ದೇಶದಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರಗಳನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ, ಇದು ಸಂವಿಧಾನವಿರೋಧಿಯಾಗಿದ್ದು ಕೂಡಲೇ ನಿಲ್ಲಿಸಬೇಕೆಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಎಚ್ಚರಿಕೆ ನೀಡಿದ್ದಾರೆ.
ರಾಜಸ್ಥಾನದಲ್ಲಿ ತಮ್ಮ ಕಾಂಗ್ರೆಸ್ ಸರ್ಕಾರ ಬಹುಮತ ಸಾಬೀತುಪಡಿಸಲು ಸಿದ್ದವಿದೆ. ಹಾಗಾಗಿ ರಾಜ್ಯಪಾಲರು ಕೂಡಲೇ ವಿಧಾನಸಭಾ ಅಧಿವೇಶನ ಕರೆಯಬೇಕೆಂದು ರಾಹುಲ್ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಸ್ಪೀಕ್ ಅಪ್ ಇಂಡಿಯಾ ಅಭಿಯಾನದ ಭಾಗವಾಗಿರುವ #ಸ್ಪೀಕ್ಫಾರ್ಡೆಮೋಕ್ರಸಿ (#SpeakUpForDemocracy) ಎಂಬ ಶೀರ್ಷಿಕೆಯೊಂದಿಗೆ, ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಅವರು, ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರಗಳನ್ನು ಉರುಳಿಸುವ ಮೂಲಕ ಬಿಜೆಪಿ ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾಗಿ ವರ್ತಿಸುತ್ತಿದೆ ಎಂದು ಆರೋಪಿಸಿದ್ದಾರೆ.
“ಇಡೀ ರಾಷ್ಟ್ರವು ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವಾಗ, ಬಿಜೆಪಿ ಸಂವಿಧಾನವನ್ನು ಕಿತ್ತುಹಾಕಿ ಪ್ರಜಾಪ್ರಭುತ್ವವನ್ನು ಕೆಡವುತ್ತಿದೆ. 2018 ರಲ್ಲಿ ರಾಜಸ್ಥಾನದ ಜನರು ಕಾಂಗ್ರೆಸ್ ಸರ್ಕಾರವನ್ನು ಆಯ್ಕೆ ಮಾಡಿದರು. ಬಿಜೆಪಿ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸುತ್ತಿದೆ. ಮಧ್ಯಪ್ರದೇಶದಲ್ಲಿಯೂ ಇದನ್ನೆ ಮಾಡಿದ ಬಿಜೆಪಿ ಈಗ ರಾಜಸ್ಥಾನದಲ್ಲಿ ಪ್ರಜಾಪ್ರಭುತ್ವವನ್ನು ಕೊಲ್ಲಲು ಪ್ರಯತ್ನಿಸುತ್ತಿದೆ” ಎಂದು ಕಿಡಿಕಾರಿದ್ದಾರೆ.
“#SpeakUpForDemocracy ಅಡಿಯಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಿಸಲು ನಾವು ಒಂದಾಗೋಣ ಮತ್ತು ಧ್ವನಿ ಎತ್ತೋಣ” ಎಂದು ರಾಹುಲ್ ವೀಡಿಯೊ ಜೊತೆಗೆ ಟ್ವೀಟ್ ಮಾಡಿದ್ದಾರೆ.
आइए #SpeakUpForDemocracy में एकजुट होकर लोकतंत्र की रक्षा के लिए आवाज़ उठायें। pic.twitter.com/7v1UiOGGZj
— Rahul Gandhi (@RahulGandhi) July 26, 2020
200 ಸದಸ್ಯ ಬಲವಿರುವ ರಾಜಸ್ಥಾನ ವಿಧಾನಸಭೆಯಲ್ಲಿ ನಿಷ್ಠಾವಂತ 102 ಶಾಸಕರ ಪಟ್ಟಿಯನ್ನು ರಾಜ್ಯಪಾಲರಿಗೆ ಗೆಹ್ಲೋಟ್ ಈಗಾಗಲೆ ನೀಡಿದ್ದಾರೆ. ಕೇಂದ್ರದ ಒತ್ತಡದಿಂದಾಗಿ ವಿಧಾನಸಭೆ ಅಧಿವೇಶನವನ್ನು ಮುಂದೂಡಿದ್ದಾರೆ ಎಂದು ಅವರು ಶುಕ್ರವಾರ ಆರೋಪಿಸಿದ್ದರು.
ಓದಿ: ಸುಪ್ರೀಂ ನಲ್ಲಿ ಸಚಿನ್ ಪೈಲಟ್ ಬಣದ ವಿರುದ್ಧ ಸಲ್ಲಿಸಿದ್ದ ಅರ್ಜಿ ಕೈಬಿಟ್ಟ ರಾಜಸ್ಥಾನ ಸ್ಪೀಕರ್.