ಆರ್ಯನ್ ಖಾನ್ ಅವರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಮತ್ತು ಅವರು ಮಾದಕದ್ರವ್ಯ ನಿಯಂತ್ರಣ ಬ್ಯೂರೋದ (NCB) ಅಧಿಕಾರಿಯ ಹಗೆತನಕ್ಕೆ ಬಲಿಯಾಗಿದ್ದಾರೆ ಹೀಗಾಗಿ ಇದರಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಎಂದು ಶಿವಸೇನಾ ಮುಖಂಡರೊಬ್ಬರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಎನ್ಸಿಬಿ ಅಧಿಕಾರಿಯ ಪತ್ನಿ ಚಿತ್ರರಂಗದಲ್ಲಿ ಗೆಲುವು ಕಾಣಲು ವಿಫಲರಾದ ಕಾರಣ ಬಾಲಿವುಡ್ ನಟ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಮೇಲೆ ಹಗೆ ಸಾಧಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಶಿವಸೇನಾ ನಾಯಕ, ರಾಜ್ಯ ಸಚಿವ ಕಿಶೋರ್ ತಿವಾರಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಮುಂಬೈನ ಕಡಲತೀರದಲ್ಲಿ ಕ್ರೂಸ್ ಹಡಗಿನ ಮೇಲಿನ ದಾಳಿ ಪ್ರಕರಣದಲ್ಲಿ ರಾಜಕೀಯ ತಾರಕಕ್ಕೇರಿದೆ. ಈ ತಿಂಗಳ ಅಕ್ಟೋಬರ್ 2 ರಂದು ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಸೇರಿದಂತೆ ಇತರ ಏಳು ಮಂದಿಯನ್ನು ಎನ್ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಇದನ್ನೂ ಓದಿ: ಆರ್ಯನ್ ಡ್ರಗ್ ಕೇಸ್: ಎನ್ಸಿಬಿ ಅಧಿಕಾರಿ ಮೇಲೆ ಬೇಹುಗಾರಿಕೆ
ಮಹಾರಾಷ್ಟ್ರದ ಆಡಳಿತ ಸರ್ಕಾರ ವಿಶೇಷವಾಗಿ ಶಿವಸೇನೆ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (NCP), ಒಕ್ಕೂಟ ಸರ್ಕಾರದ ಆದೇಶದ ಮೇರೆಗೆ NCB ಆರ್ಯನ್ ಖಾನ್ ಅವರನ್ನು ಗುರಿಯಾಗಿಸಿದೆ ಎಂದು ಆರೋಪಿಸಿವೆ.
ಕಿಶೋರ್ ತಿವಾರಿ ಸಲ್ಲಿಸಿರುವ ಅರ್ಜಿಯಲ್ಲಿ, ಡ್ರಗ್ಸ್ ವಿರೋಧಿ ಏಜೆನ್ಸಿಯು ಚಲನಚಿತ್ರರಂಗದ ವ್ಯಕ್ತಿಗಳು ಮತ್ತು ಮಾಡೆಲ್ಗಳನ್ನು ಗುರಿಯಾಗಿಸಿಕೊಂಡು ಕೊಳಕು ಹಗೆತನ ಸಾಧಿಸುತ್ತಿದೆ. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕು ಮತ್ತು ಆರ್ಯನ್ ಖಾನ್ರ ಮೂಲಭೂತ ಹಕ್ಕುಗಳನ್ನು ರಕ್ಷಿಸಬೇಕು ಎಂದು ಮನವಿ ಮಾಡಲಾಗಿದೆ.
ಮುಂಬಯಿ ನ್ಯಾಯಾಲಯವು ಆರ್ಯನ್ ಖಾನ್ ಜಾಮೀನು ಅರ್ಜಿಯ ತೀರ್ಪನ್ನು ನಾಳೆಗೆ (ಅ.20) ಮುಂದೂಡುಡಿರುವುದನ್ನು ಉಲ್ಲೇಖಿಸಿರುವ, ಶಿವಸೇನಾ ನಾಯಕ ಇದು ದೊಡ್ಡ ಅವಮಾನ ಎಂದಿದ್ದಾರೆ. 23 ವರ್ಷ ವಯಸ್ಸಿನ ಆರ್ಯನ್ ಖಾನ್ರನ್ನು ಕಾನೂನುಬಾಹಿರವಾಗಿ ಬಂಧಿಸಿ, 17 ರಾತ್ರಿಗಳು ಜೈಲಿನಲ್ಲಿ ಇಡಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಹಿಂದೆ ಶಿವಸೇನಾ ಮುಖ್ಯಸ್ಥ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೂಡ ಮಾದಕದ್ರವ್ಯ ವಿರೋಧಿ ಏಜೆನ್ಸಿ(NCB) ಸೆಲೆಬ್ರಿಟಿಗಳನ್ನು ಹಿಡಿಯಲು ಮಾತ್ರ ಆಸಕ್ತಿ ಹೊಂದಿದೆ ಎಂದು ಆರೋಪಿಸಿದ್ದರು. ಆರ್ಯನ್ ಖಾನ್ ಅಕ್ಟೋಬರ್ 8 ರಿಂದ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿದ್ದಾರೆ.
ಡ್ರಗ್ಸ್ ವಿರೋಧಿ ಏಜೆನ್ಸಿಯ ಅಧಿಕಾರಿಗಳು ಅಕ್ಟೋಬರ್ 2 ರಂದು ಮಾರುವೇಷದಲ್ಲಿ ಮುಂಬೈನ ಕಡಲತೀರದಲ್ಲಿ ಕ್ರೂಸ್ ಹಡಗಿನಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿ ಮೇಲೆ ದಾಳಿ ಮಾಡಿದ ಕೆಲವೇ ಗಂಟೆಗಳಲ್ಲಿ ಆರ್ಯನ್ ಖಾನ್ ಅವರನ್ನು ಬಂಧಿಸಲಾಗಿತ್ತು. ಅರ್ಬಾಜ್ ಮರ್ಚೆಂಟ್ ಸೇರಿದಂತೆ ಇತರ 7 ಮಂದಿಯನ್ನು ಅಕ್ಟೋಬರ್ 3 ರಂದು ಬಂಧಿಸಲಾಗಿದೆ.
ಇದನ್ನೂ ಓದಿ: ಡ್ರಗ್ಸ್ ಕೇಸ್: ಆರ್ಯನ್ ಖಾನ್ಗೆ ಸಿಗದ ಜಾಮೀನು, ಅ.20 ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್