ತಮಿಳುನಾಡಿನ ವಿರುದುನಗರ ಜಿಲ್ಲೆಯ ಬಿಜೆಪಿ ಕಚೇರಿಯಲ್ಲಿ ಹೊಸದಾಗಿ ಸ್ಥಾಪಿಸಲಾದ ಭಾರತ ಮಾತಾ ಪ್ರತಿಮೆಯನ್ನು ಪೊಲೀಸರು ಮತ್ತು ಕಂದಾಯ ಅಧಿಕಾರಿಗಳು ತೆರವುಗೊಳಿಸಿದ್ದಾರೆ.
ತಮಿಳುನಾಡು ವಿರುದುನಗರ ಜಿಲ್ಲೆಯ ಬಿಜೆಪಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಕಪ್ಪು ಕಲ್ಲಿನಿಂದ ಭಾರತ ಮಾತೆಯ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು.ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರ ‘ಎನ್ ಮಣ್ಣ್, ಎನ್ ಮಕ್ಕಳ್’ಪಾದಯಾತ್ರೆ ಆಗಸ್ಟ್ 9 ರಿಂದ 11ರ ನಡುವೆ ವಿರುದುನಗರ ಪ್ರವೇಶಿಸಲಿದೆ. ಇದಕ್ಕೆ ಮೊದಲೇ ಭಾರತ ಮಾತೆಯ ಪ್ರತಿಮೆಯನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ.
ಈ ಪ್ರತಿಮೆಯನ್ನು ಪೂರ್ವಾನುಮತಿ ಪಡೆಯದೆ ಸ್ಥಾಪಿಸಲಾಗಿದ್ದು, ಇದು ಹೈಕೋರ್ಟ್ನ ನಿರ್ದೇಶನ ಮತ್ತು ಸರ್ಕಾರದ ಆದೇಶಕ್ಕೆ ವಿರುದ್ಧವಾಗಿದೆ ಎಂದು ಹಿರಿಯ ಅಧಿಕಾರಿಗಳು ಇಂಡಿಯಾ ಟುಡೇಗೆ ತಿಳಿಸಿದ್ದಾರೆ. ಇದಲ್ಲದೆ, ಕಂದಾಯ ಅಧಿಕಾರಿಗಳು ಪ್ರತಿಮೆಯನ್ನು ತೆಗೆದುಹಾಕಲು ಬಿಜೆಪಿ ಕಾರ್ಯಕರ್ತರನ್ನು ಕೇಳಿದರು ಆದರೆ ಅವರು ಆದೇಶವನ್ನು ಅನುಸರಿಸಲು ನಿರಾಕರಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯನ್ನು ಖಂಡಿಸಿರುವ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ, ತಮಿಳುನಾಡಿನ ಭ್ರಷ್ಟ ಡಿಎಂಕೆ ಸರ್ಕಾರದ ಅಡಿಯಲ್ಲಿ, ಪಕ್ಷದ ಒಡೆತನದ ಸ್ಥಳದಲ್ಲಿ ಭಾರತ ಮಾತೆಯ ಪ್ರತಿಮೆಯನ್ನು ಸ್ಥಾಪಿಸುವ ಹಕ್ಕಿಲ್ಲ. ನಮ್ಮ ‘ಎನ್ ಮಣ್ಣ್, ಎನ್ ಮಕ್ಕಳ್’ ಯಾತ್ರೆಯು ಡಿಎಂಕೆ ಸರ್ಕಾರದ ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತಿದೆ ಎಂಬ ಜಿಲ್ಲೆಯ ಇಬ್ಬರು ಡಿಎಂಕೆ ಸಚಿವರ ಭಯದ ಪರಿಣಾಮ ಈ ಬೆಳವಣಿಗೆ ನಡೆದಿದೆ ಎಂದು ಹೇಳಿದ್ದಾರೆ.
ಕಳೆದ ಮಾರ್ಚ್ ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಉದ್ಘಾಟಿಸಿದ 10 ಪಕ್ಷದ ಕಚೇರಿಗಳಲ್ಲಿ ವಿರುದುನಗರ ಬಿಜೆಪಿ ಪ್ರಧಾನ ಕಚೇರಿಯೂ ಒಂದಾಗಿತ್ತು. ಇದೇ ಕಚೇರಿಯ ಮುಂದೆ ಭಾರತ ಮಾತಾ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು.
ಇದನ್ನು ಓದಿ: ಕರ್ನಾಟಕದಲ್ಲಿ ತೀವ್ರ ಏರಿಕೆ ಕಂಡ ಫೇಕ್ ನ್ಯೂಸ್ಗಳ ಹರಿದಾಟ; ಕಡಿವಾಣಕ್ಕೆ ಸಿದ್ಧವಾಗಿದೆಯೇ ಸರ್ಕಾರ?