ಸಾವರ್ಕರ್ ಅವರು ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆಯುವಂತೆ ಗಾಂಧೀಜಿ ಸಲಹೆ ನೀಡಿದ್ದರು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನೀಡಿರುವ ಹೇಳಿಕೆಯು ‘ಹಾಸ್ಯಾಸ್ಪದ, ಅಸಂಬದ್ಧ ಹಾಗೂ ವಿವೇಚನಾ ರಹಿತ” ಎಂದು ಗಾಂಧೀಜಿಯವರ ಮೊಮ್ಮಗ, ಜೀವನಚರಿತ್ರಕಾರ ರಾಜಮೋಹನ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ.
‘ದಿ ವೈರ್’ ಜಾಲತಾಣದಲ್ಲಿ ಕರಣ್ ಥಾಪರ್ ಅವರು ನಡೆಸಿರುವ ವಿಡಿಯೋ ಸಂದರ್ಶನದಲ್ಲಿ ಮಾತನಾಡಿರುವ ಅರ್ಬಾನಾ-ಷಾಂಪೇನ್ನ ಇಲಿನಾಯ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ರಾಜಮೋಹನ್ ಗಾಂಧಿ, “ರಾಜನಾಥ್ ಸಿಂಗ್ ಅವರ ಹೇಳಿಕೆ ಸಂಪೂರ್ಣ ತಪ್ಪಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಸಾವರ್ಕರ್ ಅವರು ಹಲವು ಕ್ಷಮಾಪಣಾ ಪತ್ರಗಳನ್ನು ಬರೆದಿದ್ದರು ಎಂದು ಹೇಳುವುದು ತಪ್ಪೆಂದು ರಾಜನಾಥ್ ಸಿಂಗ್ ಹೇಳಿರುವುದು ಸಂಪೂರ್ಣ ಸುಳ್ಳು. ಅಂಡಮಾನ್ ಜೈಲಿಗೆ ಹಾಕಿದ ಕೆಲವೇ ದಿನಗಳಲ್ಲಿ 1911ರಲ್ಲಿ ಸಾವರ್ಕರ್ ಕ್ಷಮಾಪಣಾ ಪತ್ರ ಬರೆದಿದ್ದರು. ಅಲ್ಲದೆ ಸಾವರ್ಕರ್ ಅವರು ಒಟ್ಟು ಏಳು ಕ್ಷಮಾಪಣಾ ಪತ್ರಗಳನ್ನು ಬರೆದಿದ್ದರು ಎಂದು ರಾಜಮೋಹನ್ ಗಾಂಧಿ ತಿಳಿಸಿದ್ದಾರೆ.
ಕ್ಷಮಾಪಣೆ ಕೇಳಲು ಇದ್ದ ಅವಕಾಶದಲ್ಲಿ ಬಿಡುಗಾಗಿ ಸಾವರ್ಕರ್ ಕೋರಿಕೆ ಸಲ್ಲಿಸಿದ್ದರು. “1913ರ ಕ್ಷಮಾಪಣಾ ಅರ್ಜಿಯಲ್ಲಿ ಸರ್ಕಾರ ತನ್ನ ಬಹುಮುಖ ಲಾಭ ಮತ್ತು ಕರುಣೆಯಲ್ಲಿ ನನ್ನನ್ನು ಬಿಡುಗಡೆ ಮಾಡಲಿ” ಎಂದು ಕೇಳಿಕೊಂಡಿದ್ದರು. ಇದು ಕ್ಷಮಾಪಣೆಯಲ್ಲದೆ ಮತ್ತೇನು” ಎಂದು ರಾಜಮೋಹನ್ ಗಾಂಧಿ ಪ್ರಶ್ನಿಸಿದ್ದಾರೆ.
1920ರ ಜನವರಿ ಸಾವರ್ಕರ್ ಅವರಿಗೆ ಬರೆದ ಪತ್ರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರಾಜಮೋಹನ ಗಾಂಧಿಯವರು, ಸಾವರ್ಕರ್ ಅವರ ಕಿರಿಯ ಸಹೋದರ ನಾರಾಯಣ್ ರಾವ್ ಅವರು ಸಹಾಯಕ್ಕಾಗಿ ಮಾಡಿದ ಮನವಿಗೆ ಪ್ರತ್ಯುತ್ತರವಾಗಿತ್ತು. ಗಾಂಧೀಜಿಯವರು ಸ್ವಂತ ಇಚ್ಛೆಯಿಂದ ಪತ್ರ ಬರೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಾವರ್ಕರ್ ಅವರ ಅಪರಾಧವನ್ನು ರಾಜಕೀಯ ಎಂದು ತೋರಿಸಲು ಗಾಂಧಿ ಪತ್ರವು ಸಲಹೆ ನೀಡಿದೆ. ಕ್ಷಮಾಪಣೆಗಾಗಿ ಮನವಿ ಮಾಡಲು ಗಾಂಧೀಜಿಯವರು ಪತ್ರ ಬರೆದಿಲ್ಲ. ಮುಖ್ಯವಾಗಿ ಸಾವರ್ಕರ್ ಅವರಿಗೆ ಗಾಂಧೀಜಿಯವರು ಪತ್ರ ಬರೆಯುವ ಒಂಬತ್ತು ವರ್ಷಗಳ ಮೊದಲೇ ಸಾವರ್ಕರ್ ಕ್ಷಮಾಪಣಾ ಪತ್ರಗಳನ್ನು ಬ್ರಿಟಿಷರಿಗೆ ಬರೆದಿದ್ದರು ಎಂದು ತಿಳಿಸಿದ್ದಾರೆ.
ಗಾಂಧೀಜಿಯವರು 1920, ಮೇ ತಿಂಗಳಲ್ಲಿ ಸಾವರ್ಕರ್ ಸಹೋದರರ ಕುರಿತು ಲೇಖನ ಬರೆದಿದ್ದರು ಎಂಬುದನ್ನು ಒಪ್ಪಿಕೊಂಡಿರುವ ರಾಜಮೋಹನ್ ಗಾಂಧಿ, “ಬ್ರಿಟಿಷರ ಸಂಪರ್ಕದಿಂದ ಕಳೆದುಕೊಂಡ ಸ್ವತಂತ್ರವಾಗಲು ಅವರು ಬಯಸಿರಲಿಲ್ಲ. ಇದಕ್ಕೆ ಬದಲಾಗಿ ಬ್ರಿಟಿಷರ ಜೊತೆಗೂಡಿ ಭಾರತದ ಭವಿಷ್ಯವನ್ನು ಉತ್ತಮವಾಗಿ ರೂಪಿಸಬಹುದು ಎಂದು ಭಾವಿಸಿದ್ದರು” ಎಂದೂ ಉಲ್ಲೇಖಿಸಿದ್ದಾರೆ.
(ಸಂದರ್ಶನದ ಪೂರ್ಣ ವಿಡಿಯೋ ನೋಡಲು ‘ಇಲ್ಲಿ ಕ್ಲಿಕ್’ ಮಾಡಿ)
ಇದನ್ನೂ ಓದಿರಿ: ಸಾವರ್ಕರ್ ಕ್ಷಮಾದಾನ ಅರ್ಜಿ- ಗಾಂಧಿ ಸಲಹೆ ನೀಡಿದ್ದರೇ ?