ಲೋಕಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಘೋಷಿಸಿದ್ದ ಮಾಜಿ ಸಚಿವ ಕೆಎಸ್ ಈಶ್ವರಪ್ಪ, ಅಮಿತ್ ಶಾ ಅವರು ಈಶ್ವರಪ್ಪ ಚುನಾವಣೆಯಲ್ಲಿ ನಿಲ್ಲಲಿ, ರಾಘವೇಂದ್ರನನ್ನು ಸೋಲಿಸಲಿ ಎಂದು ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಅಮಿತ್ ಶಾ ಕರೆಯ ಹಿನ್ನೆಲೆಯಲ್ಲಿ ಕೆ.ಎಸ್.ಈಶ್ವರಪ್ಪ ಅವರು ನಿನ್ನೆ ದೆಹಲಿಗೆ ತೆರಳಿದ್ದರು, ಆದರೆ ಕೊನೆಯ ಗಳಿಗೆಯಲ್ಲಿ ಕೆ.ಎಸ್. ಈಶ್ವರಪ್ಪ ಅವರನ್ನು ಭೇಟಿ ಮಾಡಲು ಅಮಿತ್ ಶಾ ನಿರಾಕರಿಸಿದ್ದಾರೆ. ಆ ಬಳಿಕ ಪ್ರತಿಕ್ರಿಯಿಸಿದ ಈಶ್ವರಪ್ಪ, ಗೃಹ ಸಚಿವರು ನನಗೆ ದೂರವಾಣಿ ಕರೆ ಮಾಡಿ ಬುಧವಾರ ದಿಲ್ಲಿಗೆ ಬನ್ನಿ ಎಂದಿದ್ದರು. ಅದಕ್ಕಾಗಿ ಬಂದಿದ್ದೇನೆ, ಆದರೆ ಇಲ್ಲಿಗೆ ಬಂದ ಬಳಿಕ ಅಮಿತ್ ಶಾ ಅವರ ಕಚೇರಿಯಿಂದ ಫೋನ್ ಬಂತು. ಅಮಿತ್ ಶಾ ಅವರು ಸದ್ಯಕ್ಕೆ ಸಿಗುವುದಿಲ್ಲ ಎಂಬ ಸಂದೇಶ ಬಂದಿದೆ. ಇದರ ಅರ್ಥ ನಾನು ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬುದಾಗಿದೆ. ಬಿ.ವೈ.ರಾಘವೇಂದ್ರ ಸೋಲಬೇಕು ಎನ್ನುವುದು ಇದರ ಅರ್ಥವಾಗಿದೆ ಎಂದು ಹೇಳಿದ್ದಾರೆ.
ನಾನು ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರೂ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೆ, ನನಗೆ ಚುನಾವಣೆಯಲ್ಲಿ ನಿಲ್ಲಬೇಡಿ ಎಂದು ಸೂಚನೆ ನೀಡಬೇಡಿ ಎಂದು ನಾನು ಅವರಲ್ಲಿ ಪ್ರಾರ್ಥನೆ ಮಾಡಿದ್ದೆ, ಅಮಿತ್ ಶಾ ಅವರು ನನಗೆ ಸಿಗದೆ ಇರಲು ಕಾರಣ, ಈಶ್ವರಪ್ಪ ಚುನಾವಣೆಯಲ್ಲಿ ಸ್ಪರ್ಧಿಸಲಿ, ನನ್ನ ಆಶೀರ್ವಾದ ಇದೆ, ಯಡಿಯೂರಪ್ಪ ಅವರ ಕುಟುಂಬ ರಾಜಕಾರಣ ಅಂತ್ಯವಾಗಲಿದೆ ಎನ್ನುವ ಆಶೀರ್ವಾದ ಅಮಿತ್ ಶಾ ಮಾಡಿದ್ದಾರೆ ಎನ್ನುವುದನ್ನು ನಾನು ಭಾವಿಸುತ್ತೇನೆ, ಒಂದು ಕುಟುಂಬಕ್ಕೆ ಒಂದು ಟಿಕೆಟ್ ಎಂಬುವುದು ಬಿಜೆಪಿ ನಿಯಮ, ನಮ್ಮ ಕುಟುಂಬವನ್ನು ಹೊರ ಹಾಕಲಿಕ್ಕೆ ಹಾಗುತ್ತಾ? ನಮ್ಮ ಸಿದ್ದಾಂತ ಹಿಂದುತ್ವವೇ ಆಗಿದೆ ಎಂದು ಹೇಳಿದ್ದಾರೆ.
ಯಡಿಯೂರಪ್ಪ ಮನೆಯಲ್ಲಿ ಒಬ್ಬ ಸಂಸದ, ಮತ್ತೊಬ್ಬ ಶಾಸಕ ಇದ್ದಾರೆ. ಶಾಸಕರಾದವರು ಬಿಜೆಪಿ ರಾಜ್ಯಾಧ್ಯಕ್ಷ ಬೇರೆ ಆಗಿದ್ದಾರೆ. ಎಲ್ಲರ ಸಹಕಾರದಲ್ಲಿ ನಾನು ಚುನಾವಣೆ ಗೆದ್ದು ಮೋದಿ ಅವರ ಕೈ ಬಲಪಡಿಸುತ್ತೇನೆ, ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಭೇಟಿಗೆ ಅವಕಾಶ ಸಿಕ್ಕಿಲ್ಲ. ನಾನು ಸ್ಪರ್ಧಿಸುವ ನಿರ್ಧಾರದಿಂದ ಹಿಂದೆ ಸರಿದಿಲ್ಲ ಎಂದು ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಈಶ್ವರಪ್ಪ ಪುತ್ರ ಕಾಂತೇಶ್ಗೆ ಹಾವೇರಿ ಟಿಕೆಟ್ ನಿರೀಕ್ಷಿಸಿದ್ದರು, ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಈಶ್ವರಪ್ಪ ಶಿವಮೊಗ್ಗದಲ್ಲಿ ಬಿಎಸ್ವೈ ಪುತ್ರ ರಾಘವೇಂದ್ರ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಇದನ್ನು ಓದಿ: ಲೋಕಸಭೆ ಚುನಾವಣೆ: ಕರ್ನಾಟಕದಲ್ಲಿ ಇಂಡಿಯಾ ಮೈತ್ರಿಕೂಟದ 10 ಪಕ್ಷಗಳ ಬೆಂಬಲ ಪಡೆಯಲು ಚರ್ಚೆ; ಡಿಕೆ ಶಿವಕುಮಾರ್