Homeಮುಖಪುಟಏರುತ್ತಿರುವ ಜಾಗತಿಕ ತಾಪಮಾನ: ಈ ಶತಮಾನದ ಅಂತ್ಯದೊಳಗೆ ಮಂಗಳೂರು-ಮುಂಬೈ ಸಮುದ್ರ ಸಮಾಧಿ!

ಏರುತ್ತಿರುವ ಜಾಗತಿಕ ತಾಪಮಾನ: ಈ ಶತಮಾನದ ಅಂತ್ಯದೊಳಗೆ ಮಂಗಳೂರು-ಮುಂಬೈ ಸಮುದ್ರ ಸಮಾಧಿ!

- Advertisement -
- Advertisement -

ಒಂದೇ ಸಮನೆ ಏರಿಕೆಯಾಗುತ್ತಿರುವ ಜಾಗತಿಕ ತಾಪಮಾನ ಇನ್ನೊಂದು ದಶಕದಲ್ಲಿ ಅಂದಾಜು ಮಟ್ಟಕ್ಕಿಂತ ಹೆಚ್ಚಾಗಲಿದೆ. ಇದರಿಂದ ಪ್ರಕೃತಿ ವಿಕೋಪವಾಗಿ ಜೀವ ಜಾಲಕ್ಕೆ ಗಂಡಾಂತರ ಎದುರಾಗಲಿದೆಯೆಂದು ವಿಶ್ವ ಸಂಸ್ಥೆಯ ಹವಾಮಾನ ಬದಲಾವಣೆ ಕುರಿತ ವರದಿ ಆಘಾತಕಾರಿ ಎಚ್ಚರಿಕೆ ಈಚೆಗಷ್ಟೆ ನೀಡಿತ್ತು. ವಿಶ್ವ ಸಂಸ್ಥೆಯ ಈ ಸಮಿತಿ 1988ರಿಂದ 5-7 ವರ್ಷಕ್ಕೊಮ್ಮೆ ತಾಪಮಾನ ಏರಿಕೆ, ಹಸಿರು ಮನೆ ಅನಿಲ ಪರಿಣಾಮ, ಸಮುದ್ರ ಮಟ್ಟ, ಮಂಜು ಕರಗುವಿಕೆ ಬಗ್ಗೆ ವರದಿ ಕೊಡುತ್ತಿದೆ.

ವಿಶ್ವ ಸಂಸ್ಥೆಯ ಭೂ ತಾಪಮಾನದ ವರದಿ ಆಧರಿಸಿ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಪ್ರಕಟಿಸಿರುವ ತನ್ನ 6ನೇ ಮೌಲ್ಯ ಮಾಪನ ವರದಿಯಲ್ಲಿ ಬೆಚ್ಚಿಬೀಳಿಸುವ ಸಂಗತಿಗಳಿವೆ! ಜಾಗತಿಕ ತಾಪಮಾನ ಏರು ಗತಿಯಲ್ಲಿರುವುದರಿಂದ ಸಮುದ್ರ ಮಟ್ಟದಲ್ಲೂ ದೊಡ್ಡ ಏರಿಕೆಯಾಗುತ್ತಿದೆ. ಹೀಗಾಗಿ ಕಡಲಂಚಿನ ಊರೂರುಗಳನ್ನು ಸಮುದ್ರ ಆಪೋಷನ ಪಡೆಯಲಿದೆ. ಭಾರತದ ಮಂಗಳೂರು, ಮುಂಬೈ, ಕೊಚ್ಚಿ, ವಿಶಾಖಪಟ್ಟಣಂ… ಮುಂತಾದ 12ಕ್ಕಿಂತ ಹೆಚ್ಚು ಮಹಾನಗರಗಳು 2100ರ ಒಳಗಾಗಿ ಸಮುದ್ರ ಪಾಲಾಗಲಿದೆಯೆಂದು ನಾಸಾ ಸ್ಪಷ್ಟವಾಗಿ ಹೇಳಿದೆ.

ಜಗತ್ತಿನಾದ್ಯಂತ ಸಮುದ್ರದಲ್ಲಾಗತ್ತಿರುವ ಏರುಪೇರಿನ ಆಧಾರದಲ್ಲಿ ವರದಿ ಸಿದ್ಧಪಡಿಸಿರುವ ನಾಸಾ, ಸಮುದ್ರದ ಈಗಿನ ಸ್ಥಿತಿ-ಗತಿ ಪ್ರಕಾರ ಸಮುದ್ರ ಏರಿದರೆ ಇನ್ನೆರಡು ಅಡಿ ಏರುತ್ತದೆ ಎಂದಿದೆ. ಶತಮಾನದ ಅಂತ್ಯದೊಳಗೆ ಇದು ಇನ್ನಷ್ಟು ತೀವ್ರಗೊಂಡರೆ 2100ರ ಕೊನೆಗೆ 3 ಅಡಿಯಷ್ಟು ಉಕ್ಕೇರುತ್ತದೆ. ಆಗ ಮಂಗಳೂರು, ಮಂಬೈ, ಮರ್ಮಗೋವಾ, ಕೊಚ್ಚಿ, ವಿಶಾಖಪಟ್ಟಣಂ, ಪಾರಾದೀಪ್, ಖದೀರ್ಪುರ್, ಚೆನ್ನೈ, ತೂತ್ತುಕುಡಿ, ಕಂಡ್ಲಾ, ಒಖಾ, ಭಾವನಗರ್ ಕಡಲಲ್ಲಿ ಕರಗಲಿವೆ ಎಂಬುದು ನಾಸಾ ಲೆಕ್ಕಾಚಾರವಾಗಿದೆ.

ಏಷ್ಯಾದ ಸುತ್ತಲಿನ ಸಮುದ್ರ ಮಟ್ಟವು ಜಾಗತಿಕ ಸರಾಸರಿ ದರಕ್ಕಿಂತ ವೇಗವಾಗಿ ಏರುತ್ತಿದೆ. ಈ ರೀತಿಯ ಸಮುದ್ರ ಮಟ್ಟ ಬದಲಾವಣೆ ಸಾಮನ್ಯವಾಗಿ 100 ವರ್ಷಕ್ಕೊಮ್ಮೆ ಆಗುತ್ತಿತ್ತು. ಇನ್ನು ಮುಂದೆ 2050ರ ತನಕ 6ರಿಂದ 9ವರ್ಷಕ್ಕೊಮ್ಮೆ ಸಂಭವಿಸಬಹುದು. 2006ರಿಂದ 2018ರ ತನಕ ನಡೆಸಿದ ಅಧ್ಯಯನ ಅಂದಾಜಿನಂತೆ ಸಮುದ್ರದ ಜಾಗತಿಕ ಸರಾಸರಿ ಮಟ್ಟ ಪ್ರತಿ ವರ್ಷ ಸುಮಾರು 3.7 ಮಿಲಿ ಮೀಟರ್ ನಷ್ಟು ಏರಿಕೆಯಾಗುತ್ತಿದೆ ಎಂದು ನಾಸಾ ಅಧ್ಯಯನ ವರದಿಯಲ್ಲಿ ಉಲ್ಲೇಖವಾಗಿದೆ.

ನಾಸಾ ಪ್ರಕಟಪಡಿಸಿರುವ ವರದಿಯಂತೆ ಕರ್ನಾಟಕದ ಬರಿ ಮಂಗಳೂರು ಮಾತ್ರವಲ್ಲ, ಕಡಲಂಚಿನ ಕಾರವಾರ, ಕುಮಟಾ, ಹೊನ್ನಾವರ, ಭಟ್ಕಳ ಮತ್ತು ಉಡುಪಿ ಜಿಲ್ಲೆಯ ಹಲವು ಪ್ರದೇಶಗಳು ಸಮುದ್ರದಲ್ಲಿ ಲೀನವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ! ಸಾರ್ವಜನಿಕರಿಗಾಗಿ ನಾಸಾ ಸ್ಥಳೀಯ ಸಮುದ್ರ ಮಟ್ಟವನ್ನು ತಿಳಿಯುವ ಆನ್‌ಲೈನ್ ಸಾಧನ ಕಂಡುಹಿಡಿದಿದೆ. 2020 ರಿಂದ 2150ರ ಒಳಗಿನ ದಶಕಗಳನ್ನು ಆಯ್ದುಕೊಂಡು ನಮಗೆ ಬೇಕಾದ ಪ್ರದೇಶದ ಸಮುದ್ರ ಮಟ್ಟ ತಿಳಿಯಬಹುದಾಗಿದೆ. ಮಾಹಿತಿಯನ್ನು ಡೌನ್ಲೋಡ್ ಮಾಡಿಕೊಳ್ಳ ಬಹುದಾಗಿದೆ.

ಮಂಗಳೂರಿನ ಸಮುದ್ರ ಮಟ್ಟ 2100ರ ಒಳಗೆ 1.87 ಅಡಿ ಏರಿಕೆಯಾಗಲಿದೆಯೆಂಬ ಎಚ್ಚರಿಕೆ ಕೊಟ್ಟಿದೆ. ಅಂದರೆ ಕಡಲು ಕ್ರಮೇಣ ಮಂಗಳೂರನ್ನು ಕಬಳಿಸಲಿದೆ ಎಂದರ್ಥ. ನಾಸಾ ವಿಜ್ಞಾನಿಗಳ ಮುಳುಗಡೆ ವರದಿ ಬಗ್ಗೆ ನಾನಾ ನಮೂನೆಯ ಜಿಜ್ಞಾಸೆ ಶುರುವಾಗಿದೆ. ಇದೆಲ್ಲ ಬರಿ ಸುಳ್ಳು; ಹಿಂದೆ ಜಗತ್ತೆ ಮುಳುಗುತ್ತದೆಂದು ಬೊಬ್ಬೆ ಎಬ್ಬಿಸಲಾಗಿತ್ತಲ್ಲ ಹಾಗೇ ಇದೆಂಬ ಅಭಿಪಾಯ ವ್ಯಕ್ತವಾಗುತ್ತಿದೆ. ಈ ಬಗ್ಗೆ ಟ್ರೋಲ್‌ಗಳೂ ನಡೆದಿದೆ. ಇನ್ನೊಂದೆಡೆ ನಾಸಾ ವಿಜ್ಞಾನಿಗಳೇಕೆ ಸುಳ್ಳು ಹೇಳುತ್ತಾರೆ; ಇಂಥ ಗಂಭೀರ ವಿಷಯ ಆಳವಾದ ಅಧ್ಯಯನವಿಲ್ಲದೆ ಹೇಳಲು ಸಾಧ್ಯವೇ ಇಲ್ಲ; ನಾಸಾ ವಿಜ್ಞಾನಿಗಳ ಅಭಿಪ್ರಾಯ ಕರಾರುವಾಕ್ ಆಗಿದೆ ಎನ್ನುವ ಚರ್ಚೆ ನಡೆದಿದೆ.

ನಾಸಾ ವಿಜ್ಞಾನಿಗಳು ಕೊಟ್ಟಿರುವ ಮಾಹಿತಿ ಸರಿಯಾದದ್ದು; ಮುಂದಿನ ದಿನಗಳ ಸಂಭವನೀಯ ಘಟನೆ ಎಂದು ಮಂಗಳೂರಿನ ಪಿಲಿಕುಳ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ-ಸಂಶೋಧಕ ಪ್ರೊ.ಕೆವಿ.ರಾವ್ ಹೇಳುತ್ತಾರೆ. ನಿತ್ಯ ನಗರೀಕರಣ, ಕಾರ್ಖಾನೆಗಳ ಹೆಚ್ಚಳವೇ ಮುಂತಾದ ಕಾರಣದಿಂದ ಜಾಗತಿಕ ಮಾಲಿನ್ಯ ವಿಪರೀತವಾಗುತ್ತಿದೆ. ಇದೇ ಗತಿಯಲ್ಲಿ ಮಾಲಿನ್ಯ ಹೆಚ್ಚಳವಾದರೆ ಮನುಷ್ಯನ ಕೈತಪ್ಪಿ ಜಗತ್ತಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಅಷ್ಟು ಸುಲಭವಲ್ಲವೆಂದು ಪ್ರೊ.ರಾವ್ ಅಭಿಪ್ರಾಯ.

ಪ್ರೊ.ಕೆವಿ.ರಾವ್

ಪ್ರಕೃತಿ ನಮಗೆ ಆಕ್ಸಿಜನ್, ನೈಟ್ರೋಜನ್ ಮತ್ತಿತರ ಅನಿಲವನ್ನು ಸಾಕಷ್ಟು ನೀಡುತ್ತಿದೆ. ಪ್ರಕೃತಿ ನೀಡಿರುವ ಪೂರಕ ವಾತಾವರಣವನ್ನು ನಾವೇ ಹಾಳುಮಾಡುತ್ತಿದ್ದೇವೆ; ಕಾಡು ನಾಶವಾಗಿ ನಗರಗಳಾಗಿವೆ; ಇದರಿಂದ ಜಾಗತಿಕ ತಾಪಮಾನ ಹದಗೆಟ್ಟಿ ಪರಿಸರ ಸಂರಕ್ಷಿಸದೇ ಇರುವುದರಿಂದ ಸಾಗರದ ಹಿಮ ಗಡ್ಡೆಗಳು ನಿರೀಕ್ಷೆಗಿಂತ ವೇಗವಾಗಿ ಕರಗುತ್ತಿವೆ. ನಮ್ಮ ಸುತ್ತಲಿನ ಜಾಗವನ್ನು ಕಾಳಜಿಯಿಂದ ಕಾಪಾಡಿಕೊಳ್ಳದಿದ್ದರೆ ವಾತಾವರಣದ ಉಷ್ಣತೆ ಏರಿಕೆಯಾಗಿ ನೀರ್ಗಲ್ಲುಗಳು ಕರಗಿ ಸಮುದ್ರ ಉಕ್ಕೇರುವುದು ಸಹಜ ಪ್ರಕ್ರಿಯೆ; ಆಗ ಕಡಲ ತಡಿಯ ಪ್ರದೇಶ ಸಮುದ್ರದ ಪಾಲಾಗುತ್ತದೆ. ಇದನ್ನೆ ನಾಸಾ ಅಧ್ಯಯನದ ಮೂಲಕ ತಿಳಿಸಿದೆಯೆಂದು ಪ್ರೊ.ರಾವ್ ಹೇಳಿದ್ದಾರೆ.

ಹಾಲಿ ವೇಗದಲ್ಲೇ ನೀರ್ಗಲ್ಲುಗಳು ಕರಗುತ್ತ ಹೋದರೆ ಸಮಸ್ಯೆ ಏನಾಗಬಹುದೆಂದು ನಾಸಾ ವಿಜ್ಞಾನಿಗಳು ಲೆಕ್ಕ ಹಾಕಿದಾಗ ನಿರೀಕ್ಷಗಿಂತಲೂ ಆಘಾತಕಾರಿ ಅಂಶಗಳು ಗೋಚರಿಸಿದೆ. ದಕ್ಷಿಣದ ಮಹಾನಗರಗಳಾದ ಮುಂಬೈ, ಮಂಗಳೂರು ಸಮುದ್ರಕ್ಕೆ ಹತ್ತಿರದಲ್ಲಿದೆ. ಸಮುದ್ರದಲ್ಲಿ ಒಂದು ಮೀಟರ್ ನೀರು ಜಾಸ್ತಿಯಾದರೂ ಬಹಳಷ್ಟು ನಗರಗಳು ಮುಳುಗುತ್ತವೆ. ಈ ಕುರಿತು ವಿಶ್ವ ಸಂಸ್ಥೆ, ಜಾಗತಿಕ ಸಂಸ್ಥೆಗಳಲ್ಲಿ ತುಂಬ ಚರ್ಚೆಯಾಗಿದೆ.

ಸಮುದ್ರ ಒಮ್ಮೆ ಮುನ್ನುಗ್ಗಿದರೆ ಮತ್ತೆ ಹಿಂದಕ್ಕೆ ಬರಲಾರದು. ವಾತಾವರಣ, ಪ್ರಕೃತಿಯನ್ನು ಮನುಷ್ಯ ಕಾಪಾಡಿಕೊಳ್ಳದಿದ್ದರೆ ಮುಂದೆ ದೊಡ್ಡ ಅನಾಹುತ ಕಾದಿದೆ. ಈಗಾಗಲೆ ವಾತಾವರಣ ಇದ್ದಕ್ಕಿದ್ದಂತೆ ಅನಾಹುತಕಾರಿಯಾಗಿ ಬದಲಾಗುತ್ತಿದೆ. ಅತಿವೃಷ್ಟಿಯಾಗುತ್ತಿದೆ; ಮೇಘ ಸ್ಪೋಟದಿಂದ ನರೆಯೇರುತ್ತಿದೆ; ಸಮುದ್ರದ ನೀರು ತಂತಾನೆ ಉಕ್ಕಿ ಹರಿಯುವುದು, ಸುನಾಮಿ, ಸೈಕ್ಲೋನ್ ಅಪ್ಪಳಿಸುತ್ತಿರುವುದೆಲ್ಲ ವಾತಾವರಣ ಕಲುಷಿತಗೊಂಡಿರುವುದಕ್ಕೆ ಸಂಕೇತ ಎಂದು ವಾತಾವರಣದ ಅನಾಹುತ ವಿವರಿಸುವ ಪ್ರೊ.ರಾವ್, ಮನು ಕುಲ-ಜೀವ ಸಂಕುಲ ಉಳಿಯಬೇಕೆಂದರೆ ಪರಿಸರ ಸಂರಕ್ಷಣೆ ಆಗಲೇಬೇಕೆನ್ನುತ್ತಾರೆ.

ಜಾಗತಿಕ ತಾಪಮಾನ ಬದಲಾವಣೆಯಿಂದ ಹಿಮಾಲಯದ ನೀರ್ಗಲ್ಲುಗಳು ಕರಗುತ್ತಿವೆ; ಕಾರ್ಬನ್ ಡೈಆಕ್ಸೈಡ್‌ ಉಷ್ಣತೆ ಹೆಚ್ಚುತ್ತಿದೆ. ಉಷ್ಣತೆಯಿಂದ ನೀರಾವಿ ಹೆಚ್ಚುತ್ತದೆ. ನೀರಾವಿ ಏರಿಕೆಯಾದರೆ ಹಸಿರು ಮನೆ ಅನಿಲದ ಮೇಲೆ ಪರಿಣಾವಾಗುತ್ತದೆ. ದೇಶದ ಬೆನ್ನೆಲುಬಾದ ಕೃಷಿಯನ್ನು ನಿರ್ಧರಿಸುವ ಮಾನ್ಸೂನ್ ಮಾರುತದ ದಿಕ್ಕನ್ನೇ ತಪ್ಪಿಸಲಿದೆ ಜಾಗತಿಕ ತಾಪಮಾನ ಹೆಚ್ಚಳ. ಇದೆಲ್ಲದರ ಒಟ್ಟೂ ಪರಿಣಾಮವೇ ಹವಾಮಾನ ವೈಪರಿತ್ಯ. ಹೀಗಾಗಿ ಕಡಲಂಚಿನ ಹಲವು ನಗರಗಳು ಮುಳುಗುವ ಆತಂಕ ಎದುರಾಗಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ಕೊಟ್ಟಿದ್ದಾರೆ!


ಇದನ್ನೂ ಓದಿ: ಕಾಳಿ ನದಿ ಮೇಲೆ ಸಚಿವ ನಿರಾಣಿ ಸಹೋದರರ ಕಣ್ಣು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಕೇಜ್ರಿವಾಲ್ ಚುನಾವಣಾ ಪ್ರಚಾರ ಮಾಡಬಾರದೆಂದು ಬಿಜೆಪಿ ಬಯಸುತ್ತದೆ, ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ’;...

0
ಎಎಪಿ ಎನ್‌ಜಿಒ ಅಲ್ಲ, ಅದು ರಾಷ್ಟ್ರೀಯ ಪಕ್ಷ, ಕೇಜ್ರಿವಾಲ್ ಅವರು ಚುನಾವಣಾ ಪ್ರಚಾರದಿಂದ ದೂರವಿರಬೇಕೆಂದು ಬಿಜೆಪಿ ಬಯಸುತ್ತದೆ, ನಾನು ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಪಂಜಾಬ್‌ ಸಿಎಂ ಭಗವಂತ್ ಸಿಂಗ್ ಮಾನ್...