Homeಮುಖಪುಟಕವಿ ಸಿದ್ಧಲಿಂಗಯ್ಯ: ವೈರುಧ್ಯಪೂರ್ಣ ಎರಡು ಘಟ್ಟಗಳು

ಕವಿ ಸಿದ್ಧಲಿಂಗಯ್ಯ: ವೈರುಧ್ಯಪೂರ್ಣ ಎರಡು ಘಟ್ಟಗಳು

- Advertisement -
- Advertisement -

ಸಾಮಾಜಿಕ ಚಳವಳಿಗ ನನಗೆ ಪರಿಚಿತವಾಗಿದ್ದು ಮೂರು ದಶಕಗಳ ಹಿಂದೆ. ನನಗಾಗ 20 ವರ್ಷ ಇದ್ದಿರಬಹುದು. ಆ ಸಂದರ್ಭದಲ್ಲಿ ನನ್ನ ಕಿವಿಮೇಲೆ ಬಿದ್ದ ಕೆಲವು ಕ್ರಾಂತಿ ಗೀತೆಗಳು ರೋಮಾಂಚನ ಉಂಟುಮಾಡಿದ್ದವು. ವ್ಯವಸ್ಥೆಯಲ್ಲಿನ ಅನ್ಯಾಯ, ಅಕ್ರಮಗಳ ವಿರುದ್ಧ ನನ್ನಲ್ಲಿದ್ದ ಭಾವನೆಗಳನ್ನು ಮತ್ತಷ್ಟು ಕೆರಳಿಸಿದ್ದವು. ನನ್ನ ವೈಚಾರಿಕ ದೃಷ್ಟಿಕೋನವನ್ನು ಹರಿತಗೊಳಿಸಿದ್ದವು. ಅವುಗಳಲ್ಲಿ ’ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ’ ಹಾಡಿಗೆ ಪ್ರಮುಖ ಸ್ಥಾನವಿದೆ. ಆಗಿನಿಂದ ಈ ಹಾಡಿಗೆ ನೂರಾರು ಬಾರಿ ಕೋರಸ್ ಹಾಡಿದ್ದೇನೆ. ಈ ಹಾಡು ಇಂದಿಗೂ ನನ್ನಲ್ಲಿ ಅದೇ ಆಕರ್ಷಣೆಯನ್ನು ಉಳಿಸಿಕೊಂಡಿದೆ. ಇಂದಿಗೂ ಧರಣಿ ನಡೆಯುವ ಸ್ಥಳಗಳಲ್ಲಿ, ಹೋರಾಟದ ವೇದಿಕೆಗಳಲ್ಲಿ – ದಲಿತ, ಪ್ರಗತಿಪರ, ಎಡಪಂಥೀಯ, ರೈತ ಚಳವಳಿ ಎಲ್ಲೆಡೆಗಳಲ್ಲಿ ಈ ಹಾಡು ಪ್ರಮುಖ ಸ್ಥಾನ ಕಾಯ್ದುಕೊಂಡಿದೆ. ಅದರಲ್ಲಿನ ವೈಚಾರಿಕ ಮೊನಚು ಮತ್ತು ಕಾವ್ಯದ ಶಕ್ತಿಗಳ ಮಿಳಿತವೇ ಅದರ ಪ್ರಸ್ತುತತೆಗೆ ಕಾರಣ ಅನಿಸುತ್ತದೆ.

ಆಗ ನಾನು ಎಡಪಂಥೀಯ ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ದೆ. ಗದ್ದರ್ ಅವರ ಕ್ರಾಂತಿಕಾರಿ ಹಾಡುಗಳು ನಮಗೆ ಚಿರಪರಿಚಿತವಾಗಿದ್ದವು. ಗದ್ದರ್ ಮತ್ತು ಅವರ ಜನನಾಟ್ಯ ಮಂಡಳಿಯ ನೂರಾರು ಹಾಡುಗಳು ಕನ್ನಡದ ರೂಪಪಡೆದುಕೊಂಡಿದ್ದವು. 47ರ ಸ್ವಾತಂತ್ರ್ಯದ ಹಾಡೂ ಕೂಡ ಅಂಥದೇ ಒಂದಿರಬೇಕು ಅಂತ ಆರಂಭದ ದಿನಗಳಲ್ಲಿ ಅಂದುಕೊಂಡಿದ್ದೆ. ಆದರೆ ಈ ಹಾಡು ನಮ್ಮದೇ ಕನ್ನಡದ ಕ್ರಾಂತಿಕವಿ ಸಿದ್ಧಲಿಂಗಯ್ಯನವರು ಬರೆದಿದ್ದು ಅಂತ ತಿಳಿದಾಗ ಕವಿಗಳ ಬಗ್ಗೆ, ಕನ್ನಡದ ಬಗ್ಗೆ ಮೂಡಿದ ಹೆಮ್ಮೆಯ ಭಾವನೆ ಹೇಳತೀರದು.

ಸಿದ್ಧಲಿಂಗಯ್ಯನವರ ಇಂಥಾ ಅನೇಕ ಪದ್ಯಗಳು, ಗದ್ಯ ಬರಹಗಳು ಕನ್ನಡ ಸಾಹಿತ್ಯದಲ್ಲಿ ಹೊಸ ಸಂಚಲನವನ್ನು ಮೂಡಿಸಿದ್ದು, ದನಿಯಿಲ್ಲದವರ ದನಿಯಾಗಿದ್ದು, ಹೋರಾಟಗಾರರಿಗೆ ಹೊಸ ಹುರುಪನ್ನು ಮೂಡಿಸಿ ದಲಿತ ಚಳವಳಿ ಮಾತ್ರವಲ್ಲದೆ ಇತರೆ ಪ್ರಗತಿಪರ ಚಳವಳಿಗಳಿಗೂ ಶಕ್ತಿ ತುಂಬಿದ್ದು ಇತಿಹಾಸದಲ್ಲಿ ದಾಖಲಾಗುವಂತಹ ವಿಷಯವೇ. ತನ್ನ ಲೇಖನಿಯ ಶಕ್ತಿಯ ಮೂಲಕ ಹಲವು ದಶಕಗಳ ಕಾಲ ಚಳವಳಿಗಳನ್ನು ಪ್ರಭಾವಿಸಿದ, ಪ್ರಭಾವಿಸುತ್ತಿರುವ ಅವರ ಮಹಾನ್ ಕಾವ್ಯ ಶಕ್ತಿಗೆ ಒಂದು ದೊಡ್ಡ ಸಲಾಮ್.

ಅವರ ಕಾವ್ಯ ಪ್ರತಿಭೆಯನ್ನು ಹಾಗೂ ದಲಿತ ಚಳವಳಿಯ ಆರಂಭದ ಕಾಲಘಟ್ಟದಲ್ಲಿ ಸಿದ್ಧಲಿಂಗಯ್ಯನವರ ವಿಶೇಷ ಪಾತ್ರದ ಬಗ್ಗೆ ಸಕಾರಾತ್ಮಕವಾದ, ಮೆಚ್ಚುಗೆಯ ಅಭಿಮಾನದ ಮಾತುಗಳು ಕೇಳಿಬಂದವು. ನಂತರದ ದಿನಗಳ ಬಗ್ಗೆ ವಿಮರ್ಶೆಗಳೂ ಕೇಳಿಬಂದವು. ಈ ವಿಮರ್ಶೆಗಳನ್ನು ಆಧಾರರಹಿತವಾದುವು ಎಂದು ತಳ್ಳಿಹಾಕಲಾಗದು.

ಮೂರು ವರ್ಷಗಳ ಹಿಂದೆ ’ದಿ ಸ್ಟೇಟ್’ ಎಂಬ ಜಾಲತಾಣವೊಂದು ಕವಿಗಳ ಸಂದರ್ಶನ ಮಾಡಿತ್ತು. ಅಲ್ಲಿ ಕೇಳಿದ ಪ್ರಶ್ನೆಗಳಿಗೆ ಕವಿಗಳು ನೀಡಿರುವ ಉತ್ತರಗಳು ಅವರ ಧೋರಣೆಯಲ್ಲಾದ ಪಲ್ಲಟಗಳ ಬಗ್ಗೆ ನಮಗೆ ಸಾಕಷ್ಟು ಸ್ಪಷ್ಟತೆಯನ್ನು ಒದಗಿಸುತ್ತವೆ. ಅವರ ಉತ್ತರಗಳ ಬಗ್ಗೆ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ.

ಒಂದು ಪ್ರಶ್ನೆ ಹೀಗಿದೆ: “..ನೀವು ಬಲಪಂಥೀಯ ನಾಯಕರೊಂದಿಗೆ ಆತ್ಮೀಯವಾಗಿರೋದು ಏನು ಸಂದೇಶ ರವಾನಿಸುತ್ತದೆ?”

“ಬಲಪಂಥೀಯ ನಾಯಕರಿಗೆ ಆತ್ಮೀಯರಾಗಿದ್ದೀರಿ ಅಂದ್ರೆ ಒಪ್ಪೋಲ್ಲ. ಯಡಿಯೂರಪ್ಪನೋರು ನನಗೆ ಆತ್ಮೀಯರು, ಅವರು ಮುಖ್ಯಮಂತ್ರಿಗಳಾಗಿದ್ದಾಗ ನಾನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಆಗಿದ್ದೆ. ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದಾಗ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದೆ. ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಗಳಾಗಿದ್ದಾಗ 12 ವರ್ಷ, ಅಂದರೆ ಎರಡು ಅವಧಿಗೆ ನನ್ನನ್ನು ವಿಧಾನ ಪರಿಷತ್‌ಗೆ ಸದಸ್ಯ ಮಾಡಿದ್ರು. ಇವರನ್ನೆಲ್ಲಾ ಬಲಪಂಥೀಯ ಅಂತ ಹೇಳೋಕಾಗುತ್ತಾ? ಮಾನವೀಯ ಸಂಬಂಧ, ವಿಶ್ವಾಸ. ಅವರು ಕೊಟ್ಟ ಅಧಿಕಾರವನ್ನು ನಾನು ಕ್ಷಣಕ್ಷಣವೂ ದಲಿತರು, ಬಡವರು, ಕನ್ನಡದ ಪರವಾಗಿ ಕೆಲಸ ಮಾಡಿದ್ದೇನೆ. ನಾನು ಭ್ರಷ್ಟಾಚಾರ ಮಾಡಿದ್ರೆ, ದುಡ್ಡು ಮಾಡ್ಕಂಡಿದ್ರೆ ಇವರು ಪ್ರಶ್ನೆ ಮಾಡಬಹುದು. ಈ ಎಲ್ಲಾ ಕೂಗಾಡ್ತಾ ಇರೋರು ಭ್ರಷ್ಟಾಚಾರದಲ್ಲಿ ಮುಳುಗಿ, ದಲಿತರ ಹೆಸರಿನಲ್ಲಿ ಶ್ರೀಮಂತರಾದವ್ರೇ, ದೊಡ್ಡ ದೊಡ್ಡ ಸಾಹಿತಿಗಳೂ ಆಗಿಬಿಟ್ಟಿದ್ದಾರೆ, ಹೆಸರೂ ಮಾಡಿಕೊಂಡುಬಿಟ್ಟಿದ್ದಾರೆ. ಸಿದ್ದರಾಮಯ್ಯನವರೂ ನನಗೆ ಆಪ್ತರೇ. ಆಂಜನೇಯನವರೂ, ಡಾ.ಎಚ್‌ಸಿ ಮಹದೇವಪ್ಪನವರೂ ನನಗೆ ಆಪ್ತರೇ, ಅವರೆಲ್ಲಾ ಬಲಪಂಥೀಯರಾ?…

ಇವರೆಲ್ಲಾ ಯಾಕಿಂಗ್ ಮಾತಾಡ್ತಾ ಇದಾರೋ? ಬಹುಶಃ ಅಸೂಯೆಯೋ? ಹೊಟ್ಟೆಕಿಚ್ಚೋ ಅಥವಾ
ನಾನು ಇವರಿಗೆ ಪ್ರತಿಸ್ಪರ್ಧಿ ಆಗಿಬಿಟ್ಟಿದ್ದೀನೋ? ಅರ್ಥ ಆಗ್ತಿಲ್ಲ. ಆದರೆ ಮುಗ್ದರನ್ನು ದಾರಿ ತಪ್ಪಿಸ್ತಾ ಇದಾರೆ”.

ಮತ್ತೊಂದು ಪ್ರಶ್ನೆ ಹೀಗಿತ್ತು: “ಈ ಪ್ರಶ್ನೆ ಬಂದಿದ್ದರ ಹಿನ್ನೆಲೆ ಏನೆಂದರೆ ರಾಮಾಜೋಯಿಸ್ ಅನುವಾದಿತ ’ಮನುಧರ್ಮ ಶಾಸ್ತ್ರ’ ಪುಸ್ತಕವನ್ನು ಸಿದ್ಧಲಿಂಗಯ್ಯನವರೇ ಸ್ವತಃ ಬಿಡುಗಡೆ ಮಾಡಿದ್ದರು. ’ದಲಿತತ್ವ’ದಿಂದ ’ಮನುತತ್ವ’ಕ್ಕೆ ಸಾಂಸ್ಕೃತಿಕ ರೂಪಾಂತರಗೊಂಡಿದ್ದೀರಿ ಎನ್ನುವ ಆರೋಪಗಳು ನಿಮ್ಮ ಮೇಲಿವೆಯಲ್ಲ?”

ಕವಿಗಳ ಉತ್ತರ ಹೀಗಿದೆ: “ಆ ಅಭಿಪ್ರಾಯವೇ ತಪ್ಪು. ನಾನು ಮನುತತ್ವಕ್ಕೆ ಬೆಂಬಲವಾಗಿ ಪದ್ಯ ಆಗ್ಲಿ, ಲೇಖನ ಆಗ್ಲಿ, ಅಥವಾ ಮಾತಾಡಿದ್ದರೆ ಅದು ತಪ್ಪು. ನಾನು ಹಾಗೆ ಮಾತಾಡಿಲ್ಲ. ಆದರೆ ರಾಮಾಜೋಯಿಸರು ಮನುಸ್ಮೃತಿಯನ್ನು ಪರಿಷ್ಕರಣೆ ಮಾಡಿ, ಅದರಲ್ಲಿ ಮಹಿಳೆಯರ, ಶೂದ್ರರ, ದಲಿತರ ವಿರುದ್ಧ ಇದ್ದ ಅಂಶಗಳನ್ನು ಕಿತ್ತಾಕಿಬಿಟ್ಟು ನ್ಯಾಯಶಾಸ್ತ್ರ, ಆರೋಗ್ಯ, ಆಹಾರ, ಮಾನವೀಯ ಸಂಬಂಧಗಳು, ಅಧಿಕಾರ ವ್ಯವಸ್ಥೆ ಮುಂತಾದ ವಿಷಯಗಳನ್ನು ಇಟ್ಟುಕೊಂಡು ಪುಸ್ತಕ ಮಾಡಿದ್ದರು. ಅದಕ್ಕಾಗಿ ನಾನು ಒಪ್ಪಿಕೊಂಡು ಬಿಡುಗಡೆ ಮಾಡಿದೆ. ಕೆಲವು ಅರೆಬೆಂದ ಕಾಳುಗಳು ಅರ್ಥಮಾಡಿಕೊಳ್ತಾ ಇಲ್ಲ, ಯಾರೋ ಕೆಲವು ಕುಹಕಿಗಳು ಇಂಥದ್ದು ಹಬ್ಬಿಸ್ತಾ ಇದಾರೆ. ಏನ್ ಮಾಡ್ಬೇಕೋ ಗೊತ್ತಾಗ್ತಾ ಇಲ್ಲ”.

ಇನ್ನು ಅಮಿತ್ ಶಾ ತಮ್ಮ ಮನೆಗೆ ಬಂದು ಭೇಟಿ ಮಾಡಿದ ಹಿನ್ನೆಲೆಯಲ್ಲಿ ಕೇಳಿದ ಮತ್ತೊಂದು ಪ್ರಶ್ನೆಗೆ ಕವಿಗಳು ಕೊಟ್ಟ ಉತ್ತರ ಹೀಗಿದೆ. “ಅವರ ಪಕ್ಷದ ಕಾರ್ಯದರ್ಶಿಗಳು ಬಂದು ಅಮಿತ್ ಶಾ ಅವರು ನಿಮ್ಮನ್ನು ಭೇಟಿ ಮಾಡಲಿಕ್ಕೆ ಬರ್‍ತಾರೆ ಅಂದಾಗ ಸಂತೋಷದಿಂದ ಒಪ್ಪಿಕೊಂಡೆ. ಯಾಕೆಂದರೆ ಅಮಿತ್ ಶಾ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು. ಕೇಂದ್ರ ಸರ್ಕಾರಕ್ಕೆ ತುಂಬಾ ಹತ್ತಿರ ಇರುವವರು, ಮೋದಿಯವರಿಗೆ ಆಪ್ತರು. ಕೇಂದ್ರದಲ್ಲಿ ಅವರ ಮಾತು ನಡೀತದೆ. ಇವತ್ತು ದಲಿತರ ಮೇಲೆ ನಡೀತಿರೋ ದೌರ್ಜನ್ಯ, ಅನ್ಯಾಯಗಳು ಹಾಗೂ ಹಿಂಬಡ್ತಿ, ಅಟ್ರಾಸಿಟಿ ಕಾನೂನನ್ನು ದುರ್ಬಲಗೊಳಿಸ್ತಿರೋದು ಇಂಥಾ ವಿಚಾರಗಳನ್ನು ನಾನು ಸರ್ಕಾರಕ್ಕೆ, ಅದರಲ್ಲೂ ಮುಖ್ಯವಾಗಿ ಕೇಂದ್ರ ಸರ್ಕಾರಕ್ಕೆ ಮುಟ್ಟಿಸಬೇಕಿತ್ತು. ಅದಕ್ಕೆ ತುಂಬಾ ಸೂಕ್ತವಾದ ವ್ಯಕ್ತಿ ಅಮಿತ್ ಶಾ ಅವರೇ. ಅವರೇ ನಮ್ಮ ಮನೆಗೆ ಬರ್‍ತಾರೆ ಅಂದಾಗ ಅಯ್ಯೋ ಬನ್ನಿ ಅಂತ ಕರೆದು ಅವರಿಗೆ ಅಂಬೇಡ್ಕರ್ ಫೋಟೋ ಕೊಟ್ಟು, ದಯವಿಟ್ಟು ದಲಿತರ ಹಿತವನ್ನು ಕಾಪಾಡಿ ನೀವು… ಅಂತ ಇಷ್ಟೇ ನಾನು ಹೇಳಿದ್ದು. ಅದಕ್ಕೆ ಕೆಲವರು ಜಾಲತಾಣಗಳಲ್ಲಿ ಹುಚ್ಚುಹುಚ್ಚಾಗಿ ಏನೇನೋ ಮಾತಾಡ್ತಾ ಇದಾರೆ… ಅರೆಬೆಂದ ಕಾಳುಗಳು, ಅವರ ಅಜ್ಞಾನಕ್ಕೆ ಕನಿಕರ ಪಡಬಹುದಷ್ಟೇ.

…ಹಾಗೇ ಅಂಬೇಡ್ಕರ್ ಅವರ 125ನೇ ಜನ್ಮದಿನ ಆಚರಣೆಯ ಬಗ್ಗೆ ಸಲಹೆ ಕೊಡಿ ಅಂತ ಪ್ರಧಾನಿ ಮೋದಿಯವರು ಕೇಳಿದರು. ನಾನು ಕೆಲವು ಸಲಹೆಗಳನ್ನು ಕೊಟ್ಟೆ. ಅದರಲ್ಲಿ ಅರ್ಧದಷ್ಟು ಇಂಪ್ಲಿಮೆಂಟ್ ಆಯ್ತು. ಅದಕ್ಕೆ ಕೆಲವರಿಗೆ ಹೊಟ್ಟೆ ಉರಿ. ಯಾಕ್ ಸಲಹೆ ಕೊಟ್ಟ ಇವ್ನು?… ಅಂತ ಕೇಳ್ತಾರೆ”.

ಕವಿಗಳ ಈ ರೀತಿಯ ಉತ್ತರಗಳಿಂದ ಕೆಲವು ಪ್ರಮುಖ ಪ್ರಶ್ನೆಗಳು ಮೂಡುತ್ತವೆ. ಶತಶತಮಾನಗಳಿಂದ ದೀನದಲಿತರ ಕಷ್ಟಕೋಟಲೆಗಳಿಗೆ ಕಾರಣವಾಗಿರುವ ಅದೇ ಪುರೋಹಿತಶಾಹಿ, ಬಲಪಂಥೀಯ ಶೋಷಕ ಶಕ್ತಿಗಳು ಇಂದು ಮಾರುವೇಷ ತೊಟ್ಟುಕೊಂಡು ದೇಶವನ್ನು ಆವರಿಸಿಕೊಂಡಿರುವ ಸಂದರ್ಭದಲ್ಲಿ ಅವರೊಂದಿಗಿನ ಸಖ್ಯವನ್ನು ನಿರಾಕರಿಸುತ್ತಲೇ ಅದೇ ಶೋಷಕ ಶಕ್ತಿಗಳ ಪ್ರತಿನಿಧಿಯಾಗಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾರನ್ನು ಸಂತೋಷದಿಂದ ಸ್ವಾಗತಿಸುವುದು ಎಂಥಾ ವೈರುಧ್ಯ? ಇವರ ಅಧಿಕಾರದಲ್ಲೇ ದಲಿತರ, ಬಡವರ ಮೇಲೆ ಅತ್ಯಾಚಾರ, ದೌರ್ಜನ್ಯಗಳು ರಾಜಾರೋಷವಾಗಿ ನಡೆಯುತ್ತಿರುವುದು, ಇದರ ಹಿಂದಿನ ಶಕ್ತಿಗಳು ಯಾರೆಂಬುದು ಸಾಮಾಜಿಕ ಪ್ರಜ್ಞೆಯ ಕನಿಷ್ಠ ಸಾಮಾನ್ಯ ಜ್ಞಾನವಿರುವವರಿಗೂ ತಿಳಿದಿರುವಾಗ ಕವಿಗಳು ಅದನ್ನು ಅರ್ಥ ಮಾಡಿಕೊಳ್ಳಲಾರದಷ್ಟು ಮುಗ್ದರೇ? ದಲಿತರ ರಕ್ಷಣೆಗಿದ್ದ ಮೀಸಲಾತಿ ಹಾಗೂ ಇತರೆ ಕಾನೂನುಗಳನ್ನು ತಮ್ಮ ಯೋಜಿತ ಷಡ್ಯಂತ್ರದ ಭಾಗವಾಗಿಯೇ ದುರ್ಬಲಗೊಳಿಸುತ್ತಿರುವಾಗ ಅವರಲ್ಲೇ ಸವಿನಯಪೂರ್ವಕ ಮನವಿ ಮಾಡಿಕೊಂಡರೆ ಸಮಸ್ಯೆ ಪರಿಹಾರವಾಗಿಬಿಡುತ್ತದೆಯೆಂದು ಕವಿಗಳು ನಿಜಕ್ಕೂ ನಂಬಿದ್ದರೆ?

ವಾಸ್ತವದಲ್ಲಿ ಬಿಜೆಪಿ ಪಕ್ಷದ ಅಧ್ಯಕ್ಷರಿಗೆ ಬೇಕಾಗಿದ್ದದ್ದು ಇಷ್ಟೇ. ಜನಪ್ರಿಯ ದಲಿತ ಕವಿಗಳ ಕೈಯಿಂದ ಅಂಬೇಡ್ಕರ್ ಫೋಟೋ ಪಡೆದುಕೊಳ್ಳುವ ಫೋಟೋ ತೆಗೆಸಿಕೊಳ್ಳುವುದು, ಅದನ್ನು ಮಾಧ್ಯಮಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಎಲ್ಲೆಡೆ ರಾರಾಜಿಸುವಂತೆ ನೋಡಿಕೊಳ್ಳುವುದು, ಈ ಮೂಲಕ ತಳಮಟ್ಟದಲ್ಲಿರುವ ದಲಿತ ಕಾರ್ಯಕರ್ತರನ್ನು ತಮ್ಮ ತೆಕ್ಕೆಗೆ ಸೆಳೆಯುವುದು ಹಾಗೂ ವಿಶಾಲ ದಲಿತ ಮತದಾರರಿಗೆ ತಮ್ಮಲ್ಲಿಲ್ಲದ ’ಅಂಬೇಡ್ಕರ್ ಅಭಿಮಾನ’, ’ದಲಿತ ಪ್ರೇಮ’ದ ಸಂದೇಶ ಸಾರುವುದು. ಈ ಫೋಟೋಶೂಟ್ ರಾಜಕಾರಣದ ಬಗ್ಗೆ ಕವಿಗಳಿಗೆ ಅರಿವೇ ಇಲ್ಲ ಎಂದುಕೊಳ್ಳಬಹುದೆ?

ವಾಸ್ತವದಲ್ಲಿ, ಈ ರಾಜಕೀಯ ಸಂದೇಶ ಸಾರುವ ರಾಜಕಾರಣ ಅವರ ನಿಧನದ ನಂತರವೂ ಮುಂದುವರೆಯಿತು. ಕ್ಯಾಬಿನೆಟ್‌ನ ಅರ್ಧ ಡಜನ್ ಮಂತ್ರಿಗಳು ಅಂತಿಮ ಸಂಸ್ಕಾರದಲ್ಲಿ, ನಂತರ ನಡೆದ ಸ್ಮರಣ ಸಭೆಯಲ್ಲಿ ಕಾಣಿಸಿಕೊಂಡಿದ್ದೆಲ್ಲವೂ ಇದರ ಭಾಗವೇ.

ಇನ್ನು ಮನುಧರ್ಮ ಶಾಸ್ತ್ರದ ಬಗ್ಗೆ ಬರೋಣ. ಚಳವಳಿಯ ಹಿಂದಿನ ಕಾಲದಲ್ಲಿ ಮನುಧರ್ಮದ ಪ್ರತಿಗಳನ್ನು ಎಷ್ಟೋ ಬಾರಿ ಸುಟ್ಟುಹಾಕಿದ್ದೇನೆ ಎಂದು ಕವಿಗಳು ನೆನಪಿಸಿಕೊಳ್ಳುತ್ತಾರೆ, ಅದೇ ವೇಳೆಯಲ್ಲಿ ’ಅಂಬೇಡ್ಕರ್ ಅವರು ಮನುಧರ್ಮ ಶಾಸ್ತ್ರವನ್ನು ಸುಟ್ಟು ಹಾಕಿದ ಸಂದರ್ಭದಲ್ಲಿ ಅದರಲ್ಲಿ ಒಳ್ಳೆಯ ಅಂಶಗಳೂ ಇವೆ ಎಂದಿದ್ದರು’ ಎಂದು ಸಮರ್ಥನೆಗೆ ಇಳಿಯುತ್ತಾರೆ. ಇಂಥಾ ವೈರುಧ್ಯವನ್ನು ಹೇಗೆ ಅರ್ಥ ಮಾಡಿಕೊಳ್ಳುವುದು? ಹಾಗಿದ್ದರೆ ಕವಿಗಳು ಹೇಳುವ ಪ್ರಕಾರ ದಲಿತರು, ಶೂದ್ರರು, ಮಹಿಳೆಯರ ವಿರುದ್ಧ ಇದ್ದ ಕೆಲವು ಶ್ಲೋಕಗಳನ್ನು ಕಿತ್ತುಹಾಕಿಬಿಟ್ಟಿರುವುದರಿಂದ ರಾಮಾಜೋಯಿಸರು ಪರಿಷ್ಕರಿಸಿರುವ ಮನುಧರ್ಮಶಾಸ್ತ್ರ ಉನ್ನತ ಮೌಲ್ಯಗಳು, ನೀತಿಗಳಿಂದ ಕಂಗೊಳಿಸುತ್ತಿದೆಯೆ? ದಲಿತ ಚಳವಳಿಯ ಐಕಾನ್‌ಗಳಲ್ಲಿ ಒಬ್ಬರಾಗಿರುವ ಸಿದ್ಧಲಿಂಗಯ್ಯನವರೇ ಬಿಡುಗಡೆ ಮಾಡಿದ ಈ ಗ್ರಂಥವನ್ನು ನಾವು ’ಮನುಷ್ಯ ಸಂಬಂಧಗಳು, ವ್ಯಕ್ತಿತ್ವ ವಿಕಸನದ ಪಠ್ಯ;ಗಳೆಂದು ಶಿಫಾರಸ್ಸು ಮಾಡಬಹುದೆ? ಈ ಪ್ರಶ್ನೆಗಳನ್ನು ಹಾಕಿಕೊಂಡಾಗ ಗಾಢ ವಿಷಾದದ ಭಾವನೆ ಆವರಿಸುತ್ತದೆ.

ಇಂದಿನ ಸರ್ಕಾರವನ್ನು ಟೀಕೆ ಮಾಡುವವರ ಮೇಲೆ ಪ್ರಭುತ್ವ ದಮನದ ಬಗ್ಗೆ ಅವರ ಪ್ರತಿಕ್ರಿಯೆ ಕೇಳಲಾಯ್ತು: ’ಆಝಾದಿ’ ಎಂದು ಕೂಗಿದ್ದಕ್ಕಾಗಿ ಜೆಎನ್‌ಯು ವಿದ್ಯಾರ್ಥಿಗಳನ್ನು ಜೈಲಿಗೆ ಹಾಕಲಾಗುತ್ತೆ. ಕ್ರಾಂತಿಕಾರಕ ಕವಿತೆ ಬರೆದ ನೀವು ಈ ಬೆಳವಣಿಗೆಯನ್ನು ಹೇಗೆ ನೋಡುತ್ತೀರಿ? ಎಂಬುದು ಪ್ರಶ್ನೆ.

ಅದಕ್ಕೆ ಕವಿಗಳ ಉತ್ತರ ಹೀಗಿತ್ತು: “ವಿನಾಕಾರಣ ಸರ್ಕಾರ ಆಗ್ಲಿ, ಜನಗಳಾಗ್ಲಿ, ಯಾವ್ದೇ ಸಂಘಸಂಸ್ಥೆ ಆಗ್ಲಿ ವಿನಾಕಾರಣ ಆಮಾಯಕರಿಗೆ, ನ್ಯಾಯಕ್ಕಾಗಿ ಹೋರಾಟ ಮಾಡೋರಿಗೆ ತೊಂದ್ರೆ ಕೊಟ್ರೆ ಅದು ಖಂಡನೀಯ”. ಹಸಿಹಸಿಯಾಗಿ ವಾಸ್ತವಗಳು ಕಣ್ಣೆದುರು ರಾಚುತ್ತಿರುವಾಗ ಅದರ ಬಗ್ಗೆ ಏನೂ ಹೇಳದಂತೆ ಅವರ ಬಾಯಿಕಟ್ಟಿಸಿದ, ಹೀಗೆ ದೇಶಾವರಿ ಮಾತಾಡುವಂತೆ ಮಾಡಿದ ಶಕ್ತಿಯಾದರೂ ಯಾವುದು? ಪ್ರಲೋಭನೆಯೋ ಒತ್ತಡವೋ ಈ ವಿದ್ಯಮಾನಕ್ಕೆ ಏನು ಹೇಳಬೇಕು?

“ದಲಿತ ಸಂಘಟನೆಗಳ ಮೇಲೆ ಇಂದು ಅನೇಕ ಆರೋಪಗಳು ಕೇಳಿಬರುತ್ತಿವೆಯಲ್ಲಾ?” ಎಂಬ ಪ್ರಶ್ನೆಗೆ ಸಿದ್ಧಲಿಂಗಯ್ಯನವರ ಉತ್ತರ ಆಶ್ಚರ್ಯ ಮೂಡಿಸುತ್ತದೆ. “ಇದು ದುರದೃಷ್ಟಕರ. ಯಾವಾಗ ವಸೂಲಿ ದಂಧೆಗೆ ಇಳೀತಾರೆ ಆವಾಗ ನೈತಿಕ ಸ್ಥೈರ್ಯನೇ ಹೊರಟೋಗುತ್ತೆ, ಆತ್ಮಸ್ಥೈರ್ಯನೇ ಹೊರಟೋಗುತ್ತೆ. ಯಾರು ಇವರಿಗೆ ಆರ್ಥಿಕವಾಗಿ ಅನುಕೂಲ ಮಾಡ್ತಾರೋ, ಅವರು ಹೇಳಿದಂತೆ ಇವರ ಹೋರಾಟ ಗಲಾಟೆಗಳು ನಡೀತಾ ಹೋಗ್ತವೆ. ಇದು ಅನ್ಯಾಯ. ಅಂಬೇಡ್ಕರ್ ಸಿದ್ಧಾಂತ, ಲೋಹಿಯಾ ಸಿದ್ಧಾಂತ ಇಟ್ಟುಕೊಂಡು ಹೋರಾಟ ಮಾಡ್ರೋ ಅಂದ್ರೆ ಯಾರೋ ದುಡ್ಡು ಕೊಡ್ತಾರೆ ಅಂತ ಅವರು ಹೇಳಿದ ವಿಷಯ ತಗೊಂಡು, ಅವರಿಗೇನೋ ಸೇವೆಯಲ್ಲಿ ತೊಂದರೆ ಆಗಿರ್‍ತದೆ, ಯಾರೋ ಕಿರುಕುಳ ಕೊಟ್ಟಿರ್‍ತಾರೆ ಆ ವಿಷಯ ಇಟ್ಟುಕೊಂಡು ಹೋರಾಟ ಮಾಡ್ತಾರೆ. ಈಗ ಅಂಬೇಡ್ಕರ್ ಇದ್ದು ಹೋರಾಟ ಮಾಡ್ರಿ ಅಂತ ಕೇಳಿದ್ರೆ ಅವರತ್ರನೇ ದುಡ್ಡು ಕೇಳಿಬಿಡ್ತಿದ್ರೇನೋ ಈ ಪುಡಿಪುಕ್ಕಾಗಳು. ಇವರಿಗೆ ಸಮಾಜವೇ ಬಹಿಷ್ಕಾರ ಹಾಕಬೇಕು.

ದುಡ್ಡು ಮಾಡೋ ಕಳ್ರು, ದಲಿತ ನಾಯಕರು ಯಾರಿದ್ದಾರೆ ಅವರಿಗೆ. ಅದರಲ್ಲಿ ಬಂಡಾಯ ಸಾಹಿತಿಗಳು, ದಲಿತ ಸಾಹಿತಿಗಳು ಅಂತ ಎತ್ತರದ ಹೆಸರು ಮಾಡಿ ದುಡ್ಡು ಮಾಡೋ ಗಿರಾಕಿಗಳೂ ಇದ್ದಾರೆ. ಬಂಡಾಯವನ್ನೇ ಆದಾಯವನ್ನಾಗಿ ಮಾಡಿಕೊಂಡಿರೋರು ಇದಾರೆ ಕೆಲವರು. ದಲಿತ ಹೋರಾಟ ಅಂತ ಅಂಬೇಡ್ಕರ್ ಫೋಟೋ ಇಟ್ಟುಕೊಂಡು ದುಡ್ಡು ಮಾಡ್ಕೊಳ್ಳೋರು ಇದಾರೆ. ಇವರಿಗೆ ಜನರೇ ಪಾಠ ಕಲಿಸಬೇಕು. ದಲಿತರು ಇವರಿಗೆ ಬಹಿಷ್ಕಾರ ಹಾಕಬೇಕಷ್ಟೇ. ಇವರ ಹಿಂದೆ ಜನ ಹೋಗದಂಗೆ ಮಾಡಬೇಕು. ಅಂದರೆ ಇಂಥೋರನ್ನು ಎಕ್ಸ್‌ಪೋಸ್ ಮಾಡಬೇಕು” ಎಂದು ಸಾರಾಸಗಟಾದ ಸ್ವೀಪಿಂಗ್ ಸ್ಟೇಟ್ಮೆಂಟ್ ಕವಿಗಳ ಬಾಯಿಂದ ಹೇಗೆ ಹೊರಟಿತು? ಯಾವುದೇ ಚಳವಳಿಯಲ್ಲಿ ಭಿನ್ನಭಿನ್ನ ರೀತಿಯ ಭ್ರಷ್ಟಾಚಾರಿಗಳು ಇರುವಂತೆ ದಲಿತ ಚಳವಳಿಯಲ್ಲೂ ಇದ್ದಾರೆ ಎನ್ನುವುದರ ಅರ್ಥವೇ ಬೇರೆ.

ಈ ರೀತಿ ಸ್ವೀಪಿಂಗ್ ಸ್ಟೇಟ್‌ಮೆಂಟ್ ಮಾಡಲಿಕ್ಕೆ ಕಾರಣ ದಲಿತ ಸಂಘಟನೆಗಳು ತಮ್ಮನ್ನು ಟೀಕಿಸಿದ್ದರು ಎಂಬುದಾಗಿತ್ತೇ? ಇದು ನಿಜಕ್ಕೂ ದುಃಖಕರ ಸಂಗತಿ. ಅಧಿಕಾರಸ್ಥ ಸ್ಥಾನದಲ್ಲಿರುವವರ ದೌರ್ಜನ್ಯಗಳ ಬಗ್ಗೆ ಮಾತಾಡುವಾಗ ಸುತ್ತಿಬಳಸಿ ದೇಶಾವರಿ ಮಾತಾಡುವುದು, ನಮ್ಮದೇ ಸಂಘಟನೆಗಳ ಬಗ್ಗೆ ಕೆಲವು ಹುಳುಕುಗಳ ಬಗ್ಗೆ ಮಾತಾಡಬೇಕಾಗಿ ಬಂದಾಗ ಸಲೀಸಾಗಿ ಅತಿಯಾದ ಸ್ವೀಪಿಂಗ್ ಸ್ಟೇಟ್‌ಮೆಂಟ್ ಮಾಡೋದನ್ನು
ಅರ್ಥಮಾಡಿಕೊಳ್ಳೋದಾದರೂ ಹೇಗೆ?

“ನಿಮ್ಮ ಸೃಜನಶೀಲತೆಯನ್ನು, ಕ್ರಾಂತಿಕಾರಿ ಚಿಂತನೆಗಳನ್ನು ಅಧಿಕಾರ ರಾಜಕಾರಣದ ಆಸೆಗೆ ಒತ್ತೆ ಇಟ್ಟಿರಿ ಎನಿಸಿಲ್ಲವೆ?” ಎಂಬ ಪ್ರಶ್ನೆಗೆ ಕವಿಗಳು ನೇರವಾಗಿ ಉತ್ತರ ಕೊಡ್ತಾರೆ.

“ರಾಜಕೀಯಕ್ಕೆ ಒತ್ತೆ ಇಡಲಿಕ್ಕೆ ನಾನೇನು ಮಿನಿಸ್ಟ್ರೇ.. ಆಗ ಇಕ್ಕರ್ಲಾ ಒದಿರ್ಲಾ ಅಂತ ಬರೆದೆ, ಪರಿಸ್ಥಿತಿ ಹಂಗಿತ್ತು, ನಂಗೂ ಆವೇಶ, ಹುಮ್ಮಸ್ಸು ಇತ್ತು. ಈಗ ನನಗೆ 64 ವರ್ಷ. ವಯಸ್ಸಾಯ್ತು. ಆರೋಗ್ಯ ಚನ್ನಾಗಿಲ್ಲ. ಈಗ್ಲೂ ನಾನು ಇಕ್ಕರ್ಲಾ ಒದಿರ್ಲಾ ಅಂತ ಪದೇ ಪದೇ ಡೈಲೀ ಬರೆಯೊಕೋದ್ರೆ ಬಿಪಿ ಹೆಚ್ಚಾಗಿ ನಾನೇ ಗೊಟಕ್ ಅನ್ನೋ ಪರಿಸ್ಥಿತಿ ಬರ್‍ತದೆ”.

ಆದರೆ ವಾಸ್ತವ ಬೇರೆಯದೇ ಇದೆ. ಅವರ ಅವೇಶ, ಹುಮ್ಮಸ್ಸು ಕುಂದಿದ್ದು 2018ರಲ್ಲಿ 64ನೇ ವಯಸ್ಸಿನಲ್ಲಿ ಅಲ್ಲ. ಅದಕ್ಕಿಂತ ಸುಮಾರು ಮೂರು ದಶಕಗಳಷ್ಟು ಹಿಂದೆಯೇ. ತಮ್ಮ ಆತ್ಮಕತೆಯ ಮೊದಲ ಸಂಪುಟವನ್ನು ಅಂದಿನ ಮುಖ್ಯಮಂತ್ರಿ ಸನ್ಮಾನ್ಯ ರಾಮಕೃಷ್ಣ ಹೆಗಡೆಯವರಿಗೆ ಅರ್ಪಿಸಿದ್ದರು. ನಂತರದ ಕೃತಿಯನ್ನು ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಅರ್ಪಿಸಿದ್ದರು. ಹಾಗೆಯೇ ಅವರ ಜೀವನದ ಕೊನೆಯ ಕೃತಿಯನ್ನು ಯಡಿಯೂರಪ್ಪನವರಿಗೆ ಅರ್ಪಣೆ ಮಾಡಿದ್ದು ಒಂದು ಸಂಕೇತದಂತೆ ಇತಿಹಾಸದಲ್ಲಿ ದಾಖಲಾಗುತ್ತದೆ.

ತನ್ನ ಕಾವ್ಯದ ಮೂಲಕ ಎರಡು ತಲೆಮಾರುಗಳ ಮೇಲೆ ಅಗಾಧ ಪರಿಣಾಮವನ್ನು ಬೀರಿದ ಕವಿ ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಕ್ರಾಂತಿಕಾರಿ ಕಾವ್ಯ ನಮ್ಮೊಂದಿಗೆ ಉಳಿಯುತ್ತದೆ. ಹಾಗೆಯೇ ಅವರ ವೈರುಧ್ಯಮಯ ರಾಜಕೀಯ ಜೀವನ ನಮಗೆ ಒಂದು ಪಾಠವಾಗಿಯೂ ಉಳಿಯುತ್ತದೆ.

ಕವಿ ಸಿದ್ಧಲಿಂಗಯ್ಯನವರ ಗಾಢ ನೆನಪಿನಲ್ಲಿ “ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ?” ಎಂದು ಗಟ್ಟಿ ದನಿಯಲ್ಲಿ ಹಾಡೋಣ. ಅಂಬೇಡ್ಕರ್‌ಅವರು ಆಶಿಸಿದ ಸಮಾನತೆಯನ್ನು ಸಾಧಿಸುವವರೆಗೂ ಎತ್ತರದ ದನಿಯಲ್ಲಿ ಹಾಡುತ್ತಲೇ ಇರೋಣ. ಆದರೆ ದೀನ ದಲಿತರನ್ನು ದಮನಿಸುತ್ತಿರುವ ಅಧಿಕಾರದ ಗದ್ದುಗೆಯಲ್ಲಿರುವವರಿಗೆ ಇಂಥಾ ಕಾವ್ಯ ಖಡ್ಗವನ್ನು ’ಅರ್ಪಣೆ’ ಮಾಡದಂತೆ ಎಚ್ಚರವಹಿಸೋಣ.


ಇದನ್ನೂ ಓದಿ: ನನ್ನ ನೆನಪ ಹೂದೋಟದಲ್ಲಿ ಕವಿ ಸಿದ್ಧಲಿಂಗಯ್ಯನವರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...