ಜಮ್ಮು ಕಾಶ್ಮೀರದಲ್ಲಿ ಬಂಧನಕ್ಕೊಳಗಾಗಿರುವ ರೋಹಿಂಗ್ಯಾ ಸಂತ್ರಸ್ಥರನ್ನು ಕೂಡಲೇ ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಗೆ ನೀಡಿದ್ದು, ಕೇಂದ್ರವು ಅವರನ್ನು ಮತ್ತೆ ಮ್ಯಾನ್ಮಾರ್ಗೆ ಗಡೀಪಾರು ಮಾಡುವುದನ್ನು ತಡೆಯಲು ನಿರ್ದೇಶನ ನೀಡಿತು. ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಾರ್ಚ್ 25 ರಂದು ವಿಚಾರಣೆ ನಡೆಸಲಿದೆ.
ರೋಹಿಂಗ್ಯಾ ನಿರಾಶ್ರಿತರಾದ ಮೊಹಮ್ಮದ್ ಸಲೀಮುಲ್ಲಾ ಅವರು ವಕೀಲ ಪ್ರಶಾಂತ್ ಭೂಷಣ್ ಅವರ ಮೂಲಕ ಸಲ್ಲಿಸಿದ ಮನವಿಯಲ್ಲಿ, “ಈ ನಿರಾಶ್ರಿತರನ್ನು ಜಮ್ಮು ಉಪ ಜೈಲಿನಲ್ಲಿ ಅಕ್ರಮವಾಗಿ ಬಂಧಿಸಲಾಗಿದೆ. ಉಪಜೈಲನ್ನು ನಿಯಂತ್ರಣ ಕೇಂದ್ರವಾಗಿ ಮಾರ್ಪಾಡು ಮಾಡಿರುವ ಐಜಿಪಿ( ಜಮ್ಮು) ಮುಖೇಶ್ ಸಿಂಗ್, ತಮ್ಮ ರಾಯಭಾರ ಕಚೇರಿಯ ಪರಿಶೀಲನೆಯ ನಂತರ ನಿರಾಶ್ರಿತರನ್ನು ಮ್ಯಾನ್ಮಾರ್ಗೆ ಗಡೀಪಾರು ಮಾಡಲಾಗುತ್ತದೆ ಎಂದು ಹೇಳಿದ್ದಾರೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕಾಶ್ಮೀರದಲ್ಲಿ ಹಿಂಸೆ: ರಾಹುಲ್ ಗಾಂಧಿ ಮತ್ತು ರಾಜ್ಯಪಾಲ ಸತ್ಯ ಪಾಲ್ ಮಲಿಕ್ ನಡುವೆ ಜಟಾಪಟಿ
ಜಮ್ಮು ಐಜಿಪಿಯವರ ಹೇಳಿಕೆಯನ್ನು ಉಲ್ಲೇಖಿಸಿ, “ಇದು ನಿರಾಶ್ರಿತರ ರಕ್ಷಣೆಗೆ ಸಂಬಂಧಿಸಿದಂತೆ ಭಾರತದ ಬದ್ಧತೆಗೆ ವಿರುದ್ದವಾಗಿದೆ. ನಿರಾಶ್ರಿತರನ್ನು ಕಿರುಕುಳ ಎದುರಿಸುತ್ತಿರುವ ಸ್ಥಳಕ್ಕೆ ಮತ್ತೆ ಕಳುಹಿಸುತ್ತಿರುವುದು ಸಂವಿಧಾನ ವಿಧಿ 21 ಕ್ಕೆ ವಿರುದ್ದವಾಗಿದೆ. ಎಲ್ಲಾ ರೋಹಿಂಗ್ಯಾ ವ್ಯಕ್ತಿಗಳು ಈ ವಿಧಿಯಂತೆ ಭಾರತದಲ್ಲಿ ವಾಸಿಸುತ್ತಿದ್ದಾರೆ” ಎಂದು ಅವರು ವಾದಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಜಮ್ಮುಕಾಶ್ಮೀರ ಆಡಳಿತವು ಕಥುವಾದ ಹಿರಾನಗರ ಉಪ ಕಾರಾಗೃಹದಲ್ಲಿ ವಿದೇಶಿಯರ ಕಾಯ್ದೆಯಡಿ “ನಿಯಂತ್ರಣ ಕೇಂದ್ರಗಳನ್ನು” ಸ್ಥಾಪಿಸಿದ್ದು, ಜಮ್ಮುವಿನಿಂದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 168 ರೋಹಿಂಗ್ಯಾ ನಿರಾಶ್ರಿತರನ್ನು ಬಂಧಿಸಿ ಅಲ್ಲಿ ಇರಿಸಿದೆ.
ಇದನ್ನೂ ಓದಿ: ಪ.ಬಂಗಾಳದ 15 ಕಡೆ ಕಚ್ಚಾ ಬಾಂಬ್ ಸ್ಫೋಟ, ಮಗು ಸೇರಿ ಮೂವರ ಸ್ಥಿತಿ ಗಂಭೀರ