ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯಲ್ಲಿ ಸವರ್ಣಿಯ ಜಾತಿಯ ಜನರು ವಿಧಿಸಿದ್ದ ನಿರ್ಬಂಧವನ್ನು ಮುರಿದ ದಲಿತ ಸಮುದಾಯದ ಜನರು ಇದೇ ಮೊದಲ ಬಾರಿಗೆ ಗ್ರಾಮದಲ್ಲಿ ಪಾದರಕ್ಷೆಗಳನ್ನು ಹಾಕಿಕೊಂಡು ಸವರ್ಣಿಯರು ವಾಸವಿದ್ದ ಬೀದಿಯಲ್ಲಿ ನಡೆದಾಡಿದ್ದಾರೆ.
ಮಡತುಕುಲಂ ತಾಲೂಕಿನ ರಾಜವೂರ್ ಗ್ರಾಮದ ‘ಕಂಬಳ ನಾಯ್ಕನ್ ಸ್ಟ್ರೀಟ್’ನಲ್ಲಿ ದಲಿತ ಸಮುದಾಯಕ್ಕೆ ಸೇರಿದ 60 ಮಂದಿ ಪಾದರಕ್ಷೆಗಳನ್ನು ಧರಿಸಿ ನಡೆದಿದ್ದು, ಸವರ್ಣಿಯರು ವಿಧಿಸಿದ್ದ ಪಾದರಕ್ಷೆಗಳನ್ನು ಧರಿಸಿ ನಡೆಯಬಾರದು ಎಂಬ ಅಲಿಖಿತ ನಿರ್ಬಂಧವನ್ನು ಮುರಿದಿದ್ದಾರೆ. ಇದಲ್ಲದೆ ಗ್ರಾಮದಲ್ಲಿ ದಲಿತ ಸಮುದಾಯದ ಜನರಿಗೆ ಸೈಕಲ್ ಸವಾರಿ ಮಾಡದಂತೆ ಕೂಡ ನಿರ್ಬಂಧ ವಿಧಿಸಲಾಗಿದೆ ಎಂದು ಹೇಳಲಾಗಿದೆ.
300 ಮೀಟರ್ ಉದ್ದದ ರಸ್ತೆಯ ಇಕ್ಕೆಲದ ಸುಮಾರು 60 ನಿವಾಸಿಗಳು ಹಿಂದುಳಿದ ಜಾತಿಗೆ ಸೇರಿದವರು. ಈ ಗ್ರಾಮದ 900 ಕುಟುಂಬಗಳ ಪೈಕಿ 800 ಕುಟುಂಬಗಳು ಗೌಂಡರ್ ಸಮುದಾಯಕ್ಕೆ ಸೇರಿದವರು.
ಈ ಬಗ್ಗೆ ಮಾತನಾಡಿದ ಗ್ರಾಮಸ್ಥರೊರ್ವರು, ಇಲ್ಲಿ ಚಪ್ಪಲಿ ಹಾಕಿಕೊಂಡು ನಡೆಯದಂತೆ ಎಸ್ಸಿ ಸಮುದಾಯದ ಜನರಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ಹಲ್ಲೆ ಕೂಡ ಮಾಡಲಾಗಿದೆ. ಸವರ್ಣಿಯ ಜಾತಿಯ ಮಹಿಳೆಯರು ಕೂಡ ದಲಿತರು ತಮ್ಮ ಬೀದಿಯಲ್ಲಿ ಚಪ್ಪಲಿ ಹಾಕಿಕೊಂಡು ನಡೆದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ನಾವು ಬೀದಿ ತಪ್ಪಿಸಿ ದಶಕಗಳಿಂದ ದಬ್ಬಾಳಿಕೆಯಲ್ಲಿ ಬದುಕುತ್ತಿದ್ದೇವೆ. ಕೆಲವು ವಾರಗಳ ಹಿಂದೆ ನಾವು ಸಮಸ್ಯೆಯನ್ನು ದಲಿತ ಸಂಘಟನೆಗಳ ಗಮನಕ್ಕೆ ತಂದಿದ್ದೇವೆ ಎಂದು ಹೇಳಿದ್ದಾರೆ.
ನಾವು ಚಪ್ಪಲಿಯೊಂದಿಗೆ ಬೀದಿಯಲ್ಲಿ ನಡೆದು ದಶಕಗಳ ಕಾಲದ ದಬ್ಬಾಳಿಕೆಯನ್ನು ಕೊನೆಗೊಳಿಸಿದ್ದೇವೆ ಎಂದು ಮತ್ತೋರ್ವ ಗ್ರಾಮಸ್ಥರು ಹೇಳಿದ್ದಾರೆ.
ಎಸ್ಸಿ ಸಮುದಾಯದ ಇನ್ನೋರ್ವ ಸದಸ್ಯರು ಈ ಬಗ್ಗೆ ಮಾತನಾಡಿದ್ದು, ಸ್ವಾತಂತ್ರ್ಯದ ನಂತರ ಅಸ್ಪೃಶ್ಯತೆ ನಿಷೇಧವಾಗಿದ್ದರೂ, ಸವರ್ಣಿಯ ಜಾತಿಯ ಜನ ತಮ್ಮ ಆಚರಣೆಯನ್ನು ಮುಂದುವರಿಸಲು ಕಥೆ ಕಟ್ಟಿದ್ದಾರೆ. ಬೀದಿಯ ಕೆಳಗೆ ವೂಡೂ ಗೊಂಬೆಯನ್ನು ಹೂಳಲಾಗಿದೆ ಮತ್ತು ಎಸ್ಸಿ ಜನರು ಚಪ್ಪಲಿಯೊಂದಿಗೆ ಬೀದಿಯಲ್ಲಿ ನಡೆದರೆ ಅವರು 3 ತಿಂಗಳೊಳಗೆ ಸಾಯುತ್ತಾರೆ. ಕೆಲವು ದಲಿತ ಸಮುದಾಯದ ಸದಸ್ಯರು ಆ ಕಥೆಗಳನ್ನು ನಂಬುತ್ತಾರೆ ಮತ್ತು ಚಪ್ಪಲಿಗಳಿಲ್ಲದೆ ನಡೆಯಲು ಪ್ರಾರಂಭಿಸಿದರು ಮತ್ತು ಅಭ್ಯಾಸವು ಇಂದಿಗೂ ಮುಂದುವರಿದಿದೆ ಎಂದು ಹೇಳಿದ್ದಾರೆ.
ತಮಿಳುನಾಡು ಅಸ್ಪೃಶ್ಯತೆ ನಿರ್ಮೂಲನಾ ರಂಗದ ಕಾರ್ಯದರ್ಶಿ ಸಿ.ಕೆ.ಕನಗರಾಜ್ ಮಾತನಾಡಿ, ಕಳೆದ ವಾರ ನಾವು ಗ್ರಾಮಕ್ಕೆ ಹೋಗಿದ್ದೆವು ಮತ್ತು ಹಲವಾರು ದಲಿತ ಮಹಿಳೆಯರು ನಿರ್ದಿಷ್ಟ ರಸ್ತೆಯನ್ನು ನಿರ್ಬಂಧಿಸಿರುವ ಬಗ್ಗೆ ಹೆಳಿದ್ದರು. ನಾವು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೆವು. ಆದರೆ ಪೊಲೀಸರು ಅನುಮತಿ ನಿರಾಕರಿಸಿದರು ಮತ್ತು ಮುಂದೂಡುವಂತೆ ಹೇಳಿದರು. ನಾವು ಆ ಮನವಿಯನ್ನು ಸ್ವೀಕರಿಸಿದ್ದೇವೆ. ಕೊನೆಗೆ ಸಂಘಟನೆಯ ಸದಸ್ಯರು, ಗ್ರಾಮಸ್ಥರು ಹಾಗೂ ಸಿಪಿಎಂ, ವಿಸಿಕೆ ಮತ್ತು ಎಟಿಪಿ ಪ್ರತಿನಿಧಿಗಳು ಈ ರಸ್ತೆ ಮೂಲಕ ಚಪ್ಪಲಿ ಧರಿಸಿ ಸಾಗಿ ಗ್ರಾಮದ ರಾಜಕಾಳಿಯಮ್ಮನ್ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ದೇವಸ್ಥಾನಕ್ಕೂ ದಲಿತರಿಗೆ ಪ್ರವೇಶವಿರಲಿಲ್ಲ. ರವಿವಾರ ಸುಮಾರು 60 ದಲಿತರು ಚಪ್ಪಲಿ ಧರಿಸಿ ಈ ರಸ್ತೆಯಲ್ಲಿ ನಡೆದಾಗ ಯಾರೂ ಅವರನ್ನು ತಡೆಯಲಿಲ್ಲ. ಪೊಲೀಸರು ನಿಗಾ ವಹಿಸಿದ್ದರು ಎಂದು ಹೇಳಿದ್ದಾರೆ.
ಇದನ್ನು ಓದಿ: ‘ಹಿಂದೂ’ ಎಂಬುವುದು ಒಂದು ವಂಚನೆಯಾಗಿದೆ: ಸ್ವಾಮಿ ಪ್ರಸಾದ್ ಮೌರ್ಯ