ಮಂಡ್ಯ ಜನರ ಜೀವನಾಡಿ ಎನಿಸಿಕೊಂಡಿರುವ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಖಾಸಗೀಯವರಿಗೆ ಹಸ್ತಾಂತರಿಸುವುದು ಬೇಡ ಎಂದು ಕಳೆದ ಒಂದೂವರೆ ತಿಂಗಳುಗಳಿಂದ ಪ್ರತಿಭಟಿಸುತ್ತಿದ್ದ ರೈತರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಮೈಶುಗರ್ ಕಾರ್ಖಾನೆಯನ್ನು ಗುತ್ತಿಗೆ ನೀಡುವ ಕ್ರಮಕ್ಕೆ ತಡೆ ನೀಡಿ, ಮುಂದಿನ ಹಂಗಾಮಿನಿಂದ ಸರ್ಕಾರಿ ಸ್ವಾಮ್ಯದಲ್ಲಿಯೇ ಕಬ್ಬು ನುರಿಸಲು ಪ್ರಯತ್ನಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 18 ರಂದು ಮಂಡ್ಯದ ರೈತ ಪ್ರತಿನಿಧಿಗಳು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿಯವರ ಅಧ್ಯಕ್ಷತೆಯಲ್ಲಿ ವಿಧಾನಸೌದದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ರಾಜ್ಯದ ಏಕೈಕ ಸರ್ಕಾರಿ ಕಾರ್ಖಾನೆಯನ್ನು ಖಾಸಗೀಯವರಿಗೆ ಗುತ್ತಿಗೆ ನೀಡಬೇಕೆಂದು ಸಚಿವ ಸಂಪುಟ ನಿರ್ಣಯ ತೆಗೆದುಕೊಂಡಿತ್ತು. ಇದರ ವಿರುದ್ಧ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಕಳೆದ 36 ದಿನಗಳಿಂದ ಮಂಡ್ಯದಲ್ಲಿ ರೈತ, ಪ್ರಗತಿಪರ, ಕನ್ನಡಪರ ಮತ್ತು ಎಡಪಕ್ಷಗಳು ನಿರಂತರ ಪ್ರತಿಭಟನೆ ನಡೆಸಿದ್ದವು. ಇದೆಲ್ಲದರ ಪರಿಣಾಮವಾಗಿ ಸಿಎಂ ಖಾಸಗೀಕರಣ ಪ್ರಕ್ರಿಯೆಗೆ ತಡೆಯೊಡ್ಡಿದ್ದು, ಸರ್ಕಾರದಿಂದಲೇ ಪುನಶ್ಚೇತನಕ್ಕೆ ತಜ್ಞರ ಸಮಿತಿ ರಚನೆ ಮಾಡುವುದಾಗಿ ತಿಳಿಸಿದ್ದಾರೆ.
ಈ ವಿಷಯವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಮೈಶುಗರ್ ಗೆ ಒಬ್ಬ ಅನುಭವಿ ಹಿರಿಯ ತಜ್ಞರ ನೇತೃತ್ವದಲ್ಲಿ ಸಮೀತಿ ನೇಮಕ ಮಾಡಲಾಗುವುದು. ತಜ್ಞರ ಸಮಿತಿ ಮೂರು ತಿಂಗಳಲ್ಲಿ ತನ್ನ ಅಂತಿಮ ವರದಿಯನ್ನು ಸಲ್ಲಿಸಲಿದೆ. ಅದರ ಆಧಾರದಲ್ಲಿ ಕಾರ್ಖಾನೆ ಪುನಶ್ಚೇತನಕ್ಕೆ ಸಂಬಂಧಪಟ್ಟಂತೆ ಕ್ರಮಗಳನ್ನು ವಹಿಸಲಾಗುವುದು. ಕಾರ್ಖಾನೆ ಕಬ್ಬು ನುರಿಸುವ ಸಾಮರ್ಥ್ಯ ವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಯಂತ್ರೋಪಕರಣಗಳ ದುರಸ್ಥಿಗೆ ಆರ್ಥಿಕ ನೆರವು ನೀಡಲಾಗುವುದು. ಬರುವ ಹಂಗಾಮಿನಿಂದ ಕಬ್ಬು ನುರಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು” ಎಂದಿದ್ದಾರೆ.
ಕಾರ್ಖಾನೆ ಪುನರಾರಂಭಕ್ಕೆ ಅಗತ್ಯವಿರುವ ಹಣಕಾಸಿನ ವಿವರ ಹಾಗೂ ದುಡಿಯುವ ಬಂಡವಾಳ ಕುರಿತಂತೆ ಮಾಹಿತಿ ಒದಗಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ಹೇಳಿದ್ದಾರೆ.
ಉನ್ನತ ಮಟ್ಟದ ಸಭೆಯಲ್ಲಿ ಸಚಿವರಾದ ಮಾಧುಸ್ವಾಮಿ, ಮುನೇನಕೊಪ್ಪ, ಎಸ್ ಟಿ ಸೋಮಶೇಖರ್, ನಾರಾಯಣಗೌಡ, ಮಂಡ್ಯ ಜಿಲ್ಲೆ ಸಂಸದೆ ಹಾಗೂ ಎಲ್ಲಾ ಶಾಸಕರು, ಮಂಡ್ಯ ಜಿಲ್ಲಾ ಹಿತರಕ್ಷಣಾ ವೇದಿಕೆಯ ಪಧಾದಿಕಾರಿಗಳು, ಹೋರಾಟಗಾರರಾದ ಕೆ.ಬೋರಯ್ಯ, ಸುನಂದಾ ಜಯರಾಂ, ಎಂ.ಪುಟ್ಟಮಾದು, ಶ್ರೀ ಮತಿ ದೇವಿ, ಎಂ.ಬಿ.ಶ್ರೀನಿವಾಸ್, ಇಂಡುವಾಳು ಚಂದ್ರಶೇಖರ್, ಸುಧೀರ್ ಕುಮಾರ್, ತಗ್ಗಳ್ಳಿ ವೆಂಕಟೇಶ್, ಕಾಳೇಗೌಡ ಸೇರಿದಂತೆ ಇತರರು ಭಾಗವಹಿಸಿದ್ದರು.
ಇದನ್ನೂ ಓದಿ: ನಾವು ಅಧಿಕಾರಕ್ಕೆ ಬಂದ ಒಂದು ತಿಂಗಳೊಳಗೆ ಮೈಷುಗರ್ ಕಾರ್ಖಾನೆ ಪುನರ್ ಆರಂಭಿಸುತ್ತೇವೆ: ಸಿದ್ದರಾಮಯ್ಯ