ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (PFI) ಸಾರ್ವಜನಿಕ ಸಂಪರ್ಕ ನಿರ್ದೇಶಕ ಎಂ ಶಮೂನ್ ರಿಪಬ್ಲಿಕ್ ಟಿವಿ ವಿರುದ್ಧ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿಗೆ ದೆಹಲಿ ನ್ಯಾಯಾಲಯ ನೋಟಿಸ್ ನೀಡಿದೆ.
ರಿಪಬ್ಲಿಕ್ ಟಿವಿ ಸುದ್ದಿ ವಾಹಿನಿ ಪ್ರಸಾರ ಮಾಡಿದ್ದ ‘ಕುಟುಕು ಕಾರ್ಯಾಚರಣೆ’ಯ ವೀಡಿಯೋ ವಿರುದ್ಧ ಶಮೂನ್ ಅವರು ದಾಖಲಿಸಿದ್ದ ಮಾನಹಾನಿ ಮೊಕದ್ದಮೆಯನ್ನು ಗಣನೆಗೆ ತೆಗೆದುಕೊಂಡಿರುವ ದೆಹಲಿಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ, ಚಾನೆಲ್ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿ ಹಾಗೂ ಇತರ ಪ್ರತಿವಾದಿಗಳಿಗೆ ಮೇ 27ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದೆ.
ಶಮೂನ್ ಅವರು ಹಿಂಸಾತ್ಮಕ ಪ್ರತಿಭಟನೆಗಳನ್ನು ಹಾಗೂ ಸರ್ಕಾರದ ವಿರುದ್ಧ ಕ್ರಿಮಿನಲ್ ಒತ್ತಡ ಹೇರಲು ಪ್ರೋತ್ಸಾಹಿಸಿದ್ದಾರೆಂದು ತಿರುಚಿದ ವೀಡಿಯೋವನ್ನು ರಿಪಬ್ಲಿಕ್ ವಾಹಿನಿ ಪ್ರಸಾರ ಮಾಡಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ: ಪ.ಬಂಗಾಳದ 15 ಕಡೆ ಕಚ್ಚಾ ಬಾಂಬ್ ಸ್ಫೋಟ, ಮಗು ಸೇರಿ ಮೂವರ ಸ್ಥಿತಿ ಗಂಭೀರ
“ನಾನು ಯಾವತ್ತೂ ಹಿಂಸಾತ್ಮಕ ಪ್ರತಿಭಟನೆಯನ್ನು ಪ್ರೋತ್ಸಾಹಿಸಿಲ್ಲ. ತಮ್ಮನ್ನು ಭೇಟಿಯಾಗಿದ್ದ ರಿಸರ್ಚ್ ಸ್ಕಾಲರ್ ಒಬ್ಬರು ಶಾಹೀನ್ ಭಾಗ್ನಲ್ಲಿನ ಸಿಎಎ ವಿರೋಧಿ ಪ್ರತಿಭಟನೆಗಳ ಕುರಿತು ಮಾತನಾಡುತ್ತಾ ಹಿಂಸಾತ್ಮಕ ಪ್ರತಿಭಟನೆಗಳ ಅಗತ್ಯದ ಬಗ್ಗೆ ಹೇಳಿಕೊಂಡಿದ್ದರೂ ತಾವು ಆತನಿಗೆ ತಿಳಿ ಹೇಳಿ ಪ್ರಜಾಸತ್ತಾತ್ಮಕ ರೀತಿಯ ಪ್ರತಿಭಟನೆಗಳ ಬಗ್ಗೆ ಯೋಚಿಸಬೇಕೆಂದು ಹೇಳಿದ್ದೆ” ಎಂದು ಶಮೂನ್ ತಮ್ಮ ಅಪೀಲಿನಲ್ಲಿ ಹೇಳಿದ್ದಾರೆ.
ಆದರೆ ಈ ಸಂವಾದವನ್ನು ರಿಪಬ್ಲಿಕ್ ಟಿವಿ ಕಟ್ ಅಂಡ್ ಪೇಸ್ಟ್ ಮಾಡಿ ಇದನ್ನೊಂದು ‘ಕುಟುಕು ಕಾರ್ಯಾಚರಣೆ’ ಎಂದು ಪ್ರಸಾರ ಮಾಡಿತ್ತು. ಇದರಿಂದ ತಮಗೆ ವೈಯಕ್ತಿಕವಾಗಿ ಬಹಳಷ್ಟು ನಷ್ಟವಾಗಿದೆ ಎಂದು ಅವರು ತಮ್ಮ ಅಪೀಲಿನಲ್ಲಿ ಹೇಳಿದ್ದಾರೆ.
ಹಾಗಾಗಿ ಈ ವೀಡಿಯೋವನ್ನು ತಮ್ಮ ಚಾನೆಲ್ನಿಂದ ಮತ್ತು ತಮ್ಮ ಸಾಮಾಜಿಕ ಮಾಧ್ಯಮಗಳ ವೇದಿಕೆಯಿಂದ ತೆಗೆದುಹಾಕುವಂತೆ ಕೋರಿದ್ದಾರೆ. ಜೊತೆಗೆ 1 ರೂ. ಪರಿಹಾರ ಕೋರಿದ್ದಾರೆ ಎಂದು ಲೈವ್ ಲಾ ವರದಿ ಮಾಡಿದೆ.
ಇದನ್ನೂ ಓದಿ: ’ಮಸೀದಿ ಅಜಾನ್ನಿಂದ ನಿದ್ರಾಭಂಗ, ತಲೆನೋವು’: ಅಲಹಾಬಾದ್ ವಿವಿ ಉಪಕುಲಪತಿ ದೂರು!