“ಧಾರ್ಮಿಕ ವಿಭಜನೆಯು ಭಾರತದ ಐಟಿಬಿಟಿ ನಾಯಕತ್ವವನ್ನು ನಾಶಪಡಿಸುತ್ತದೆ” ಎಂದು ಖ್ಯಾತ ಉದ್ಯಮಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಬಯೋಕಾನ್ ಲಿಮಿಟೆಡ್ನ ಕಾರ್ಯನಿರ್ವಾಹಕ ಅಧ್ಯಕ್ಷರಾದ ಕಿರಣ್ ಮಜುಂದಾರ್ ಶಾ ಎಚ್ಚರಿಸಿದ್ದಾರೆ.
ಕರ್ನಾಟಕದಲ್ಲಿ ಆಗುತ್ತಿರುವ ಬೆಳವಣಿಗೆಗಳಿಗೆ ಆತಂಕ ವ್ಯಕ್ತಪಡಿಸಿರುವ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಕಿವಿಮಾತು ಹೇಳಿದ್ದಾರೆ.
ಹಿಂದೂ ದೇವಾಲಯದ ಆವರಣ ಹಾಗೂ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರಿರುವ ಕುರಿತು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ಮಾಡಿರುವ ವರದಿಯನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಅವರು, ಕರ್ನಾಟಕ ಸರ್ಕಾರವನ್ನು ಎಚ್ಚರಿಸಿದ್ದಾರೆ.
“ಕರ್ನಾಟಕ ರಾಜ್ಯವು ಯಾವಾಗಲೂ ಎಲ್ಲರನ್ನೂ ಒಳಗೊಳ್ಳುವ ಆರ್ಥಿಕ ಅಭಿವೃದ್ಧಿಯನ್ನು ರೂಪಿಸುತ್ತದೆ. ಕೋಮುವಾದ ಪ್ರೇರಿತ ಹೊರಗಿಡುವಿಕೆಗೆ ಅವಕಾಶ ನೀಡಬಾರದು. ಐಟಿಬಿಟಿ ಕ್ಷೇತ್ರವೇನಾದರೂ ಕೋಮುವಾದೀಕರಣಗೊಂಡರೆ ಅದು ನಮ್ಮ ಜಾಗತಿಕ ನಾಯಕತ್ವವನ್ನು ನಾಶಪಡಿಸುತ್ತದೆ” ಎಂದು ಕಿರಣ್ ಮಜುಂದಾರ್ ಹೇಳಿದ್ದಾರೆ.
ಟ್ವೀಟ್ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಟ್ಯಾಗ್ ಮಾಡಿರುವ ಅವರು, “ದಯವಿಟ್ಟು ಈ ಬೆಳೆಯುತ್ತಿರುವ ಧಾರ್ಮಿಕ ವಿಭಜನೆಯನ್ನು ಪರಿಹರಿಸಿ” ಎಂದು ಒತ್ತಾಯಿಸಿದ್ದಾರೆ.
Karnataka has always forged inclusive economic development and we must not allow such communal exclusion- If ITBT became communal it would destroy our global leadership. @BSBommai please resolve this growing religious divide🙏 https://t.co/0PINcbUtwG
— Kiran Mazumdar-Shaw (@kiranshaw) March 30, 2022
ಮುಸ್ಲಿಂ ಸಮುದಾಯದ ವ್ಯಾಪಾರವನ್ನು ಬಹಿಷ್ಕರಿಸುವಂತೆ ದ್ವೇಷ ಹರಡುತ್ತಿರುವುದು ಹೆಚ್ಚಾಗುತ್ತಿದ್ದು, ಎಲ್ಲ ಜಾತಿಗಳ ವರ್ತಕ ಸಮುದಾಯ ಕಟುವಾಗಿ ಟೀಕಿಸುತ್ತಿದೆ. ಹಲಾಲ್ ಹೆಸರಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಹರಡಿಸುತ್ತಿರುವುದಕ್ಕೂ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಮೈಸೂರು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಂಘದ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್, “ಉದ್ಯಮ ಕ್ಷೇತ್ರಕ್ಕೆ ಧರ್ಮವನ್ನು ಯಾವುದೇ ಕಾರಣಕ್ಕೂ ತರಬಾರದು. ಯಾವುದೇ ಧರ್ಮ, ಯಾವುದೇ ಜಾತಿಯಾಗಿದ್ದರೂ ಉದ್ಯಮ ಮಾಡಲು ಈ ಸಂವಿಧಾನದಲ್ಲಿ ಹಕ್ಕಿದೆ. ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕ ನಡೆಯುತ್ತದೆ. ಅಲ್ಲಿ ಜೈನರೊಬ್ಬರೇ ವ್ಯಾಪಾರ ಮಾಡಬೇಕು, ಬೇರೆಯವರು ಬರಬಾರದು ಎನ್ನಲು ಸಾಧ್ಯವೇ?” ಎಂದು ಪ್ರಶ್ನಿಸಿದರು.
ಇದನ್ನೂ ಓದಿರಿ: ಫ್ಯಾಕ್ಟ್ಚೆಕ್: ಹಲಾಲ್ ಮಾಂಸ ವಿಷಕಾರಿಯೆ? ಬಜರಂಗದಳದ ಈ ಪೋಸ್ಟರ್ನಲ್ಲಿರುವ ಸುಳ್ಳುಗಳೇನು?
“ನಾವು ಹಿಂದೂಗಳಲ್ಲ, ಜೈನರು. ಹಿಂದೂ, ಮುಸ್ಲಿಂ, ಸಿಖ್, ಜೈನ್- ಇಲ್ಲರೂ ವಿಭಿನ್ನ ಜನಾಂಗಗಳು. ನಮಗೆ ನಾವೇ ಸೀಮಿತ ಮಾಡಿಕೊಳ್ಳಲು ಆಗುವುದಿಲ್ಲ. ಎಲ್ಲರೂ ಸಹಬಾಳ್ವೆ ಮಾಡಬೇಕು. ನನ್ನ ಕೌಶಲವನ್ನು ನಾನು ತೋರಿಸಬೇಕು. ಅವರ ಕೌಶಲವನ್ನು ಅವರು ತೋರಿಸಬೇಕು. ಒಬ್ಬರಿಗೊಬ್ಬರು ಕೌಶಲವನ್ನು ವಿನಿಮಯ ಮಾಡಿಕೊಳ್ಳಬೇಕು. ಹೀಗಾಗಿ ಇಂದು ಆಗುತ್ತಿರುವ ಬೆಳವಣಿಗೆಗಳನ್ನು ನಾನು ವಿರೋಧಿಸುತ್ತೇನೆ” ಎಂದು ತಿಳಿಸಿದರು.
ಹಲಾಲ್ ಸಂಬಂಧ ಎದ್ದಿರುವ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ ಅವರು, “ಹಲಾಲ್ ಈ ಕಾಲದಲ್ಲ. ಪ್ರಾಚೀನ ಕಾಲದಿಂದಲೂ ಮುಸ್ಲಿಮರು ಹಲಾಲ್ ಮಾಡುತ್ತಿದ್ದಾರೆ. ಈಗ ಹಿಂದೂ ಮುಸ್ಲಿಂ ಗಲಾಟೆ ಶುರುವಾಗಿದೆ, ಹಿಜಾಬ್ ವಿವಾದವಾಗಿದೆ ಎಂಬ ಕಾರಣಕ್ಕೆ ಹಲಾಲ್ ಬ್ರಾಂಡ್ ಸೃಷ್ಟಿಯಾಗಿಲ್ಲ. ಮುಸ್ಲಿಮರು ಹಲಾಲ್ ಮಾಡಿದ ಆಹಾರವನ್ನು ತಿನ್ನಬೇಕೆಂಬ ಪದ್ಧತಿ ಇದೆ. ಇತರ ಸಮುದಾಯಗಳಲ್ಲಿ ಹಲಾಲ್ ಮಾಡಿದನ್ನೇ ತಿನ್ನಬೇಕೆಂಬ ಸಂಪ್ರದಾಯ ಇಲ್ಲ. ಹಿಂದೂಗಳ ವ್ಯಾಪಾರ ಹಾಳು ಮಾಡಲೆಂದು ಹಲಾಲ್ ಮಾಡಿದ್ದಲ್ಲ. ಅದು ಅವರ ಧಾರ್ಮಿಕರ ಆಚರಣೆ. ಹಲಾಲ್ ವಿಚಾರವನ್ನು ಮುನ್ನೆಲೆಗೆ ತಂದು ವ್ಯಾಪಾರಕ್ಕೆ ವಿರೋಧಿಸುತ್ತಿರುವುದು ತೀವ್ರ ವಿಷಾದನೀಯ” ಎಂದರು.
“ಹಿಂದೂ ಮುಸ್ಲಿಂ ಗಲಾಟೆಗಳು ಕಾಂಗ್ರೆಸ್ ಸರ್ಕಾರ ಇದ್ದಾಗಲೂ ನಡೆಯುತ್ತಿದ್ದವು. ಆದರೆ ಈ ಪ್ರಕಾರವಾದ ಪ್ರಚೋದನೆಗಳು ಆಗುತ್ತಿರಲಿಲ್ಲ. ಶಾಂತಿ ಸಭೆಗಳನ್ನು ನಡೆಸಿ ಇತ್ಯರ್ಥ ಮಾಡಲಾಗುತ್ತಿತ್ತು. ವೈಯಕ್ತಿಕ ಭಿನ್ನಾಭಿಪ್ರಾಯಗಳ ಕಾರಣಕ್ಕೋ, ಮತ್ಯಾವುದಕ್ಕೋ ಆಗ ಗಲಾಟೆಗಳು ಆಗುತ್ತಿದ್ದವೇ ಹೊರತು ಈ ಮಾದರಿಯಲ್ಲಿ ನಡೆಯುತ್ತಿರಲಿಲ್ಲ. ಆದರೆ ಇಂದು ನೇರವಾಗಿಯೇ ಎರಡು ಸಮುದಾಯಗಳ ನಡುವೆ ಗೋಡೆ ಕಟ್ಟಲಾಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ನಾನು ಜೈನನಾಗಿ ಹೇಳುತ್ತೇನೆ. ಈ ಹಿಂದೆ ಯಾವ ಯಾವ ಸಮುದಾಯಗಳು ಪ್ರಾಬಲ್ಯವನ್ನು ಹೊಂದಿದ್ದವೋ ಅವರು ನಮ್ಮ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ನಾವು ಮತಾಂತರ ಆಗಲಿಲ್ಲವೆಂದು ಸುಮಾರು ಎಂಟು ಸಾವಿರ ಜೈನರನ್ನು ಮಧುರೈನಲ್ಲಿ ಕೊಂದಿರುವ ಕುರಿತು ಸಾಕ್ಷ್ಯಾಧಾರಗಳಿವೆ. ಅನೇಕ ಜೈನ ದೇವಾಲಯಗಳು ವೈಷ್ಣವ, ವೀರಶೈವ ದೇವಾಲಯಗಳಾಗಿ ಬದಲಾಗಿವೆ. ರಾಜಪ್ರಭುತ್ವ ಇದ್ದ ಕಾಲದಲ್ಲಿ ಒಂದು ಜನಾಂಗದ ಮೇಲೆ ಮತ್ತೊಂದು ಜನಾಂಗ ಒತ್ತಡ ಹೇರುವುದು ಸಾಮಾನ್ಯವಾಗಿತ್ತು. ಆದರೆ ಪ್ರಜಾಪ್ರಭುತ್ವದ ಕಾಲದಲ್ಲಿ ಆ ರೀತಿಯ ಒತ್ತಡ, ಹೇರಿಕೆ ಸಾಧ್ಯವಿಲ್ಲ” ಎಂದು ಎಚ್ಚರಿಸಿದರು.
“ಜೈನ ವಿಗ್ರಹಗಳಿಗೆ ವಿಭೂತಿ ಬಳಿದಿರುವುದನ್ನು ನೋಡಿದ್ದೇವೆ. ಮೈಮೇಲೆ ಉಡುದಾರ, ಬಟ್ಟೆಯೇ ಇರಬಾರದು ಎಂದು ಜೈನ ಮುನಿಗಳು ಹೇಳಿರಬೇಕಾದರೆ ನಮಗೆ ಜನಿವಾರ ಹೇಗೆ ಬೇಕಾಗಿತ್ತು? ಒಂದು ಕಾಲಘಟ್ಟದಲ್ಲಿ ಜನಿವಾರ ಹಾಕಲು ಶುರುಮಾಡಿದರು. ಆನಂತರ ಮುಂದುವರಿತು. ಲಿಂಗಾಯತರು ಹೆಚ್ಚಿರುವ ಊರಲ್ಲಿ ಬಸವ ಜಯಂತಿಯನ್ನು ಜೈನರೂ ಸೇರಿಕೊಂಡೇ ಮಾಡಿರುತ್ತೇವೆ. ಅಂದರೆ ಆಯಾ ಪರಿಸರಕ್ಕೆ ಹೊಂದಿಕೊಂಡು ಸಮಾಜ ಮುಂದುವರಿಯುತ್ತಿದೆ. ಸಹಬಾಳ್ವೆ ಮುಖ್ಯ. ವೈಯಕ್ತಿಕವಾಗಿ ಹೇಳುವುದಾದರೆ ನನ್ನ ಫ್ಯಾಕ್ಟರಿಯಲ್ಲಿ ಸಾಬರೊಂದಿಗೆ ಮೊದಲು ವ್ಯಾಪಾರ ಮಾಡಿದ ಬಳಿಕವೇ ಬೇರೆಯವರೊಂದಿಗೆ ವ್ಯವಹರಿಸುತ್ತೇನೆ. ಇದನ್ನು ನಾನು ರೂಢಿ ಮಾಡಿಕೊಂಡು ಬಂದಿದ್ದೇನೆ. ಅದನ್ನು ಕಿತ್ತುಕೊಳ್ಳುವ ಹಕ್ಕುವ ಯಾರಿಗೂ ಇಲ್ಲ. ಈ ಉದ್ಯಮ ರಾಜಕಾರಣಕ್ಕೆ ಜಾತಿ ರಾಜಕಾರಣ ತರುತ್ತಿರುವುದು ನೋವುಂಟು ಮಾಡಿದೆ” ಎಂದು ವಿಷಾದಿಸಿದರು.
‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಪಿಯುಸಿಎಲ್ ಅಧ್ಯಕ್ಷರಾದ ಅರವಿಂದ್ ನಾರಾಯಣ್, ನಾಜಿ ಜರ್ಮನಿಯೊಂದಿಗೆ ಕರ್ನಾಟಕದ ಪರಿಸ್ಥಿತಿಯನ್ನು ಹೋಲಿಸಿದ್ದಾರೆ. “ಹಿಟ್ಲರ್ನ ನಾಜಿ ಜರ್ಮನಿಯಲ್ಲಿ ಏನಾಯಿತು? ಮೊದಲು ಯಹೂದಿಗಳ ವಿರುದ್ಧ ದ್ವೇಷದ ಭಾಷಣ ಮಾಡಲಾಯಿತು. ನಂತರ ಯಹೂದಿಗಳಿಂದ ಯಾವುದೇ ವ್ಯಾಪಾರ ವಹಿವಾಟು ಮಾಡದಂತೆ ನಿರ್ಬಂಧಿಸಲಾಯಿತು. ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರದ ಬಳಿಕ ನರಮೇಧದ ನಡೆಯಿತು. ಇತಿಹಾಸದಿಂದ ನಾವು ಪಾಠ ಕಲಿಬೇಕು. ಜೆನೊಸೈಡ್ನ ಲಕ್ಷಣಗಳ ಕುರಿತು ಎಚ್ಚರ ವಹಿಸಬೇಕು. ಸರ್ಕಾರ ಈ ರೀತಿಯ ಬೆಳವಣಿಗೆಗಳಿಗೆ ಪ್ರೋತ್ಸಾಹ ನೀಡಬಾರದು” ಎನ್ನುತ್ತಾರೆ ಅರವಿಂದ್.
ಇದನ್ನೂ ಓದಿರಿ: Explainer: ಹಲಾಲ್ ಹಾಗೆಂದರೇನು?
ಉದ್ಯಮಿಗಳು. ಪ್ರಗತಿಪರರು. ಹಾಗೂ ಇನ್ನಿತರ ಸಂಘಟನೆಗಳು ಮುಖ್ಯಮಂತ್ರಿಗಳಿಗೆ ಬೇಟಿಯಾಗಿ ಆಗುವ ಅನಾಹುತಗಳ ಬಗ್ಗೆ ವಿವರಿಸಿ ಹೇಳಿ… ಹಾಗೂ ಅವರು ಹಾಕಿಕೊಂಡಿರುವ ಆರೆಸೆಸ್ ಮುಖವಾಡ ಖಳಚಿ ಬನ್ನಿ…
ಸಾಂವಿಧಾನಿಕ ಹಕ್ಕನ್ನು ಯಾರೂ ಕಸಿದುಕೊಳ್ಳಲು ಪ್ರಯತ್ನಿಸಬಾರದು ಜಾತ್ಯತೀತ, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದು ಇಂದಿನ ಪರಿಸ್ಥಿತಿಯಲ್ಲಿ ತುಂಬಾ ಉತ್ತಮವಾದ ಸಾಮಾಜಿಕ ನಡವಳಿಕೆ ಎನಿಸುತ್ತದೆ