ದೆಹಲಿ ವಿಧಾನಸಭೆಯಲ್ಲಿ ಸುರಂಗ ಮಾರ್ಗವೊಂದು ಪತ್ತೆಯಾಗಿದ್ದು, ಸ್ವಾತಂತ್ರ್ಯ ಹೋರಾಟ ನಡೆಯುತ್ತಿದ್ದ ಸಂದರ್ಭದಲ್ಲಿ ಬ್ರಿಟಿಷರು ಸ್ವಾತಂತ್ರ್ಯ ಹೋರಾಟಗಾರರನ್ನು ಹತ್ತಿಕ್ಕಲು ಈ ಸುರಂಗವನ್ನು ಬಳಸುತ್ತಿದ್ದರು ಹೇಳಲಾಗಿದೆ. ಆದರೆ ಈ ಸುರಂಗದ ಬಗ್ಗೆ 2016 ರಲ್ಲಿ ಬಿಬಿಸಿ ಸುದ್ದಿ ಮಾಡಿ, ವಿಡಿಯೊ ಬಹಿರಂಗಪಡಿಸಿತ್ತು.
ಈಗ ಮತ್ತೆ ಹಳೆ ಸುದ್ದಿಗೆ ಜೀವ ಬಂದಿದ್ದು, ರಾಷ್ಟ್ರೀಯ ಮಾಧ್ಯಮಗಳು ಈ ಬಗ್ಗೆ ವರದಿ ಮಾಡುತ್ತಿವೆ. ಬಿಬಿಸಿ 2016 ರ ಮಾರ್ಚ್ 26 ರಂದು ಈ ಸುರಂಗ ಮಾರ್ಗದ ಬಗ್ಗೆ ಸುದ್ದಿ ಮಾಡಿ, ವಿಡಿಯೊ ಕೂಡ ಬಹಿರಂಗ ಪಡಿಸಿತ್ತು. ಜೊತೆಗೆ ಸ್ಪೀಕರ್ ರಾಮ್ ನಿವಾಸ್ ಗೋಯೆಲ್ ಅವರು ಮತ್ತು ಇತಿಹಾಸಕಾರ ವಿಲಿಯಂ ಡಾಲ್ರಿಂಪಲ್ ಅವರ ಹೇಳಿಕೆಗಳನ್ನು ದಾಖಲಿಸಿತ್ತು.
“ಈ ಸುರಂಗ ಮಾರ್ಗವು ವಿಧಾನಸಭೆಯಿಂದ ಕೆಂಪು ಕೋಟೆಗೆ ಸಂಪರ್ಕಿಸುತ್ತದೆ. ಬ್ರಿಟಿಷರು ಇದನ್ನು ಬಳಸುತ್ತಿದ್ದರು ಎಂದು ದೆಹಲಿ ವಿಧಾನಸಭಾ ಸ್ಪೀಕರ್ ರಾಮ್ ನಿವಾಸ್ ಗೋಯೆಲ್ ಹೇಳಿದ್ದಾರೆ.
“ನಾನು 1993ರಲ್ಲಿ ಶಾಸಕರಾಗಿ ಆಯ್ಕೆಯಾದಾಗ ವಿಧಾನಸಭೆಯಿಂದ ಕೆಂಪುಕೋಟೆಗೆ ಸಂಪರ್ಕಿಸುವ ಸುರಂಗದ ಬಗ್ಗೆ ಕೇಳಿದ್ದೆ. ನಾನು ಅದರ ಇತಿಹಾಸವನ್ನು ಹುಡುಕಲು ಪ್ರಯತ್ನಿಸಿದ್ದೆ. ಆದರೆ ಅದರ ಬಗ್ಗೆ ಸ್ಪಷ್ಟತೆ ಇರಲಿಲ್ಲ” ಎಂದು ಈಗ ಎಎನ್ಐಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಉತ್ತರಪ್ರದೇಶ: ಮತ್ತೊಬ್ಬ ಮಹಿಳೆಗಾಗಿ ಹೆಂಡತಿ, ಪುಟ್ಟ ಮಕ್ಕಳನ್ನು ಕೊಂದು, ಮನೆಯಲ್ಲಿ ಹೂತು ಪರಾರಿಯಾಗಿದ್ದ ವ್ಯಕ್ತಿ ಬಂಧನ
We have managed to identify its mouth (origin) but won't dig any further…Soon we will refurbish it and make it available for the public. Hoping the renovation work to be done by August 15 next year: Delhi Legislative Assembly Speaker Ram Niwas Goel pic.twitter.com/4PctM4WW8V
— ANI (@ANI) September 2, 2021
“ಈಗ ನಮಗೆ ಸುರಂಗದ ದ್ವಾರ ಪತ್ತೆಯಾಗಿದೆ. ಆದರೆ ಮೆಟ್ರೋ ಯೋಜನೆಗಳು ಮತ್ತು ಒಳಚರಂಡಿ ಸ್ಥಾಪನೆಯಿಂದಾಗಿ ಸುರಂಗದ ಎಲ್ಲಾ ಮಾರ್ಗಗಳು ನಾಶವಾಗಿದ್ದು, ನಾವು ಅದನ್ನು ಮತ್ತಷ್ಟು ಅಗೆಯುತ್ತಿಲ್ಲ” ಎಂದು ಹೇಳಿದ್ದಾರೆ.
“1912ರಲ್ಲಿ ಕೋಲ್ಕತ್ತಾದಿಂದ ದೆಹಲಿಗೆ ರಾಜಧಾನಿಯನ್ನು ವರ್ಗಾಯಿಸಿದ ನಂತರ ಕೇಂದ್ರ ಶಾಸಕಾಂಗ ಸಭೆಯಾಗಿ ಬಳಸಲಾಗುತ್ತಿದ್ದ ದೆಹಲಿ ವಿಧಾನ ಸಭೆಯನ್ನು 1926 ರಲ್ಲಿ ನ್ಯಾಯಾಲಯವಾಗಿ ಪರಿವರ್ತಿಸಲಾಗಿತ್ತು. ಬ್ರಿಟಿಷರು ಈ ಸುರಂಗವನ್ನು ಸ್ವಾತಂತ್ರ್ಯ ಹೋರಾಟಗಾರರನ್ನು ನ್ಯಾಯಾಲಯಕ್ಕೆ ಕರೆತರಲು ಬಳಸಿದ್ದರು” ಎಂದು ಗೋಯೆಲ್ ಮಾಹಿತಿ ನೀಡಿದ್ದಾರೆ.
“ಇಲ್ಲಿ ಗಲ್ಲು ಶಿಕ್ಷೆ ನೀಡುತ್ತಿದ್ದ ಕೋಣೆಯಿತ್ತು ಎಂಬುದರ ಬಗ್ಗೆ ನಮಗೆಲ್ಲರಿಗೂ ತಿಳಿದಿತ್ತು. ಆದರೆ ಅದನ್ನು ಎಂದಿಗೂ ತೆರೆಯಲಿಲ್ಲ. ಈಗ ಸ್ವಾತಂತ್ರ್ಯದ 75 ನೇ ವರ್ಷವಾಗಿದೆ. ಹೀಗಾಗಿ, ನಾನು ಆ ಕೊಠಡಿಯನ್ನು ಪರೀಕ್ಷಿಸಲು ನಿರ್ಧರಿಸಿದೆ. ನಾವು ಆ ಕೊಠಡಿಯನ್ನು ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವವನ್ನು ನೀಡುವ ದೇಗುಲವಾಗಿ ಬದಲಾಯಿಸುವ ಉದ್ದೇಶ ಹೊಂದಿದ್ದೇವೆ” ಎಂದು ಹೇಳಿದ್ದಾರೆ.
ಬಿಬಿಸಿ 2016 ರಲ್ಲಿ ಬಿಡುಗಡೆ ಮಾಡಿದ ಸುರಂಗದ ವರದಿ ಮತ್ತು ವಿಡಿಯೊ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: ರೈತ ಮಹಿಳೆಗೆ ಪರಿಹಾರ ವಿಳಂಬ: ನ್ಯಾಯಾಂಗ ನಿಂದನೆ ಆರೋಪದಲ್ಲಿ ಆಂಧ್ರದ IAS ಅಧಿಕಾರಿಗಳಿಗೆ ಜೈಲು