ಕೇರಳದ ಮಾಜಿ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರು ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ಪಕ್ಷದ ನಾಯಕರೊಂದಿಗೆ ಚರ್ಚಿಸಿದ ಬಳಿಕ ಈ ನಿರ್ಧಾರ ಪ್ರಕಟಿಸಿದ್ದಾರೆ.
ಶೈಲಜಾ ಅವರು ಕೇರಳದ ಆರೋಗ್ಯ ಸಚಿವರಾಗಿ, ವಿಶೇಷವಾಗಿ ನಿಫಾ ವೈರಸ್ ಮತ್ತು ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಿದ ಅವಧಿಯಲ್ಲಿ ತೋರಿದ ಕಾರ್ಯಕ್ಷಮತೆಯನ್ನು ಪರಿಗಣಿಸಿ 64ನೇ ಮ್ಯಾಗ್ಸೆಸೆ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಏಷ್ಯಾದ ನೊಬೆಲ್ ಎಂದೇ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಗುರುತಿಸಲಾಗಿದೆ. “ಈ ಪ್ರಶಸ್ತಿಯನ್ನು ಸ್ವೀಕರಿಸಬಾರದು ಎಂದು ಪಕ್ಷ ಸೂಚಿಸಿದ್ದು, ಆ ನಂತರದಲ್ಲಿ ಈ ನಿರ್ಧಾರ ಮಾಡಲಾಗಿದೆ” ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ನಾಯಕಿ ಶೈಲಜಾ ಹೇಳಿದ್ದಾರೆ.
“ನನ್ನನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತಿದೆ ಎಂದು ಪ್ರಶಸ್ತಿ ಸಮಿತಿ ನನಗೆ ತಿಳಿಸಲಾಯಿತು. ನಾನೊಬ್ಬ ರಾಜಕೀಯ ನಾಯಕಿ. ಈ ಪ್ರಶಸ್ತಿಯನ್ನು ಸಾಮಾನ್ಯವಾಗಿ ರಾಜಕೀಯ ನಾಯಕರಿಗೆ ನೀಡಲಾಗುವುದಿಲ್ಲ” ಎಂದು ಅವರು ತಿಳಿಸಿದ್ದಾರೆ.
“ನಾನು ಸಿಪಿಐ(ಎಂ) ಕೇಂದ್ರ ಸಮಿತಿಯ ಸದಸ್ಯಳಾಗಿದ್ದೇನೆ. ಈ ವಿಚಾರವಾಗಿ ನನ್ನ ಪಕ್ಷದ ನಾಯಕತ್ವದೊಂದಿಗೆ ಚರ್ಚಿಸಿದೆ. ಈ ಪ್ರಶಸ್ತಿಯನ್ನು ಸ್ವೀಕರಿಸದಂತೆ ಸೂಚನೆ ಬಂದಿದೆ. ಇದು ದೊಡ್ಡ ಪ್ರಶಸ್ತಿ. ಆದರೆ ಇದು ಎನ್ಜಿಒ ನೀಡುವ ಪ್ರಶಸ್ತಿ. ಅಲ್ಲದೆ ಅವರು ಸಾಮಾನ್ಯವಾಗಿ ಕಮ್ಯುನಿಸ್ಟರ ತತ್ವಗಳನ್ನು ಬೆಂಬಲಿಸುವುದಿಲ್ಲ” ಎಂದಿದ್ದಾರೆ.
1957ರಲ್ಲಿ ಸ್ಥಾಪಿತವಾದ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯು ಏಷ್ಯಾದ ಅತ್ಯುನ್ನತ ಗೌರವವೆಂದು ಪರಿಗಣಿಸಲಾಗಿದೆ. ಇದನ್ನು ಮೂರನೇ ಫಿಲಿಪೈನ್ ಅಧ್ಯಕ್ಷರ ಸ್ಮರಣೆರ ಭಾಗವಾಗಿ ನೀಡಲಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ ಏಷ್ಯಾದ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ.
ಇದನ್ನೂ ಓದಿರಿ: ಶರಣ ಪರಂಪರೆಯಲ್ಲಿ ಕೌಂಟುಬಿಕ ಜೀವನ ಹಾಗೂ ಕಾಮದ ದೃಷ್ಟಿಕೋನವೇನು?
ಕಮ್ಯುನಿಸ್ಟ್ ಹೋರಾಟಗಾರರನ್ನು ಸದೆಬಡಿಯಲು ಹೆಸರುವಾಸಿಯಾಗಿದ್ದ ಮ್ಯಾಗ್ಸೆಸೆ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ವೀಕರಿಸದಂತೆ ಪಕ್ಷವು ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಅಂತಹ ಪ್ರಶಸ್ತಿಯನ್ನು ಸ್ವೀಕರಿಸುವುದು ದೀರ್ಘಾವಧಿಯಲ್ಲಿ ಹಿನ್ನಡೆಯಾಗುತ್ತದೆ ಎಂದು ಸಿಪಿಎಂ ಭಾವಿಸಿದೆ.
ಶೈಲಜಾ ಅವರು ಪ್ರಶಸ್ತಿ ಸ್ವೀಕರಿಸಲು ಪಕ್ಷವು ಒಲವು ತೋರಿದ್ದರೆ, ವರ್ಗೀಸ್ ಕುರಿಯನ್, ಎಂ.ಎಸ್.ಸ್ವಾಮಿನಾಥನ್, ಬಿ.ಜಿ.ವರ್ಗೀಸ್ ಮತ್ತು ಟಿ.ಎನ್.ಶೇಷನ್ ನಂತರ ಈ ಗೌರವವನ್ನು ಪಡೆದ ಐದನೇ ಕೇರಳಿಗರಾಗಿ ಗುರುತಿಸಿಕೊಳ್ಳುತ್ತಿದ್ದರು.