ಸಮಾಜಶಾಸ್ತ್ರಜ್ಞೆ, ಸ್ತ್ರೀವಾದಿ ಚಿಂತಕಿ, ಮಾನವ ಹಕ್ಕುಗಳ ಹೋರಾಟಗಾರ್ತಿ, ಜಾತಿ ವಿನಾಶ ಚಳುವಳಿಯ ಬಹು ಮುಖ್ಯ ಧ್ವನಿ, ಬಹುಜನ ಚಳವಳಿಯ ಮೇರು ಚಿಂತಕರಲ್ಲಿ ಒಬ್ಬರಾಗಿದ್ದ 81 ವರ್ಷದ ಗೇಲ್ ಆಂವೆಡ್ತ್ ಇಂದು (ಆಗಸ್ಟ್ 25) ನಿಧನರಾಗಿದ್ದಾರೆ.
ಗೇಲ್ ಆಂವೆಡ್ತ್ ಅಮೆರಿಕ ಮೂಲದ ಭಾರತೀಯ ವಿದ್ವಾಂಸರಾಗಿದ್ದು, ದಲಿತ ರಾಜಕೀಯ, ಮಹಿಳಾ ಹೋರಾಟ ಮತ್ತು ಜಾತಿ ವಿರೋಧಿ ಚಳವಳಿಯ ಕುರಿತು ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಕೊಯ್ನಾ ಅಣೆಕಟ್ಟಿನಿಂದ ಸ್ಥಳಾಂತರಗೊಂಡ ಜನರ ಹಕ್ಕುಗಳನ್ನು ಉಳಿಸುವ ಹೋರಾಟ ಸೇರಿದಂತೆ ದೇಶದ ವಿವಿಧ ಚಳುವಳಿಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಅಮೆರಿಕಾದಲ್ಲಿ ಜನಿಸಿದ ಗೇಲ್ ತಮ್ಮ ಪಿಎಚ್ಡಿ ಅಧ್ಯಯನಕ್ಕೆಂದು ಭಾರತಕ್ಕೆ ಬಂದವರು. ‘ಅಂಬೇಡ್ಕರ್ ಚಿಂತನೆ ಮತ್ತು ಹೋರಾಟ’ದ ಬಗ್ಗೆ ಅಧ್ಯಯನ ಮಾಡಿ ಡಾಕ್ಟರೇಟ್ ಪಡೆದು ಭಾರತದಲ್ಲಿಯೇ ನೆಲೆಸಿದರು. ತಮ್ಮ ಸಂಗಾತಿ, ಹೋರಾಟಗಾರ ಭರತ್ ಪಟ್ನಾಕರ್ ಜೊತೆಗೂಡಿ ತಮ್ಮ ಇಡೀ ಬದುಕನ್ನು ದಮನಿತ ಸಮುದಾಯಗಳ ಪರ ಹೋರಾಟಗಳಿಗೆ, ದಮನಿತ ಸಮುದಾಯಗಳ ಅಧ್ಯಯನಕ್ಕೆ ಮುಡುಪಾಗಿಟ್ಟವರು.
ಇದನ್ನೂ ಓದಿ: ಹೋರಾಟಗಾರ, ಬಂಡಾಯ ಲೇಖಕ ಡಾ.ಎಂ.ಚಿತ್ರಲಿಂಗಸ್ವಾಮಿ(54) ನಿಧನ
ಸಂಶೋಧಕಿ, ಲೇಖಕಿ ಮತ್ತು ಬಹುಜನ ಚಳುವಳಿಯ ಬೌದ್ಧಿಕ ಧ್ವನಿಗಳಲ್ಲಿ ಒಂದಾದ ಗೇಲ್ ಆಂವೆಡ್ತ್, ತಮ್ಮ ಪ್ರಖರ ಬೌದ್ಧಿಕತೆಯ ಮೂಲಕ ಅಂಬೇಡ್ಕರ್ ಚಿಂತನೆ ಮತ್ತು ದಲಿತ ಅಧ್ಯಯನವನ್ನು ವಿಶ್ವಮಟ್ಟಕ್ಕೆ ಬೆಳೆಸಿದವರು.
ಭಾರತದಲ್ಲಿ ವಾಸಿಸಲು ನಿರ್ಧರಿಸಿದ ನಂತರ, ಹಿರಿಯ ಸಾಮಾಜಿಕ ಹೋರಾಟಗಾರ್ತಿ ಇಂದುತಾಯಿ ಪಟ್ನಾಕರ್ (Indumati Babuji Patankar) ಅವರೊಂದಿಗಿನ ಒಡನಾಟವು ದೇಶದಲ್ಲಿ ಮಹಿಳಾ ಹೋರಾಟಗಳ ಕುರಿತು ಅಧ್ಯಯನ ಮಾಡಲು ಮತ್ತು ಹೋರಾಟಗಳಲ್ಲಿ ಭಾಗವಹಿಸಲು ಪ್ರೇರೆಪಣೆ ನೀಡಿತು.
ತಮ್ಮ ಪತಿ, ಹೋರಾಟಗಾರ ಭರತ್ ಪಟ್ನಾಕರ್ ಜೊತೆಗೂಡಿ ಶ್ರಮಿಕ್ ಮುಕ್ತಿ ದಳವನ್ನು ಸ್ಥಾಪಿಸಿದವರು. ಪುಣೆ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರ ವಿಭಾಗದ ಫುಲೆ-ಅಂಬೇಡ್ಕರ್ ಪೀಠದ ಮುಖ್ಯಸ್ಥರಾಗಿದ್ದರು. ಕೋಪನ್ಹೆಗನ್ನ Institute of Asian studies ನಲ್ಲಿ ಪ್ರಾಧ್ಯಾಪರಾಗಿದ್ದರು. ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಹೊಸದಿಲ್ಲಿಯ ಗ್ರಂಥಾಲಯಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ.
ಇವರು 25 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅದರಲ್ಲಿ ಇನ್ ಕಲೋನಿಯಲ್ ಸೊಸೈಟಿ-ನಾನ್ ಬ್ರಾಹ್ಮಿಣ್ ಮೂಮೆಂಟ್ ಇನ್ ವೆಸ್ಟ್ರನ್ ಇಂಡಿಯಾ, ಸೀಕಿಂಗ್ ಆಪ್ ಬೇಗಂಪುರ, ಬುದ್ದಿಸಮ್ ಇನ್ ಇಂಡಿಯಾ, ಡಾ ಬಾಬಾಸಾಹೇಬ್ ಅಂಬೇಡ್ಕರ್, ಮಹಾತ್ಮ ಫುಲೆ, ದಲಿತ್ ಅಂಡ್ ಡೆಮಾಕ್ರಿಟಿಕ್ ರೆವಲ್ಯೂಷನ್, ಅಂಡರ್ಸ್ಟಾಂಡಿಂಗ್ ಕ್ಯಾಸ್ಟ್ ಮತ್ತು ನ್ಯೂ ಸೋಷಿಯಲ್ ಮೂಮೆಂಟ್ ಇನ್ ಇಂಡಿಯಾ ಪ್ರಮುಖವಾದವುಗಳು.
ಆಗಸ್ಟ್ 26 ರಂದು ಸಾಂಗ್ಲಿ ಜಿಲ್ಲೆಯ ಕಾಸೆಗಾಂವ್ನಲ್ಲಿ ಗೇಲ್ ಆಂವೆಡ್ತ್ ಅವರ ಅಂತಿಮ ಸಂಸ್ಕಾರ ನಡೆಯಲಿದೆ.
ಇದನ್ನೂ ಓದಿ: ಮಹಾ ಸಿಎಂಗೆ ಕಪಾಳಮೋಕ್ಷ ಹೇಳಿಕೆ: ಒಕ್ಕೂಟ ಸರ್ಕಾರದ ಸಚಿವ ಅರೆಸ್ಟ್!