ಹೊಸದಿಲ್ಲಿ: ತನ್ನ ಪ್ರಿಯಕರ ಅಫ್ತಾಬ್ ಪೂನಾವಾಲಾನಿಂದ ಕೊಲೆಯಾದ ಶ್ರದ್ಧಾ ವಾಕರ್ ಎರಡು ವರ್ಷಗಳ ಹಿಂದೆಯೇ ತನಗಿರುವ ಕೊಲೆ ಬೆದರಿಕೆಯ ಕುರಿತು ದೂರು ನೀಡಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.
“ನಿನ್ನನ್ನು ಕೊಂದು ಹಾಕುತ್ತೇನೆ, ಕತ್ತರಿಸಿ ಹಾಕುತ್ತೇನೆ” ಎಂದು ಅಫ್ತಾಬ್ ಎಚ್ಚರಿಸಿದ್ದ ಎಂದು ಶ್ರದ್ಧಾ ವಾಕರ್, ನವೆಂಬರ್ 23, 2020ರಂದು ತನ್ನ ತವರೂರಾದ ವಸಾಯಿಯಲ್ಲಿರುವ ತಿಲುಂಜ್ನಲ್ಲಿ ಪೊಲೀಸರಿಗೆ ದೂರು ನೀಡಿದ್ದರು ಎಂದು ‘ಎನ್ಡಿಟಿವಿ’ ವರದಿ ಮಾಡಿದೆ.
“ಇಂದು ಅವನು ನನ್ನನ್ನು ಉಸಿರುಗಟ್ಟಿಸಿ ಕೊಲ್ಲಲು ಪ್ರಯತ್ನಿಸಿದನು. ಅವನು ನನ್ನನ್ನು ಹೆದರಿಸಿದನು. ನಿನ್ನನ್ನು ಕೊಲ್ಲುತ್ತೇನೆ, ತುಂಡುಗಳಾಗಿ ಕತ್ತರಿಸಿ ಎಸೆಯುತ್ತೇನೆ ಎಂದು ನನಗೆ ಬ್ಲ್ಯಾಕ್ಮೇಲ್ ಮಾಡಿದ್ದಾನೆ. ಅವನು ನನ್ನನ್ನು ಆರು ತಿಂಗಳಿಂದ ಹೊಡೆದಿದ್ದಾರೆ. ಆದರೆ ಪೊಲೀಸರ ಬಳಿ ಹೋಗಲು ಧೈರ್ಯವಿರಲಿಲ್ಲ. ಏಕೆಂದರೆ ಅವನು ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾನೆ” ಎಂಬುದು ವಾಕರ್ ಅವರ ಪತ್ರದಲ್ಲಿ ದಾಖಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಪೂನಾವಾಲಾ ಜೊತೆಯಲ್ಲಿ ಇನ್ನು ಮುಂದೆ ಬದುಕಲು ಬಯಸುವುದಿಲ್ಲ” ಎಂಬ ಘೋಷಣೆಯನ್ನೂ ಶ್ರದ್ಧಾ ಮಾಡಿರುವುದನ್ನು ಪತ್ರದಲ್ಲಿ ಕಾಣಬಹುದು. “ಆತ ನನ್ನನ್ನು ಕೊಲ್ಲವುದಾಗಿ ನೋಯಿಸುವುದಾಗಿ ಬ್ಲ್ಯಾಕ್ಮೇಲ್ ಮಾಡಿರುವುದರಿಂದಾಗಿ ಅವನು ನನ್ನನ್ನು ಎಲ್ಲಿಯಾದರೂ ನೋಡಿದರೆ ನನಗಾಗುವ ದೈಹಿಕ ಹಲ್ಲೆಯೆಂದು ಪರಿಗಣಿಸಬೇಕು” ಎಂದು ಶ್ರದ್ಧಾ ಕೋರಿದ್ದರು.
ಶ್ರದ್ಧಾ ಅವರ ಕುಟುಂಬವು ಈ ಸಂಬಂಧವನ್ನು ಒಪ್ಪರಲಿಲ್ಲ. ಹೀಗಾಗಿ ಕುಟುಂಬ ಮತ್ತು ಶ್ರದ್ಧಾ ಸಂಪರ್ಕವನ್ನು ಕಳೆಕೊಂಡಿದ್ದರು.
ಪೋಲೀಸರು ವಾಕರ್ನಿಂದ ಲಿಖಿತ ಹೇಳಿಕೆಯನ್ನು ಸ್ವೀಕರಿಸಿದ್ದರು. ಆ ಹೇಳಿಕೆಯಲ್ಲಿ “ಅಫ್ತಾಬ್ ಪೂನಾವಾಲಾ ಅವರ ಪೋಷಕರು ನನ್ನೊಂದಿಗೆ ಮಾತನಾಡಿದ್ದಾರೆ. ಇನ್ನು ಮುಂದೆ ಇಬ್ಬರಿಗೂ ಯಾವುದೇ ಜಗಳವಿರುವುದಿಲ್ಲ ಎಂದಿದ್ದಾರೆ” ಎಂಬುದು ಉಲ್ಲೇಖಗೊಂಡಿದೆ.
ಯಾವುದೇ ಕ್ರಮ ಕೈಗೊಳ್ಳಲು ವಾಕರ್ ಕೋರಿದ್ದರು. ಇದಾದ ನಂತರ ಈ ವರ್ಷ ಇಬ್ಬರೂ ದೆಹಲಿಗೆ ತೆರಳಿದ್ದರು. 2019ರಲ್ಲಿ ಡೇಟಿಂಗ್ ಅಪ್ಲಿಕೇಶನ್ ಬಂಬಲ್ (Bumbl) ಮೂಲಕ, ವಸಾಯ್ನಲ್ಲಿ ವಾಸಿಸುತ್ತಿದ್ದ ಅಫ್ತಾಬ್ನನ್ನು ಶ್ರದ್ಧಾ ಭೇಟಿಯಾಗಿದ್ದರು. ಶ್ರದ್ಧಾ ಕುಟುಂಬವು ಈ ಸಂಬಂಧವನ್ನು ಒಪ್ಪಿಕೊಳ್ಳಲಿಲ್ಲ. ಆದ್ದರಿಂದ ಶ್ರದ್ಧಾ ಅಫ್ತಾಬ್ನೊಂದಿಗೆ ವಾಸಿಸಲೆಂದು ತನ್ನ ಕುಟುಂಬವನ್ನು ತೊರೆದರು. ಮೊದಲು ಮುಂಬೈನಲ್ಲಿ ವಾಸವಿದ್ದರು. ನಂತರ ಮೇ 2022ರಿಂದ ದೆಹಲಿಯಲ್ಲಿ ಜೀವಿಸುತ್ತಿದ್ದರು.
“2019ರಲ್ಲಿ ಶ್ರದ್ಧಾ-ಅಫ್ತಾಬ್ ಜೊತೆಯಲ್ಲಿ ವಾಸಿಸಲು ಆರಂಭಿಸಿದ್ದರು” ಎಂದು ಶ್ರದ್ಧಾ ಸಂಪರ್ಕದಲ್ಲಿದ್ದ ಆಕೆಯ ಸ್ನೇಹಿತ ಲಕ್ಷ್ಮಣ್ ನಾಡಾರ್ ಹೇಳುತ್ತಾರೆ. “ಶ್ರದ್ಧಾ ಆತನನ್ನು ಮದುವೆಯಾಗಲು ಬಯಸಿದ್ದಳು. ಆದರೆ ಅವಳ ತಾಯಿ ವಿರೋಧಿಸಿದರು. ಆದ್ದರಿಂದ ಆಕೆ ಮನೆ ಬಿಟ್ಟಿದ್ದರು”.
ಶ್ರದ್ಧಾ ಮನೆಯಿಂದ ಹೊರಬಂದ ನಂತರ ಇಡೀ ಕುಟುಂಬದಲ್ಲಿ ಆಕೆಯ ತಾಯಿ ಮಾತ್ರ ಶ್ರದ್ಧಾ ಜೊತೆಯಲ್ಲಿ ಸಂಪರ್ಕದಲ್ಲಿದ್ದರು ಎನ್ನುತ್ತಾರೆ ಲಕ್ಷ್ಮಣ್. ಶ್ರದ್ಧಾ ಅವರ ತಾಯಿ 2020ರಲ್ಲಿ ನಿಧನರಾದರು. ಶ್ರದ್ಧಾ ಅವರ ಕುಟುಂಬದೊಂದಿಗಿನ ಏಕೈಕ ಸಂಪರ್ಕ ಲಕ್ಷ್ಮಣ್ ಮಾತ್ರ ಆಗಿದ್ದರು. ಆಕೆ ದೆಹಲಿಗೆ ತೆರಳಿ, ಸಂಪರ್ಕ ಕಡಿತವಾಗುವವರೆಗೂ ಲಕ್ಷ್ಮಣ್ ಮಾತನಾಡಿದ್ದರು. ಶ್ರದ್ಧಾ ಅವರ ತಂದೆ ಇನ್ಸ್ಟಾಗ್ರಾಮ್ನಲ್ಲಿ ತನ್ನ ಮಗಳ ಮೇಲೆ ನಿಗಾ ಇಟ್ಟಿದ್ದರು.
ಶ್ರದ್ಧಾ ಅವರ ತಂದೆ ತಾಯಿ ನಾಲ್ಕು ವರ್ಷಗಳ ಹಿಂದೆ ಬೇರೆಯಾಗಿದ್ದರು. ಶ್ರದ್ಧಾ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದರು. 2018ರಲ್ಲಿ ಅವರು ವಸೈನಲ್ಲಿನ ಕಾಲ್ ಸೆಂಟರ್ನಲ್ಲಿ ಉದ್ಯೋಗ ಆರಂಭಿಸಿದ್ದರು.
ಇದನ್ನೂ ಓದಿರಿ: ಊನಾ ಪ್ರಕರಣದ ಆರೋಪಿಗಳಿಂದ ದಲಿತ ಸಂತ್ರಸ್ತರಿಗೆ ಜೀವ ಬೆದರಿಕೆ; ಎಫ್ಐಆರ್
ಶ್ರದ್ಧಾರನ್ನು ಮಾತನಾಡಿಸಲು ಲಕ್ಷ್ಮಣ್ ಪ್ರಯತ್ನಿಸುತ್ತಲೇ ಇದ್ದರು. ಅವರು ಜೂನ್ ಮತ್ತು ಜುಲೈನಲ್ಲಿ ಸಾಕಷ್ಟು ಸಲ ಆಕೆಗೆ ಕರೆ ಮಾಡಿದರು. ಆದರೆ ಆಕೆಯ ಮೊಬೈಲ್ ಸಂಖ್ಯೆ ಸ್ವಿಚ್ ಆಫ್ ಆಗಿತ್ತು. ಲಕ್ಷ್ಮಣ್ ಕಳುಹಿಸಿದ ಸಂದೇಶಗಳಿಗೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.
ಶ್ರದ್ಧಾ ಅವರ ಸಹೋದರ ಶ್ರೀಜಯ್ ವಾಕರ್ ಅವರಿಗೆ ಸೆಪ್ಟೆಂಬರ್ 14ರಂದು ಕರೆ ಮಾಡಿದ ಲಕ್ಷ್ಮಣ್, ಎರಡು ತಿಂಗಳಿನಿಂದ ಶ್ರದ್ಧಾ ಅವರ ಫೋನ್ ಆಫ್ ಆಗಿದೆ ಎಂದು ತಿಳಿಸಿದ್ದರು. ಶ್ರೀಜಯ್ ತನ್ನ ತಂದೆ ವಿಕಾಸ್ ವಾಕರ್ಗೆ ಮಾಹಿತಿ ನೀಡಿದ್ದು, ಅವರು ಮಹಾರಾಷ್ಟ್ರದ ಮಾಣಿಕ್ಪುರದಲ್ಲಿ ಮಿಸ್ಸಿಂಗ್ ದೂರು ದಾಖಲಿಸಿದ್ದರು.
ಕೆಲವು ದಿನಗಳ ನಂತರ, ವಿಕಾಸ್ ವಾಕರ್ ಅವರಿಗೆ ಮಾಣಿಕ್ಪುರ ಪೊಲೀಸರು ಪ್ರತಿಕ್ರಿಯಿಸಿ, “ದೆಹಲಿಯ ಛತ್ತರ್ಪುರದಲ್ಲಿ ನಿಮ್ಮ ಮಗಳು ಆಕೆಯ ಗೆಳೆಯ ಅಫ್ತಾಬ್ನೊಂದಿಗೆ ವಾಸಿಸುತ್ತಿದ್ದಳು” ಎಂದು ಮಾಹಿತಿ ನೀಡಿದರು. ವಿಕಾಸ್ ನವೆಂಬರ್ 8ರಂದು ಶ್ರದ್ಧಾ ಅವರ ಫ್ಲಾಟ್ಗೆ ಬಂದರು. ಆದರೆ ಅದು ಲಾಕ್ ಆಗಿತ್ತು. ದೆಹಲಿಯ ಮೆಹ್ರೌಲಿ ಪೊಲೀಸ್ ಠಾಣೆಯಲ್ಲಿ ಮಗಳ ಅಪಹರಣದ ಆರೋಪದ ಮೇಲೆ ಎಫ್ಐಆರ್ ದಾಖಲಿಸಿದ್ದರು. ಆ ನಂತರ ಕೊಲೆ ಪ್ರಕರಣ ಬಯಲಿಗೆ ಬಂದಿತ್ತು.