Homeಕರ್ನಾಟಕಭಕ್ತಾದಿಗಳ ಗಮನಕ್ಕೆ... ನಾಗೇಶ್ ಹೆಗಡೆಯವರ ಬರಹ

ಭಕ್ತಾದಿಗಳ ಗಮನಕ್ಕೆ… ನಾಗೇಶ್ ಹೆಗಡೆಯವರ ಬರಹ

ನೀರಿನ ಮಿತಬಳಕೆ ಮತ್ತು ಮರುಬಳಕೆಯ ಕುರಿತು ಇಲ್ಲಿ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಲಾಗಿದೆ.

- Advertisement -
- Advertisement -

ಧರ್ಮಸ್ಥಳದ ‘ಖಾವಂದರು’ ಎಂದು ಭಕ್ತಾದಿಗಳಿಂದ ಕರೆಸಿಕೊಳ್ಳುವ ವೀರೇಂದ್ರ ಹೆಗ್ಗಡೆಯವರು, ಒಂದು ವಿಶೇಷ ಪತ್ರ ಬರೆದಿದ್ದಾರೆ. ಆ ಹಿನ್ನೆಲೆಯಲ್ಲಿ ಪತ್ರಕರ್ತ, ಪರಿಸರ ಕಾಳಜಿಯುಳ್ಳ ತಜ್ಞ ನಾಗೇಶ್ ಹೆಗಡೆಯವರು ಬರೆದಿದ್ದನ್ನು, ಬಳಸಿಕೊಳ್ಳಲು ನಮಗೆ ಅನುಮತಿ ನೀಡಿದ್ದಾರೆ.

ಭಕ್ತಾದಿಗಳ ಗಮನಕ್ಕೆ….
ತುಸು ಜಾಸ್ತಿ ಜನ ಈ ಪೋಸ್ಟ್ ನೋಡಲಿ ಎಂಬ ಉದ್ದೇಶದಿಂದ ಈ ಶಿರೋನಾಮೆ.
ಆಗಿದ್ದೇನೆಂದರೆ, ಧರ್ಮಸ್ಥಳದ ಬಳಿ ಹರಿಯುವ ನೇತ್ರಾವತಿ ನದಿಯಲ್ಲಿ ನೀರಿನ ತೀವ್ರ ಅಭಾವವಾಗಿದೆ. ಅದಕ್ಕೇ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಒಂದು ಪ್ರಕಟನೆ ಹೊರಡಿಸಿದ್ದಾರೆ. “ಆದುದರಿಂದ ಭಕ್ತಾದಿಗಳು ಮತ್ತು ಪ್ರವಾಸಿಗಳು ತಮ್ಮ ಪ್ರವಾಸವನ್ನು ಕೆಲವು ದಿನಗಳ ಕಾಲ ಮುಂದೂಡಿ ಸಹಕರಿಸುವಂತೆ ಕೋರುತ್ತೇವೆ” ಎಂದು ಅವರು ತಿಳಿಸಿದ್ದಾರೆ.

ಇದೇ ಪ್ರಕಟನೆ ಹೀಗೆ ಇದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು: “ಆದುದರಿಂದ ನೀರಿನ ಮಿತಬಳಕೆ ಮತ್ತು ಮರುಬಳಕೆಯ ಕುರಿತು ಇಲ್ಲಿ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಲಾಗಿದೆ. ಮುಡಿ ಕೊಡುವ ಭಕ್ತರೂ ಕೇವಲ ಒಂದು ಬಕೆಟ್ ನೀರಿನಲ್ಲಿ ಸ್ನಾನ ಮಾಡಬಹುದು. ಬಳಸಿದ ನೀರನ್ನು ಮತ್ತೆ ಶುದ್ಧೀಕರಿಸಿ ಮರುಬಳಕೆ ಮಾಡುವ ವಿಧಾನಗಳನ್ನೂ ಇಲ್ಲಿ ತೋರಿಸುವ ಯೋಜನೆ ಇದೆ. ಅದು ಜಾರಿಗೆ ಬರಲು ತುಸು ತಡವಾಗಬಹುದು. ಸದ್ಯಕ್ಕೆ ನೀರನ್ನು ಮಿತವಾಗಿ ಬಳಸಲು ಬಲ್ಲವರಿಗಷ್ಟೇ ಇಲ್ಲಿ ಸ್ವಾಗತವಿದೆ’’.

ಅಭಾವದ ದಿನಗಳಲ್ಲಿ ನೀರನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿಸಿ ಹೇಳುವ ಅತ್ಯಮೂಲ್ಯ ಅವಕಾಶ ಇದಾಗಿತ್ತು. ಸರಕಾರವೇ ವಿವಿಧ ಜಿಲ್ಲೆಗಳಲ್ಲಿ ಆ ಕೆಲಸವನ್ನು ಕೈಗೊಳ್ಳಬೇಕಿತ್ತು. ಸಿಂಗಪುರದಲ್ಲಿ, ಚರಂಡಿ ನೀರನ್ನೂ ಹೇಗೆ ಶುದ್ಧೀಕರಿಸಿ ಕುಡಿಯಲು ಬಳಸುತ್ತಾರೆ, ನಮೀಬಿಯಾದ ಪ್ರವಾಸಿ ನಗರ ವಿಂಡ್ಹೋಕ್ ಮತ್ತು ದಕ್ಷಿಣ ಆಫ್ರಿಕಾದ ಕೇಪ್ ಟೌನ್ ಗಳಲ್ಲಿ ಜನರು ನೀರಿನ ತೀವ್ರ ಅಭಾವವನ್ನು ಹೇಗೆ ಎದುರಿಸುತ್ತಿದ್ದಾರೆ ಎಂಬುದರ ಬಗ್ಗೆ ಟಿವಿ ಚಾನೆಲ್ ಗಳಲ್ಲಿ ಪ್ರೈಮ್ ಟೈಮ್ ನಲ್ಲಿ ಸರಕಾರಿ ಖರ್ಚಿನಲ್ಲಿ ತಜ್ಞರ ಚರ್ಚೆ ಏರ್ಪಡಿಸಬಹುದಿತ್ತು. ಅಧಿಕಾರಿಗಳೇನೊ ಉಷ್ಟ್ರಪಕ್ಷಿಗಳಾಗಿದ್ದಾರೆ. ಸರಕಾರದ ಮುಖ್ಯಸ್ಥರಂತೂ ನೀರನ್ನು ಮರೆತು ಚಿನ್ನದ ರಥ, ರೆಸಾರ್ಟ್, ದೇಗುಲ, ಮಂದಿರಗಳ ಸುತ್ತು ಹೊಡೆಯುತ್ತಿದ್ದಾರೆ. ಧರ್ಮಸ್ಥಳವೂ ಈ ದಿನಗಳಲ್ಲಿ ಭಕ್ತರನ್ನು ಕೈಬಿಟ್ಟರೆ ಹೇಗೆ?

ಸುಮಾರು 25 ವರ್ಷಗಳ ಹಿಂದೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗೆಡಯವರಿಗೆ ನಾನೊಂದು ಪತ್ರ ಬರೆದಿದ್ದೆ. “ಭಕ್ತರು ತಿಂದು ಬಿಸಾಕಿದ ಊಟದ ಎಲೆಗಳ ತ್ಯಾಜ್ಯ ಹತ್ತು ಕಿಲೊಮೀಟರ್ ವರೆಗೂ ವಿಸ್ತರಿಸಿದೆ. ಅದೇ ತ್ಯಾಜ್ಯವನ್ನು ಬಯೊಡೈಜೆಸ್ಟರ್ ಮೂಲಕ ಸಂಸ್ಕರಿಸಿದರೆ ಅಡುಗೆ ಅನಿಲವೂ ಸಿಗುತ್ತದೆ, ಉತ್ತಮ ಕಾಂಪೋಸ್ಟ್ ಕೂಡ ಸಿಗುತ್ತದೆ” ಎಂದು ಅಂತರ್ದೇಶೀ ಪತ್ರದಲ್ಲಿ ಬರೆದಿದ್ದೆ. ಅದಕ್ಕೆ ಅವರು ತಕ್ಷಣ ಸ್ಪಂದಿಸಿ, “ಈ ವ್ಯವಸ್ಥೆ ಅಳವಡಿಸಲು ಸಿದ್ಧರಿದ್ದೇವೆ, ಮಾರ್ಗದರ್ಶನ ಎಲ್ಲಿ ಸಿಗುತ್ತದೆ?” ಎಂದು ನನಗೆ ಬರೆದಿದ್ದರು. ಈಗ ಅಲ್ಲಿ ತ್ಯಾಜ್ಯ ಸಂಸ್ಕರಣೆಯ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ.

ಇದೇ ಉತ್ಸಾಹದಲ್ಲಿ ನೀರಿನ ನಿರ್ವಹಣೆಯ ತಂತ್ರಜ್ಞಾನವನ್ನೂ ಜಾರಿಗೆ ತರಬೇಕಾದ ತುರ್ತು ಅಲ್ಲಿ ಬಂದಿದೆ. ನೀರಿನ ಮಿತಬಳಕೆ, ಮರುಬಳಕೆ ಹಾಗೂ ನದಿಮರುಪೂರಣ ವ್ಯವಸ್ಥೆಯ ಪ್ರಾತ್ಯಕ್ಷಿಕೆ ನಮ್ಮ ಜನರಿಗೆ ತೀರ ಅಗತ್ಯವಾಗಿದೆ. (ದಶಕಗಳಿಂದ ಬತ್ತಿ ಹೋಗಿದ್ದ ನದಿಯನ್ನು ಮತ್ತೆ ಸಜೀವಗೊಳಿಸಿದ ಉದಾಹರಣೆ ರಾಜಸ್ತಾನದಲ್ಲಿದೆ). ಎಲ್ಲಕ್ಕಿಂತ ಮುಖ್ಯವಾಗಿ ನೇತ್ರಾವತಿಯ ನದಿಯನ್ನು ತಿರುಗಿಸುವ (ಎತ್ತಿನ ಹೊಳೆ) ಯೋಜನೆಯ ಭವಿಷ್ಯದ ಫಲಾನುಭವಿಗಳೆನಿಸಿದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಯ ಭಕ್ತರಿಗೆ ಧರ್ಮಸ್ಥಳದಲ್ಲಿ ಈ ದಿನಗಳಲ್ಲೇ ನೀರಿನ ಮಿತಬಳಕೆಯ ಪ್ರಾತ್ಯಕ್ಷಿಕೆ ಕೊಡುವುದು ಒಳ್ಳೆಯದು!

ಹರಕೆ, ಪೂಜೆಗೆಂದು ಬರುವ ಎಮ್ಮೆಲ್ಲೆ, ಎಂಪಿ, ಮಂತ್ರಿಗಣಕ್ಕೆ ಕಡ್ಡಾಯವಾಗಿ ಇಂಥ ಪ್ರಾತ್ಯಕ್ಷಿಕೆಗಳನ್ನು ಮೊದಲು ತೋರಿಸಿ ಆಮೇಲೆ ದೇವರ ದರ್ಶನ ಮಾಡಿಸಬೇಕು. ನೇತ್ರಾವತಿ ನದಿಮೂಲವನ್ನು ದುಃಸ್ಥಿತಿಗೆ ತಂದ ಮರಳು ಗಣಿಗಾರಿಕೆ, ಹೆದ್ದಾರಿ ವಿಸ್ತರಣೆ, ಅರಣ್ಯನಾಶಗಳ ದೊಡ್ಡ ದೊಡ್ಡ ಚಿತ್ರಗಳು ಮಂತ್ರಿಗಳ ಸ್ನಾನದ ಮನೆಯಲ್ಲಿ ಇರಬೇಕು. ಅರ್ಧ ಬಕೆಟ್ ನೀರಲ್ಲಿ ಗಣ್ಯರು ಸ್ನಾನ ಮಾಡುವುದು ಭಕ್ತಾದಿಗಳ ಗಮನಕ್ಕೂ ಬರುವಂತಿರಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉಮರ್, ಶಾರ್ಜೀಲ್‌ಗೆ ಜಾಮೀನು ನಿರಾಕರಿಸಿದ್ದಕ್ಕೆ ಆಕ್ಷೇಪ : ತನ್ನದೇ ಆದೇಶದ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ದೆಹಲಿ ಗಲಭೆ (2020ರ ಪ್ರಕರಣ) ಹಿಂದಿನ ದೊಡ್ಡ ಮಟ್ಟದ ಪಿತೂರಿ ಆರೋಪದಲ್ಲಿ ಬಂಧಿತರಾಗಿರುವ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರಿಗೆ ಜಾಮೀನು ನಿರಾಕರಿಸಿ, 2026ರ ಜನವರಿಯಲ್ಲಿ ತನ್ನದೇ ಮತ್ತೊಂದು ದ್ವಿಸದಸ್ಯ ಪೀಠ...

ಮುತ್ತುರಾಜ್ ‘ರಾಜಕುಮಾರ್‍’ ಆದ ಕಥೆ

’ಬೇಡರ ಕಣ್ಣಪ್ಪ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದ ಸಮಯದಲ್ಲಿ ಒಂದು ದಿನ ನಾನು ಅಂದಿನ ಪತ್ರಿಕೆಯಲ್ಲಿ ಚಿತ್ರಸುದ್ದಿಯನ್ನು ಓದುತ್ತಿದ್ದಾಗ ಗುಬ್ಬಿ ಕರ್ಣಾಟಕ ಸಂಸ್ಥೆಯವರು ನಿರ್ಮಿಸುತ್ತಿರುವ ಬೇಡರ ಕಣ್ಣಪ್ಪ ಚಿತ್ರ ಎಂದು ಸುದ್ದಿ ಪ್ರಾರಂಭವಾಗಿ...

ಬಂಗಾಳ ಎಸ್‌ಐಆರ್ ಅವಾಂತರ ಹಕ್ಕು ಕಳೆದುಕೊಂಡ ಮತದಾರ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್ ಪೂರ್ಣಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ಬಿಡದಿ ಟೌನ್‌ಶಿಪ್ ಭೂಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಲು ಸಂಯುಕ್ತ ಹೋರಾಟ ಕರ್ನಾಟಕ ಆಗ್ರಹ

ಫಲವತ್ತಾದ ಕೃಷಿ ಭೂಮಿ ನಾಶ ಮಾಡಿ ನಿರ್ಮಿಸಲು ಉದ್ದೇಶಿಸಿರುವ ಬಿಡದಿ ಟೌನ್‌ಶಿಪ್ ಯೋಜನೆ ರೈತ ವಿರೋಧಿ ಹಾಗೂ ಜೀವ ಪರಿಸರ ವ್ಯವಸ್ಥೆಗೆ ವಿನಾಶಕಾರಿ. ಇಂತಹ ಪರಿಸರ ವಿನಾಶದ ಯೋಜನೆಗೆ ನೀಡಿರುವ ಸಂಪುಟ ಅನುಮೋದನೆಯನ್ನು...

‘ಮನೆ ಕೊಡಿ ಇಲ್ಲಾ ಜೈಲಿಗಾದರೂ ಬಿಡಿ’ : ಬೀದಿಗೆ ಬಿದ್ದ ಕೋಗಿಲು ನಿರಾಶ್ರಿತರ ಅಳಲು

"ನಮಗೊಂದು ಸೂರು ಕೊಟ್ಟರೆ ಅದಕ್ಕೆ ಕಾರಣರಾದ ಎಲ್ಲರನ್ನೂ ಹರಸಿ ನೆಮ್ಮದಿಯಾಗಿ ಬದುಕುತ್ತೇವೆ. ಇಲ್ಲವಾದರೆ ನಮ್ಮನ್ನು ಜೈಲಿಗಾದರೂ ಹಾಕಿಬಿಡಿ. ಒಂದು ನೆಲೆ ಮತ್ತು ಮೂರು ಹೊತ್ತಿನ ಊಟವಾದರೂ ಸಿಗುತ್ತದೆ". ಇದು ಸರ್ಕಾರ ಮನೆ ಧ್ವಂಸ...

ಒಳಮೀಸಲಾತಿ ಜಾರಿ ಸರ್ಕಾರದ ಹೊಸ ಸೂತ್ರ

ಕರ್ನಾಟಕದಲ್ಲಿ ಒಳಮೀಸಲಾತಿಯ ’ಸದ್ದು-ಗುದ್ದು’ ಅವಿಭಜಿತ ಆಂಧ್ರಪ್ರದೇಶಕ್ಕಿಂತಲೂ ಹೆಚ್ಚಾಗಿದೆ. ಇದಕ್ಕೆ ಕಾರಣ ಪರಿಶಿಷ್ಟ ಜಾತಿಗಳೊಳಗಿನ ಮೇಲಾಟವೂ ಹೌದು, ಸರ್ಕಾರದ ಬೇಜವಾಬ್ದಾರಿ ನಡೆಗಳೂ ಹೌದು. ಆದರೆ ದಿನಾಂಕ: 24.04.2026ರಂದು ನಡೆದ ಸಚಿವ ಸಂಪುಟ ಸಭೆಯು ಒಳಮೀಸಲಾತಿ...

ಕೊರೋನಾ ಲಸಿಕೆ ಒಳಹೊರಗುಗಳ ಪರಾಮರ್ಶೆಯ ನೋಟ

ಮನುಷ್ಯನ ನೆನಪಿನ ಶಕ್ತಿ ಕಡಿಮೆ ಎಂದು ರಾಜಕಾರಣಿಗಳು, ಅಧಿಕಾರಿಗಳು ಸದಾ ಗುನುಗುತ್ತಿರುತ್ತಾರೆ. ಅದು ಜೀವ ಮತ್ತು ಜೀವನ ಕಳೆದುಕೊಂಡ ವಿಚಾರವನ್ನು ಕೂಡ ಬಹಳ ಬೇಗ ಮರೆವಿನ ತೊಟ್ಟಿಗೆ ತಳ್ಳಿ ಬಿಡುತ್ತದೆ.ಆದರೂ, ಮನುಷ್ಯ ಭೂಮಿಯ...

‘ಮಾವಿನ ಮರ’ ಕಂಡ ಕನಸು

ಪುಸ್ತಕ ಪರಿಚಯ ಸವಾಲಿನ ವಿಷಯ. ಅದರಲ್ಲೂ ಕವಿತೆಗಳ ಕುರಿತು ಮಾತನಾಡುವುದು ಇನ್ನೂ ಸವಾಲು. ಪ್ರತಿಯೊಂದು ಕವಿತೆಯೂ ತನ್ನ ಓದುಗರೊಂದಿಗೆ ಸಂವಾದಿಸುವ ಬಗೆ ವಿಭಿನ್ನವಾಗಿರುತ್ತದೆ. ಅದನ್ನು ಏಕರೂಪೀ ಪರಿಭಾಷೆಯಲ್ಲಿ ಮಂಡಿಸುವುದು ಸರಿಯಲ್ಲ. ’ಮಿಥಿಲೆಯ ಮಾವಿನ...

NEET ರದ್ದು : ಖಿನ್ನತೆ, ಆತಂಕಕ್ಕೆ ಒಳಗಾದ ವಿದ್ಯಾರ್ಥಿಗಳು; ನಾಲ್ಕು ದಿನದಲ್ಲಿ ನಾಲ್ವರು ಸಾವಿಗೆ ಶರಣು

ಈ ವರ್ಷದ (2026) ನೀಟ್-ಯುಜಿ (NEET-UG) ಪರೀಕ್ಷೆ ರದ್ದಾದ ಬಳಿಕ ದೇಶದಾದ್ಯಂತ ಕನಿಷ್ಠ ನಾಲ್ವರು ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡ ಹಾಗೂ ಹತಾಶೆಯಿಂದ ಸಾವಿಗೆ ಶರಣಾಗಿದ್ದಾರೆ. ರಾಜಸ್ಥಾನದ ಝುಂಜುನು ಜಿಲ್ಲೆಯ 23 ವರ್ಷದ ಪ್ರದೀಪ್...