Homeಮುಖಪುಟಆಕಾಶ ವೀಕ್ಷಣೆ ಮಾರ್ಗದರ್ಶಿ: ಅನಂತದಿಂ.. ದಿಗಂತದಿಂ.. ನೋಡೆ ನೋಡೆ ಮೂಡಿತೊಂದು..

ಆಕಾಶ ವೀಕ್ಷಣೆ ಮಾರ್ಗದರ್ಶಿ: ಅನಂತದಿಂ.. ದಿಗಂತದಿಂ.. ನೋಡೆ ನೋಡೆ ಮೂಡಿತೊಂದು..

ಮುಂಜಾನೆ ಅಂದರೆ, ಸೂರ್ಯ ಹುಟ್ಟುವ 30 ನಿಮಿಷ ಮೊದಲು, ಪೂರ್ವಕ್ಕೆ ಮುಖ ಮಾಡಿ ನಿಂತರೆ, ಅತ್ಯಂತ ಪ್ರಕಾಶಮಾನವಾಗಿ ಹೊಳೆಯುವ ಚುಕ್ಕಿಯೊಂದು ಕಾಣುತ್ತದೆ. ಅದು ಶುಕ್ರ ಗ್ರಹ.

- Advertisement -
- Advertisement -

ಆಕಾಶ ವೀಕ್ಷಣೆಯು ಅನಾದಿ ಕಾಲದ ನಾಗರಿಕತೆಗಳಲ್ಲಿನ ಜನರ ಬದುಕಿನ ಒಂದು ಅವಿಭಾಜ್ಯ ಅಂಗವಾಗಿತ್ತು. ಅಂದಿನ ಮಾನವರ ಅಗತ್ಯ ಮತ್ತು ಅವರ ಕೆಲಸ-ಕಾರ್ಯಗಳಿಗೆ ತಕ್ಕಂತೆ ಕಾಲಗಳನ್ನು ಗುರುತಿಸಲು, ವಿವಿಧ ಆಚರಣೆಗಳನ್ನು ನಡೆಸಲು, ಕೃಷಿ ಚಟುವಟಿಕೆ ಮಾಡಲು ಮತ್ತು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಂಚರಿಸಲು ಆಗಸದಲ್ಲಿ ಕಾಣುವ ಸೂರ್ಯ, ಚಂದ್ರ, ಗ್ರಹ ಮತ್ತು ನಕ್ಷತ್ರಗಳ ವೀಕ್ಷಣೆ ಹಾಗೂ ಅವುಗಳ ನಿಖರವಾದ ಸ್ಥಾನಗಳನ್ನು ಗುರುತಿಸುವುದು ಅತ್ಯಗತ್ಯವಾಗಿತ್ತು. ಜಗತ್ತಿನ ವಿವಿಧ ನಾಗರಿಕತೆಗಳು, ಈಗ ಗುರುತಿಸಿದ ಆಕಾಶ ಕಾಯಗಳಿಗೆಲ್ಲವಕ್ಕೂ ಅದನ್ನು ನೆನಪಿಟ್ಟುಕೊಳ್ಳುವುದಕ್ಕೆ ಸೃಜನಾತ್ಮಕವಾಗಿ ಮತ್ತು ಕಲ್ಪನಾತೀತವಾದ ಹಲವು ಕಥೆಗಳನ್ನು ಹೆಣೆದಿರುವುದನ್ನು ನಾವು ದಾಖಲಿಸಿದ್ದೇವೆ. ಭಾರತದಲ್ಲೂ ಇಂತಹ ಹಲವಾರು ಕಥೆಗಳಿರುವುದನ್ನು ನಾವು ಕಾಣಬಹುದು. ಈ ಕಥೆಗಳಲ್ಲಿ ವೈಜ್ಞಾನಿಕವಾದ ವಿವರಣೆಯ ತಳಹದಿ ಇಲ್ಲದಿದ್ದರೂ, ಅಂದಿನ ಕಾಲದ ಜನರ ಬದುಕು-ಬವಣೆ, ದೈವ-ದೆವ್ವದ ಆಚರಣೆಗಳು, ಸಂಸ್ಕೃತಿ ಮತ್ತು ವಿಧಾನಗಳು ಇರುವುದನ್ನು ನಾವು ಕಾಣಬಹುದು.

ಶತಮಾನಗಳು ಕಳೆದಂತೆ, ಮಾನವನು ಪ್ರಶ್ನಿಸುವ, ವಿಚಾರಿಸುವ, ಸೂಕ್ಷ್ಮವಾಗಿ ವೀಕ್ಷಿಸುವ ಮತ್ತು ತರ್ಕಿಸುವ ಮನೋಭಾವದಿಂದ ನಿಸರ್ಗದ ಆಗುಹೋಗುಗಳ ವಿದ್ಯಮಾನಗಳನ್ನು ವೈಜ್ಞಾನಿಕವಾಗಿ ವಿವರಿಸುವ ದಾರಿಯನ್ನು ತುಳಿದನು. ಇದು ಕಾಲಕಾಲಕ್ಕೆ ಹಲವು ತಂತ್ರಜ್ಞಾನದ ಅಭಿವೃದ್ಧಿಗೂ ದಾರಿಯಾಯಿತು. ಈಗ ಅಂದಿನ ನಾಗರಿಕತೆಗಳು, ಅವರ ಅಗತ್ಯಕ್ಕೆ ಆಕಾಶ ವೀಕ್ಷಣೆಯಿಂದ ಪಡೆಯುತ್ತಿದ್ದ ಮಾಹಿತಿಗಳನ್ನು ಇಂದು, ನಾವು ತಂತ್ರಜ್ಞಾನ ಆಧಾರಿತ ಆಕಾಶ ವೀಕ್ಷಣೆ ಮೂಲಕ ಅದೇ ಮಾಹಿತಿಗಳನ್ನು ಅತ್ಯಂತ ವೇಗವಾಗಿ ಮತ್ತು ಹೆಚ್ಚು ನಿಖರತೆಯೊಂದಿಗೆ ಪಡೆಯುತ್ತಿದ್ದೇವೆ. ಹಾಗಾಗಿ, ಎಲ್ಲ ಕಾಲಕ್ಕೂ ಆಕಾಶದ ಆಗುಹೋಗುಗಳ ನಿಖರವಾದ ಮಾಹಿತಿಯು ಮನುಷ್ಯನಿಗೆ ಅಗತ್ಯವಿದ್ದರೂ, ಪ್ರತಿಯೊಬ್ಬರು ಆಕಾಶ ವೀಕ್ಷಣೆ ಮಾಡಿ ಮಾಹಿತಿಗಳನ್ನು ಕ್ರೋಢೀಕರಿಸುವ ಅಗತ್ಯವಿರುವುದಿಲ್ಲ. ಆದರೂ, ಆಕಾಶ ವೀಕ್ಷಣೆಯಿಂದ ಬರುವ ಮಾಹಿತಿಯು, ಬೇರೊಂದು ರೂಪದಲ್ಲಿ ಕ್ಷಣಕ್ಷಣಕ್ಕೆ ನಮ್ಮ ಅಂಗೈಯಲ್ಲೇ ಲಭ್ಯವಿರುವ ಕಾಲ ಈಗಿನದಾಗಿದೆ.

ಇರಲಿ, ಈ ಆಧುನಿಕ ತಂತ್ರಜ್ಞಾನದ ಯುಗದಲ್ಲೂ ಏಕೆ ನಾವು ಆಕಾಶ ವೀಕ್ಷಣೆ ಮಾಡಬೇಕು? ಇಂದು ಈ ಅಕಾಶ ವೀಕ್ಷಣೆ ಮನುಷ್ಯನ ಬದುಕಿನ ಒಂದು ಅವಿಭಾಜ್ಯ ಅಂಗವಾಗಿಲ್ಲ. ಬದಲಾಗಿ, ಮಾನವನು ವಿಶ್ವದ ಉಗಮ, ಪ್ರಸ್ತುತ ಇರುವಿಕೆಯ ಸ್ಥಿತಿ ಮತ್ತು ವಿನಾಶದ ಅಂಶಗಳನ್ನು ಅರ್ಥ ಮಾಡಿಕೊಳ್ಳುವುದು ಹಾಗೂ ವಿಶ್ವದಲ್ಲಿ ಭೂಮಿಯೇ ಏಕೆ? ಭೂಮಿಯಲ್ಲಿ ಮಾನವರು ಏಕೆ? ಏಕೆ ಈ ರೀತಿಯೇ ವಿಶ್ವ ಇದೆ ಎಂಬ ವಿಶಾಲ ಅಂಶಗಳನ್ನು ಒಳಗೊಂಡ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ/ ನಮ್ಮ ಅರಿವನ್ನು ಹೆಚ್ಚಿಸಿಕೊಳ್ಳುವ, ಅಧ್ಯಯನ ಮಾಡುವ ಒಂದು Discipline ಆಗಿದೆ. ಈ ಅಧ್ಯಯನಗಳ ಮೂಲಕವಾಗಿ ಹೊರಹೊಮ್ಮುವ ಅನೇಕ ತಂತ್ರಜ್ಞಾನಗಳು, ವಿಜ್ಞಾನದ ವಿಷಯಗಳು, ಮನುಷ್ಯನ ಜೀವನವನ್ನು ಮತ್ತು ಜನಸಮೂಹದ ಸಾಮಾಜಿಕ ಬದುಕನ್ನು ಉತ್ತಮಗೊಳಿಸುವುದಕ್ಕೆ ಬಳಸಿಕೊಳ್ಳುವುದೂ ಆಗಿರುತ್ತದೆ. ಹೀಗಿದ್ದಾಗ, ಈ Disciplineನಲ್ಲಿ ಅಧ್ಯಯನ ಮಾಡುವವರು ಆಕಾಶ ವೀಕ್ಷಣೆಯನ್ನು ಸಂಶೋಧನಾ ದೃಷ್ಠಿಕೋನದಿಂದ ಮಾಡಿದರೆ, ಜನಸಾಮಾನ್ಯರಾದ ನಾವು ನಮ್ಮ ಸುತ್ತಮುತ್ತಲಿನ ನಿಸರ್ಗದೊಂದಿಗಿನ ಸಂಬಂಧವನ್ನು ಹೇಗೆ ಬೆಳೆಸಿಕೊಳ್ಳುತ್ತೇವೆಯೋ, ಹಾಗೆಯೇ ಆಗಸವೂ ನಿಸರ್ಗದ ಭಾಗವಾಗಿ ಅದರ ಆಗುಹೋಗುಗಳನ್ನು, ಕುತೂಹಲದ ವಿಚಾರಗಳನ್ನು ಅರಿತು, ನಾವೂ ನಿರಂಕುಶಮತಿಗಳಾಗಬಹುದು. ಇನ್ನೂ ಕೆಲವರು ಆಕಾಶ ವೀಕ್ಷಣೆಯನ್ನು ಹವ್ಯಾಸವಾಗಿಯೂ ರೂಢಿಸಿಕೊಂಡಿರುತ್ತಾರೆ. ಈ ಹಿನ್ನೆಲೆಯಲ್ಲಿ, ಈ ಸಂಚಿಕೆಯಿಂದ, ಪ್ರತಿ ವಾರದ ಆಗಸದ ಆಗುಹೋಗುಗಳು, ನಮಗೆ ಕಾಣುವ ಆಕಾಶ ಕಾಯಗಳು, ಅದರ ಚುಟುಕಾದ ವಿವರಗಳು ಮತ್ತು ಹೇಗೆ ನೋಡಬೇಕು ಎನ್ನುವ ಮಾರ್ಗದರ್ಶನಗಳನ್ನೊಳಗೊಂಡ ಚುಟುಕು ಬರಹವು ಇಲ್ಲಿ ಬಿತ್ತರವಾಗಲಿದೆ.

ನವೆಂಬರ್ 23 ರಿಂದ 30ರ ವರೆಗಿನ ಆಗಸದ ವೀಕ್ಷಣೆ

1. ಗುರು ಮತ್ತು ಶನಿ ಗ್ರಹ

ನವೆಂಬರ್ 23 ರಂದು, ಸೂರ್ಯ ದಿಗಂತದಲ್ಲಿ ಮುಳುಗಿದ ನಂತರ, ನೈಋತ್ಯಕ್ಕೆ ಮುಖ ಮಾಡಿ ನಿಂತರೆ, ಶುಭ್ರ ಆಕಾಶದಲ್ಲಿ ಎರಡು ಚುಕ್ಕಿಗಳು ತುಂಬ ಹತ್ತಿರದಲ್ಲಿ ಹೊಳೆಯುತ್ತಿರುತ್ತವೆ. ಇವು ಚುಕ್ಕಿಗಳಲ್ಲ, ಬದಲಾಗಿ ಇವು ಗ್ರಹಗಳು. ಎರಡು ಚುಕ್ಕಿಗಳಲ್ಲಿ, ತುಂಬ ಹೊಳಪಾಗಿ ಕಾಣುವ ಕೆಳಗಿನ ಚುಕ್ಕಿ (ಚಿತ್ರದಲ್ಲಿ ನೋಡಿ), ಗುರು ಗ್ರಹ. ಇದರ ಮೇಲೆ ಕಾಣುವ ಚುಕ್ಕಿ, ಶನಿ ಗ್ರಹ. ಇವೆರಡೂ ಗ್ರಹಗಳನ್ನು, ಮೋಡಗಳಿಲ್ಲದ ದಿಗಂತದ ಆಗಸದಲ್ಲಿ ಬರಿಗಣ್ಣಿನಲ್ಲಿ ನೋಡಬಹದು. ಈ ಗ್ರಹಗಳ ಮೇಲ್ಮೈನ ಸೂಕ್ಷ್ಮ ವಿವರಗಳನ್ನು ನೋಡಬೇಕಾದರೆ, ಸಣ್ಣಗಾತ್ರದ (5 ರಿಂದ 6 ಇಂಚಿನ ದೂರದರ್ಶಕ) ದೂರದರ್ಶಕದ ಸಹಾಯ ಬೇಕಾಗುತ್ತದೆ. ಈ ಗ್ರಹಗಳನ್ನು ದೂರದರ್ಶಕದಿಂದ ನೋಡಿದಾಗ, ಶನಿ ಗ್ರಹದ ಉಂಗುರಗಳು ಮತ್ತು ಗುರು ಗ್ರಹದ ಪ್ರಮುಖವಾದ ನಾಲ್ಕು ಗೆಲಿಲಿಯನ್ ಉಪಗ್ರಹಗಳನ್ನೂ (ಈಯೋ, ಗ್ಯಾನಿಮಿಡ, ಕ್ಯಾಲಿಸ್ಟೋ ಮತ್ತು ಯುರೋಪ) ಕಾಣಬಹುದಾಗಿದೆ. ಈ ಜೋಡಿ ಗ್ರಹಗಳು ಜನವರಿ ಮಾಹೆಯ ಮಧ್ಯದವರೆಗೂ ನೋಡಬಹುದಾಗಿದೆ. ಈ ವಾರದಲ್ಲಿ, ಪ್ರತಿ ದಿನವು ಈ ಎರಡೂ ಗ್ರಹಗಳು, ರಾತ್ರಿ 9.30 ರಿಂದ 10 ಗಂಟೆಯ ಅವಧಿಯಲ್ಲಿ ಮುಳುಗಲಿದ್ದು, ಅಲ್ಲಿಯವರೆಗೂ ನೋಡಬಹುದು. ಈ ಎರಡೂ ಜೋಡಿ ಗ್ರಹಗಳು ವಾರ ಕಳೆದಂತೆ, ಆಗಸದಲ್ಲಿ ಇನ್ನೂ ಹತ್ತಿರವಾಗಿ ಜೋಡಿ ನಕ್ಷತ್ರಗಳಂತೆ ಹೊಳೆಯುತ್ತವೆ. ಹಿಂದಿನ ಬಾರಿ ಈ ರೀತಿ ಆಗಸದಲ್ಲಿ ಈ ಎರಡೂ ಗ್ರಹಗಳು ಕನಿಷ್ಠ ಅಂತರದಲ್ಲಿ ಜೋಡಿ ಗ್ರಹಗಳಾಗಿ ಕಾಣಿಸಿದ್ದಾಗ, ಈ ಜಗತ್ತು ಕಂಡ ಖ್ಯಾತ ವಿಜ್ಞಾನಿ ಗೆಲಿಲಿಯೋ ಗೆಲಿಲಿ ಬದುಕಿದ್ದ!!

2. ಮಂಗಳ ಗ್ರಹ

ದಿಗಂತದಲ್ಲಿ ಸೂರ್ಯ ಮುಳುಗಿದ ನಂತರ ಶನಿ ಮತ್ತು ಗುರು ಗ್ರಹವನ್ನು ನೋಡಿದ ಮೇಲೆ, ನೆತ್ತಿಯ ಮೇಲೆ ಆಚೀಚೆ ಕಣ್ಣು ಹಾಯಿಸಿದರೆ, ಕೆಂಪು ಬಣ್ಣದಲ್ಲಿ ಹೊಳೆಯುವ ಮತ್ತೊಂದು ಚುಕ್ಕಿ ಕಾಣುವುದು. ಸ್ಪಷ್ಟವಾಗಿ ವೀಕ್ಷಿಸಿದರೆ, ಈ ಕೆಂಪು ಚುಕ್ಕಿ ನಕ್ಷತ್ರಗಳಂತೆ ಮಿನುಗುವುದಿಲ್ಲ. ಇದು ಮಂಗಳ ಗ್ರಹ. ಮಂಗಳ ಗ್ರಹವನ್ನು ಕೆಂಪು ಗ್ರಹ ಎಂದು ಕರೆಯುತ್ತೇವೆ. ಏಕೆಂದರೆ, ಮಂಗಳನ ಅಂಗಳದಲ್ಲಿ ಅಂದರೆ, ಮಣ್ಣಿನಲ್ಲಿ ಕಬ್ಬಿಣಾಂಶದ ಖನಿಜಗಳು ಹೆಚ್ಚಿರುವುದರಿಂದ, ತುಕ್ಕು ಹೆಚ್ಚಾಗಿ, ಮಂಗಳನ ನೆಲ ಮತ್ತು ಅದರ ವಾತಾವರಣ ಕೆಂಪಾಗಿ ಕಾಣುತ್ತದೆ. ಮಂಗಳ ಸರಿ ಸುಮಾರು ಮುಂಜಾನೆ ಎರಡು ಗಂಟೆಗೆ ಮುಳುಗುವುದರಿಂದ, ಅಲ್ಲಿಯವರೆಗೂ ರಾತ್ರಿ ಆಕಾಶದಲ್ಲಿ ಮಂಗಳ ಗ್ರಹವನ್ನು ವೀಕ್ಷಿಸಬಹುದು.

3. ಶುಕ್ರ ಮತ್ತು ಬುಧ ಗ್ರಹ

ಈ ವಾರದುದ್ದಕ್ಕೂ, ಮುಂಜಾನೆ ಅಂದರೆ, ಸೂರ್ಯ ಹುಟ್ಟುವ 30 ನಿಮಿಷ ಮೊದಲು, ಪೂರ್ವಕ್ಕೆ ಮುಖ ಮಾಡಿ ನಿಂತರೆ, ಅತ್ಯಂತ ಪ್ರಕಾಶಮಾನವಾಗಿ ಹೊಳೆಯುವ ಚುಕ್ಕಿಯೊಂದು ಕಾಣುತ್ತದೆ. ಇದು, ಶುಕ್ರ ಗ್ರಹ. ಶುಕ್ರ ಗ್ರಹ ಯಾವಾಗಲು, ಪೂರ್ವದಲ್ಲಿ ಸೂರ್ಯ ಹುಟ್ಟುವುದಕ್ಕಿಂತ ಸರಿಸುಮಾರು ಒಂದು ಗಂಟೆಯ ಅವಧಿಯಲ್ಲಿ ಅಥವಾ ಸೂರ್ಯ ಪಶ್ಚಿಮದಲ್ಲಿ ಮುಳುಗಿದ ನಂತರದ ಒಂದು ಗಂಟೆಯ ಅವಧಿಯಲ್ಲಿ ಮಾತ್ರ ಕಾಣಸಿಗುವ ಗ್ರಹ. ಎಂದಿಗೂ ಶುಕ್ರ ಗ್ರಹ ರಾತ್ರಿ ಆಕಾಶದಲ್ಲಿ ನೆತ್ತಿಯ ಮೇಲೆ ಕಾಣಸಿಗುವುದಿಲ್ಲ! ಹಾಗಾಗಿ, ಶುಕ್ರ ಗ್ರಹವನ್ನು ಕಾಲಗಳನ್ನು ಗುರುತಿಸುವುದಕ್ಕೆ ಜಗತ್ತಿನ ಎಲ್ಲಾ ನಾಗರಿಕತೆಗಳು ಬಳಸಿಕೊಂಡಿವೆ. ನಮ್ಮಲ್ಲೂ ಇದನ್ನ ಬೆಳ್ಳಿ ಚುಕ್ಕಿ ಅಂತ ಕರೆಯುತ್ತಾರೆ. ಈ ಬೆಳ್ಳಿ ಚುಕ್ಕೆಯ ಬಗ್ಗೆ ಅನೇಕ ಕಥೆಗಳನ್ನು ನೀವು ಕೇಳಿರಬಹುದು. ಆಗಸದ ದಿಗಂತದಲ್ಲಿ ಮೋಡಗಳು ಇಲ್ಲದಿದ್ದರೆ, ಶುಕ್ರ ಗ್ರಹದ ಕೆಳಗೆ ಕಡಿಮೆ ಪ್ರಕಾಶಮಾನವಾಗಿ ಹೊಳೆಯುವ ಮತ್ತೊಂದು ಚುಕ್ಕಿ ಕಾಣುತ್ತದೆ (ಚಿತ್ರ ನೋಡಿ). ಇದು. ಬುಧ ಗ್ರಹ. ಆದರೆ, ಸೂರ್ಯ ಹುಟ್ಟುವ ಮೊದಲು ಬರುವ twilight ಬೆಳಕು ಮೂಡುವುದರಿಂದ, ಬುಧ ಗ್ರಹ ನೋಡುವುದು ಕಷ್ಟಸಾಧ್ಯವಾಗಿರುತ್ತದೆ. ಆದರೂ, ಬುಧ ಗ್ರಹ ನೋಡಲು ಪ್ರಯತ್ನಿಸಬಹುದು.

4.ಚಂದ್ರ

ಚಂದ್ರ ಭೂಮಿಯ ಉಪಗ್ರಹ. ಚಂದ್ರ ಸರಿಸುಮಾರು 30 ದಿನಗಳಲ್ಲಿ ಭೂಮಿಯ ಸುತ್ತ ಒಂದು ಸುತ್ತು ತಿರುಗುತ್ತದೆ. ಈ ಮೂವತ್ತು ದಿನಗಳನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು. ಹುಣ್ಣಿಮೆಯಿಂದ ಅಮಾವಾಸ್ಯೆಯ 15 ದಿನಗಳು ಒಂದು ಭಾಗ, ಈ ಭಾಗವನ್ನು ಕ್ಷೀಣಿಸುತ್ತಿರುವ ಚಂದ್ರ ಅಂತ ಕರೆಯುತ್ತೇವೆ ಹಾಗೂ ಅಮಾವಾಸ್ಯೆಯಿಂದ ಹುಣ್ಣಿಮೆಯ 15 ದಿನಗಳ ಎರಡನೇ ಭಾಗವನ್ನು ವೃದ್ಧಿಸುತ್ತಿರುವ ಚಂದ್ರ ಅಂತ ಕರೆಯುತ್ತೇವೆ. ಅಂದರೆ, ಹುಣ್ಣಿಮೆ ದಿನದಿಂದ, ಪ್ರತಿ ದಿನ ನಮಗೆ ಕಾಣುವ, ಚಂದ್ರನ ಮೇಲೆ ಸೂರ್ಯನ ಬೆಳಕು ಬೀಳುವ ಪ್ರದೇಶ ಕ್ಷೀಣಿಸುತ್ತಾ ಹೋಗುತ್ತದೆ. ಇದನ್ನು ಕೃಷ್ಣ ಪಕ್ಷ ಎಂದೂ ಕರೆಯುತ್ತಾರೆ. ಹಾಗೆಯೇ, ಅಮಾವಾಸ್ಯೆಯಿಂದ ಹುಣ್ಣಿಮೆಯವರೆಗೆ, ನಮಗೆ ಕಾಣುವ, ಚಂದ್ರನ ಮೇಲೆ ಸೂರ್ಯನ ಬೆಳಕು ಬೀಳುವ ಪ್ರದೇಶ ವೃದ್ಧಿಸುತ್ತಾ ಹೋಗುತ್ತದೆ. ಇದನ್ನು ಶುಕ್ಲ ಪಕ್ಷ ಎಂದೂ ಕರೆಯುತ್ತಾರೆ. ಈ ತಿಂಗಳ 15 ರಂದು ಅಮಾವಾಸ್ಯೆ ಇದ್ದುದ್ದರಿಂದ, ಅಲ್ಲಿಂದ ನಂತರದ 15 ದಿನಗಳವರೆಗೂ ಆಗಸದಲ್ಲಿ ಚಂದ್ರನ ಬಿಂಬವು ದಿನೇದಿನೇ ವೃದ್ಧಿಸುತ್ತಿರುತ್ತದೆ. 22ರ ರಾತ್ರಿ ಆಕಾಶದಲ್ಲಿ ಚಂದ್ರನು ಅರ್ಧ ಚಂದ್ರಾಕೃತಿ ಬಿಂಬಾವಸ್ಥೆಯಲ್ಲಿದ್ದು, ಅಲ್ಲಿಂದ ನವೆಂಬರ್ 30ರವರೆಗೂ, ಪ್ರತಿ ದಿನ ಚಂದ್ರನ ಬಿಂಬಾವಸ್ಥೆಯು ವೃದ್ಧಿಸುತ್ತದೆ.

ಈ ತಿಂಗಳ ಕೊನೆ ದಿನ ನಾವು ಹುಣ್ಣಿಮೆ ಚಂದ್ರನನ್ನು ನೋಡಬಹುದಾಗಿದೆ. ಒಂದು ವಾರದ ಆಕಾಶ ವೀಕ್ಷಣೆಯಲ್ಲಿ ಚಂದ್ರನ ವಿವಿಧವಾದ ವೃದ್ಧಿಸುವ ಬಿಂಬಾವಸ್ಥೆಗಳನ್ನು, ಆಗಸದಲ್ಲಿ ಎಲ್ಲರೂ ಗಮನಿಸಬಹುದು. ಇದರ ಜೊತೆಗೆ, ನವೆಂಬರ್ 30 ರಂದು ಭಾಗಶಃ ಚಂದ್ರ ಗ್ರಹಣವಿದ್ದು, ಭಾರತದ ಈಶಾನ್ಯ ರಾಜ್ಯಗಳಿಗೆ ಮಾತ್ರ ಕಾಣಿಸಿದರೂ, ಚಂದ್ರನಿಗೆ ಭಾಗಶಃ ಗ್ರಹಣವಾಗಿರುವುದನ್ನು ಬರಿಗಣ್ಣಿನಲ್ಲಿ ಗುರುತಿಸಲು ಸಾಧ್ಯವಿರುವುದಿಲ್ಲ. ಆದರೂ, ಚಂದ್ರನನ್ನು ಗ್ರಹಣವಿದ್ದರೂ, ಗ್ರಹಣವಿಲ್ಲದಿದ್ದರೂ ಬರಿಗಣ್ಣಿನಲ್ಲಿಯೇ ನೋಡಿ ಆನಂದಿಸಬಹುದು.

  • ವಿಶ್ವ ಕೀರ್ತಿ ಎಸ್

ವಿಜ್ಞಾನ ಮತ್ತು ಖಗೋಳ ವಿಜ್ಞಾನದಲ್ಲಿ ಆಸಕ್ತಿ, ಹವ್ಯಾಸಿ ಆಕಾಶ ವೀಕ್ಷಣೆಗಾರ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಭೌತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಸಂಸ್ಥೆಯಲ್ಲಿ ವೈಜ್ಞಾನಿಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: 2020ರ ಭೌತ ವಿಜ್ಞಾನದ ನೊಬೆಲ್ ಪ್ರಶಸ್ತಿ | ಕಪ್ಪು ರಂಧ್ರ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....