ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರು ‘ಹಿಂದೂ ಏಕ್ ಧೋಖಾ ಹೈ'( ಹಿಂದೂ ಎಂಬುವುದು ಒಂದು ವಂಚನೆಯಾಗಿದೆ) ಎಂದು ಹೇಳಿಕೆಯನ್ನು ನೀಡಿದ್ದು, ‘ಹಿಂದೂ’ ಬಗ್ಗೆ ಪ್ರಧಾನಿ ಮೋದಿ, ಆರೆಸ್ಸೆಸ್ ನಾಯಕರು ಹೇಳಿಕೆಯನ್ನು ಕೊಟ್ಟಾಗ ಯಾರ ಭಾವನೆಗೂ ಧಕ್ಕೆಯಾಗುವುದಿಲ್ಲ. ನಾನು ಅದೇ ಹೇಳಿಕೆಯನ್ನು ಕೊಟ್ಟಾಗ ದೊಡ್ಡ ವಿವಾದ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಬೌದ್ಧ ಮತ್ತು ಬಹುಜನ ಹಕ್ಕುಗಳ ಸಭೆಯಲ್ಲಿ ಮಾತನಾಡಿದ ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ, ಈ ಕುರಿತು ತಮ್ಮ ಹೇಳಿಕೆಯಲ್ಲಿ ಸುಪ್ರೀಂಕೋರ್ಟ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗಳನ್ನು ಉಲ್ಲೇಖಿಸಿದ್ದಾರೆ.
‘ಹಿಂದೂ ಏಕ್ ಧೋಖಾ ಹೈ’, 1955ರಲ್ಲಿ ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಹಿಂದೂ ಧರ್ಮವಲ್ಲ ಆದರೆ ಜೀವನ ವಿಧಾನ ಎಂದು ಹೇಳಿದೆ. ಇದು 200ಕ್ಕೂ ಹೆಚ್ಚು ಧರ್ಮಗಳ ಒಕ್ಕೂಟವಾಗಿದೆ. ಹಿಂದೂ ಎಂಬುವುದು ಧರ್ಮವಲ್ಲ, ಜೀವನ ವಿಧಾನವಾಗಿದೆ ಎಂದು ಮೋಹನ್ ಭಾಗವತ್ ಕೂಡ ಒಂದಲ್ಲ ಎರಡು ಬಾರಿ ಹೇಳಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೂ ಧರ್ಮವಲ್ಲ ಎಂದು ಹೇಳಿದ್ದಾರೆ ಎಂದ ಸ್ವಾಮಿ ಪ್ರಸಾದ್ ಮೌರ್ಯ, ಬಿಜೆಪಿ, ಆರೆಸ್ಸೆಸ್ ನಾಯಕರು ಇದನ್ನು ಹೇಳಿದಾಗ ಯಾರ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲ. ಆದರೆ ಸ್ವಾಮಿ ಪ್ರಸಾದ್ ಮೌರ್ಯ ಅವರು ಹಿಂದೂ ಧರ್ಮವಲ್ಲ ಎಂದು ಹೇಳಿದಾಗ ಇಡೀ ದೇಶದಲ್ಲಿ ಗದ್ದಲ ಉಂಟಾಗುತ್ತದೆ ಎಂದು ಹೇಳಿದ್ದಾರೆ.
1955ರಲ್ಲಿ ಸುಪ್ರೀಂಕೋರ್ಟ್ ಹೇಳಿದಾಗ ಯಾರೂ ವಿರೋಧಿಸಿಲ್ಲ. ಆದರೆ ಸ್ವಾಮಿ ಪ್ರಸಾದ್ ಮೌರ್ಯ ಹೇಳಿದಾಗ ದೇಶಾದ್ಯಂತ ಎಫ್ಐಆರ್ಗಳು ದಾಖಲಾಗಿವೆ. ನಾನು ಭಾರತೀಯ ಸಂವಿಧಾನ ಹೇಳುತ್ತಿರುವಂತೆಯೇ ಹೇಳುತ್ತಿದ್ದೇನೆ. ಹಿಂದೂ ಮೇಲ್ವರ್ಗದವರು ಅಧಿಕಾರಕ್ಕೆ ಬರಲು ಬಹುಜನ ಮತಬ್ಯಾಂಕ್ ಬಳಸುತ್ತಾರೆ. ಆದರೆ ಅಧಿಕಾರಕ್ಕೆ ಬಂದ ಬಳಿಕ ಅವರು ಮೀಸಲಾತಿಯನ್ನು ರದ್ದುಗೊಳಿಸುತ್ತಾರೆ ಎಂದು ಸಮಾಜವಾದಿ ಪಕ್ಷದ ನಾಯಕ ಹೇಳಿದ್ದಾರೆ.
ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರು ಒಟ್ಟು ಜನಸಂಖ್ಯೆಯಲ್ಲಿ 8 ಪ್ರತಿಶತದಷ್ಟಿದ್ದಾರೆ. ಈ ಎಂಟು ಪ್ರತಿಶತ ಜನರು ಸ್ವಂತವಾಗಿ ಸರ್ಕಾರ ರಚಿಸಲು ಸಾಧ್ಯವಿಲ್ಲ. ಇವರು ಹಿಂದುಳಿದ ವರ್ಗಗಳನ್ನು ಶೋಷಣೆ ಮಾಡಿ ಹಿಂದೂ ಹೆಸರಿನಲ್ಲಿ ಸರ್ಕಾರವನ್ನು ರಚಿಸಿದ್ದಾರೆ. ಮತಗಳ ಉದ್ದೇಶಕ್ಕಾಗಿ ನಾವು ಹಿಂದೂಗಳು, ಆದರೆ ಸರ್ಕಾರ ರಚಿಸಿದ ನಂತರ ನಾವು ಹಿಂದೂಗಳಲ್ಲ. ಒಂದು ವೇಳೆ ನಾವು ಹಿಂದೂಗಳಾಗಿರುತ್ತಿದ್ದರೆ ಅವರು ಎಂದಿಗೂ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಅಥವಾ ಹಿಂದುಳಿದ ಜಾತಿಗಳಿಗೆ ಸೇರಿದ ಮೀಸಲಾತಿಯನ್ನು ರದ್ದುಗೊಳಿಸುತ್ತಿರಲಿಲ್ಲ ಎಂದು ಮೌರ್ಯ ಹೇಳಿದ್ದಾರೆ.
ಅಧಿಕಾರದ ಉನ್ನತ ಸ್ಥಾನದಲ್ಲಿ ಕುಳಿತವರು ಮೀಸಲಾತಿಯನ್ನು ಕಿತ್ತುಕೊಳ್ಳುವ ಮೂಲಕ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಹೇಳಿದ ಸ್ವಾಮಿ ಪ್ರಸಾದ್ ಮೌರ್ಯ, ಸಂವಿಧಾನದ ಮೇಲೆ ಆಣೆ ಮಾಡಿ ಪ್ರಮಾಣವಚನ ಸ್ವೀಕರಿಸುವ ಪ್ರಧಾನ ಮಂತ್ರಿಗಳು, ಮುಖ್ಯಮಂತ್ರಿಗಳು, ಅಧಿಕಾರದ ಚುಕ್ಕಾಣಿ ಹಿಡಿದವರು ಮನುವಾದಕ್ಕೆ ಆದ್ಯತೆ ನೀಡುತ್ತಿದ್ದಾರೆ. ಸಂವಿಧಾನವನ್ನು ನಿಷ್ಫಲಗೊಳಿಸಲಾಗುತ್ತಿದೆ. ಮೀಸಲಾತಿಯನ್ನು ಕಸಿದುಕೊಳ್ಳಲಾಗುತ್ತಿದೆ. ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲಾಗುತ್ತಿದೆ. ಸುಮಾರು 150 ಸಂಸದರನ್ನು ಸಂಸತ್ತಿನಿಂದ ಅನರ್ಹಗೊಳಿಸಲಾಗಿದೆ. ಇದು ಪ್ರಜಾಪ್ರಭುತ್ವದ ವಿರುದ್ಧದ ಪಿತೂರಿಯಲ್ಲವೇ? ಎಂದು ಮೌರ್ಯ ಪ್ರಶ್ನಿಸಿದ್ದಾರೆ.
#WATCH | Delhi: Samajwadi Party leader Swami Prasad Maurya says, "Hindu ek dhokha hai…RSS Chief Mohan Bhagwat has said twice that there is no religion called Hindu but instead, it is a way of living. Prime Minister Modi has also said that there is no Hindu religion…Sentiments… pic.twitter.com/1qnULH1rqt
— ANI (@ANI) December 26, 2023
ಇದನ್ನು ಓದಿ; ವಾಮಾಚಾರದ ಶಂಕೆಯಲ್ಲಿ ಆದಿವಾಸಿ ಮಹಿಳೆಯ ಸಜೀವ ದಹನ: ಕೊನೆಗೊಳ್ಳದ ‘ಮಾಟಗಾತಿ’ ಹಣೆಪಟ್ಟಿಯ ಹತ್ಯೆ