ಏನಿಲ್ಲ ಸಾರ್…
ಬರೀ Dolo 650.. ಕೊರೋನಾದವರಿಗೆ ಅದೇ ಸಾರ್….. ಹೀಗೆಂದು ತಿಂಗಳಿಂದೆ ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ಮಾಧ್ಯಮದ ಮುಂದೆ ಬೋಲ್ಡ್ ಆಗಿ ಮಾತನಾಡಿದ ಆ ಹದಿ ಹರೆಯದ ಸಹೋದರಿಯ ಮಾತುಗಳು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಗೇಲಿಗೊಳಗಾಗುತ್ತಿವೆ.. ಆಕೆಯ ಮಾತುಗಳಿಗೆ ಮ್ಯೂಸಿಕ್ ಹಾಕಿ ರಿಮಿಕ್ಸ್ ಸಂಗೀತದಂತೆ ಮತ್ತೆ ವೈರಲ್ ಮಾಡಲಾಗುತ್ತಿದೆ..
ದುಡಿವ ಕೈಗಳಿಗೆ ಉದ್ಯೋಗವಿಲ್ಲದ್ದರ ಬಗ್ಗೆ, ಹಸಿದ ಹೊಟ್ಟೆಗಳಿಗೆ ಅನ್ನವಿಲ್ಲದ್ದರ ಬಗ್ಗೆ, ನಾಡ ಜನತೆಯ ಬೇನೆಗೆ ಸೂಕ್ತ ಔಷಧಿ ನೀಡಲಾಗದ ಷಂಡ ಪ್ರಭುತ್ವದ ವಿರುದ್ಧ ಆಕೆ ಮಾತನಾಡಿದ್ದಾಳೆ. ಆಕೆಗೆ ನಿಮ್ಮಂತಹ ಟಾಕು, ಟೀಕಿನ ಇಂಗ್ಲಿಷ್ ಮಿಶ್ರಿತ ಕನ್ನಡವನ್ನು ವಯ್ಯಾರದಿಂದ ಮಾತನಾಡಲು ಬಾರದಿರಬಹುದು. ಆಕೆ ತನ್ನ ಆಡುಭಾಷೆಯಲ್ಲೇ ಪ್ರಭುತ್ವದ ಕ್ರೌರ್ಯವನ್ನು ಪ್ರಶ್ನೆ ಮಾಡಿದ್ದಾಳೆ. ಆ ಮೂಲಕ ಆಕೆ ಸಮಸ್ತ ಅಸಹಾಯಕ ಕನ್ನಡಿಗರ ನೋವಿಗೆ ಧ್ವನಿಯಾಗಿದ್ದಾಳೆ.
ಆಕೆ ಆ ರೀತಿ ತನ್ನದೇ ದಾಟಿಯಲ್ಲಿ ತನ್ನ ಸಿಟ್ಟನ್ನು, ತನ್ನ ಅಸಹಾಯಕತೆಯನ್ನು ಮಾಧ್ಯಮಗಳ ಮುಂದೆ ಹೊರಗೆಡಹಿದ್ದಾಳೆ.. ನೀವು ಗೇಲಿ ಮಾಡಬೇಕಿದ್ದು ನನ್ನ ಆ ಸಹೋದರಿಯ ಗ್ರಾಮ್ಯ ಭಾಷೆಯನ್ನಲ್ಲ, ಅವಳ ಆಂಗಿಕ ಚಲನೆಯನ್ನಲ್ಲ… ಯಾವ ಪ್ರಭುತ್ವ, ಯಾವ ವ್ಯವಸ್ಥೆ ಆಕೆಯನ್ನು ಅಂತಹ ಮಾತುಗಳನ್ನಾಡಲು ಅಸಹಾಯಕಳಾಗಿಸಿತೋ ಆ ಪ್ರಭುತ್ವ , ಆ ವ್ಯವಸ್ಥೆಯನ್ನು ನೀವು ಗೇಲಿ ಮಾಡಬೇಕಿತ್ತು.
ಓರ್ವ ದುಷ್ಟ ರಾಜಕಾರಣಿಯನ್ನು ಗೇಲಿ ಮಾಡುವಂತೆ ನೀವು ಆ ಅಸಹಾಯಕ ಹೆಣ್ಮಗಳನ್ನು ಗೇಲಿ ಮಾಡುತ್ತಿದ್ದೀರಿ.. ಅದನ್ನು ಪ್ರಶ್ನಿಸಿದರೆ ಆಕೆಗೆ ಒಳ್ಳೆಯ ಪ್ರಚಾರ ಸಿಕ್ಕಿತಲ್ಲಾ ಎಂದು ಮತ್ತೆ ವ್ಯಂಗ್ಯವಾಡುತ್ತಿದ್ದೀರಿ.. ಆಕೆಯ ಪರವಾಗಿ ಧ್ವನಿಯೆತ್ತಲು ನ್ಯಾಯಾಂಗದಲ್ಲೋ, ಕಾರ್ಯಾಂಗದಲ್ಲೋ, ಶಾಸಕಾಂಗದಲ್ಲೋ ಯಾರೂ ಇಲ್ಲ ಎಂಬುವುದು ನಿಮ್ಮ ಈ ಧೈರ್ಯಕ್ಕೆ ಕಾರಣವಾಗಿದ್ದರೆ ಅವಳ ಪರವಾಗಿ ಧ್ವನಿಯೆತ್ತಲು ಮಾನವೀಯ ಸಂವೇದನೆಯಿರುವ ನಾವಿದ್ದೇವೆ.
ನೀವು ವ್ಯಂಗ್ಯ ಮಾಡಿದ್ದು ಅವಳನ್ನಲ್ಲ.. ನೀವು ವ್ಯಂಗ್ಯ ಮಾಡಿದ್ದು ಅವಳು ಪ್ರತಿನಿಧಿಸಿದ ಅಸಹಾಯಕ ದುಡಿವ ವರ್ಗವನ್ನು, ಅವಳ ಮಾತುಗಳು ಪ್ರತಿನಿಧಿಸಿದ ಹಸಿವಿನ ಬಲಿಪಶುಗಳನ್ನು…
ಹೃದಯ ಸತ್ತ ನಿಮ್ಮಂತವರ ದಾರ್ಷ್ಟ್ಯಕ್ಕೆ ನನ್ನದೊಂದು ಧಿಕ್ಕಾರ…
–ಇಸ್ಮತ್ ಪಜೀರ್
ಇದನ್ನೂ ಓದಿ; ಹೋರಾಟಗಾರನ ಫೇಸ್ಬುಕ್ ಪೋಸ್ಟ್ಗೆ NSA ಪ್ರಕರಣ: ಸಂಜೆಯೊಳಗೆ ಬಿಡುಗಡೆಗೊಳಿಸಿ ಎಂದ ಸುಪ್ರೀಂ
ಯಾರಪ್ಪ ಹಂಗಿಸಿದ್ದು. ಅದು ಮೈಸೂರು ಭಾಗದ ಭಾಷೆ, ಉತ್ತರ ಕರ್ನಾಟಕದ್ದಲ್ಲ. ವೈರಲ್ ಆಗಿರುವುದು ಆ ಹುಡುಗಿಯ ಮಾತಿನ ಲಾಲಿತ್ಯದಿಂದ, ವೈರಲ್ ಮಾಡಿದವರಾರೂ ಅವರನ್ನು ಆಡಿಕೊಂಡಿಲ್ಲ. ಮೆಚ್ಚುಗೆಯಿಂದ ವಿವಿಧ ರೀತಿಯಲ್ಲಿ ತೋರಿಸಿದ್ದಾರೆ. ಕೊಳಕು ಮನಸ್ಸಿನ, ನಕಾರಾತ್ಮಕ ಧೋರಣೆಯ, ಜನರ ಕಷ್ಟವನ್ನೆ ಬಂಡವಾಳ ಮಾಡಿಕೊಂಡು ಹೊಟ್ಟೆ ಹೊರೆಯುವ ನಿಮ್ಮಂತವರಷ್ಟೆ ಅವರ ವಿಡಿಯೊಗಳನ್ನು ಸಹ ಹೊಟ್ಟೆಪಾಡಿಗೆ ಬಳಸಿಕೊಂಡು ಈ ರೀತಿ ಪೋಸ್ಟ್ ಮಾಡಿರುವುದು
ಆಹಾ… ಇವನ ಪ್ರೀತಿ ನೋಡ…
ಹಸಿವಿನ ಕಾಠಿಣ್ಯವರಿಯದ ನಿನ್ನಂತವರಿಗೆ ಭಾಷೆಯ ಲಾಲಿತ್ಯವನ್ನು ಕೊಂಡಾಡಿದಂತೆ ಕಾಣುತ್ತೆ ಬಿಡು..