Homeಕರ್ನಾಟಕಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ಸಭೆ ವಿಫಲ; ಹೋರಾಟ ತೀವ್ರಗೊಳಿಸಲು ನಿರ್ಧಾರ

ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ಸಭೆ ವಿಫಲ; ಹೋರಾಟ ತೀವ್ರಗೊಳಿಸಲು ನಿರ್ಧಾರ

- Advertisement -
- Advertisement -

ಒಳ ಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕ ಶೇಕಡ 1ರಷ್ಟು ಮೀಸಲಾತಿ ಕೊಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಶನಿವಾರ (ಆ.23) ನಡೆದ ಸಭೆ ವಿಫಲಗೊಂಡಿದೆ.

ಅಲೆಮಾರಿ ಜನಾಂಗದ ಮುಖಂಡರು, ಹೋರಾಟಗಾರರು ಮತ್ತು ಚಿಂತಕರುಗಳ ಜೊತೆ ಕಾವೇರಿ ನಿವಾಸದಲ್ಲಿ ಸಿಎಂ ಸಭೆ ನಡೆಸಿದ್ದು, ಪ್ರತ್ಯೇಕ ಮೀಸಲಾತಿ ಕಲ್ಪಿಸಲು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಿಎಂ ಸಭೆಯಲ್ಲಿ ಬೇಡಿಕೆ ಈಡೇರದ ಹಿನ್ನೆಲೆ ಹೋರಾಟ ಮುಂದುವರಿಸಲು ಅಲೆಮಾರಿ ಸಮುದಾಯದ ಮುಖಂಡರು ಮತ್ತು ಇತರ ಹೋರಾಟಗಾರರು ತೀರ್ಮಾನಿಸಿದ್ದಾರೆ.

ಶೇ. 1ರಷ್ಟು ಒಳ ಮೀಸಲಾತಿ ಪಡೆಯುವವರೆಗೂ, ‘ಎ’ ಗುಂಪಿನಲ್ಲಿ ಸೇರಿಸುವವರೆಗೂ ಹೋರಾಟ ಮುಂದುವರೆಯುತ್ತದೆ. ರಾಜ್ಯದ ಎಲ್ಲಾ ತಾಲೂಕುಗಳಲ್ಲೂ ಹೋರಾಟವನ್ನು ತೀವ್ರಗೊಳಿಸುತ್ತೇವೆ. ಅಲೆಮಾರಿಗಳನ್ನು ಮೀಸಲಾತಿಯಿಂದ ವಂಚಿಸುವ ಅನ್ಯಾಯ ಮಾಡಿದ ಸಚಿವ ಸಂಪುಟದ ಎಲ್ಲಾ ಮಂತ್ರಿಗಳಿಗೆ ಪ್ರತಿಭಟನಾ ಹಕ್ಕೊತ್ತಾಯ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಸಿಎಂ ಸಭೆ ಬಳಿಕ ಹೇಳಿಕೆ ನೀಡಿರುವ ಅಲೆಮಾರಿ ಸಮುದಾಯದ ಮುಖಂಡ ಚಾವಡೆ ಲೋಕೇಶ್‌ ಗೋಸಂಗಿ, “ಹೋರಾಟದ ಮಾದರಿ ಬದಲಿಸೋಣ. ನಮ್ಮ ಕಷ್ಟ ಜನರಿಗೆ ಗೊತ್ತಾಗಲಿ. ಅಲೆಮಾರಿಗಳು ವಾಪಸ್‌ ಹೋರಾಟಕ್ಕೆ ಬರುವಾಗ ಟೆಂಟ್‌ಗಳು, ಕೌದಿಗಳನ್ನು ತನ್ನಿ. ಫ್ರೀಡಂ ಪಾರ್ಕ್‌ನಲ್ಲಿ ಟೆಂಟ್‌ ಹಾಕಿ ಇಲ್ಲಿಯೇ ಊಟ ಮಾಡಿಕೊಂಡು ಜೀವನ ಮಾಡೋಣ. ತಂಗಡಗಿಯಂತಹ ಸಚಿವರಿಗೆ ಹಸಿದಿದ್ದರೆ ಅವರಿಗೂ ಊಟ ಹಾಕೋಣ. ನಾವು ನ್ಯಾಯ ಪಡೆದೇ ವಾಪಸ್‌ ಹೋಗೋಣ” ಎಂದು ಸಮುದಾಯಕ್ಕೆ ಕರೆ ಕೊಟ್ಟಿದ್ದಾರೆ.

ಒಳ ಮೀಸಲಾತಿ ಹೋರಾಟಗಾರ ಪ್ರೊ. ಎ.ಎಸ್ ಪ್ರಭಾಕರ್ ಹೇಳಿಕೆ ನೀಡಿ ” ಮುಖ್ಯಮಂತ್ರಿಗಳ ಬಗ್ಗೆ ನಮಗೆ ಭರವಸೆ ಇತ್ತು. ಆದರೆ, ಅವರ ಮಾತಿನಲ್ಲಿ ವಿಷಾದ, ಹತಾಶೆ ಇತ್ತು. ಅವರಂತಹ ಗಟ್ಟಿ ಸೈದ್ಧಾಂತಿಕ ರಾಜಕಾರಣಿ ಇವತ್ತು ಹತಾಶೆಗೆ ಒಳಗಾಗಿದ್ದಾರೆ ಎಂದರೆ ದೊಡ್ಡ ದೊಡ್ಡ ಲಾಬಿಗಳು ಅವರನ್ನು ಮಣಿಸುತ್ತಿವೆ” ಎಂದಿದ್ದಾರೆ.

“ನಾವು ಹೋರಾಟ ಮುಂದುವರೆಸಬೇಕು. ಆದರೆ, ಅಲೆಮಾರಿಗಳು ಶೇ. 90ರಷ್ಟು ಜನರು ಕೂಲಿ ಕಾರ್ಮಿಕರು. ಅವರು ಬೆಂಗಳೂರಿಗೆ ಬರುವುದು ಬಹಳ ಕಷ್ಟ. ಹಾಗಾಗಿ, ನಮ್ಮ ನಮ್ಮ ಜಿಲ್ಲೆಗಳಲ್ಲಿ ಹೋರಾಟ ಮುಂದುವರೆಸೋಣ” ಎಂದು ಸಮುದಾಯಕ್ಕೆ ಕರೆ ಕೊಟ್ಟಿದ್ದಾರೆ.

“ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದ ತೀರ್ಪಿನ ದೊಡ್ಡ ಬಲವಿದೆ. ಸಂವಿಧಾನದ ಬಲವಿದೆ. ಕೋರ್ಟ್‌ಗೆ ಹೋಗುವುದು ಸೇರಿದಂತೆ ಇನ್ನೂ ಯಾವ ಯಾವ ಸಾಧ್ಯತೆಗಳಿವೆ ಎಂಬುದನ್ನು ಪರಿಶೀಲಿಸುತ್ತೇವೆ. ನಮ್ಮವರು ಯಾರೂ ಕೂಡ ಹತಾಶರಾಗಬಾರದು. 101 ಸಮುದಾಯಗಳು ನಮ್ಮ ಸಹೋದರರು. ಇದೊಂದು ಸಣ್ಣ ದಾಯಾದಿ ಕಲಹ ಅಷ್ಟೇ. ನಾವು ಯಾರನ್ನೂ ದೂಷಿಸಬಾರದು. ಐಕ್ಯತೆ ಬಹಳ ಮುಖ್ಯ. ನಾವು ಅಲೆಮಾರಿಗಳು ಈ ವ್ಯವಸ್ಥೆಯ ಅಂತರಾತ್ಮವನ್ನು ಕಲಕುತ್ತೇವೆ. ನಮ್ಮ ಅನ್ನ ಕಸಿದುಕೊಂಡ ಪ್ರತಿಯೊಬ್ಬರ ಹೃದಯವನ್ನು ಕಾಡುತ್ತೇವೆ” ಎಂದು ಹೇಳಿದ್ದಾರೆ.

ಒಳ ಮೀಸಲಾತಿ ಹೋರಾಟಗಾರ ಅಂಬಣ್ಣ ಅರೋಲಿಕರ್‌ ಹೇಳಿಕೆ ನೀಡಿ “ನಾವು ಸೋತಿದ್ದೇವೆ ಎಂಬುದು ಸುಳ್ಳು. ದಯವಿಟ್ಟು ಯಾರೂ ನಿರಾಶರಾಗಬೇಡಿ. ನಾವು 11ನೇ ತಾರೀಖು ಹೋರಾಟಕ್ಕೆ ಕೂತಾಗ ಕೆಲವರು ಮುಖ್ಯವಾಗಿ ರಾಜಕಾರಣಿಗಳು ಇದು ಆಗುವ ಮಾತಲ್ಲ, ಹೋರಾಟ ಕೈಬಿಡಿ ಎಂದರು. ಮಳೆ, ಗಾಳಿ, ಚಳಿ ಎಂದು ಹೆದರಿಸಿದರು, ಜನ ಬರುವುದಿಲ್ಲ ಎಂದರು. ಆದರೆ, ಕೊನೆಗೆ ಏನಾಯಿತು. ಸರ್ಕಾರದ ಮೇಲೆ ಒತ್ತಡ ತಂದು ಒಳ ಮೀಸಲಾತಿ ಜಾರಿಗೊಳಿಸಿದ್ದೀವಿ. ಆದರೆ, 6%  ನಮಗೆ ಸಮಾಧಾನ ತಂದಿಲ್ಲ. ನಾವು ಸಂತಸಪಟ್ಟಿಲ್ಲ. ನಾವು 35 ವರ್ಷ ಹೋರಾಡಿದ್ದು ಇದಕ್ಕೆ ಮಾತ್ರವೇ? ಅಲೆಮಾರಿಗಳನ್ನು ಮರೆತುಬಿಡಲು ಸಾಧ್ಯವೇ?” ಎಂದು ಪ್ರಶ್ನಿಸಿದ್ದಾರೆ.

“ನಾಗಮೋಹನ್‌ ದಾಸ್‌ರವರು ಸಹ ಕಣ್ಣೀರು ಹಾಕುತ್ತಿದ್ದಾರೆ. ನಾನಂದುಕೊಂಡ ಸಮುದಾಯಕ್ಕೆ ನ್ಯಾಯ ಕೊಡಲು ಸಾಧ್ಯವಾಗಿಲ್ಲ ಎಂಬ ನೋವು ಅವರನ್ನು ಕಾಡುತ್ತಿದೆ. ಅವರು ವೇತನ ಪಡೆಯದೇ ಕೆಲಸ ಮಾಡಿದ್ದಾರೆ. ನಾವು ಹೋರಾಟ ಮುಂದುವರೆಸೋಣ. ಹೋರಾಟದ ಟೆಂಟ್‌ ಮುಂದುವರೆಯುತ್ತದೆ. ಪ್ರತಿದಿನ 50 ಜನ ಇದ್ದು ಹೋರಾಟ ಮುಂದುವರೆಸೋಣ. ಬಾಬಾ ಸಾಹೇಬರು ಹೇಳಿದಂತೆ ಮಹಾತ್ಮರು ಬರುವರು, ಮಹಾತ್ಮರು ಹೋಗುವರು. ಮಂತ್ರಿಗಳು ಬಂದು ಹೋಗುವರು ಯಾರೂ ಉದ್ದಾರ ಮಾಡುವುದಿಲ್ಲ. ನಿಮ್ಮ ಉದ್ಧಾರ ನಿಮ್ಮ ಕೈಯಲ್ಲಿದೆ ಎಂದು ಹೇಳಿದ್ದಾರೆ. ಹಾಗಾಗಿ ನಮ್ಮ ಹೋರಾಟವೇ ನಮಗೆ ಹಕ್ಕು ಕೊಡಿಸುತ್ತದೆ” ಎಂದಿದ್ದಾರೆ.

“ಪೂನಾ ಒಪ್ಪಂದ ಆದಾಗ ಬಾಬಾ ಸಾಹೇಬರು ಸೋತರೆ? ಹತಾಶರಾಗಿ ಕೈಬಿಟ್ಟರೆ? ಇಲ್ಲ ಅವರು ಹೋರಾಟ ಮುಂದುವರೆಸಿ ನಮಗೆಲ್ಲ ಮೀಸಲಾತಿ ಕೊಡಲಿಲ್ಲವೇ? ಅದೇ ರೀತಿ ಒಳ ಮೀಸಲಾತಿಗಾಗಿಯೂ ಯಾವ ಸರ್ಕಾರ, ಯಾವ ರಾಜಕಾರಣಿಗಳು ಮಾಡದ್ದನ್ನು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದ ಮೂಲಕ ಜಾರಿ ಮಾಡಿಸಿಕೊಂಡಿದ್ದೀವಿ. 370ಜೆ, ಒಳ ಮೀಸಲಾತಿ ಎಲ್ಲವೂ ಸಂವಿಧಾನದ ಮೂಲಕ ಜಾರಿಯಾಗಿದೆ. ಸುಪ್ರೀಂ ಕೋರ್ಟ್‌ನ ತೀರ್ಪು ಸತ್ತಿಲ್ಲ. ಅದನ್ನು ಇಟ್ಟುಕೊಂಡು ಕಾನೂನು ಹೋರಾಟ ಸಹ ಮಾಡೋಣ. 1% ಮೀಸಲಾತಿ ನಮಗೆ ದಕ್ಕೆ ದಕ್ಕುತ್ತದೆ. ನಮ್ಮ ಪರವಾಗಿ ಪ್ರೊ.ಹರಗೋಪಾಲ್‌ ನಮ್ಮ ಹೋರಾಟಕ್ಕೆ ಬೆಂಬಲ ಘೋಷಿಸಿ ಇಲ್ಲಿಗೆ ಬರುತ್ತಿದ್ದಾರೆ. ಮೀಸಲಾತಿ ನಮ್ಮ ಭಿಕ್ಷೆಯಲ್ಲ, ಹಕ್ಕು ಎಂದು ಸಾರಿದ್ದಾರೆ. ಪ್ರೊ.ಸಾಯಿಬಾಬಾರವರು ಎಷ್ಟು ಹೋರಾಟ ಮಾಡಿದ್ದಾರೆ? ಪಾಪಾ ಅವರನ್ನು ಜೈಲಿಗೆ ಹಾಕಿದರೂ ಹೋರಾಟ ಬಿಡಲಿಲ್ಲ. ಹಾಗಾಗಿ ನಾವು ಹತಾಶರಾಗುವುದು ಬೇಡ. ನಿಮ್ಮ ಕೈಮುಗಿದು ಹೇಳುತ್ತೇನೆ, ನಿರಾಶರಾಗಬೇಡಿ, ಜೊತೆಗೂಡಿ ಹೋರಾಡೋಣ ಬನ್ನಿ” ಎಂದು ಕರೆ ಕೊಟ್ಟಿದ್ದಾರೆ.

ಒಳ ಮೀಸಲಾತಿ ಹೋರಾಟಗಾರ ಸಣ್ಣ ಮಾರಣ್ಣ ಹೇಳಿಕೆ ನೀಡಿ, “ಈ ರಾಜ್ಯದ ದುರ್ಬಲ ಮುಖ್ಯಮಂತ್ರಿ ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯನವರು ಮಾತ್ರ. ನಾವು ಅವರನ್ನು ಧೀಮಂತ ನಾಯಕ ಎಂದುಕೊಂಡಿದ್ದೆವು. ಆದರೆ, ಇವತ್ತು ಕೆಲವರ ಬಲಾಢ್ಯರ ಒತ್ತಡಕ್ಕೆ ರಾಜ್ಯದ ಮುಖ್ಯಮಂತ್ರಿ ಮಣಿದಿದ್ದಾರೆ. ಆದರೆ, ನಾವು ಕುಗ್ಗಬಾರದು, ಹೋರಾಟ ಮುಂದುವರೆಸೋಣ” ಎಂದಿದ್ದಾರೆ.

ಇನ್ನೊಬ್ಬರು ಒಳ ಮೀಸಲಾತಿ ಹೋರಾಟಗಾರ ವೀರೇಶ್‌ ಹೇಳಿಕೆ ನೀಡಿ “ನನಗೆ ಮಾತೇ ತೋಚುತ್ತಿಲ್ಲ. ನನ್ನ ಎರಡು ವರ್ಷದ ಅವಧಿಯಲ್ಲಿ ಕುಟುಂಬದಿಂದ ಹೊರಗಿದ್ದು ಒಳ ಮೀಸಲಾತಿಯ ಹೋರಾಟಕ್ಕೆ ಮೀಸಲಿಟ್ಟಿದ್ದೆ. ಈ ಹಿಂದೆಯೇ ನಾಗಮೋಹನ್‌ ದಾಸ್‌ರವರಿಗೆ 3% ಮೀಸಲಾತಿ ಕೊಡಬೇಕೆಂದು ಮನವಿ ಕೊಟ್ಟಿದ್ದೆವು. ಅವರು ಸೂಕ್ತ ದತ್ತಾಂಶದೊಂದಿಗೆ ಉತ್ತಮ ವರ್ಗೀಕರಣ ಮಾಡಿ ವರದಿ ನೀಡಿದ್ದರು. 59 ಅಲೆಮಾರಿ ಸಮುದಾಯಗಳನ್ನು ಪ್ರವರ್ಗ ಮಾಡಿ 1% ಮೀಸಲಾತಿ ನಿಗದಿ ಮಾಡಿದ್ದರು. ಆದರೆ, ಸರ್ಕಾರ ಅಲೆಮಾರಿಗಳಿಗೆ ಅನ್ಯಾಯ ಮಾಡಿ ನಮ್ಮಿಂದ 1% ಕಿತ್ತುಕೊಂಡಿದೆ. ನಮಗೆ ಶಿಕ್ಷಣ, ಉದ್ಯೋಗ, ಮನೆ, ಬಂಡವಾಳ ಇಲ್ಲದೇ ನಮಗೆ ಮರಣಶಾಸನ ಬರೆಯಲಾಗಿದೆ. ಮುಖ್ಯಮಂತ್ರಿಗಳು ಒತ್ತಡಕ್ಕೆ ಮಣಿದು ನಮ್ಮ ಕತ್ತು ಕುಯ್ದಿದ್ದಾರೆ. ನಮ್ಮನ್ನು ಮತ್ತೆ ಜೀತಕ್ಕೆ, ಭಿಕ್ಷೆಗೆ ಕಳಿಸುತ್ತಿದ್ದಾರೆ. ಮಾನವೀಯತೆ, ಮನುಷ್ಯತ್ವ ಸರ್ಕಾರಕ್ಕೆ ಇದ್ದಿದ್ದರೆ ಈ ರೀತಿ ಮಾಡುತ್ತಿರಲಿಲ್ಲ. ನಾವು ಹೋರಾಟವನ್ನು ಮುಂದುವರೆಸುತ್ತೇವೆ. ನಾವು ಸುಪ್ರೀಂ ಕೋರ್ಟ್‌ ಕದ ತಟ್ಟಿ ನ್ಯಾಯ ಪಡೆಯೋಣ” ಎಂದು ಬೇಸರ ಹೊರ ಹಾಕಿದ್ದಾರೆ.

“1% ಮೀಸಲಾತಿ ಕೊಡಲು ಆಗುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಅಲೆಮಾರಿಗಳಿಗೆ ವಿಶೇಷ ಮಂಡಳಿ ರಚನೆ ಮಾಡಬಹುದು, ಅನುದಾನ ಕೊಡಬಹುದು ಇತ್ಯಾದಿ ಹೇಳಿದ್ದಾರೆ. ಅದಕ್ಕೆ ನಾವು ಒಪ್ಪಿಲ್ಲ. ನಮಗೆ ವರ್ಗೀಕರಣವೇ ಬಹಳ ಮುಖ್ಯ ಎಂದು ಪಟ್ಟು ಹಿಡಿದೆವು. ಕಟ್ಟಕಡೆಯ ಅಲೆಮಾರಿ ಜನರು ನೋವಿನಲ್ಲಿರುವಾಗ ಖುಷಿಯ ಮಾತೆಲ್ಲಿ?” ಎಂದು ಒಳ ಮೀಸಲಾತಿ ಹೋರಾಟಗಾರ ಬಾಲಗುರುಮೂರ್ತಿ ಪ್ರಶ್ನಿಸಿದ್ದಾರೆ.

ಆಗಸ್ಟ್ 19ರಂದು ನಡೆದ ವಿಶೇಷ ಸಂಪುಟ ಸಭೆಯಲ್ಲಿ ನ್ಯಾ.ನಾಗಮೋಹನ್‌ ದಾಸ್ ಅವರ ಒಳ ಮೀಸಲಾತಿ ವರದಿಯನ್ನು ಅಂಗೀಕರಿಸಿರುವ ಸರ್ಕಾರ, ಎಡಗೈ, ಬಲಗೈಗೆ ತಲಾ ಶೇ 6, ಕೊಲಂಬೋ, ಅಲೆಮಾರಿಗಳಿಗೆ ಶೇ. 5 ಮೀಸಲಾತಿ ಘೋಷಿಸಿದೆ. ನಾಗಮೋಹನ್ ದಾಸ್ ಆಯೋಗದ ವರದಿಯಲ್ಲಿ ಅಲೆಮಾರಿಗಳಿಗೆ ಪ್ರತ್ಯೇಕ 1 ಶೇ. ಮೀಸಲಾತಿ ಪ್ರಸ್ತಾಪಿಸಿದ್ದರೂ, ಸರ್ಕಾರ ಅವರನ್ನು ಕೊಲಂಬೋ ಜೊತೆ ಸೇರಿಸಿ ಅನ್ಯಾಯ ಮಾಡಿದೆ ಎಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಿರಂತರ ಹೋರಾಟ ನಡೆಯುತ್ತಿದೆ.

ದೂರುದಾರನನ್ನು ಬಂಧಿಸಲಾಗಿದೆ, ಹೆಚ್ಚಿನ ಮಾಹಿತಿ ಈಗಲೇ ಬಹಿರಂಗಪಡಿಸಲು ಸಾಧ್ಯವಿಲ್ಲ: ಪರಮೇಶ್ವರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಡದಿ ಟೌನ್‌ಶಿಪ್ ಭೂಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಲು ಸಂಯುಕ್ತ ಹೋರಾಟ ಕರ್ನಾಟಕ ಆಗ್ರಹ

ಫಲವತ್ತಾದ ಕೃಷಿ ಭೂಮಿ ನಾಶ ಮಾಡಿ ನಿರ್ಮಿಸಲು ಉದ್ದೇಶಿಸಿರುವ ಬಿಡದಿ ಟೌನ್‌ಶಿಪ್ ಯೋಜನೆ ರೈತ ವಿರೋಧಿ ಹಾಗೂ ಜೀವ ಪರಿಸರ ವ್ಯವಸ್ಥೆಗೆ ವಿನಾಶಕಾರಿ. ಇಂತಹ ಪರಿಸರ ವಿನಾಶದ ಯೋಜನೆಗೆ ನೀಡಿರುವ ಸಂಪುಟ ಅನುಮೋದನೆಯನ್ನು...

‘ಮನೆ ಕೊಡಿ ಇಲ್ಲಾ ಜೈಲಿಗಾದರೂ ಬಿಡಿ’ : ಬೀದಿಗೆ ಬಿದ್ದ ಕೋಗಿಲು ನಿರಾಶ್ರಿತರ ಅಳಲು

"ನಮಗೊಂದು ಸೂರು ಕೊಟ್ಟರೆ ಅದಕ್ಕೆ ಕಾರಣರಾದ ಎಲ್ಲರನ್ನೂ ಹರಸಿ ನೆಮ್ಮದಿಯಾಗಿ ಬದುಕುತ್ತೇವೆ. ಇಲ್ಲವಾದರೆ ನಮ್ಮನ್ನು ಜೈಲಿಗಾದರೂ ಹಾಕಿಬಿಡಿ. ಒಂದು ನೆಲೆ ಮತ್ತು ಮೂರು ಹೊತ್ತಿನ ಊಟವಾದರೂ ಸಿಗುತ್ತದೆ". ಇದು ಸರ್ಕಾರ ಮನೆ ಧ್ವಂಸ...

ಒಳಮೀಸಲಾತಿ ಜಾರಿ ಸರ್ಕಾರದ ಹೊಸ ಸೂತ್ರ

ಕರ್ನಾಟಕದಲ್ಲಿ ಒಳಮೀಸಲಾತಿಯ ’ಸದ್ದು-ಗುದ್ದು’ ಅವಿಭಜಿತ ಆಂಧ್ರಪ್ರದೇಶಕ್ಕಿಂತಲೂ ಹೆಚ್ಚಾಗಿದೆ. ಇದಕ್ಕೆ ಕಾರಣ ಪರಿಶಿಷ್ಟ ಜಾತಿಗಳೊಳಗಿನ ಮೇಲಾಟವೂ ಹೌದು, ಸರ್ಕಾರದ ಬೇಜವಾಬ್ದಾರಿ ನಡೆಗಳೂ ಹೌದು. ಆದರೆ ದಿನಾಂಕ: 24.04.2026ರಂದು ನಡೆದ ಸಚಿವ ಸಂಪುಟ ಸಭೆಯು ಒಳಮೀಸಲಾತಿ...

ಕೊರೋನಾ ಲಸಿಕೆ ಒಳಹೊರಗುಗಳ ಪರಾಮರ್ಶೆಯ ನೋಟ

ಮನುಷ್ಯನ ನೆನಪಿನ ಶಕ್ತಿ ಕಡಿಮೆ ಎಂದು ರಾಜಕಾರಣಿಗಳು, ಅಧಿಕಾರಿಗಳು ಸದಾ ಗುನುಗುತ್ತಿರುತ್ತಾರೆ. ಅದು ಜೀವ ಮತ್ತು ಜೀವನ ಕಳೆದುಕೊಂಡ ವಿಚಾರವನ್ನು ಕೂಡ ಬಹಳ ಬೇಗ ಮರೆವಿನ ತೊಟ್ಟಿಗೆ ತಳ್ಳಿ ಬಿಡುತ್ತದೆ.ಆದರೂ, ಮನುಷ್ಯ ಭೂಮಿಯ...

‘ಮಾವಿನ ಮರ’ ಕಂಡ ಕನಸು

ಪುಸ್ತಕ ಪರಿಚಯ ಸವಾಲಿನ ವಿಷಯ. ಅದರಲ್ಲೂ ಕವಿತೆಗಳ ಕುರಿತು ಮಾತನಾಡುವುದು ಇನ್ನೂ ಸವಾಲು. ಪ್ರತಿಯೊಂದು ಕವಿತೆಯೂ ತನ್ನ ಓದುಗರೊಂದಿಗೆ ಸಂವಾದಿಸುವ ಬಗೆ ವಿಭಿನ್ನವಾಗಿರುತ್ತದೆ. ಅದನ್ನು ಏಕರೂಪೀ ಪರಿಭಾಷೆಯಲ್ಲಿ ಮಂಡಿಸುವುದು ಸರಿಯಲ್ಲ. ’ಮಿಥಿಲೆಯ ಮಾವಿನ...

NEET ರದ್ದು : ಖಿನ್ನತೆ, ಆತಂಕಕ್ಕೆ ಒಳಗಾದ ವಿದ್ಯಾರ್ಥಿಗಳು; ನಾಲ್ಕು ದಿನದಲ್ಲಿ ನಾಲ್ವರು ಸಾವಿಗೆ ಶರಣು

ಈ ವರ್ಷದ (2026) ನೀಟ್-ಯುಜಿ (NEET-UG) ಪರೀಕ್ಷೆ ರದ್ದಾದ ಬಳಿಕ ದೇಶದಾದ್ಯಂತ ಕನಿಷ್ಠ ನಾಲ್ವರು ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡ ಹಾಗೂ ಹತಾಶೆಯಿಂದ ಸಾವಿಗೆ ಶರಣಾಗಿದ್ದಾರೆ. ರಾಜಸ್ಥಾನದ ಝುಂಜುನು ಜಿಲ್ಲೆಯ 23 ವರ್ಷದ ಪ್ರದೀಪ್...

ಪ್ಯಾಲೆಸ್ಟೀನಿಯನ್ ಕೈದಿಗಳ ಮೇಲೆ ಲೈಂಗಿಕ ದೌರ್ಜನ್ಯ ವರದಿ: ನ್ಯೂಯಾರ್ಕ್ ಟೈಮ್ ವಿರುದ್ಧ ಮೊಕದ್ದಮೆ ದಾಖಲಿಸಿದ ಇಸ್ರೇಲ್ ಕ್ರಮಕ್ಕೆ ಆರ್‌ಎಸ್‌ಎಫ್ ಖಂಡನೆ

ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಗುರಿಯಾಗಿಸಿಕೊಂಡು ವ್ಯಾಪಕವಾದ ಲೈಂಗಿಕ ದೌರ್ಜನ್ಯವನ್ನು ಬಹಿರಂಗಪಡಿಸಿದ ನಿಕೋಲಸ್ ಕ್ರಿಸ್ಟೋಫ್ ಅವರ  ಅಭಿಪ್ರಾಯ ಅಂಕಣವನ್ನು ಪ್ರಕಟಿಸಿದ ನ್ಯೂಯಾರ್ಕ್ ಟೈಮ್ಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಇಸ್ರೇಲಿ ಸರ್ಕಾರದ ನಿರ್ಧಾರವನ್ನು ರಿಪೋರ್ಟರ್ಸ್ ವಿದೌಟ್...

“ಮುಸ್ಲಿಮರಿಗೆ ಯಾವುದೇ ಕೆಲಸ ಮಾಡಲ್ಲ” ಎಂದು ವಿವಾದಾತ್ಮಕ ಶಪಥ ಮಾಡಿದ ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ರಿತೇಶ್ ತಿವಾರಿ

ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಬಿಜೆಪಿ ತನ್ನ ಮೊದಲ ಸರ್ಕಾರವನ್ನು ರಚಿಸಿದ ಕೆಲವೇ ದಿನಗಳಲ್ಲಿ, ಪಕ್ಷದ ಶಾಸಕ ರಿತೇಶ್ ತಿವಾರಿ ಅವರು ಮಾಡಿರುವ ಭಾಷಣವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. "ಪಶ್ಚಿಮ...

’ಎಸ್‌ಐಆರ್’ ವಿರುದ್ಧ ಜನಪರ ಸಂಘಟನೆಗಳಿಂದ ಜನಾಂದೋಲನ ಬಂಗಾಳದ ಜನರ ಜೊತೆಗೆ ನಿಂತ ಕರ್ನಾಟಕ

ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮೂಲಕ ವಿರೋಧ ಪಕ್ಷಗಳ ಮತದಾರರು ಮತ್ತು ಅಲ್ಪಸಂಖ್ಯಾತ ಸಮುದಾಯದ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕುತಂತ್ರ ಈಗಾಗಲೇ ಬಿಹಾರದಲ್ಲಿ ಜಗಜ್ಜಾಹೀರಾಗಿದೆ....

ನಿರುದ್ಯೋಗಿ ಯುವಕರನ್ನು ಜಿರಳೆಗಳು ಎಂದ ಸಿಜೆಐ: ಇದೆಂತಾ ಮಾತು ನ್ಯಾಯಮೂರ್ತಿಗಳೇ!

‘ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಂತೆ ಸಮಾಜವನ್ನು ಕಾಡುತ್ತಾರೆ. ಉದ್ಯೋಗ, ಸ್ಥಾನಮಾನ ಸಿಗದೆ ಇದ್ದಾಗ ಅವರು ಎಲ್ಲರ ಮೇಲೆ ದಾಳಿ ಆರಂಭಿಸುತ್ತಾರೆ’ ಇದು ಯಾವುದೋ ರಾಜಕೀಯ ರ‍್ಯಾಲಿಯ ಭಾಷಣವಲ್ಲ ಅಥವಾ ಟಿವಿ ಚಾನೆಲ್‌ಗಳ ಜಗಳವಲ್ಲ,...