Homeಸಿನಿಮಾರಾಜಾ ರವಿವರ್ಮನ ಕುಂಚದಂಚಿನ ಕ್ರಾಂತಿಯ ರಂಗು

ರಾಜಾ ರವಿವರ್ಮನ ಕುಂಚದಂಚಿನ ಕ್ರಾಂತಿಯ ರಂಗು

- Advertisement -
- Advertisement -

ತಲುಪಲೇಬೇಕಾದ ಸತ್ಯಕ್ಕೆ ಅಡೆತಡೆಗಳು ಜಾಸ್ತಿ. ಸುಳ್ಳು ಸಮೀಪಿಸಿದಷ್ಟು ಸಲೀಸಾಗಿ ಅದು ನಮ್ಮನ್ನು ತಲುಪದು. ನಮ್ಮ ಜೊತೆಗೇ ಕಾಲುನೀಡಿ ಹೆಜ್ಜೆಹಾಕುತ್ತಿರುವ ವರ್ತಮಾನದ ಸುಳ್ಳು ನಿಜಗಳ ನಡುವಿನ ಅಂತರವೇ ಇಷ್ಟೊಂದು ವಿಪರೀತವಿರುವಾಗ ಆಗಿಹೋದ, ನಾವ್ಯಾರು ಸಾಕ್ಷಿಯಾಗದ ಇತಿಹಾಸದಲ್ಲಿರುವ ಸತ್ಯಗಳಿಗೆ ಅದಿನ್ನೇನೆಲ್ಲಾ ಶೋಷಣೆಗಳಿರಬೇಡ; ತಡೆಗೋಡೆಗಳ ನಿರ್ಬಂಧವಿರಬೇಡ. ಪೂರ್ವಗ್ರಹ ಮತ್ತು ಸ್ವಾರ್ಥಗಳ ಹಳುವಿಗೆ ಸಿಲುಕದ ಚಿತ್ರಿಕೆಗಳು ಮಾತ್ರ ಇತಿಹಾಸಕ್ಕೆ ಪುರಾಣವನ್ನು ಆರೋಪಿಸದೆ ಇತಿಹಾಸವಾಗಿಯೇ ಕಟ್ಟಿಕೊಡಬಲ್ಲವು. ಅಂತಹ ದೃಶ್ಯಕಾವ್ಯದ ಸಾಲಿನಲ್ಲಿ ನಿಲ್ಲುವಂತಹ ಸಿನಿಮಾ ಹಿಂದಿಯ `ರಂಗ್ ರಸಿಯಾ’. ಇದರ ಇಂಗ್ಲಿಷ್ ಅವತರಿಣಿಕೆಯ ಹೆಸರು `ದಿ ಕಲರ್ಸ್ ಆಫ್ ಫ್ಯಾಶನ್’. `ಮಂಗಲ್ ಪಾಂಡೆ-ದಿ ರೈಸಿಂಗ್’ನಂತಹ Pಚಿಣioಣಡಿiಛಿ ಊisಣoಡಿiಛಿಚಿಟ ಸಿನಿಮಾ ನೀಡಿದ್ದ ಕೇತನ್ ಮೆಹ್ತಾ ನಿರ್ದೇಶನದ ಈ ಸಿನಿಮಾದ ಇಂಗ್ಲಿಷ್ ಅವತರಿಣಿಕೆ 2008ರಲ್ಲೇ ಲಂಡನ್ ಸಿನಿಮೋತ್ಸವದಲ್ಲಿ ಬಿಡುಗಡೆಯಾದರು ಹಿಂದಿ ರೂಪ ಇಂಡಿಯಾದಲ್ಲಿ ಬಿಡುಗಡೆಯಾದದ್ದು 2014ರಲ್ಲಿ. ಆ ಕಥೆಯ ಮಡಿಕೆಯಲ್ಲಿರುವ ಸತ್ಯಗಳು ಕಲಾ ಜಗತ್ತಿನ ಕುರಿತಾಗಿ ನಮಗಿರುವ ಇತಿಹಾಸದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುತ್ತವೆ.
ಅದು ಭಾರತೀಯ ಆಧುನಿಕ ಕಲಾಜಗತ್ತಿನ ಪಿತಾಮಹಾ ರಾಜಾ ರವಿವರ್ಮನ ಬದುಕನ್ನಾಧರಿಸಿದ ಬಯೋಪಿಕ್. ನಮ್ಮ ಇತಿಹಾಸಕ್ಕೊಂದು ಕೆಟ್ಟ ಚಾಳಿ ಇದೆ. ಘಟನಾ ಸರಣಿಗಳನ್ನು ವಸ್ತುನಿಷ್ಠವಾಗಿ ಕಟ್ಟಿಕೊಡದೆ, ತನಗೆ ಬೇಕಾದ್ದನ್ನು ಮಾತ್ರ, ಬೇಕಾದ ಬಗೆಯಲ್ಲಿ ದಾಖಲಿಸಿಕೊಂಡು ಮುಂದಿನ ತಲೆಮಾರುಗಳಿಗೆ ಆ ಅರ್ಧಸತ್ಯವನ್ನಷ್ಟೆ ದಾಟಿಸಿಬಿಡುವ ಚಾಳಿ. ರವಿವರ್ಮನನ್ನು ನಾನು ಇಂತಹುದೇ ಇತಿಹಾಸದ ಮೂಲಕ ಗ್ರಹಿಸಿದ್ದು ಸಹಾ ಅರ್ಧಂಬರ್ಧವಾಗಿಯೇ. ಆತನೊಬ್ಬ ಅದ್ಭುತ ಚಿತ್ರಕಲಾವಿದ, ಭಾರತದ ಕಲಾವಂತಿಕೆಯನ್ನು ವಿದೇಶಿಗರ ಮುಂದೆ ಎತ್ತಿಹಿಡಿದವ, ಬಣ್ಣಗಳನ್ನು ಪಳಗಿಸಿ ಅವುಗಳಿಗೆ ಜೀವ ತುಂಬುವ ಈ ಕುಂಚಬ್ರಹ್ಮನಿಗೆ ಭಾರತೀಯರು ತಮ್ಮ ಅಭಿಮಾನವನ್ನು ಧಾರೆ ಎರೆದಿದ್ದರು, ಇತ್ಯಾದಿಯಾಗಿ ಗ್ರಹಿಸಿದ್ದೆನೆ ಹೊರತು ತನ್ನ ಕಲಾಕೃತಿಗಳ ಮೂಲಕ ಆತ ಹುಟ್ಟುಹಾಕಿದ ಸಾಮಾಜಿಕ ಕ್ರಾಂತಿ, ಸ್ತ್ರೀವಾದದ ಹೊಸ ಮನ್ವಂತರ, ಅದಕ್ಕೆ ಪ್ರತಿಯಾಗಿ ಕಂದಾಚಾರಿಗಳಿಂದ ಆತ ಅನುಭವಿಸಿದ ಯಾತನೆ, ಆಗಿನ ಕಾಲಕ್ಕೆ ಬ್ರಿಟಿಷ್ ಚಮಚಾಗಿರಿಯಲ್ಲೆ ನೆಲೆ ಭದ್ರ ಮಾಡಿಕೊಂಡಿದ್ದ ದೇಸಿ ಬಂಡವಾಳಿಗರು ಆತ ಮತ್ತು ಆತನ ಕಲಾಕೃತಿಗಳಿಗೆ ಮಾಡಿದ ದ್ರೋಹಗಳ ಬಗ್ಗೆ ನನಗೆ ಅಂದಾಜೇ ಇರಲಿಲ್ಲ. ರಂಗ್ ರಸಿಯಾ ಸಿನಿಮಾ ರವಿವರ್ಮನ ಅಂತಹ ಮತ್ತೊಂದು ಮಗ್ಗುಲನ್ನು ಮನೋಜ್ಞವಾಗಿ ಪರಿಚಯಿಸಿದ್ದಲ್ಲದೆ ಇವತ್ತು ಇಂಡಿಯಾದಲ್ಲಿ ನಡೆಯುತ್ತಿರೊ ಯಥಾಸ್ಥಿತಿವಾದಿಗಳ ಅತಿರೇಕಗಳನ್ನು ಸಾರಾಸಗಟಾಗಿ ಅರ್ಥ ಮಾಡಿಕೊಳ್ಳಲು ಐತಿಹ್ಯಪೂರ್ಣ ಹಿನ್ನೋಟವನ್ನೂ ಕಟ್ಟಿಕೊಟ್ಟಿತು.
ರವಿವರ್ಮ, ಇಲ್ಲಿಗೆ ಅಜಮಾಸು ನೂರೈವತ್ತು ವರ್ಷಗಳ ಹಿಂದೆ ಬಾಳಿದ ಮನುಷ್ಯ. ಆಗ ಭಾರತ ಬ್ರಿಟಿಷ್ ವಸಾಹತುಷಾಹಿ ಹಿಡಿತದಲ್ಲಿತ್ತು ಎನ್ನುವುದು ಎಷ್ಟು ಸತ್ಯವೋ, ಮೂಢ ಕಂದಾಚಾರಿಗಳ ಕಪಿಮುಷ್ಟಿಯಲ್ಲಿತ್ತು ಎನ್ನುವುದೂ ಅಷ್ಟೇ ಸತ್ಯ. ಆತ ಕೇರಳದ ಪ್ರಾಂತೀಯ ರಾಜ ಮನೆತನವೊಂದರ ಅಳಿಯ. ಆದರೂ ಅಸ್ಪೃಶ್ಯ ಜಾತಿಯ ಕಾಮಿನಿ ಎಂಬ ಸುಂದರಿಯನ್ನು ತನ್ನ ಕಲಾಕೃತಿಗೆ ರೂಪದರ್ಶಿಯಾಗಿಸಿಕೊಳ್ಳುವ ಮೂಲಕ ಕಂದಾಚಾರವನ್ನು ಧಿಕ್ಕರಿಸಿದ. ಅದಕ್ಕಾಗಿ ತನ್ನ ಮೇಲ್ವರ್ಗದ ಸಮುದಾಯದಿಂದ ಮತ್ತು ಸ್ವತಃ ತನ್ನ ಮಡದಿಯಿಂದ ತಿರಸ್ಕøತನಾದರು ಕಲೆ ಮತ್ತು ಕಲಾಸ್ಫೂರ್ತಿಯ ವಿಚಾರದಲ್ಲಿ ತಾನಿಟ್ಟ ಆ ಕ್ರಾಂತಿಕಾರಿ ಹೆಜ್ಜೆಯ ಬಗ್ಗೆ ಯಾವತ್ತೂ ಅಳುಕು ಪಡಲಿಲ್ಲ. ನಂತರ, ಕಲೆಯ ಕತ್ತುಹಿಸುಕುವ ಅಂಥಾ ವಾತಾವರಣದಲ್ಲಿ ಇರಲಾಗದೆ ಮುಂಬೈ ನಗರಿಯತ್ತ ಮುಖ ಮಾಡುತ್ತಾನೆ.
ಅಲ್ಲೂ ಆತ ತನ್ನ ಕಲಾಕೃತಿಗಳಿಗೆ ಸ್ಫೂರ್ತಿಯಾಗಿ ಅಯ್ಕೆ ಮಾಡಿಕೊಳ್ಳುವುದು, ಈ ಸಮಾಜದ ಬಲಿಪಶುವಾಗಿ ಈ ಸಮಾಜದಿಂದಲೇ ನಿಕೃಷ್ಟವಾಗಿ ಕಾಣಲ್ಪಡುವ ಒಬ್ಬ ವೇಶ್ಯೆಯನ್ನು! ಹೆಸರು ಸುಗಂಧ. ಅವಳನ್ನೇ ತನ್ನ ಕಲಾಕೃತಿಗಳ ಪ್ರೇರಣೆಯಾಗಿಸಿಕೊಂಡು ಸರಸ್ವತಿ, ಲಕ್ಷ್ಮಿಯರಂತಹ ಹಿಂದೂ ಧಾರ್ಮಿಕ ಪುರಾಣದ ದೇವತೆಗಳನ್ನಲ್ಲದೆ ಮಹಾಭಾರತ, ರಾಮಾಯಣದ ಸನ್ನಿವೇಶಗಳನ್ನು ಬಣ್ಣಗಳಲ್ಲಿ ಬಂಧಿಯಾಗಿಸುತ್ತಾನೆ. ತನ್ನ ಕೃತಿಗಳು ಅರಮನೆಯಲ್ಲೊ, ಐಷಾರಾಮಿ ಸಂಗ್ರಹಾಲಯಗಳಲ್ಲೊ ತೂಗುಹಾಕಿಸಿಕೊಂಡು ಕೆಲವೇ ಜನರ ಸ್ವತ್ತಾಗಿ ಶ್ರೇಷ್ಠ ಕಲಾಕೃತಿಗಳು ಅನ್ನಿಸಿಕೊಳ್ಳುವುದಕ್ಕಿಂತ ಸಾಮಾನ್ಯ ಜನರ ಕಣ್ಣುಗಳಿಗು ಎಟಕಿ, ಅವರ ಅಭಿವ್ಯಕ್ತಿಗಳಿಗೆ ತೆರೆದುಕೊಳ್ಳುವ ಸಾರ್ಥಕ ಕೃತಿಗಳಾಗಬೇಕೆನ್ನುವುದು ರವಿವರ್ಮನ ಹಂಬಲ. ಇವತ್ತು ಮನೆಮನೆಗಳಲ್ಲಿ ದೇವಾನುದೇವತೆಗಳ ಮೂರ್ತ ಆಕಾರಗಳುಳ್ಳ ಫೋಟೊಗಳು ರಾರಾಜಿಸುತ್ತಿವೆ. ಆದರೆ ಹಿಂದೂ ಪುರಾಣಗಳಲ್ಲಿ ಕೇವಲ ವರ್ಣನೆಯಾಗಿದ್ದ, ದೇವಾಲಯಗಳ ಮೂರ್ತಿ ಕೆತ್ತನೆಯ ಹೊರತು ಸಾಮಾನ್ಯ ಜನರ ಕಲ್ಪನೆಯಿಂದ ದೇವರ ರೂಪವನ್ನೆ ಕಿತ್ತುಕೊಂಡಿದ್ದ ಆ ಕಾಲಘಟ್ಟದಲ್ಲಿ ಜನರ ಕಲ್ಪನಾ ವಲಯದೊಳಕ್ಕೆ ‘ಮನುಷ್ಯರೂಪಿ’ ದೇವರನ್ನು ರವಿವರ್ಮ ತರಲು ಮುಂದಾದದ್ದು ದೊಡ್ಡ ಕ್ರಾಂತಿಯೇ ಆಗಿತ್ತು. ತನ್ನ ಕಲಾಕೃತಿಗಳ ಮೂಲಕ ಸಾಮಾನ್ಯ ಜನ ಮತ್ತು ದೇವರ ನಡುವಿನ ಅಂತರವನ್ನು ಕಿರಿದುಗೊಳಿಸಿದ ಅವನ ಕ್ರಮ, ಅಷ್ಟೂದಿನ ಮಧ್ಯವರ್ತಿಗಳ ಸೋಗು ಹಾಕಿಕೊಂಡು ಸುಲಿಗೆ ಮಾಡುತ್ತಿದ್ದ ಕಂದಾಚಾರಿಗಳ ಕಣ್ಣು ಕೆಂಪಗಾಗುವಂತೆ ಮಾಡಿತ್ತು. ಹಾಗಾಗಿ ದೇವರನ್ನು ಮನುಷ್ಯ ರೂಪಿನಲ್ಲಿ ಚಿತ್ರಿಸಿದ್ದು ಧರ್ಮನಿಂದನೆ, ಅದರಲ್ಲೂ ಒಬ್ಬ ವೇಶ್ಯೆಯ ರೂಪನ್ನು ಹಿಂದೂ ದೇವತೆಗಳಿಗೆ ಲೇಪಿಸಿದ್ದು ಧರ್ಮದ್ರೋಹ, ಪುರಾಣ ಪಾತ್ರಗಳನ್ನು ಅಶ್ಲೀಲವಾಗಿ ಚಿತ್ರಿಸಿ ಜನರ ಭಾವನೆಗಳನ್ನು ಘಾಸಿಗೊಳಿಸಿದ್ದಾನೆ ಅಂತೆಲ್ಲ ರವಿವರ್ಮನ ಮೇಲೆ ಕೇಸು ದಾಖಲಿಸಿ ನ್ಯಾಯಾಲಯದ ಕಟಕಟೆಗು ತಂದು ನಿಲ್ಲಿಸುತ್ತಾರೆ.
ಕೋರ್ಟ್ ಆವರಣದಲ್ಲೆ ಅವನ ಮೇಲೆ ಹಲ್ಲೆ ಮಾಡುತ್ತಾರೆ, ಅವನ ಪ್ರಿಂಟಿಂಗ್ ಪ್ರೆಸ್ ಗೆ ಬೆಂಕಿಯಿಟ್ಟು ಧ್ವಂಸ ಮಾಡುತ್ತಾರೆ, ಆತ ಮನೆಯಿಂದ ಹೊರಬರುವುದಕ್ಕು ಆಗದಂತೆ ಅವನ ವಿರುದ್ಧ ಪ್ರತಿಭಟನೆಗಳನ್ನು ಹೆಣೆಯುತ್ತಾರೆ. ನಗ್ನತೆ ಎಂದರೆ ಕೇವಲ ಅಶ್ಲೀಲತೆ ಮಾತ್ರವಲ್ಲ, ಅದರಲ್ಲಿ ಸೌಂದರ್ಯದ ರಸಿಕತೆಯೂ ಇರುತ್ತೆ. ಪ್ರಪಂಚಕ್ಕೆ ಕಾಮಶಾಸ್ತ್ರದ ಕೊಡುಗೆ ಕೊಟ್ಟ ನೆಲದ ದೇವಾಲಯಗಳು ತಮ್ಮ ಮೈಮೇಲೆ ‘ಮೈಥುನ’ದ ಕಲಾವಂತಿಕೆಯನ್ನು ಹೊತ್ತುಕೊಂಡರು ಪವಿತ್ರ ಎನಿಸಿಕೊಂಡಿವೆಯೇ ಹೊರತು ಮೈಲಿಗೆಯೆನಿಸಿಲ್ಲ. ಸ್ತ್ರೀಯನ್ನು ತಮ್ಮ ಕಾಮತೃಷೆಯ ವಸ್ತುವಾಗಿಸಿಕೊಂಡವರಿಗೆ ಅವಳ ಸೌಂದರ್ಯ ಅಶ್ಲೀಲತೆಯಾಗಿ ಕಾಣಿಸುತ್ತದೆಯೇ ವಿನಾಃ ಸೌಂದರ್ಯೋಪಾಸಕರಿಗಲ್ಲ. ಇನ್ನು ಶತಶತಮಾನಗಳಿಂದ ಶೂದ್ರ ಸಮುದಾಯಗಳನ್ನು ದೇವಾಲಯಗಳಿಂದ ಹೊರಗಿಟ್ಟು ಅವರ ಮನಸ್ಸಿನಲ್ಲಿ ದೇವರ ಆಕಾರಕ್ಕೆ ಆಸ್ಪದವನ್ನೇ ಕೊಡದ ಸಮಾಜದ ಅಸಮಾನತೆಯನ್ನು ಧಿಕ್ಕರಿಸಿ ದೇವರನ್ನೆ ಅಂತವರ ಬಳಿಹೊಯ್ದ ರವಿವರ್ಮ ಧರ್ಮದ್ರೋಹಿ ಆಗುವುದಕ್ಕೆ ಸಾಧ್ಯವೇ ಇಲ್ಲ. ಹರಿಜನರಿಗೆ ದೇವಾಲಯ ಪ್ರವೇಶವನ್ನು ಮೇಲ್ವರ್ಗಗಳು ನಿರಾಕರಿಸಿದ್ದನ್ನು ಪ್ರತಿಭಟಿಸಿ ಅಂತಹ ದೇವಾಲಯಗಳಿಗೆ ಪ್ರತಿಯಾಗಿ ಹರಿಜನ ದೇವಾಲಯಗಳನ್ನು ನಿರ್ಮಿಸುವ ಮೂಲಕ ದೇವರನ್ನೆ ತಳಸಮುದಾಯದವರ ಬಳಿ ಕರೆತಂದ ನಾರಾಯಣ ಗುರುಗಳ ಧಾರ್ಮಿಕ ರೂಪದ ಸಾಮಾಜಿಕ ಚಳವಳಿ ರವಿವರ್ಮನ ಈ ಹೆಜ್ಜೆಯೊಂದಿಗೆ ಸಾಮ್ಯತೆ ಹೊಂದುತ್ತದೆ. ಇಂತಹ ತರ್ಕಗಳೆಲ್ಲ ವಾದ ಪ್ರತಿವಾದಿಸಲ್ಪಟ್ಟ ನಂತರ ನ್ಯಾಯಾಲಯ ಕೂಡ ಆತನನ್ನು ಆರೋಪಮುಕ್ತ ಗೊಳಿಸುತ್ತದೆ. ಅಷ್ಟರಲ್ಲಾಗಲೆ ರವಿವರ್ಮನೊಳಗಿನ ಕಲಾವಿದ ಈ ಜಂಜಡಗಳಿಂದ ಜರ್ಝರಿತನಾಗಿರುತ್ತಾನೆ. ಇವತ್ತು ಅವನನ್ನು ಕೊಂಡಾಡುವ ಇದೇ ಸಮಾಜ ಅವತ್ತು ಅವನ ಕಲಾಪ್ರೌಢಿಮೆಯನ್ನು ಅರ್ಥ ಮಾಡಿಕೊಂಡಿದ್ದರೆ ಅವನ ಕುಂಚ ಇನ್ನೂ ಎಂತೆಂಥ ಕಲಾಕುಸುಮಗಳನ್ನು ಅರಳಿಸುತ್ತಿತ್ತೊ. ಈ ಸಮಾಜ ಅದೇ ತಪ್ಪನ್ನು ಇವತ್ತಿಗೂ ಪುನರಾವರ್ತಿಸುತ್ತಿದೆ. ಆದರೆ ರವಿವರ್ಮನ ಜಾಗದಲ್ಲಿ ಎಂ.ಎಫ್. ಹುಸೇನೊ, ಅಮೀರ್ ಖಾನೊ, ಶಿಲುಬೆಗೇರುತ್ತಿದ್ದಾರಷ್ಟೆ!
ರಂಜಿತ್ ದೇಸಾಯಿಯವರ ರಾಜಾ ರವಿವರ್ಮ ಕೃತಿಯನ್ನಾಧರಿಸಿದ ಈ ಸಿನಿಮಾವನ್ನು ನಿರ್ದೇಶಕ ಕೇತನ್ ಮೆಹ್ತಾ ರವಿವರ್ಮನ ಕಲಾಕೃತಿಗಳಷ್ಟೆ ನವಿರಾಗಿ ಕಟ್ಟಿಕೊಡಲು ಯತ್ನಿಸಿದ್ದಾರೆ. ರವಿವರ್ಮನ ಪಾತ್ರದಲ್ಲಿ ರಣದೀಪ್ ಹೂಡಾ ಗಮನ ಸೆಳೆಯುವುದು ನಿಜವಾದರು ಇಡೀ ಸಿನಿಮಾವನ್ನು ಆವರಿಸುವುದು ಸುಗಂಧಾ ಪಾತ್ರದ ಒಳಹೊಕ್ಕ ನಂದನಾ ಸೇನ್. ವೇಶ್ಯೆಯ ಪಾತ್ರದಲ್ಲಿ ರವಿವರ್ಮನ ಕಲಾರಸಿಕತೆಗೆ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡು, ಆತನ ಊರ್ವಶಿ-ಪುರೂರವ ಪ್ರೇಮಕಾವ್ಯದ ಕಲ್ಪನೆಗೆ ರೂಪವಾಗಲು ತನ್ನ ಸ್ತ್ರೀ ಸೌಂದರ್ಯವನ್ನು ಕ್ಯಾಮೆರಾ ಮುಂದೆ ತೆರೆದಿಟ್ಟು ನಗ್ನಳಾಗುವ ಆಕೆಯ ವೃತ್ತಿಪರತೆ ಸಿನಿಮಾದ ಅದ್ಭುತ ಕ್ಷಣಗಳಲ್ಲಿ ಒಂದು. ಮೂಲ ರವಿವರ್ಮನ ಕಲಾಕೃತಿಗಳಲ್ಲಿ ಕಾಣಸಿಗುವಂತೆ ಈ ದೃಶ್ಯದಲ್ಲು ಅಶ್ಲೀಲತೆಯನ್ನು ಹಿಮ್ಮೆಟ್ಟಿಸಿ ಸೌಂದರ್ಯ ರಸಿಕತೆಯೆ ನೋಡಗರ ಮನಸ್ಸನ್ನು ಆವರಿಸುವಂತೆ ಮಾಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.
ವಿಚಾರಣೆಯ ವೇಳೆ ವಕೀಲರು ಪ್ರಶ್ನೆಗಳ ಮೂಲಕ ಸುಗಂಧಿಗೆ ಮುಜುಗರ ತಂದಿತ್ತಾಗ ಆಕೆ ನೊಂದು ನುಡಿಯುವ “ನನ್ನಂತ ನತದೃಷ್ಟೆಯನ್ನು ಆ ವ್ಯಕ್ತಿ ದೇವತೆಯಾಗಿಸಿದ. ಆದರೆ ನಿಮ್ಮ ಸಮಾಜ ಏನು ಮಾಡಿತು? ನನ್ನನ್ನು ವೇಶ್ಯೆಯಾಗಿಸಿ ಖುಷಿಪಟ್ಟಿತು!” ಮಾತು ಸಿನಿಮಾದ ವೈಚಾರಿಕ ಸೌಂದರ್ಯವನ್ನು ಕಟ್ಟಿಕೊಡುತ್ತದೆ. ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುವ ಸುಗಂಧಿ ಈ ಸಮಾಜದ ಸ್ತ್ರೀ ಬಲಿಪಶು ಪರಂಪರೆಯ ರೂಪಕವಾಗಿ ಕಾಡುತ್ತಾಳೆ. ಆಕೆಯ ಸಾವಿನ ನಂತರವು ಸಿನಿಮಾ ಕೊಂಚಹೊತ್ತು ಸರಿದಾಡುತ್ತದಾದರು ಗಂಭೀರ ನೋಡುಗರಿಗೆ ಸುಗಂಧಿಯ ಪಾತ್ರ ನಿರ್ಗಮನವೇ ಸಿನಿಮಾದ ದಿ ಎಂಡ್‍ನಂತೆ ಕಾಡುತ್ತದೆ. ಸುಗಂಧಿ ಯಾವ ಪರಿ ಪ್ರೇಕ್ಷಕನನ್ನು ಆವರಿಸುತ್ತಾಳೆಂದರೆ ಒಂದು ಹಂತದಲ್ಲಿ ಸಿನಿಮಾದ ಹೀರೊ ರವಿವರ್ಮನೆ ಆಕೆಯ ಪಾಲಿನ ಖಳನಾಯಕನಂತೆ ಭಾಸವಾಗಿಬಿಡುತ್ತಾನೆ. ನನಗಂತೂ ಹಾಗನ್ನಿಸಿತು. ಬಹುಶ ಸಿನಿಮಾ ನೋಡಿದರೆ ಅಥವಾ ಈಗಾಗಲೇ ನೋಡಿದ್ದರೆ ನಿಮಗೂ ಹಾಗೇ ಅನ್ನಿಸಬಹುದು. ಸಮಯ ಸಿಕ್ಕಾಗ ಒಮ್ಮೆ ಆ ಸಿನಿಮಾ ನೋಡಿ.

– ಗಿರೀಶ್ ತಾಳಿಕಟ್ಟೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...