Homeಮುಖಪುಟಗುಜರಾತಿನ ಜೀವರೇಖೆ - ಮಧ್ಯಪ್ರದೇಶಕ್ಕೆ ಮರಣರೇಖೆ

ಗುಜರಾತಿನ ಜೀವರೇಖೆ – ಮಧ್ಯಪ್ರದೇಶಕ್ಕೆ ಮರಣರೇಖೆ

ಗುಜರಾತಿನ ಅನುಕೂಲಕ್ಕಾಗಿ ಸರ್ದಾರ್ ಸರೋವರ್ ಜಲಾಶಯದ ನೀರಿನ ಮಟ್ಟ ಹೆಚ್ಚಿಸುತ್ತಿದ್ದಂತೆ ಇತ್ತ ಮಧ್ಯಪ್ರದೇಶದ 178 ಹಳ್ಳಿಗಳ ಜನರು ಹಿನ್ನೀರಿನಲ್ಲಿ ಮುಳುಗಿ ಜಲಸಮಾಧಿಯಾಗಲಿದ್ದಾರೆ..

- Advertisement -
- Advertisement -

| ಡಿ.ಉಮಾಪತಿ |

ಮುಳುಗಡೆಯಿಂದ ಬಾಧಿತರಾದ ಎಲ್ಲ ಸಂತ್ರಸ್ತರ ಪುನರ್ವಸತಿಯನ್ನು ಸಮರೋಪಾದಿಯಲ್ಲಿ ಪೂರ್ಣಗೊಳಿಸಬೇಕು. ಅಲ್ಲಿಯತನಕ ಸರ್ದಾರ್ ಸರೋವರ ಜಲಾಶಯದ ನೀರಿನ ಮಟ್ಟವನ್ನು 122 ಮೀಟರುಗಳಿಗೆ ಸ್ಥಗಿತಗೊಳಿಸಬೇಕು ಎಂಬ ಬೇಡಿಕೆ ಅತ್ಯಂತ ನ್ಯಾಯಬದ್ಧ ಮತ್ತು ಅಗದೀ ಮಾನವೀಯ. ಇಂತಹ ಬೇಡಿಕೆಯಲ್ಲಿ ಅದ್ಯಾವ ಅನ್ಯಾಯ ಅಡಗಿದೆ?

ಸಂತ್ರಸ್ತರ ಮರುವಸತಿ ಪೂರ್ಣವಾಗುವ ತನಕ ಸರ್ದಾರ್ ಸರೋವರ ಜಲಾಶಯದ ನೀರಿನ ಮಟ್ಟವನ್ನು 122 ಮೀಟರುಗಳಿಗೆ ಸ್ಥಗಿತಗೊಳಿಸಬೇಕು ಎಂಬ ಬೇಡಿಕೆ ಅತ್ಯಂತ ನ್ಯಾಯಬದ್ಧ ಮತ್ತು ಅಪ್ಪಟ ಮಾನವೀಯ.

ಗುಜರಾತಿನ ಸರ್ದಾರ್ ಸರೋವರ ಜಲಾಶಯ ಇನ್ನೇನು ತುಂಬಿ ತುಳುಕಲಿದೆ. 136 ಮೀಟರುಗಳಷ್ಟು ಎತ್ತರ ನೀರು ನಿಂತಿದೆ. ಗರಿಷ್ಠ ಮಟ್ಟ ಮುಟ್ಟಲು ಇನ್ನು ಎರಡೂವರೆ ಮೀಟರು ಬಾಕಿ.

ಗುಜರಾತಿನ ಈ ಜೀವನರೇಖೆಯು, ಮಧ್ಯಪ್ರದೇಶದ ನಾಲ್ಕು ಜಿಲ್ಲೆಗಳ ಸಂತ್ರಸ್ತರ ಪಾಲಿಗೆ ‘ಮರಣರೇಖೆ’ಯಾಗಿ ಪರಿಣಮಿಸಿದೆ.

ಈ ಜಲಾಶಯದ ಹಿನ್ನೀರಿನಲ್ಲಿ ಮಧ್ಯಪ್ರದೇಶದ 178 ಹಳ್ಳಿಗಳು ಜಲಸಮಾಧಿ ಆಗತೊಡಗಿವೆ. ಬುಡಮೇಲಾದ ಬದುಕುಗಳು ಬೀದಿಗೆ ಬಿದ್ದಿವೆ. ಖಾಪರ್ ಖೇಡಾ ಎಂಬ ಗ್ರಾಮವನ್ನು ನೀರು ನುಂಗತೊಡಗಿದಾಗ ಅಲ್ಲಿನ ನಿವಾಸಿ 46 ವರ್ಷ ವಯಸ್ಸಿನ ಪ್ರವೀಣ್ ವಿಶ್ವಕರ್ಮನಿಗೆ ಬದುಕು ಇನ್ನು ಸಾಕೆನಿಸಿತು. ನೀರಿಗೆ ಧುಮುಕಿ ಸಾವನ್ನು ಅರಸಿದ. ವಯಸ್ಸು ಸಂದ ಮಹಿಳೆಯೊಬ್ಬಳು ಅರ್ಧ ಮುಳುಗಿದ್ದ ತನ್ನ ಮನೆಯನ್ನು ತೊರೆದು ಬರಲಾರದೆ ಕರುಳು ಕಿತ್ತು ಬರುವಂತೆ ರೋದಿಸಿದ್ದಳು. ಮಕ್ಕಳಿಬ್ಬರು ಆಕೆಯನ್ನು ಎತ್ತಿಕೊಂಡು ದೋಣಿಗೆ ಎಳೆದುತಂದ ದೃಶ್ಯಸರಣಿ ಹೃದಯವಿದ್ರಾವಕ. ಸಮೂಹ ಮಾಧ್ಯಮಗಳ ಕಣ್ಣಿಗೆ ಬೀಳದೆ ನಡೆದಿರುವ ಇಂತಹ ದುರಂತ ದುಃಖ ಶ್ರೇಣಿಗಳು ಅದೆಷ್ಟಿವೆಯೋ ಅಂದಾಜು ಮಾಡಲಾದೀತೇ?

ರಾಷ್ಟ್ರೀಯ ವಿಪತ್ತು ನೆರವು ದಳ ಆತನನ್ನು ಪಾರು ಮಾಡಿತು. ಆದರೆ ಆತನಂತಹ ಸಾವಿರಾರು ಸಂತ್ರಸ್ತರನ್ನು ದುರ್ಭರ ಬದುಕಿನಿಂದ ಪಾರು ಮಾಡುವ ದಳ ಯಾವುದೂ ಕಾಣುತ್ತಿಲ್ಲ. ಬೇಲಿಯೇ ಎದ್ದು ಹೊಲವನ್ನು ಮೇದರೆ….. ಹೆತ್ತಮ್ಮ ಮಗುವಿಗೆ ವಿಷವೂಡಿಸಿದರೆ….. ಬಳ್ಳಿಯೇ ಹಣ್ಣುಗಳನ್ನು ತಿಂದು ಹಾಕಿದರೆ…. ಹರನೇ ಕೊಂದರೆ ಪರ ಕಾಯುವನೇ ಎನ್ನುತ್ತದೆ ಸೋಮೇಶ್ವರ ಶತಕ. ಹೌದು, ಕಾಯಬೇಕಿರುವ ಸರ್ಕಾರಗಳು ಕೊಲ್ಲಲು ಹೇಸುತ್ತಿಲ್ಲ. ಇಲ್ಲವಾದರೆ, ಒಂದು ರಾಜ್ಯದ ಜಲಾಶಯ ತುಂಬಿಸಲು ಮತ್ತೊಂದು ರಾಜ್ಯದ ಜನರ ಬದುಕುಗಳು ಬಲಿಯಾದರೂ ಚಿಂತೆಯಿಲ್ಲ ಎಂಬ ನಿರ್ಲಕ್ಷ್ಯ ಧೋರಣೆಯನ್ನು ತಳೆಯಲು ಬಂದೀತೇ? ಗುಜರಾತಿನ ಮುಖ್ಯಮಂತ್ರಿ ಮತ್ತು ಅದೇ ರಾಜ್ಯದ ಮಗನಾದ ಪ್ರಧಾನಮಂತ್ರಿಯವರು ಜಲಾಶಯ ತುಂಬಿತುಳುಕುವ ಗಳಿಗೆಗಳನ್ನು ಕುರುಡಾಗಿ ಸಂಭ್ರಮಿಸುತ್ತಿದ್ದಾರೆಯೇ? ಸಂಭ್ರಮದ ಜೊತೆಜೊತೆಗೆ ಮಧ್ಯಪ್ರದೇಶದ ಆದಿವಾಸಿ ಪಟ್ಟಿಯ ಹಳ್ಳಿಗಳ ಜಲಸಮಾಧಿಯ ಕುರಿತು ಅವರ ಮನಸುಗಳು ತುಸುವಾದರೂ ಮರುಗಲಿಲ್ಲವೇಕೆ?

ನಿಮ್ಮನ್ನು ರೋಮಾಂಚನಗೊಳಿಸುವ ಸುದ್ದಿ…. ಸರ್ದಾರ್ ಸರೋವರ ಜಲಾಶಯವು 134 ಮೀಟರುಗಳ ಐತಿಹಾಸಿಕ ಮಟ್ಟ ಮುಟ್ಟಿದೆ. ಕೆಲ ಮನೋಹರ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದೇನೆ, ‘ಸ್ಟ್ಯಾಚ್ಯೂ ಆಫ್ ಯೂನಿಟಿ’ಯನ್ನು ನೋಡಲು ಹೋಗುತ್ತೀರಿ ಎಂಬ ಆಸೆಯೊಂದಿಗೆ’ ಎಂಬುದಾಗಿ ಪ್ರಧಾನಿ ಟ್ವಿಟರ್‍ನಲ್ಲಿ ರೋಮಾಂಚನ ಹಂಚಿಕೊಳ್ಳುತ್ತಾರೆ.

ಗುಜರಾತಿನ ಶೇ.80ರಷ್ಟು ಕುಡಿಯುವ ನೀರು, ಶೇ.45ರಷ್ಟು ನೀರಾವರಿ ಅಗತ್ಯವನ್ನು ಸರ್ದಾರ್ ಸರೋವರ ಪೂರ್ಣಗೊಳಿಸಲಿದೆ. ಬಾಯಾರಿದ ಸೌರಾಷ್ಟ್ರಕ್ಕೂ ಇದೇ ಜೀವದಾಸರೆ.

ಮಧ್ಯಪ್ರದೇಶದ 178 ಹಳ್ಳಿಗಳ ಜನರಿಗೆ ಈಗಲೂ ಪೂರ್ಣಪ್ರಮಾಣದ ಮರುವಸತಿ ಕಲ್ಪಿಸಿಲ್ಲ. ಜಮೀನು ಕಳೆದುಕೊಂಡವರಿಗೆ ಬದಲಿ ಜಮೀನು, ಮನೆ ಕಳೆದುಕೊಂಡವರಿಗೆ ಬದಲಿ ಮನೆ ದೊರೆತಿಲ್ಲ. ಮರುವಸತಿ ಪ್ರದೇಶಗಳಲ್ಲಿ ಉಳಿದ ನಾಗರಿಕ ಸೌಲಭ್ಯಗಳಿರಲಿ, ಬಹಳಷ್ಟು ಕಡೆ ಕುಡಿಯುವ ನೀರು ಕೂಡ ಗತಿಯಿಲ್ಲ. ಧಾರ್, ಅಲಿರಾಜಪುರ, ಬಡ್ವಾನಿ ಹಾಗೂ ಖಾಗೋರ್ಂ ಜಿಲ್ಲೆಗಳ ಸಂತ್ರಸ್ತರ ಅತಂತ್ರ ಬದುಕುಗಳು ಬೇರೂರಲು ಇನ್ನೆಷ್ಟು ದಶಕಗಳು ಬೇಕೋ!

ಇತ್ತೀಚಿನವರೆಗೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಸಂತ್ರಸ್ತರ ಮರುವಸತಿ ಕಾರ್ಯವನ್ನು ಸಮರ್ಪಕವಾಗಿ ಮಾಡಿಲ್ಲ ಮತ್ತು ಪೂರ್ಣಗೊಳಿಸಿಯೂ ಇಲ್ಲ ಎಂದು ಮಧ್ಯಪ್ರದೇಶದ ನರ್ಮದಾ ಕಣಿವೆ ಅಭಿವೃದ್ಧಿ ಮಂತ್ರಿ ಸುರೇಂದ್ರ ಬಾಘೇಲ್ ಆಪಾದಿಸಿದ್ದಾರೆ.

ಮುಳುಗಡೆಯಿಂದ ಬಾಧಿತರಾದ ಎಲ್ಲ ಸಂತ್ರಸ್ತರ ಪುನರ್ವಸತಿಯನ್ನು ಸಮರೋಪಾದಿಯಲ್ಲಿ ಪೂರ್ಣಗೊಳಿಸಬೇಕು. ಅಲ್ಲಿಯತನಕ ಸರ್ದಾರ್ ಸರೋವರ ಜಲಾಶಯದ ನೀರಿನ ಮಟ್ಟವನ್ನು 122 ಮೀಟರುಗಳಿಗೆ ಸ್ಥಗಿತಗೊಳಿಸಬೇಕು ಎಂಬ ಬೇಡಿಕೆ ಅತ್ಯಂತ ನ್ಯಾಯಬದ್ಧ ಮತ್ತು ಅಗದೀ ಮಾನವೀಯ. ಇಂತಹ ಬೇಡಿಕೆಯಲ್ಲಿ ಅದ್ಯಾವ ಅನ್ಯಾಯ ಅಡಗಿದೆ? ಬಲ್ಲವರು ಹೇಳಬೇಕು.

ಜಲಾಶಯದ ತೂಬಿನ ಬಾಗಿಲುಗಳ ಬಲವನ್ನು ಪರೀಕ್ಷಿಸಲು 138.68 ಮೀಟರುಗಳ ಎತ್ತರಕ್ಕೆ ನೀರು ಸಂಗ್ರಹ ಮಾಡಲೇಬೇಕಿದೆ ಎಂಬುದು ಗುಜರಾತಿನ ವಾದ. ಪರೀಕ್ಷೆ ಈವರೆಗೆ ನಡೆದೇ ಇಲ್ಲ ಎಂಬಂತೇನೂ ಇಲ್ಲ. 2017ರಲ್ಲಿ 131 ಮೀಟರು ಸಂಗ್ರಹ ಸಾಮಥ್ರ್ಯದವರೆಗೆ ಪರೀಕ್ಷೆ ಮಾಡಲಾಗಿದೆ. ತೂಬಿನ ಬಾಗಿಲುಗಳ ಬಲ ಪರೀಕ್ಷೆಯು ಮಾನವೀಯ ದುರಂತದ ದಂಡ ತೆತ್ತು ಮಾಡಬೇಕಿದೆಯೇ? ಒಂದು ವರ್ಷ ಬಿಟ್ಟು ಮಾಡಿದರೆ ಮುಳುಗಿಹೋಗುವುದಾದರೂ ಏನು?

ಜಲಾಶಯದ ಹಿನ್ನೀರಿನ ಪ್ರಭಾವ ತಣಿದು ಅಡಗುವತನಕ ಒಂದು ವರ್ಷ ಕಾಲ ಗರಿಷ್ಠ ಶೇಖರಣೆ ಮಾಡಕೂಡದು ಎಂಬುದು ನರ್ಮದಾ ಬಚಾವ್ ಆಂದೋಲನದ ಆಗ್ರಹ. ಮುಳುಗಡೆಯಿಂದ ಪ್ರಭಾವಿತವಾಗುವ ಗ್ರಾಮಗಳ ಸಂಖ್ಯೆ 178 ಎಂದು ರಾಜ್ಯ ಸರ್ಕಾರ ಒಪ್ಪಿಕೊಳ್ಳಬೇಕಾದರೆ ಮೇಧಾ ಪಾಟ್ಕರ್ ಮತ್ತು ಅವರ ಸಂಗಾತಿಗಳು ಒಂಬತ್ತು ದಿನಗಳ ಉಪವಾಸ ಸತ್ಯಾಗ್ರಹ ಮಾಡಬೇಕಾಯಿತು. ಸಮಸ್ಯೆ ಪರಿಹಾರಕ್ಕೆ ಅರ್ಥಪೂರ್ಣ ಮಾತುಕತೆಗೆ ಮಧ್ಯಪ್ರದೇಶ ಸರ್ಕಾರವೇನೋ ಒಪ್ಪಿತು. ಆದರೆ ಶೇಖರಣೆಯನ್ನು ತಾತ್ಕಾಲಿಕವಾಗಿ 122 ಮೀಟರುಗಳಿಗೆ ಸ್ಥಗಿತಗೊಳಿಸಿ, ತೂಬಿನ ಬಾಗಿಲುಗಳನ್ನು ತೆರೆದಿಡಬೇಕು ಎಂಬ ಬೇಡಿಕೆಯನ್ನು ಗುಜರಾತ್ ಸರ್ಕಾರ ಕಿವಿ ಮೇಲೆ ಹಾಕಿಕೊಂಡಿಲ್ಲ. ಜಲಾಶಯ ತುಂಬಿಸುವ ಸಂಭ್ರಮದಲ್ಲಿ ಮುಳುಗಿದೆ. ನೆರೆಯ ರಾಜ್ಯದ ಮುಳುಗಡೆ ಪ್ರದೇಶಗಳ ಜನರ ಆರ್ತನಾದ ಅದಕ್ಕೆ ಕೇಳಿಸುತ್ತಲೇ ಇಲ್ಲ. ನರ್ಮದಾ ನಿಯಂತ್ರಣ ಪ್ರಾಧಿಕಾರ ಕೂಡ ನಿರ್ಲಕ್ಷ್ಯ ತಳೆದಿದೆ.

ಸರ್ದಾರ್ ಸರೋವರ ಜಲಾಶಯವು ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ರಾಜಸ್ತಾನಕ್ಕೆ ನೀರಾವರಿ ಮತ್ತು ವಿದ್ಯುಚ್ಛಕ್ತಿ ಉತ್ಪಾದನೆಯ ಮೂಲ. ನರ್ಮದಾ ಜಲವಿವಾದ ನ್ಯಾಯಮಂಡಳಿಯ ಐತೀರ್ಪಿನ ಪ್ರಕಾರ ಮುಳುಗಡೆಯ ಪ್ರತಿ ಹಂತದಲ್ಲೂ ಗುಜರಾತ್ ಸರ್ಕಾರ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಕ್ಕೆ 18 ತಿಂಗಳ ಮುಂಚಿತವಾಗಿ ಸೂಚನೆ ನೀಡಬೇಕು. ಬಾಧಿತರನ್ನು ಬೇರೆಡೆಗೆ ಸಾಗಿಸಿ ಮರುವಸತಿ ಕಲ್ಪಿಸುವ ಪ್ರಕ್ರಿಯೆಗೆ ನಿಗದಿತ ಅವಧಿ ಮತ್ತು ನೋಟಿಸ್ ನೀಡಲೇಬೇಕಿದೆ.

ಇದೆಲ್ಲವನ್ನು ಗಮನಿಸಿ ನರ್ಮದಾ ನ್ಯಾಯಮಂಡಳಿಯ ಐತೀರ್ಪನ್ನು ಜಾರಿ ಮಾಡಬೇಕಿರುವ ಸರ್ಕಾರಿ ಸಂಸ್ಥೆ ನರ್ಮದಾ ನಿಯಂತ್ರಣ ಪ್ರಾಧಿಕಾರ. ಅಕ್ಟೋಬರ್ 15ರ ವೇಳೆಗೆ ಜಲಾಶಯದಲ್ಲಿ ಅದರ ಗರಿಷ್ಠ ಮಟ್ಟವಾದ 138.68 ಮೀಟರುಗಳಷ್ಟು ಎತ್ತರಕ್ಕೆ ನೀರನ್ನು ಸಂಗ್ರಹಿಸಲು ಈ ಪ್ರಾಧಿಕಾರ ಗುಜರಾತ್ ಸರ್ಕಾರಕ್ಕೆ ಅನುಮತಿ ನೀಡಿಬಿಟ್ಟಿದೆ.

ಕಳೆದ ಹದಿನೈದು ವರ್ಷಗಳ ಕಾಲ ಮಧ್ಯಪ್ರದೇಶವು ಗುಜರಾತಿನ ಅಡಿಯಾಳಿನಂತೆ ವಿಧೇಯತೆಯಿಂದ ನಡೆದುಕೊಂಡಿತು. ಮಧ್ಯಪ್ರದೇಶಕ್ಕೆ ಶಿವರಾಜ್‍ಸಿಂಗ್ ಮುಖ್ಯಮಂತ್ರಿ. ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಮೋದಿ ಪ್ರಧಾನಿ ಸ್ಥಾನದಲ್ಲಿ ವಿರಾಜಮಾನರು. ಅವರ ನಂತರ ಗುಜರಾತಿನಲ್ಲಿ ಆನಂದಿಬೆನ್ ಮತ್ತು ವಿಜಯ ರೂಪಾಣಿ. ಎರಡೂ ಕಡೆ ಬಿಜೆಪಿ ಸರ್ಕಾರಗಳು. ಶಿವರಾಜಸಿಂಗ್ ಅವರು ಮೋದಿಯವರಿಗೆ ಎದುರಾಡುವುದುಂಟೇ?

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಬಂದನಂತರ ಗುಜರಾತಿನಿಂದ ತನ್ನ ಜನರಿಗೆ ಆದ ಅನ್ಯಾಯವನ್ನು ಪ್ರಶ್ನಿಸತೊಡಗಿದೆ. ಒಪ್ಪಂದದ ಪ್ರಕಾರ ಗುಜರಾತ್ ತನಗೆ ವಿದ್ಯುಚ್ಛಕ್ತಿಯನ್ನು ಪೂರೈಸಿಲ್ಲ. ಪೂರೈಕೆ ತಪ್ಪಿಸಿದರೆ ನೀಡಬೇಕಾದ ಧನ ಪರಿಹಾರವನ್ನೂ ಪಾವತಿ ಮಾಡಿಲ್ಲ. ಪರಿಣಾಮವಾಗಿ ತಾನು 229 ಕೋಟಿ ರುಪಾಯಿ ತೆತ್ತು ವಿದ್ಯುತ್ ಖರೀದಿಸಬೇಕಾಯಿತು ಎಂದು ದೂರಿದೆ.

2017ರ ಸೆಪ್ಟಂಬರ್ ಏಳರ ತಮ್ಮ ಜನ್ಮದಿನದಂದು ತಮ್ಮ ತವರು ರಾಜ್ಯಕ್ಕೆ ನೀರುಣಿಸುವ ಮತ್ತು ನೆರೆಯ ರಾಜ್ಯಗಳಿಗೆ ವಿದ್ಯುಚ್ಛಕ್ತಿ ಒದಗಿಸುವ ಸರ್ದಾರ್ ಸರೋವರ್ ಜಲಾಶಯವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶಕ್ಕೆ ‘ಸಮರ್ಪಿಸಿದರು’.

ಮೋದಿಯವರು ದೇಶಕ್ಕೆ ಸಮರ್ಪಿಸಿದ್ದು ಸರ್ದಾರ್ ಸರೋವರ ಯೋಜನೆಯನ್ನೇ ಅಥವಾ ಜಲಾಶಯದ ದೈತ್ಯ ಗೋಡೆಯನ್ನೇ ಎಂಬ ಪ್ರಶ್ನೆಯನ್ನು ನರ್ಮದಾ ಬಚಾವ್ ಆಂದೋಲನದ ದಣಿವರಿಯದ ಮುಂದಾಳು ಮೇಧಾ ಪಾಟ್ಕರ್ ಎತ್ತಿದ್ದರು.

ಯಾವುದೇ ಯೋಜನೆಯನ್ನು ದೇಶಕ್ಕೆ ಅಥವಾ ಸಮಾಜಕ್ಕೆ ಸಮರ್ಪಿಸಬೇಕಿದ್ದರೆ ಕನಿಷ್ಠ ಪಕ್ಷ ಅದರ ನಿರ್ಮಾಣ ಪೂರ್ಣಗೊಂಡಿರಬೇಕು. ಅಂತಹ ಯೋಜನೆ ಜಲಾಶಯವಾಗಿದ್ದಲ್ಲಿ, ಕೇವಲ ಅದರ ಗೋಡೆಯನ್ನು ಉದ್ದೇಶಿತ ಎತ್ತರಕ್ಕೆ ಏರಿಸಿದರೆ ಸಾಕೇ ಅಥವಾ ಅದರ ಕಾಲುವೆಗಳ ನಿರ್ಮಾಣ ಕಾರ್ಯವನ್ನೂ ಪೂರ್ಣಗೊಳಿಸಬೇಕೇ? ಕೇವಲ ಜಲಾಶಯದಲ್ಲಿ ನೀರು ನಿಲ್ಲಿಸಿದ ಕೂಡಲೇ ರೈತರ ಹೊಲಗದ್ದೆಗಳಿಗೆ ನೀರು ಹರಿದುಬಿಡುವುದಿಲ್ಲ. ಅದಕ್ಕೆ ಕಾಲುವೆ, ಉಪಕಾಲುವೆ, ಕಿರುಕಾಲುವೆಗಳ ನಿರ್ಮಿಸಬೇಕಾಗುತ್ತದೆ.

ಒಟ್ಟು 71,287 ಕಿ.ಮೀ ಉದ್ದದ ಮುಖ್ಯ, ಉಪ ಹಾಗೂ ಕಿರುಕಾಲುವೆಗಳ ಪೈಕಿ 2019ರ ಮೇ 31ರ ಹೊತ್ತಿಗೆ ಪೂರ್ಣಗೊಂಡಿರುವ ಕಾಲುವೆಗಳ ಉದ್ದ 10,793 ಕಿ.ಮೀ. ಮಾತ್ರ. ಈ ಕಾಮಗಾರಿಗೆ ಇಲ್ಲಿಯತನಕ 70,167 ಕೋಟಿ ರುಪಾಯಿ ವೆಚ್ಚವಾಗಿದೆ. 2019ರ ಜುಲೈ ತಿಂಗಳಿನಲ್ಲಿ ಗುಜರಾತ್ ವಿಧಾನಸಭೆಯಲ್ಲಿ ನಡೆದ ಪ್ರಶ್ನೋತ್ತರ ಕಲಾಪ ಹೊರಗೆಡವಿರುವ ಮಾಹಿತಿಯಿದು.

38 ವರ್ಷಗಳ ಹಿಂದೆ ನರ್ಮದಾ ಜಲವಿವಾದ ನ್ಯಾಯಾಧಿಕರಣ 1979ರಲ್ಲಿ ತನ್ನ ಐತೀರ್ಪು ನೀಡಿದ ನಂತರ ಸರ್ದಾರ್ ಸರೋವರ ಯೋಜನೆ ರೂಪು ತಳೆಯಿತು. ಜವಾಹರಲಾಲ್ ನೆಹರೂ 1961ರಲ್ಲಿ ಅಡಿಗಲ್ಲು ಇರಿಸಿದ ಅಂದಿನ ಯೋಜನೆಯ ಎತ್ತರ ಕೇವಲ 49.37 ಮೀಟರುಗಳಾಗಿತ್ತು. ಯಾವುದೇ ಗಂಭೀರ ಸಾಮಾಜಿಕ- ಪರಿಸರ ಸಾಧಕಬಾಧಕಗಳು ಈ ಯೋಜನೆಗೆ ಇರಲಿಲ್ಲ.

ಯಾವುದು ಅಭಿವೃದ್ಧಿ ಮತ್ತು ಯಾವುದು ಅಭಿವೃದ್ಧಿ ಅಲ್ಲ ಎಂಬ ಜೀವಪರ ಒಳನೋಟವನ್ನೇ ಕಳೆದುಕೊಂಡು ಕುರುಡಾದ ಅಗಾಧ ಅಧಿಕಾರಬಲದ ಪ್ರಭುತ್ವ ಮತ್ತು ಅದರೊಡನೆ ಕೈ ಕಲೆಸಿರುವ ಲಾಭಬಡುಕ ಔದ್ಯೋಗಿಕ ಹಿತಾಸಕ್ತಿಗಳು ಒಂದು ಕಡೆಗೆ. ಈ ಅಗಾಧ ಅಪವಿತ್ರ ಮೈತ್ರಿಯ ಮುಂದೆ ಬದುಕಿ ಉಳಿಯಲು ಕೈಕಾಲು ಬಡಿದರೆ ಅದೇ ಹೆಚ್ಚು ಎನ್ನುವ ಸ್ಥಿತಿಯಲ್ಲಿರುವ ಬಲಹೀನ ಜನಸಮುದಾಯಗಳು ಮತ್ತೊಂದೆಡೆ.

ಅಸಮಾನರ ನಡುವಿನ ಈ ಹೋರಾಟದಲ್ಲಿ ಅಂತಿಮ ಗೆಲುವು ಯಾರದೆಂಬುದು ಆರಂಭದಲ್ಲೇ ತೀರ್ಮಾನವಾಗಿ ಹೋಗಿತ್ತು. ನರ್ಮದಾ ಕಣಿವೆಯ ಆದಿವಾಸಿಗಳು, ರೈತರು-ಕೂಲಿಕಾರರು, ಮೀನುಗಾರರು-ಕುಂಬಾರರು, ದಲಿತ-ದುರ್ಬಲರ ಇರುವೆ ಸೈನ್ಯ ಈ ಸಂಘರ್ಷವನ್ನು ಮೂರು ದಶಕಗಳ ಕಾಲ ಜಾರಿಯಲ್ಲಿ ಇರಿಸಿ ದೇಶವಿದೇಶಗಳ ಗಮನ ಸೆಳೆದಿತ್ತು. ಇಂತಹ ಆಂದೋಲನವೊಂದು ಕಾಲದ ಪ್ರವಾಹಕ್ಕೆ ಮಣಿದು ವಿಧಿಯಿಲ್ಲದೆ ತಲೆ ಬಾಗಿದೆ. ಜೀವಧಾರಣೆಯ ಕನಿಷ್ಠ ಹಕ್ಕಿಗಾಗಿ ಬಡಿದಾಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....