ಆಧುನಿಕ ಭಾರತದ ನಿರ್ಮಾತೃ ಎಂದು ಕರೆಸಿಕೊಳ್ಳುವ ದೇಶದ ಮೊದಲ ಪ್ರಧಾನಿ ಜವಹಾರ್ ಲಾಲ್ ನೆಹರೂರವರ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಇಂದು ಸಂಸತ್ತಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರದ ಹಿರಿಯ ಸಚಿವರು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು ಸೇರಿ ಪ್ರಮುಖರು ಗೈರುಹಾಜರಾಗಿದ್ದಾರೆ. ಈ ಕುರಿತು ಕಾಂಗ್ರೆಸ್ ಪಕ್ಷ ಅಸಮಾಧಾನ ಹೊರಹಾಕಿದೆ.
ನವೆಂಬರ್ 14 ದೇಶದ ಮೊದಲ ಪ್ರಧಾನಿ ನೆಹರೂರವರ ಜನ್ಮದಿನದ ಅಂಗವಾನಿ ಪ್ರತಿ ವರ್ಷ ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿರುವ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಗುತ್ತದೆ. ಜವಾಹರಲಾಲ್ ನೆಹರು ಅವರ ಭಾವಚಿತ್ರವನ್ನು ಅಂದಿನ ಭಾರತದ ರಾಷ್ಟ್ರಪತಿ ಡಾ ಎಸ್ ರಾಧಾಕೃಷ್ಣನ್ ಅವರು ಸಂಸತ್ ಭವನದ ಸೆಂಟ್ರಲ್ ಹಾಲ್ನಲ್ಲಿ 5 ಮೇ 1966 ರಂದು ಅನಾವರಣಗೊಳಿಸಿದರು.
ಕೇಂದ್ರ ಪ್ರಮುಖರು ಗೈರು ಹಾಜರಾಗಿದ್ದರಿಂದ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್, “ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ನೆಹೂರುರವರ ಭಾವಚಿತ್ರವನ್ನು ಪ್ರತಿಷ್ಠಾಪಿಸಲಾಗಿದೆ. ಅವರ ಜನ್ಮ ವಾರ್ಷಿಕೋತ್ಸವದ ಸಾಂಪ್ರದಾಯಿಕ ಸಮಾರಂಭದಲ್ಲಿನ ಅಸಾಧಾರಣ ದೃಶ್ಯವಿದು. ಲೋಕಸಭೆ ಸ್ಪೀಕರ್ ಗೈರು, ರಾಜ್ಯಸಭೆಯ ಸಭಾಪತಿ ಗೈರು, ಒಬ್ಬ ಸಚಿವರೂ ಹಾಜರಾಗಿಲ್ಲ. ಇದಕ್ಕಿಂತ ಕ್ರೂರವಾಗಬಹುದೇ?!” ಎಂದು ಟ್ವೀಟ್ ಮಾಡಿದ್ದಾರೆ.
Extraordinary scene today in Parliament at the traditional function to mark the birth anniversary of those whose portraits adorn the Central Hall. Speaker Lok Sabha absent. Chairman Rajya Sabha absent. Not a single Minister present. Can it get more atrocious than this?!
— Jairam Ramesh (@Jairam_Ramesh) November 14, 2021
ಇಂದು ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲಯದ ರಾಜ್ಯ ಸಚಿವ ಭಾನು ಪ್ರತಾಪ್ ಸಿಂಗ್ ವರ್ಮಾ ಉಪಸ್ಥಿತರಿದ್ದರು. ಅವರನ್ನು ಹೊರತುಪಡಿಸಿ ಕೇಂದ್ರ ಸರ್ಕಾರದ ಪ್ರಮುಖರ್ಯಾರು ಭಾಗವಹಿಸಿಲ್ಲ. ಕಾಂಗ್ರೆಸ್ ವತಿಯಿಂದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ಇತರ ಸಂಸದರು ಉಪಸ್ಥಿತರಿದ್ದರು.
ಕೆಲ ವರ್ಷಗಳ ಹಿಂದಷ್ಟೇ ನೆಹರೂರವರ ಜನ್ಮದಿನ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರದ ಪ್ರಮುಖ ಸಚಿವರು, ಲೋಕಸಭೆ ಸ್ಪೀಕರ್, ರಾಜ್ಯಸಭೆ ಸಭಾಪತಿಗಳು ಭಾಗವಹಿಸುತ್ತಿದ್ದರು. ಆದರೆ ಇಂದು ಅವರೆಲ್ಲ ಗೈರು ಹಾಜರಾಗಿದ್ದಾರೆ.
ಕಳೆದೊಂದು ದಶಕದಿಂದ ನೆಹರೂರವರ ಕುರಿತು ಬಿಜೆಪಿ ಪಕ್ಷವು ನಕರಾತ್ಮಕ ಧೋರಣೆಯನ್ನು ಪ್ರದರ್ಶಿಸುತ್ತಿದೆ. ಅವರ ಸಾಧನೆಗಳನ್ನು ಅಲ್ಲಗೆಳೆಯುತ್ತಿದೆ. ಪ್ರಮುಖವಾಗಿ ಬಿಜೆಪಿ ಐಟಿ ಸೆಲ್ಗಳು ನೆಹರೂರವರ ಕುರಿತು ಹಲವಾರು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದೆ ಎಂಬ ದಟ್ಟ ಆರೋಪಗಳು ಕೇಳಿಬಂದಿವೆ. ಈ ಕುರಿತು ನೂರಾರು ಫ್ಯಾಕ್ಟ್ಚೆಕ್ಗಳನ್ನು ಮಾಡಲಾಗಿದೆ. ಈ ಅಭಿಯಾನದ ಭಾಗವಾಗಿಯೇ ನೆಹರೂರವರ ಜನ್ಮದಿನದ ಕಾರ್ಯಕ್ರಮಕ್ಕೆ ಕೇಂದ್ರದ ಪ್ರಮುಖರು ಭಾಗವಹಿಸಿಲ್ಲ ಎಂಬುದು ಕಾಂಗ್ರೆಸ್ ಪಕ್ಷದ ಆರೋಪವಾಗಿದೆ.
ಇದನ್ನೂ ಓದಿ: ನೆಹರು ಒಬ್ಬ ನೈಜ ಭಾರತೀಯ ಜಾತ್ಯತೀತ ವ್ಯಕ್ತಿ: ಇಂದಿನ ಕೋಮುವಾದಕ್ಕೆ ಅವರನ್ನು ದೂರಬೇಡಿ