Homeಮುಖಪುಟಫಡ್ನವೀಸ್‌ಗೆ ದಕ್ಕದ ಸಿಎಂ ಪಟ್ಟ: ಬಿಜೆಪಿ ಹೈಕಮಾಂಡ್ ಎದುರು ಮಂಡಿಯೂರಿದ್ದೇಕೆ?

ಫಡ್ನವೀಸ್‌ಗೆ ದಕ್ಕದ ಸಿಎಂ ಪಟ್ಟ: ಬಿಜೆಪಿ ಹೈಕಮಾಂಡ್ ಎದುರು ಮಂಡಿಯೂರಿದ್ದೇಕೆ?

ಶಿವಸೇನೆಯಿಂದ ಬಂಡಾಯವೆದ್ದಿದ್ದ ಏಕನಾಥ್ ಶಿಂಧೆಗೆ ಗುರುವಾಗುವ ಕನಸು ಕಂಡಿದ್ದ ದೇವೇಂದ್ರ ಫಡ್ನವೀಸ್ ಕಡೆಗೆ ತಾವೇ ಅವರ ಜೂನಿಯರ್ ಆಗಿ ಕೆಲಸ ಮಾಡಬೇಕಾದ ಸ್ಥಿತಿಗೆ ಬಂದು ನಿಂತಿದ್ದಾರೆ!

- Advertisement -
- Advertisement -

ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳು ಅಚ್ಚರಿಯ ಬದಲಾವಣೆಗಳಿಗೆ ಕಾರಣವಾಗಿವೆ. ಮಹಾರಾಷ್ಟ್ರದ ಆಪರೇಷನ್ ಕಮಲದ ರೂವಾರಿ ಎಂದು ಬಿಂಬಿಸಿಕೊಳ್ಳುತ್ತಿದ್ದ ಮಾಜಿ ಸಿಎಂ, ಹಾಲಿ ಡಿಸಿಎಂ ದೇವೇಂದ್ರ ಫಡ್ನವೀಸ್ ಏಕಾಏಕಿ ಮೂಲೆಗೆ ತಳ್ಳಲ್ಪಟ್ಟರು. ಗುರವಾರದ ಬೆಳಿಗ್ಗೆಯವರೆಗೂ ತಾನೇ ಸಿಎಂ ಎಂದು ಬೀಗುತ್ತಿದ್ದ ಅವರು ಮಧ್ಯಾಹ್ನದ ವೇಳೆಗೆ ಸಿಎಂ ಸ್ಥಾನ ಸಿಗುವುದಿಲ್ಲ ಎಂದು ಅರಿತರು. ನಂತರ ನನಗೆ ನೂತನ ಸರ್ಕಾರದಲ್ಲಿ ಯಾವುದೇ ಹುದ್ದೆ ಬೇಡ, ಸರ್ಕಾರ ಸುಗಮ ರೀತಿಯಲ್ಲಿ ನಡೆದುಕೊಂಡು ಹೋಗಲು ಸಹಕರಿಸುವುದಾಗಿ ಹೇಳಿದರು. ಒಂದು ರೀತಿಯಲ್ಲಿ ತಮ್ಮ ಮುನಿಸನ್ನು ಹೊರಹಾಕಿದರು. ಆದರೆ ಸಂಜೆ ವೇಳೆಗೆ ಉಪಮುಖ್ಯಮಂತ್ರಿ ಸ್ಥಾನವನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಅವರದ್ದಾಗಿತ್ತು. ಆ ಮೂಲಕ ಬಿಜೆಪಿ ಹೈಕಮಾಂಡ್‌ ತನ್ನ ಹಂಗಿಲ್ಲದೆ ಯಾರೂ ಮುಂದುವರೆಯಲು ಸಾಧ್ಯವಿಲ್ಲ ಎಂಬ ಸಂದೇಶ ಸಾರಿತು.

ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ (ಎರಡನೇ ಬಾರಿ ಕೇವಲ 4 ದಿನಗಳು ಮಾತ್ರ) ದೇವೇಂದ್ರ ಫಡ್ನವೀಸ್ ಮೂರನೇ ಬಾರಿಗೆ ಸಿಎಂ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದರು. ಶಿವಸೇನೆಯಿಂದ ಬಂಡಾಯವೆದ್ದಿದ್ದ ಏಕನಾಥ್ ಶಿಂಧೆಗೆ ಗುರುವಾಗುವ ಕನಸು ಕಂಡಿದ್ದರು. ಆದರೆ ತಾವೇ ಅವರ ಜೂನಿಯರ್ ಆಗಿ ಕೆಲಸ ಮಾಡಬೇಕಾದ ಸ್ಥಿತಿಗೆ ಬಿಜೆಪಿ ಹೈಕಮಾಂಡ್ ಅವರನ್ನು ನೂಕಿತು. ಅದರ ವಿರುದ್ಧ ಬಂಡಾಯವೇಳುವ ಶಕ್ತಿ, ಸ್ವಾಭಿಮಾನ ಯಾವುದು ಸಹ ಅವರಿಗಿಲ್ಲ ಎನ್ನುವುದು ಹೈಕಮಾಂಡ್‌ಗೆ ಗೊತ್ತಿದ್ದರಿಂದಲೇ ಅದು ಆ ದಾಳ ಉರುಳಿಸಿತು ಅನ್ನುತ್ತಾರೆ ರಾಜಕೀಯ ವಿಶ್ಲೇಷಕರು.

“ಏಕನಾಥ್ ಶಿಂಧೆ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುತ್ತಾರೆ, ಫಡ್ನವೀಸ್ ಉಪಮುಖ್ಯಮಂತ್ರಿಯಾಗಬೇಕು. ನಾನು ಅವರನ್ನು ವೈಯಕ್ತಿಕವಾಗಿ ವಿನಂತಿಸುತ್ತೇನೆ” ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಘೋಷಿಸಿದರು. ಅದರ ಬೆನ್ನಲ್ಲೆ “ಬಿಜೆಪಿ ಅಧ್ಯಕ್ಷ ನಡ್ಡಾಜಿ ಅವರ ಆದೇಶದ ಮೇರೆಗೆ ಫಡ್ನವೀಸ್ ಅವರು ವಿಶಾಲ ಹೃದಯ ಮೆರೆದಿದ್ದಾರೆ ಮತ್ತು ಮಹಾರಾಷ್ಟ್ರದ ರಾಜ್ಯ ಮತ್ತು ಸಾರ್ವಜನಿಕರ ಹಿತಾಸಕ್ತಿಯಿಂದ ಸರ್ಕಾರಕ್ಕೆ ಸೇರಲು ನಿರ್ಧರಿಸಿದ್ದಾರೆ. ಈ ನಿರ್ಧಾರವು ಮಹಾರಾಷ್ಟ್ರದ ಬಗ್ಗೆ ಅವರ ನಿಜವಾದ ನಿಷ್ಠೆ ಮತ್ತು ಸೇವೆಯ ಸಂಕೇತವಾಗಿದೆ. ಇದಕ್ಕಾಗಿ ನಾನು ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ” ಎಂದು ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದರು. ಆಗ ಅನಿವಾರ್ಯವಾಗಿ ಫಡ್ನವೀಸ್ ಪತ್ರಿಕಾಗೋಷ್ಟಿಯಲ್ಲಿ ಏಕನಾಥ್ ಶಿಂಧೆಯವರನ್ನು ಸಿಎಂ ಎಂದು ಘೋಷಿಸಿದರು. “ಒಬ್ಬ ಅಪ್ಪಟ ಕಾರ್ಯಕರ್ತನಾಗಿ ಪಕ್ಷದ ಆದೇಶ ಪಾಲಿಸುತ್ತೇನೆ. ನನ್ನನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಿದ ಪಕ್ಷದ ಆದೇಶವೇ ನನಗೆ ಬಹುಮುಖ್ಯ” ಎಂದು ಟ್ವೀಟ್ ಮಾಡಿದರು. ನಂತರ ಕೊನೆಯಲ್ಲಿ ಪ್ರಧಾನಿ ಮೋದಿ ಉಪಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸಿದರು!.

ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್‌ರವರನ್ನು ಬೆಳೆಸಿದ್ದು ಇದೇ ಬಿಜೆಪಿ ಹೈಕಮಾಂಡ್. ಏಕೆಂದರೆ ಯಾವುದೇ ರಾಜ್ಯದಲ್ಲಿ ಜನನಾಯಕರಾಗಿರುವವರು (ಮಾಸ್ ಲೀಡರ್) ಸಿಎಂ ಆಗುವುದು ಬಿಜೆಪಿ ಹೈಕಮಾಂಡ್‌ಗೆ ಬೇಕಾಗಿಲ್ಲ. ತಾವು ಹೇಳಿದಂತೆ ಕೇಳುವ, ಎಲ್ಲಾ ನಿರ್ಧಾರಗಳಿಗೆ ತಲೆಯಾಡಿಸುವವರು ಬೇಕು. ಹಾಗಾಗಿ ಜಾತಿಯಲ್ಲೂ, ವರ್ಚಸ್ಸಿನಲ್ಲಿಯೂ ಭಾರೀ ಪ್ರಭಾವ ಹೊಂದಿರದ, ಹೇಳಿದಂತೆ ಕೇಳುವ ಫಡ್ನವೀಸ್ ಹೈಕಮಾಂಡ್‌ನ ಆಯ್ಕೆಯಾಗಿತ್ತು. ಅದು ಮಹಾರಾಷ್ಟ್ರ ಮಾತ್ರವಲ್ಲದೆ ಕರ್ನಾಟಕದಲ್ಲಿ ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಇಳಿಸಿದ್ದು, ಗುಜರಾತ್‌ ಸೇರಿದಂತೆ ಇತರ ರಾಜ್ಯಗಳಲ್ಲಿಯೂ ಅದನ್ನೆ ಮಾಡಿದೆ.

ಹಾಗೆಯೇ ಯಾವುದಾದರೂ ಪ್ರಬಲ ಸಮುದಾಯದ ನಾಯಕರಿಗಿಂತ ಸಣ್ಣ ಸಮುದಾಯದ, ಹೈಕಮಾಂಡ್ ಹಂಗಿನಲ್ಲಿರುವವರು ಸಿಎಂ ಆಗಿ ಇರಬೇಕೆಂದು ಮೋದಿ, ಶಾ ಬಯಸುತ್ತಾರೆ ಎಂಬುದಕ್ಕೆ ಹಲವಾರು ಉದಾಹರಣೆಗಳಿವೆ. ಆ ಮೂಲಕ ಕೇಂದ್ರ ಬಿಜೆಪಿ ನಾಯಕರ ವರ್ಚಸ್ಸು ಮತ್ತು ಹಿಂದುತ್ವದ ಮೂಲಕ ಚುನಾವಣೆಗಳನ್ನು ಗೆಲ್ಲಬೇಕೆಂದು ಬಿಜೆಪಿ ಬಯಸುತ್ತದೆ. ಈಗಾಗಲೇ ಕೆಲವು ರಾಜ್ಯಗಳಲ್ಲಿ ಅದನ್ನು ಸಾಧಿಸಲಾಗಿದೆ. ಅದರ ಭಾಗವಾಗಿ ಕರ್ನಾಟಕದಲ್ಲಿಯೂ ಸಹ ಲಿಂಗಾಯತ ಸಮುದಾಯವೊಂದನ್ನೇ ಅವಲಂಬಿಸುವುದನ್ನು ಬಿಟ್ಟು ಹಿಂದುತ್ವದ ಮೂಲಕ ಅಧಿಕಾರಕ್ಕೇರಲು ಯಡಿಯೂರಪ್ಪನವರನ್ನು ಕೆಳಗೆ ಇಳಿಸಲಾಯ್ತು. ಅದರ ಬದಲು ಬಸವರಾಜ ಬೊಮ್ಮಾಯಿಯವರನ್ನು ಸಿಎಂ ಮಾಡಲಾಗಿದೆ. ಅವರೊ ಬಗ್ಗಿ ಎಂದರೆ ಸಾಕು ತೆವಳಲು ಸಹ ಸಿದ್ದರಿದ್ದಾರೆ.

ಈ ಹಿಂದೆ ಯಡಿಯೂರಪ್ಪನವರು ಕರ್ನಾಟಕದ ಸಿಎಂ ಆಗಿದ್ದಾಗ ಕೊರೊನಾ ಸಂದರ್ಭದಲ್ಲಿ ಮುಸ್ಲಿಂ ಸಮುದಾಯವನ್ನು ಟಾರ್ಗೆಟ್ ಮಾಡಿದ್ದಾಗ ಅದನ್ನು ಕಟು ಶಬ್ದಗಳಲ್ಲಿ ಖಂಡಿಸಿದ್ದರು. ಮಾಧ್ಯಮಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದರು. ಪ್ರಧಾನಿ ಇದ್ದ ವೇದಿಕೆಯಲ್ಲಿಯೇ ಜಿಎಸ್‌ಟಿ ಬಾಕಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಅವರನ್ನು ಕೆಳಗೆ ಇಳಿಸಿ ಬಸವರಾಜ ಬೊಮ್ಮಾಯಿಯವರನ್ನು ಸಿಎಂ ಮಾಡಲಾಗಿದೆ. ಅವರು ಸಂಘಪರಿವಾರಕ್ಕಿಂತಲೂ ಅಪಾಯಕಾರಿಯಾಗಿ ಆಡಳಿತ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ: ಉದ್ಧವ್‌ ಠಾಕ್ರೆ ಅಧಿಕಾರ ಕಳೆದುಕೊಳ್ಳಲು ಕಾರಣವಾಯ್ತು- ಈ ನಾಲ್ಕು ಅಂಶ

ಮಹಾರಾಷ್ಟ್ರದಲ್ಲಿಯೂ ಅದೇ ಸಂದೇಶ ನೀಡಲು ಬಿಜೆಪಿ ಹೈಕಮಾಂಡ್ ಬಯಸುತ್ತಿದೆ. ಯಾರಾದರೂ ತಮ್ಮ ಅಂಕೆ ಮೀರಿ ಬೆಳೆದುಬಿಟ್ಟರೆ ಎಂಬ ಭಯ ಅವರದು. ಹಾಗಾಗಿ ಸಿಎಂ ಸ್ಥಾನದಿಂದ ವಂಚಿತರಾದ ದೇವೇಂದ್ರ ಫಡ್ನವೀಸ್‌ರನ್ನು ತಮ್ಮ ಅಂಕೆಯಲ್ಲಿಟ್ಟುಕೊಳ್ಳುವ ಭಾಗವಾಗಿ ಅವರಿಗೆ ಒಪ್ಪಿಗೆ ಇಲ್ಲದಿದ್ದರೂ ಡಿಸಿಎಂ ಮಾಡಲಾಗಿದೆ. ಹೈಕಮಾಂಡ್ ಹೇಳಿದ ಮೇಲೆ ಮುಗಿಯಿತು. ಕೇಳಲೇಬೇಕು, ಅದನ್ನು ಮೀರಿ ಬಂಡಾಯವೆದ್ದರೆ ಅವರನ್ನು ನೋಡಿಕೊಳ್ಳಲು ಹೇಗಿದ್ದರೂ ಇಡಿ, ಸಿಬಿಐ ಇದ್ದೆ ಇವೆ ಅಲ್ಲವೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...