ತನ್ನ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಪತಿಯ ಮೇಲೆ ಹಲ್ಲೆ ಮಾಡಿದ್ದ ಪತ್ನಿ ಮತ್ತು ಆಕೆಯ ಸಹೋದರರ ವಿರುದ್ಧ ‘ಕೊಲೆ ಯತ್ನ’ ಆರೋಪದ ಮೇಲೆ ಮೂವರ ವಿರುದ್ಧ ದೂರು ದಾಖಲಿಸಿರುವ ಪೊಲೀಸರು, ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಸುಳುಗಳಲೆ ಕಾಲೋನಿಯಲ್ಲಿ ವಾಸವಾಗಿರುವ ಗೃಹಿಣಿ ಅಭಿಲಾಷಾ, ದಿನಗೂಲಿ ರಾಜು ಎಂಬುವರನ್ನು ವಿವಾಹವಾಗಿದ್ದರು. ಆದರೆ ಇತ್ತೀಚೆಗೆ ಪತಿ ರಾಜು ಆಕೆಯ ನಗ್ನ ಫೋಟೋಗಳನ್ನು ವಾಟ್ಸಾಪ್ನಲ್ಲಿ ಪರಿಚಯಸ್ಥರಿಗೆ ಕಳುಹಿಸಿದ್ದನ್ನು ಅಭಿಲಾಷಾ ಪತ್ತೆ ಹಚ್ಚಿದ ನಂತರ ದಂಪತಿಯಲ್ಲಿ ಬಿರುಕು ಕಾಣಿಸಿಕೊಂಡಿದೆ.
ತನ್ನ ಖಾಸಗಿ ಫೋಟೋಗಳನ್ನು ವಾಟ್ಸಾಪ್ನಲ್ಲಿ ಹಂಚಿಕೊಂಡಿರುವ ಘಟನೆಯನ್ನು ನೋವಿನಿಂದ ಅಭಿಲಾಷಾ ತನ್ನ ಸಹೋದರರಾದ ಎಚ್ಪಿ ಮಧುಸೂಧನ್ ಮತ್ತು ಅಭಿಷೇಕ್ ಅವರಿಗೆ ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಸಹೋದರರು ಮನೆಗೆ ಬಂದು ರಾಜು ಮೇಲೆ ಹಲ್ಲೆ ನಡೆಸಿದ್ದಾರೆ.
ಇದನ್ನೂ ಓದಿ: ದಲಿತ ಮಹಿಳೆಯನ್ನು ಪ್ರಾರ್ಥಿಸದಂತೆ ತಡೆದ ತಮಿಳುನಾಡಿನ ಚಿದಂಬರಂ ದೇವಸ್ಥಾನದ ಅರ್ಚಕರು
ಸೋಮವಾರ (ಫೆ.21) ಮನೆಯಲ್ಲಿ ಗಲಾಟೆ ನಡೆದು ಅಭಿಲಾಷಾ ಮತ್ತು ಆಕೆಯ ಸಹೋದರರು ಮರದ ದೊಣ್ಣೆ, ಕಬ್ಬಿಣದ ರಾಡ್ ಮತ್ತು ಗುದ್ದಲಿಯಿಂದ ರಾಜುಗೆ ಥಳಿಸಿದ್ದಾರೆ. ಅಷ್ಟರಲ್ಲಿ ಪಕ್ಕದಲ್ಲೇ ವಾಸ ಮಾಡುವ ರಾಜು ಅವರ ಸಹೋದರ ವೆಂಕಟೇಶ್ ಮತ್ತು ಅವರ ತಂದೆ ಕೆಂಚಪ್ಪ ಥಳಿತದಿಂದ ರಾಜುರನ್ನು ಬಿಡಿಸಿ ಶನಿವಾರಸಂತೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಅವರನ್ನು ಹಾಸನ ಜಿಲ್ಲೆಯ ಆಸ್ಪತ್ರೆಯೊಂದಕ್ಕೆ ಸ್ಥಳಾಂತರಿಸಲಾಗಿದೆ.
ಈ ಸಂಬಂಧ ರಾಜು ಸಹೋದರ ವೆಂಕಟೇಶ್ ಪೊಲೀಸ್ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಅಭಿಲಾಷಾ ಹಾಗೂ ಆಕೆಯ ಸಹೋದರ ಮಧುಸೂಧನ್ ಅವರನ್ನು ಬಂಧಿಸಿದ್ದಾರೆ. ಅಭಿಷೇಕ್ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
ಶನಿವಾರಸಂತೆ ಪೊಲೀಸರು ಐಪಿಸಿ ಸೆಕ್ಷನ್ 324 (ಸ್ವಯಂಪ್ರೇರಿತವಾಗಿ ಅಪಾಯಕಾರಿ ಆಯುಧಗಳಿಂದ ಗಾಯಗೊಳಿಸುವುದು) ಮತ್ತು 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ರಾಷ್ಟ್ರಧ್ವಜ ಕುರಿತ ಹೇಳಿಕೆ: ಈಶ್ವರಪ್ಪಗೆ ಕರೆ ಮಾಡಿ ಛೀಮಾರಿ ಹಾಕಿದ್ದೇನೆ – ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ