ನವೆಂಬರ್ 2, 3 ಮತ್ತು 4 ರಂದು ನಡೆಯುವ ಇನ್ವೆಸ್ಟ್ ಕರ್ನಾಟಕ-2022ರ ಜಾಗತಿಕ ಬಂಡವಾಳ ಹೂಡಿಕೆದಾರರ (GIM) ಸಮಾವೇಶಕ್ಕೆ ಸಂಬಂಧಿಸಿದ 5 ನಿಮಿಷದ ಕಿರು ಚಿತ್ರ ನಿರ್ಮಿಸಲು ಚಿತ್ರ ನಿರ್ಮಾಣ ಸಂಸ್ಥೆಯೊಂದಿಗೆ 4.5 ಕೋಟಿ ರೂಗಳ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಇದನ್ನೊಂದು ಹಗರಣ ಎಂದು ಕರೆದಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (KRS) ನ್ಯಯಾಂಗ ತನಿಖೆಗೆ ಆಗ್ರಹಿಸಿದೆ.
ಇಂತಹ ಮಹತ್ವದ ನಿರ್ಧಾರವು ಇಲಾಖೆ GIMಸಚಿವರ ಗಮನಕ್ಕೆ ಬಂದಿಲ್ಲವೆಂಬುದು ಮತ್ತಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ. ಈ ಕುರಿತು ಸ್ವತಃ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರಾದ ಮುರುಗೇಶ್ ನಿರಾಣಿಯವರು ಇಲಾಖಾ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು ಸದರಿ ಒಡಂಬಡಿಕೆಯನ್ನು ವಜಾ ಮಾಡಬೇಕೆಂದು ಸೂಚಿಸಿದ್ದಾರೆ.
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ಕಿರು ಚಿತ್ರ ನಿರ್ಮಾಣಕ್ಕಾಗಿ ಚಿತ್ರ ನಿರ್ಮಾಣ ಸಂಸ್ಥೆಯೊಂದಿಗೆ ಸುಮಾರ 450 ಲಕ್ಷ ರೂಗಳ ಒಡಂಬಡಿಕೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಸುಮಾರು 5 ನಿಮಿಷಗಳ ಸದರಿ ಕಿರು ಚಿತ್ರ ನಿರ್ಮಾಣಕ್ಕೆ 450 ಲಕ್ಷ ರೂ ನಿಗಧಿಪಡಿಸಿರುವುದು ತುಂಬಾ ಹೆಚ್ಚಾಗಿರುವುದು ಕಂಡು ಬರುತ್ತದೆ. ಒಂದು ಪಕ್ಷ ಇಲಾಖೆಯು ಮೇಲ್ಕಂಡ ಮೌಲ್ಯಕ್ಕೆ ಒಡಂಬಡಿಕೆ ಮಾಡಿಕೊಂಡು ಕಾರ್ಯಾದೇಶ ನೀಡಿರುವುದು ನಿಜವೇ ಆದಲ್ಲಿ ಹೆಚ್ಚು ಮೌಲ್ಯವಾದ ಕಾರಣ ಕಾರ್ಯಾದೇಶವನ್ನು ವಜಾ ಮಾಡಬೇಕೆಂದು ಪತ್ರದಲ್ಲಿ ಸಚಿವರು ಆಗ್ರಹಿಸಿದ್ದಾರೆ.
ಮುಂದುವರಿದು ಇನ್ನು ಮುಂದೆ ಇಂತಹ ಪ್ರಕರಣಗಳಲ್ಲಿ ಇಲಾಖಾ ಸಚಿವರು ಹಾಗೂ ಅನುಭವಿಗಳ ಜೊತೆ ಸಮಾಲೋಚನೆ, ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಬೇಕೆಂದು ಪತ್ರದಲ್ಲಿ ಮುರುಗೇಶ್ ನಿರಾಣಿಯವರು ಸೂಚಿಸಿದ್ದಾರೆ.
ಲೋಕಾಯುಕ್ತಕ್ಕೆ ದೂರು ನೀಡುತ್ತೇವೆ – ರವಿಕೃಷ್ಣಾರೆಡ್ಡಿ
ಈ ಹಗರಣದ ಕುರಿತಾಗಿ ಈ ಕೂಡಲೇ ನ್ಯಾಯಾಂಗ ತನಿಖೆ ಆಗಬೇಕು ಎಂದು KRS ಪಕ್ಷ ಒತ್ತಾಯಿಸುತ್ತದೆ ಎಂದು ಪಕ್ಷದ ರಾಜ್ಯಾಧ್ಯಕ್ಷರಾದ ರವಿಕೃಷ್ಣಾರೆಡ್ಡಿಯವರು ಆಗ್ರಹಿಸಿದ್ದಾರೆ.
ಈ GIM ಹೆಸರಿನಲ್ಲಿ ರಾಜ್ಯ ಸರ್ಕಾರ ನೂರಿನ್ನೂರು ಕೋಟಿ ಖರ್ಚು ಮಾಡುತ್ತಿದೆ ಎನ್ನುವ ಮಾಹಿತಿ ಇದೆ. ಇಲ್ಲಿ ಯಾವುದೇ ಪಾರದರ್ಶಕತೆ ಇಲ್ಲ. ಟೆಂಡರ್ ಇಲ್ಲ. ಇದೊಂದು ದೊಡ್ಡ ಹಗರಣ. ಸಚಿವರು, ಹಿರಿಯ IAS ಅಧಿಕಾರಿಗಳ ನೆರವು ಮತ್ತು ಪಾಲುದಾರಿಕೆಯಲ್ಲಿ ಈ ಲೂಟಿ ನಡೆಯುತ್ತದೆ. ಸಂಬಂಧಪಟ್ಟ ಇಲಾಖೆಯ ಮಂತ್ರಿಯೇ ಈ ಪತ್ರ ಬರೆದಿರುವುದು ಅಧಿಕಾರಿಗಳ ಮಾಫಿಯಾ ಕುರಿತೂ ಯೋಚಿಸುವಂತೆ ಮಾಡುತ್ತದೆ. ಹಾಗೆಯೇ ಲೋಕಾಯುಕ್ತದಲ್ಲಿಯೂ ದೂರು ದಾಖಲಿಸಲಾಗುತ್ತದೆ ಎಂದು ಅವರು ಫೇಸ್ಬುಕ್ ಪೋಸ್ಟ್ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ: ದಲಿತ ಶಾಸಕನಿಗೆ ಅಶ್ಲೀಲವಾಗಿ ನಿಂದಿಸಿ, ದಲಿತ ಸಮುದಾಯದ ಬಗ್ಗೆ ಹಗುರವಾಗಿ ಮಾತನಾಡಿದ ಬಿಜೆಪಿ ಶಾಸಕ