Homeಮುಖಪುಟಗುಜರಾತಿನ ಜೀವರೇಖೆ - ಮಧ್ಯಪ್ರದೇಶಕ್ಕೆ ಮರಣರೇಖೆ

ಗುಜರಾತಿನ ಜೀವರೇಖೆ – ಮಧ್ಯಪ್ರದೇಶಕ್ಕೆ ಮರಣರೇಖೆ

ಗುಜರಾತಿನ ಅನುಕೂಲಕ್ಕಾಗಿ ಸರ್ದಾರ್ ಸರೋವರ್ ಜಲಾಶಯದ ನೀರಿನ ಮಟ್ಟ ಹೆಚ್ಚಿಸುತ್ತಿದ್ದಂತೆ ಇತ್ತ ಮಧ್ಯಪ್ರದೇಶದ 178 ಹಳ್ಳಿಗಳ ಜನರು ಹಿನ್ನೀರಿನಲ್ಲಿ ಮುಳುಗಿ ಜಲಸಮಾಧಿಯಾಗಲಿದ್ದಾರೆ..

- Advertisement -
- Advertisement -

| ಡಿ.ಉಮಾಪತಿ |

ಮುಳುಗಡೆಯಿಂದ ಬಾಧಿತರಾದ ಎಲ್ಲ ಸಂತ್ರಸ್ತರ ಪುನರ್ವಸತಿಯನ್ನು ಸಮರೋಪಾದಿಯಲ್ಲಿ ಪೂರ್ಣಗೊಳಿಸಬೇಕು. ಅಲ್ಲಿಯತನಕ ಸರ್ದಾರ್ ಸರೋವರ ಜಲಾಶಯದ ನೀರಿನ ಮಟ್ಟವನ್ನು 122 ಮೀಟರುಗಳಿಗೆ ಸ್ಥಗಿತಗೊಳಿಸಬೇಕು ಎಂಬ ಬೇಡಿಕೆ ಅತ್ಯಂತ ನ್ಯಾಯಬದ್ಧ ಮತ್ತು ಅಗದೀ ಮಾನವೀಯ. ಇಂತಹ ಬೇಡಿಕೆಯಲ್ಲಿ ಅದ್ಯಾವ ಅನ್ಯಾಯ ಅಡಗಿದೆ?

ಸಂತ್ರಸ್ತರ ಮರುವಸತಿ ಪೂರ್ಣವಾಗುವ ತನಕ ಸರ್ದಾರ್ ಸರೋವರ ಜಲಾಶಯದ ನೀರಿನ ಮಟ್ಟವನ್ನು 122 ಮೀಟರುಗಳಿಗೆ ಸ್ಥಗಿತಗೊಳಿಸಬೇಕು ಎಂಬ ಬೇಡಿಕೆ ಅತ್ಯಂತ ನ್ಯಾಯಬದ್ಧ ಮತ್ತು ಅಪ್ಪಟ ಮಾನವೀಯ.

ಗುಜರಾತಿನ ಸರ್ದಾರ್ ಸರೋವರ ಜಲಾಶಯ ಇನ್ನೇನು ತುಂಬಿ ತುಳುಕಲಿದೆ. 136 ಮೀಟರುಗಳಷ್ಟು ಎತ್ತರ ನೀರು ನಿಂತಿದೆ. ಗರಿಷ್ಠ ಮಟ್ಟ ಮುಟ್ಟಲು ಇನ್ನು ಎರಡೂವರೆ ಮೀಟರು ಬಾಕಿ.

ಗುಜರಾತಿನ ಈ ಜೀವನರೇಖೆಯು, ಮಧ್ಯಪ್ರದೇಶದ ನಾಲ್ಕು ಜಿಲ್ಲೆಗಳ ಸಂತ್ರಸ್ತರ ಪಾಲಿಗೆ ‘ಮರಣರೇಖೆ’ಯಾಗಿ ಪರಿಣಮಿಸಿದೆ.

ಈ ಜಲಾಶಯದ ಹಿನ್ನೀರಿನಲ್ಲಿ ಮಧ್ಯಪ್ರದೇಶದ 178 ಹಳ್ಳಿಗಳು ಜಲಸಮಾಧಿ ಆಗತೊಡಗಿವೆ. ಬುಡಮೇಲಾದ ಬದುಕುಗಳು ಬೀದಿಗೆ ಬಿದ್ದಿವೆ. ಖಾಪರ್ ಖೇಡಾ ಎಂಬ ಗ್ರಾಮವನ್ನು ನೀರು ನುಂಗತೊಡಗಿದಾಗ ಅಲ್ಲಿನ ನಿವಾಸಿ 46 ವರ್ಷ ವಯಸ್ಸಿನ ಪ್ರವೀಣ್ ವಿಶ್ವಕರ್ಮನಿಗೆ ಬದುಕು ಇನ್ನು ಸಾಕೆನಿಸಿತು. ನೀರಿಗೆ ಧುಮುಕಿ ಸಾವನ್ನು ಅರಸಿದ. ವಯಸ್ಸು ಸಂದ ಮಹಿಳೆಯೊಬ್ಬಳು ಅರ್ಧ ಮುಳುಗಿದ್ದ ತನ್ನ ಮನೆಯನ್ನು ತೊರೆದು ಬರಲಾರದೆ ಕರುಳು ಕಿತ್ತು ಬರುವಂತೆ ರೋದಿಸಿದ್ದಳು. ಮಕ್ಕಳಿಬ್ಬರು ಆಕೆಯನ್ನು ಎತ್ತಿಕೊಂಡು ದೋಣಿಗೆ ಎಳೆದುತಂದ ದೃಶ್ಯಸರಣಿ ಹೃದಯವಿದ್ರಾವಕ. ಸಮೂಹ ಮಾಧ್ಯಮಗಳ ಕಣ್ಣಿಗೆ ಬೀಳದೆ ನಡೆದಿರುವ ಇಂತಹ ದುರಂತ ದುಃಖ ಶ್ರೇಣಿಗಳು ಅದೆಷ್ಟಿವೆಯೋ ಅಂದಾಜು ಮಾಡಲಾದೀತೇ?

ರಾಷ್ಟ್ರೀಯ ವಿಪತ್ತು ನೆರವು ದಳ ಆತನನ್ನು ಪಾರು ಮಾಡಿತು. ಆದರೆ ಆತನಂತಹ ಸಾವಿರಾರು ಸಂತ್ರಸ್ತರನ್ನು ದುರ್ಭರ ಬದುಕಿನಿಂದ ಪಾರು ಮಾಡುವ ದಳ ಯಾವುದೂ ಕಾಣುತ್ತಿಲ್ಲ. ಬೇಲಿಯೇ ಎದ್ದು ಹೊಲವನ್ನು ಮೇದರೆ….. ಹೆತ್ತಮ್ಮ ಮಗುವಿಗೆ ವಿಷವೂಡಿಸಿದರೆ….. ಬಳ್ಳಿಯೇ ಹಣ್ಣುಗಳನ್ನು ತಿಂದು ಹಾಕಿದರೆ…. ಹರನೇ ಕೊಂದರೆ ಪರ ಕಾಯುವನೇ ಎನ್ನುತ್ತದೆ ಸೋಮೇಶ್ವರ ಶತಕ. ಹೌದು, ಕಾಯಬೇಕಿರುವ ಸರ್ಕಾರಗಳು ಕೊಲ್ಲಲು ಹೇಸುತ್ತಿಲ್ಲ. ಇಲ್ಲವಾದರೆ, ಒಂದು ರಾಜ್ಯದ ಜಲಾಶಯ ತುಂಬಿಸಲು ಮತ್ತೊಂದು ರಾಜ್ಯದ ಜನರ ಬದುಕುಗಳು ಬಲಿಯಾದರೂ ಚಿಂತೆಯಿಲ್ಲ ಎಂಬ ನಿರ್ಲಕ್ಷ್ಯ ಧೋರಣೆಯನ್ನು ತಳೆಯಲು ಬಂದೀತೇ? ಗುಜರಾತಿನ ಮುಖ್ಯಮಂತ್ರಿ ಮತ್ತು ಅದೇ ರಾಜ್ಯದ ಮಗನಾದ ಪ್ರಧಾನಮಂತ್ರಿಯವರು ಜಲಾಶಯ ತುಂಬಿತುಳುಕುವ ಗಳಿಗೆಗಳನ್ನು ಕುರುಡಾಗಿ ಸಂಭ್ರಮಿಸುತ್ತಿದ್ದಾರೆಯೇ? ಸಂಭ್ರಮದ ಜೊತೆಜೊತೆಗೆ ಮಧ್ಯಪ್ರದೇಶದ ಆದಿವಾಸಿ ಪಟ್ಟಿಯ ಹಳ್ಳಿಗಳ ಜಲಸಮಾಧಿಯ ಕುರಿತು ಅವರ ಮನಸುಗಳು ತುಸುವಾದರೂ ಮರುಗಲಿಲ್ಲವೇಕೆ?

ನಿಮ್ಮನ್ನು ರೋಮಾಂಚನಗೊಳಿಸುವ ಸುದ್ದಿ…. ಸರ್ದಾರ್ ಸರೋವರ ಜಲಾಶಯವು 134 ಮೀಟರುಗಳ ಐತಿಹಾಸಿಕ ಮಟ್ಟ ಮುಟ್ಟಿದೆ. ಕೆಲ ಮನೋಹರ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದೇನೆ, ‘ಸ್ಟ್ಯಾಚ್ಯೂ ಆಫ್ ಯೂನಿಟಿ’ಯನ್ನು ನೋಡಲು ಹೋಗುತ್ತೀರಿ ಎಂಬ ಆಸೆಯೊಂದಿಗೆ’ ಎಂಬುದಾಗಿ ಪ್ರಧಾನಿ ಟ್ವಿಟರ್‍ನಲ್ಲಿ ರೋಮಾಂಚನ ಹಂಚಿಕೊಳ್ಳುತ್ತಾರೆ.

ಗುಜರಾತಿನ ಶೇ.80ರಷ್ಟು ಕುಡಿಯುವ ನೀರು, ಶೇ.45ರಷ್ಟು ನೀರಾವರಿ ಅಗತ್ಯವನ್ನು ಸರ್ದಾರ್ ಸರೋವರ ಪೂರ್ಣಗೊಳಿಸಲಿದೆ. ಬಾಯಾರಿದ ಸೌರಾಷ್ಟ್ರಕ್ಕೂ ಇದೇ ಜೀವದಾಸರೆ.

ಮಧ್ಯಪ್ರದೇಶದ 178 ಹಳ್ಳಿಗಳ ಜನರಿಗೆ ಈಗಲೂ ಪೂರ್ಣಪ್ರಮಾಣದ ಮರುವಸತಿ ಕಲ್ಪಿಸಿಲ್ಲ. ಜಮೀನು ಕಳೆದುಕೊಂಡವರಿಗೆ ಬದಲಿ ಜಮೀನು, ಮನೆ ಕಳೆದುಕೊಂಡವರಿಗೆ ಬದಲಿ ಮನೆ ದೊರೆತಿಲ್ಲ. ಮರುವಸತಿ ಪ್ರದೇಶಗಳಲ್ಲಿ ಉಳಿದ ನಾಗರಿಕ ಸೌಲಭ್ಯಗಳಿರಲಿ, ಬಹಳಷ್ಟು ಕಡೆ ಕುಡಿಯುವ ನೀರು ಕೂಡ ಗತಿಯಿಲ್ಲ. ಧಾರ್, ಅಲಿರಾಜಪುರ, ಬಡ್ವಾನಿ ಹಾಗೂ ಖಾಗೋರ್ಂ ಜಿಲ್ಲೆಗಳ ಸಂತ್ರಸ್ತರ ಅತಂತ್ರ ಬದುಕುಗಳು ಬೇರೂರಲು ಇನ್ನೆಷ್ಟು ದಶಕಗಳು ಬೇಕೋ!

ಇತ್ತೀಚಿನವರೆಗೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಸಂತ್ರಸ್ತರ ಮರುವಸತಿ ಕಾರ್ಯವನ್ನು ಸಮರ್ಪಕವಾಗಿ ಮಾಡಿಲ್ಲ ಮತ್ತು ಪೂರ್ಣಗೊಳಿಸಿಯೂ ಇಲ್ಲ ಎಂದು ಮಧ್ಯಪ್ರದೇಶದ ನರ್ಮದಾ ಕಣಿವೆ ಅಭಿವೃದ್ಧಿ ಮಂತ್ರಿ ಸುರೇಂದ್ರ ಬಾಘೇಲ್ ಆಪಾದಿಸಿದ್ದಾರೆ.

ಮುಳುಗಡೆಯಿಂದ ಬಾಧಿತರಾದ ಎಲ್ಲ ಸಂತ್ರಸ್ತರ ಪುನರ್ವಸತಿಯನ್ನು ಸಮರೋಪಾದಿಯಲ್ಲಿ ಪೂರ್ಣಗೊಳಿಸಬೇಕು. ಅಲ್ಲಿಯತನಕ ಸರ್ದಾರ್ ಸರೋವರ ಜಲಾಶಯದ ನೀರಿನ ಮಟ್ಟವನ್ನು 122 ಮೀಟರುಗಳಿಗೆ ಸ್ಥಗಿತಗೊಳಿಸಬೇಕು ಎಂಬ ಬೇಡಿಕೆ ಅತ್ಯಂತ ನ್ಯಾಯಬದ್ಧ ಮತ್ತು ಅಗದೀ ಮಾನವೀಯ. ಇಂತಹ ಬೇಡಿಕೆಯಲ್ಲಿ ಅದ್ಯಾವ ಅನ್ಯಾಯ ಅಡಗಿದೆ? ಬಲ್ಲವರು ಹೇಳಬೇಕು.

ಜಲಾಶಯದ ತೂಬಿನ ಬಾಗಿಲುಗಳ ಬಲವನ್ನು ಪರೀಕ್ಷಿಸಲು 138.68 ಮೀಟರುಗಳ ಎತ್ತರಕ್ಕೆ ನೀರು ಸಂಗ್ರಹ ಮಾಡಲೇಬೇಕಿದೆ ಎಂಬುದು ಗುಜರಾತಿನ ವಾದ. ಪರೀಕ್ಷೆ ಈವರೆಗೆ ನಡೆದೇ ಇಲ್ಲ ಎಂಬಂತೇನೂ ಇಲ್ಲ. 2017ರಲ್ಲಿ 131 ಮೀಟರು ಸಂಗ್ರಹ ಸಾಮಥ್ರ್ಯದವರೆಗೆ ಪರೀಕ್ಷೆ ಮಾಡಲಾಗಿದೆ. ತೂಬಿನ ಬಾಗಿಲುಗಳ ಬಲ ಪರೀಕ್ಷೆಯು ಮಾನವೀಯ ದುರಂತದ ದಂಡ ತೆತ್ತು ಮಾಡಬೇಕಿದೆಯೇ? ಒಂದು ವರ್ಷ ಬಿಟ್ಟು ಮಾಡಿದರೆ ಮುಳುಗಿಹೋಗುವುದಾದರೂ ಏನು?

ಜಲಾಶಯದ ಹಿನ್ನೀರಿನ ಪ್ರಭಾವ ತಣಿದು ಅಡಗುವತನಕ ಒಂದು ವರ್ಷ ಕಾಲ ಗರಿಷ್ಠ ಶೇಖರಣೆ ಮಾಡಕೂಡದು ಎಂಬುದು ನರ್ಮದಾ ಬಚಾವ್ ಆಂದೋಲನದ ಆಗ್ರಹ. ಮುಳುಗಡೆಯಿಂದ ಪ್ರಭಾವಿತವಾಗುವ ಗ್ರಾಮಗಳ ಸಂಖ್ಯೆ 178 ಎಂದು ರಾಜ್ಯ ಸರ್ಕಾರ ಒಪ್ಪಿಕೊಳ್ಳಬೇಕಾದರೆ ಮೇಧಾ ಪಾಟ್ಕರ್ ಮತ್ತು ಅವರ ಸಂಗಾತಿಗಳು ಒಂಬತ್ತು ದಿನಗಳ ಉಪವಾಸ ಸತ್ಯಾಗ್ರಹ ಮಾಡಬೇಕಾಯಿತು. ಸಮಸ್ಯೆ ಪರಿಹಾರಕ್ಕೆ ಅರ್ಥಪೂರ್ಣ ಮಾತುಕತೆಗೆ ಮಧ್ಯಪ್ರದೇಶ ಸರ್ಕಾರವೇನೋ ಒಪ್ಪಿತು. ಆದರೆ ಶೇಖರಣೆಯನ್ನು ತಾತ್ಕಾಲಿಕವಾಗಿ 122 ಮೀಟರುಗಳಿಗೆ ಸ್ಥಗಿತಗೊಳಿಸಿ, ತೂಬಿನ ಬಾಗಿಲುಗಳನ್ನು ತೆರೆದಿಡಬೇಕು ಎಂಬ ಬೇಡಿಕೆಯನ್ನು ಗುಜರಾತ್ ಸರ್ಕಾರ ಕಿವಿ ಮೇಲೆ ಹಾಕಿಕೊಂಡಿಲ್ಲ. ಜಲಾಶಯ ತುಂಬಿಸುವ ಸಂಭ್ರಮದಲ್ಲಿ ಮುಳುಗಿದೆ. ನೆರೆಯ ರಾಜ್ಯದ ಮುಳುಗಡೆ ಪ್ರದೇಶಗಳ ಜನರ ಆರ್ತನಾದ ಅದಕ್ಕೆ ಕೇಳಿಸುತ್ತಲೇ ಇಲ್ಲ. ನರ್ಮದಾ ನಿಯಂತ್ರಣ ಪ್ರಾಧಿಕಾರ ಕೂಡ ನಿರ್ಲಕ್ಷ್ಯ ತಳೆದಿದೆ.

ಸರ್ದಾರ್ ಸರೋವರ ಜಲಾಶಯವು ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ರಾಜಸ್ತಾನಕ್ಕೆ ನೀರಾವರಿ ಮತ್ತು ವಿದ್ಯುಚ್ಛಕ್ತಿ ಉತ್ಪಾದನೆಯ ಮೂಲ. ನರ್ಮದಾ ಜಲವಿವಾದ ನ್ಯಾಯಮಂಡಳಿಯ ಐತೀರ್ಪಿನ ಪ್ರಕಾರ ಮುಳುಗಡೆಯ ಪ್ರತಿ ಹಂತದಲ್ಲೂ ಗುಜರಾತ್ ಸರ್ಕಾರ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಕ್ಕೆ 18 ತಿಂಗಳ ಮುಂಚಿತವಾಗಿ ಸೂಚನೆ ನೀಡಬೇಕು. ಬಾಧಿತರನ್ನು ಬೇರೆಡೆಗೆ ಸಾಗಿಸಿ ಮರುವಸತಿ ಕಲ್ಪಿಸುವ ಪ್ರಕ್ರಿಯೆಗೆ ನಿಗದಿತ ಅವಧಿ ಮತ್ತು ನೋಟಿಸ್ ನೀಡಲೇಬೇಕಿದೆ.

ಇದೆಲ್ಲವನ್ನು ಗಮನಿಸಿ ನರ್ಮದಾ ನ್ಯಾಯಮಂಡಳಿಯ ಐತೀರ್ಪನ್ನು ಜಾರಿ ಮಾಡಬೇಕಿರುವ ಸರ್ಕಾರಿ ಸಂಸ್ಥೆ ನರ್ಮದಾ ನಿಯಂತ್ರಣ ಪ್ರಾಧಿಕಾರ. ಅಕ್ಟೋಬರ್ 15ರ ವೇಳೆಗೆ ಜಲಾಶಯದಲ್ಲಿ ಅದರ ಗರಿಷ್ಠ ಮಟ್ಟವಾದ 138.68 ಮೀಟರುಗಳಷ್ಟು ಎತ್ತರಕ್ಕೆ ನೀರನ್ನು ಸಂಗ್ರಹಿಸಲು ಈ ಪ್ರಾಧಿಕಾರ ಗುಜರಾತ್ ಸರ್ಕಾರಕ್ಕೆ ಅನುಮತಿ ನೀಡಿಬಿಟ್ಟಿದೆ.

ಕಳೆದ ಹದಿನೈದು ವರ್ಷಗಳ ಕಾಲ ಮಧ್ಯಪ್ರದೇಶವು ಗುಜರಾತಿನ ಅಡಿಯಾಳಿನಂತೆ ವಿಧೇಯತೆಯಿಂದ ನಡೆದುಕೊಂಡಿತು. ಮಧ್ಯಪ್ರದೇಶಕ್ಕೆ ಶಿವರಾಜ್‍ಸಿಂಗ್ ಮುಖ್ಯಮಂತ್ರಿ. ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಮೋದಿ ಪ್ರಧಾನಿ ಸ್ಥಾನದಲ್ಲಿ ವಿರಾಜಮಾನರು. ಅವರ ನಂತರ ಗುಜರಾತಿನಲ್ಲಿ ಆನಂದಿಬೆನ್ ಮತ್ತು ವಿಜಯ ರೂಪಾಣಿ. ಎರಡೂ ಕಡೆ ಬಿಜೆಪಿ ಸರ್ಕಾರಗಳು. ಶಿವರಾಜಸಿಂಗ್ ಅವರು ಮೋದಿಯವರಿಗೆ ಎದುರಾಡುವುದುಂಟೇ?

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಬಂದನಂತರ ಗುಜರಾತಿನಿಂದ ತನ್ನ ಜನರಿಗೆ ಆದ ಅನ್ಯಾಯವನ್ನು ಪ್ರಶ್ನಿಸತೊಡಗಿದೆ. ಒಪ್ಪಂದದ ಪ್ರಕಾರ ಗುಜರಾತ್ ತನಗೆ ವಿದ್ಯುಚ್ಛಕ್ತಿಯನ್ನು ಪೂರೈಸಿಲ್ಲ. ಪೂರೈಕೆ ತಪ್ಪಿಸಿದರೆ ನೀಡಬೇಕಾದ ಧನ ಪರಿಹಾರವನ್ನೂ ಪಾವತಿ ಮಾಡಿಲ್ಲ. ಪರಿಣಾಮವಾಗಿ ತಾನು 229 ಕೋಟಿ ರುಪಾಯಿ ತೆತ್ತು ವಿದ್ಯುತ್ ಖರೀದಿಸಬೇಕಾಯಿತು ಎಂದು ದೂರಿದೆ.

2017ರ ಸೆಪ್ಟಂಬರ್ ಏಳರ ತಮ್ಮ ಜನ್ಮದಿನದಂದು ತಮ್ಮ ತವರು ರಾಜ್ಯಕ್ಕೆ ನೀರುಣಿಸುವ ಮತ್ತು ನೆರೆಯ ರಾಜ್ಯಗಳಿಗೆ ವಿದ್ಯುಚ್ಛಕ್ತಿ ಒದಗಿಸುವ ಸರ್ದಾರ್ ಸರೋವರ್ ಜಲಾಶಯವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶಕ್ಕೆ ‘ಸಮರ್ಪಿಸಿದರು’.

ಮೋದಿಯವರು ದೇಶಕ್ಕೆ ಸಮರ್ಪಿಸಿದ್ದು ಸರ್ದಾರ್ ಸರೋವರ ಯೋಜನೆಯನ್ನೇ ಅಥವಾ ಜಲಾಶಯದ ದೈತ್ಯ ಗೋಡೆಯನ್ನೇ ಎಂಬ ಪ್ರಶ್ನೆಯನ್ನು ನರ್ಮದಾ ಬಚಾವ್ ಆಂದೋಲನದ ದಣಿವರಿಯದ ಮುಂದಾಳು ಮೇಧಾ ಪಾಟ್ಕರ್ ಎತ್ತಿದ್ದರು.

ಯಾವುದೇ ಯೋಜನೆಯನ್ನು ದೇಶಕ್ಕೆ ಅಥವಾ ಸಮಾಜಕ್ಕೆ ಸಮರ್ಪಿಸಬೇಕಿದ್ದರೆ ಕನಿಷ್ಠ ಪಕ್ಷ ಅದರ ನಿರ್ಮಾಣ ಪೂರ್ಣಗೊಂಡಿರಬೇಕು. ಅಂತಹ ಯೋಜನೆ ಜಲಾಶಯವಾಗಿದ್ದಲ್ಲಿ, ಕೇವಲ ಅದರ ಗೋಡೆಯನ್ನು ಉದ್ದೇಶಿತ ಎತ್ತರಕ್ಕೆ ಏರಿಸಿದರೆ ಸಾಕೇ ಅಥವಾ ಅದರ ಕಾಲುವೆಗಳ ನಿರ್ಮಾಣ ಕಾರ್ಯವನ್ನೂ ಪೂರ್ಣಗೊಳಿಸಬೇಕೇ? ಕೇವಲ ಜಲಾಶಯದಲ್ಲಿ ನೀರು ನಿಲ್ಲಿಸಿದ ಕೂಡಲೇ ರೈತರ ಹೊಲಗದ್ದೆಗಳಿಗೆ ನೀರು ಹರಿದುಬಿಡುವುದಿಲ್ಲ. ಅದಕ್ಕೆ ಕಾಲುವೆ, ಉಪಕಾಲುವೆ, ಕಿರುಕಾಲುವೆಗಳ ನಿರ್ಮಿಸಬೇಕಾಗುತ್ತದೆ.

ಒಟ್ಟು 71,287 ಕಿ.ಮೀ ಉದ್ದದ ಮುಖ್ಯ, ಉಪ ಹಾಗೂ ಕಿರುಕಾಲುವೆಗಳ ಪೈಕಿ 2019ರ ಮೇ 31ರ ಹೊತ್ತಿಗೆ ಪೂರ್ಣಗೊಂಡಿರುವ ಕಾಲುವೆಗಳ ಉದ್ದ 10,793 ಕಿ.ಮೀ. ಮಾತ್ರ. ಈ ಕಾಮಗಾರಿಗೆ ಇಲ್ಲಿಯತನಕ 70,167 ಕೋಟಿ ರುಪಾಯಿ ವೆಚ್ಚವಾಗಿದೆ. 2019ರ ಜುಲೈ ತಿಂಗಳಿನಲ್ಲಿ ಗುಜರಾತ್ ವಿಧಾನಸಭೆಯಲ್ಲಿ ನಡೆದ ಪ್ರಶ್ನೋತ್ತರ ಕಲಾಪ ಹೊರಗೆಡವಿರುವ ಮಾಹಿತಿಯಿದು.

38 ವರ್ಷಗಳ ಹಿಂದೆ ನರ್ಮದಾ ಜಲವಿವಾದ ನ್ಯಾಯಾಧಿಕರಣ 1979ರಲ್ಲಿ ತನ್ನ ಐತೀರ್ಪು ನೀಡಿದ ನಂತರ ಸರ್ದಾರ್ ಸರೋವರ ಯೋಜನೆ ರೂಪು ತಳೆಯಿತು. ಜವಾಹರಲಾಲ್ ನೆಹರೂ 1961ರಲ್ಲಿ ಅಡಿಗಲ್ಲು ಇರಿಸಿದ ಅಂದಿನ ಯೋಜನೆಯ ಎತ್ತರ ಕೇವಲ 49.37 ಮೀಟರುಗಳಾಗಿತ್ತು. ಯಾವುದೇ ಗಂಭೀರ ಸಾಮಾಜಿಕ- ಪರಿಸರ ಸಾಧಕಬಾಧಕಗಳು ಈ ಯೋಜನೆಗೆ ಇರಲಿಲ್ಲ.

ಯಾವುದು ಅಭಿವೃದ್ಧಿ ಮತ್ತು ಯಾವುದು ಅಭಿವೃದ್ಧಿ ಅಲ್ಲ ಎಂಬ ಜೀವಪರ ಒಳನೋಟವನ್ನೇ ಕಳೆದುಕೊಂಡು ಕುರುಡಾದ ಅಗಾಧ ಅಧಿಕಾರಬಲದ ಪ್ರಭುತ್ವ ಮತ್ತು ಅದರೊಡನೆ ಕೈ ಕಲೆಸಿರುವ ಲಾಭಬಡುಕ ಔದ್ಯೋಗಿಕ ಹಿತಾಸಕ್ತಿಗಳು ಒಂದು ಕಡೆಗೆ. ಈ ಅಗಾಧ ಅಪವಿತ್ರ ಮೈತ್ರಿಯ ಮುಂದೆ ಬದುಕಿ ಉಳಿಯಲು ಕೈಕಾಲು ಬಡಿದರೆ ಅದೇ ಹೆಚ್ಚು ಎನ್ನುವ ಸ್ಥಿತಿಯಲ್ಲಿರುವ ಬಲಹೀನ ಜನಸಮುದಾಯಗಳು ಮತ್ತೊಂದೆಡೆ.

ಅಸಮಾನರ ನಡುವಿನ ಈ ಹೋರಾಟದಲ್ಲಿ ಅಂತಿಮ ಗೆಲುವು ಯಾರದೆಂಬುದು ಆರಂಭದಲ್ಲೇ ತೀರ್ಮಾನವಾಗಿ ಹೋಗಿತ್ತು. ನರ್ಮದಾ ಕಣಿವೆಯ ಆದಿವಾಸಿಗಳು, ರೈತರು-ಕೂಲಿಕಾರರು, ಮೀನುಗಾರರು-ಕುಂಬಾರರು, ದಲಿತ-ದುರ್ಬಲರ ಇರುವೆ ಸೈನ್ಯ ಈ ಸಂಘರ್ಷವನ್ನು ಮೂರು ದಶಕಗಳ ಕಾಲ ಜಾರಿಯಲ್ಲಿ ಇರಿಸಿ ದೇಶವಿದೇಶಗಳ ಗಮನ ಸೆಳೆದಿತ್ತು. ಇಂತಹ ಆಂದೋಲನವೊಂದು ಕಾಲದ ಪ್ರವಾಹಕ್ಕೆ ಮಣಿದು ವಿಧಿಯಿಲ್ಲದೆ ತಲೆ ಬಾಗಿದೆ. ಜೀವಧಾರಣೆಯ ಕನಿಷ್ಠ ಹಕ್ಕಿಗಾಗಿ ಬಡಿದಾಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...