಂದ ಹೋಟೆಲ್‌ಗಳಿಗೆ ಕಟ್ಟುನಿಟ್ಟಿನ ನಿಯಮ ಜಾರಿ; ಹೊಸ ಮಾರ್ಗಸೂಚಿ ಪ್ರಕಟ

ರಾಜ್ಯದ ಹೋಟೆಲ್‌ಗಳು, ಡಾಬಾಗಳು ಹಾಗೂ ಆಹಾರ ಸೇವಾ ಸಂಸ್ಥೆಗಳು ಪಾಲಿಸಬೇಕಾದ 'ಆಹಾರ ಸುರಕ್ಷತಾ ಮತ್ತು ನೈರ್ಮಲ್ಯ ನಿಯಮಗಳ'ನ್ನು 'ಆಹಾರ ಸುರಕ್ಷತೆ ಇಲಾಖೆ ಮತ್ತು ಔಷಧ ಆಡಳಿತ ಇಲಾಖೆ' ಆಯುಕ್ತರು ಪ್ರಕಟಿಸಿದ್ದಾರೆ. ಕಳೆದ ಮೂರ್ನಾಲ್ಕು...

ಕರ್ನಾಟಕದಲ್ಲಿ ಗುಟ್ಕಾ, ಪಾನ್ ಮಸಾಲಾ ಉತ್ಪಾದನೆ ಮತ್ತು ಮಾರಾಟ 1 ವರ್ಷ ನಿಷೇಧ: ರಾಜ್ಯ ಸರ್ಕಾರದ ಮಹತ್ವದ ಆದೇಶ

ಬೆಂಗಳೂರು: ಸಾರ್ವಜನಿಕ ಆರೋಗ್ಯ ಮತ್ತು ಸಮಾಜದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ತಂಬಾಕು ಹಾಗೂ ನಿಕೋಟಿನ್ ಅಂಶ ಹೊಂದಿರುವ ಗುಟ್ಕಾ, ಪಾನ್ ಮಸಾಲಾ ಸೇರಿದಂತೆ ಇತರ ಅಪಾಯಕಾರಿ ಉತ್ಪನ್ನಗಳ ಮೇಲೆ ಸಂಪೂರ್ಣ...

ಲೋಕಸಭೆ ಬಲ 543 ರಲ್ಲೇ ಶಾಶ್ವತವಾಗಿ ಮುಂದುವರಿಸಲು ಕೇಂದ್ರಕ್ಕೆ ಆಗ್ರಹ: ತಮಿಳುನಾಡು ವಿಧಾನಸಭೆಯಲ್ಲಿ ಸಿಎಂ ಸಿ. ಜೋಸೆಫ್ ವಿಜಯ್ ನಿರ್ಣಯ ಮಂಡನೆ

ಚೆನ್ನೈ: ಕೇಂದ್ರ ಸರ್ಕಾರವು ಲೋಕಸಭೆಯ ಒಟ್ಟು ಸ್ಥಾನಗಳ ಬಲವನ್ನು ಪ್ರಸ್ತುತ ಇರುವ 543 ರಲ್ಲೇ ಶಾಶ್ವತವಾಗಿ ಕಾಯ್ದುಕೊಳ್ಳಬೇಕು ಮತ್ತು ರಾಜ್ಯಗಳ ನಡುವಿನ ಪ್ರಾತಿನಿಧ್ಯದ ಅನುಪಾತವನ್ನು ಬದಲಾಯಿಸಬಾರದು ಎಂದು ಒತ್ತಾಯಿಸಿ ತಮಿಳುನಾಡು ಮುಖ್ಯಮಂತ್ರಿ ಸಿ....

ಯುಪಿಯಲ್ಲಿ ಅಮಾನವೀಯ ಘಟನೆ: ಮೊಬೈಲ್ ಕದ್ದ ಆರೋಪ ಹೊರಿಸಿ ಒಬಿಸಿ ಯುವಕನ ತಲೆ ಬೋಳಿಸಿ ಮೆರವಣಿಗೆ; ಮೇಲ್ಜಾತಿಯ ತಂದೆ-ಮಗನ ಬಂಧನ

ಉನ್ನಾವೋ: ಉತ್ತರ ಪ್ರದೇಶದಲ್ಲಿ ಇದುವರೆಗೆ ದಲಿತ ಸಮುದಾಯಗಳ ಮೇಲೆ ವ್ಯಾಪಕವಾಗಿ ನಡೆಯುತ್ತಿದ್ದ ಜಾತಿ ಆಧಾರಿತ ದೌರ್ಜನ್ಯ ಮತ್ತು ಸಾರ್ವಜನಿಕ ಅವಮಾನದಂತಹ ಅಮಾನವೀಯ ಕೃತ್ಯಗಳು, ಈಗ ಇತರ ಹಿಂದುಳಿದ ವರ್ಗಗಳ (ಒಬಿಸಿ) ಜನರ ಮೇಲೆಯೂ...

SIR 3ನೇ ಹಂತ: 12 ರಾಜ್ಯಗಳು-ಕೇಂದ್ರಾಡಳಿತ ಪ್ರದೇಶಗಳ 1.58 ಕೋಟಿ ಮತದಾರರ ಹೆಸರು ಕರಡು ಪಟ್ಟಿಯಿಂದ ಡಿಲೀಟ್

ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಮೂರನೇ ಹಂತದಲ್ಲಿ ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಿಂದ ಸುಮಾರು 1.58 ಕೋಟಿ ಹೆಸರುಗಳನ್ನು ಅಳಿಸಲಾಗಿದೆ. ಪ್ರಸ್ತುತ ನಡೆಯುತ್ತಿರುವ 3ನೇ ಹಂತದ ವ್ಯಾಪ್ತಿಗೆ ಒಳಪಡುವ 16 ರಾಜ್ಯಗಳಲ್ಲಿ...

ಪ. ಬಂಗಾಳ ಎಸ್‌ಐಆರ್ | ಮೇಲ್ಮನವಿ ನ್ಯಾಯಮಂಡಳಿಗಳಿಗೆ ಕಾಲಮಿತಿ ನಿಗದಿಪಡಿಸಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

ಪಶ್ಚಿಮ ಬಂಗಾಳದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಮೇಲ್ಮನವಿಗಳ ವಿಚಾರಣೆ ನಡೆಸುತ್ತಿರುವ ಮೇಲ್ಮನವಿ ನ್ಯಾಯಾಧಿಕರಣಗಳ ನಿರ್ಧಾರಗಳಿಗೆ ಯಾವುದೇ ನಿರ್ದಿಷ್ಟ ಸಮಯದ ಮಿತಿಯನ್ನು ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್...

‘ಎಸ್‌ಐಆರ್‌’ನಿಂದ ಹೆಸರು ಡಿಲೀಟ್‌ ಆದವರಿಗೆ ‘ಹೊಸ ಮತದಾರರ ನೋಂದಣಿ’ ಯಾಕೆ?

ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಕಾಣೆಯಾಗಿದ್ದರೆ ನಮೂನೆ ಸಂಖ್ಯೆ 6 ಅನ್ನು (Form No. 6) ಸಲ್ಲಿಸಿ ಎಂದು ಜುಲೈ 22 ರಂದು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಮುಖ್ಯ ಚುನಾವಣಾ...

ನೀಟ್ ವಿರುದ್ಧ ನಿರ್ಣಯ ಅಂಗೀಕರಿಸಿದ ತಮಿಳುನಾಡು ವಿಧಾನಸಭೆ : ಸಭಾತ್ಯಾಗ ಮಾಡಿದ ಬಿಜೆಪಿಯ ಏಕೈಕ ಶಾಸಕ

ತಮಿಳುನಾಡು ವಿಧಾನಸಭೆಯು ಮಂಗಳವಾರ (ಆ.11) ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್) ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಪರೀಕ್ಷೆಗಳನ್ನು ನಡೆಸುವಲ್ಲಿ ಪದೇ ಪದೇ...