Homeಕರ್ನಾಟಕಕಾಗೇರಿ ಸ್ಪೀಕರಿಕೆ ಸುತ್ತ ಛೂಮಂತ್ರಿ ಗಾಳಿ!!

ಕಾಗೇರಿ ಸ್ಪೀಕರಿಕೆ ಸುತ್ತ ಛೂಮಂತ್ರಿ ಗಾಳಿ!!

ಉತ್ತರಕನ್ನಡದ ಇನ್ನುಳಿದ ಮೂವರು ಬಿಜೆಪಿ ಶಾಸಕರು ಶಿವರಾಮ ಹೆಬ್ಬಾರ್ ವನವಾಸ ಮುಗಿಸಿ ಬರುವವರೆಗೆ ಆತನ ಪಾದುಕೆ ಇಟ್ಟುಕೊಂಡು ಮಂತ್ರಿಗಿರಿ ಮಾಡುವ ಮಾತಾಡುತ್ತಿದ್ದಾರೆ.

- Advertisement -
- Advertisement -

ಕಾಗೇರಿ ತನಗೇ ಅರಿವಿಲ್ಲದೆ ಸ್ಪೀಕರ್ ಪೀಠ ಏರಿಬಿಟ್ಟಿದ್ದಾರೆ. ಹೊಸ ಸ್ಪೀಕರ್ ಅಭಿನಂದಿಸುತ್ತಾ ನಿರ್ಗಮಿತ ಸ್ಪೀಕರ್ ರಮೇಶ್‍ಕುಮಾರ್ ಆಡಿದ ಅರ್ಥಪೂರ್ಣ ಮಾತುಗಳು ಕಾಗೇರಿಯ ಕಂಗೆಟ್ಟ ಸ್ಥಿತಿಗತಿಗೆ ಹಿಡಿದ ಕನ್ನಡಿಯಂತಿತ್ತು!

“ಸ್ಪೀಕರ್ ಸ್ಥಾನ ತುಂಬ ದೊಡ್ಡದು… ಒದ್ದು ಮೇಲಕ್ಕೆ ಕಳಿಸ್ತಾರೆ… ಕೇಳಿದ್ರೆ ನೀನು ತುಂಬಾ ಎತ್ತರದಲ್ಲಿದ್ದೀಯಾ ಅಂತಾರೆ… ಸಾಮಾನ್ಯವಾಗಿ ಸ್ಪೀಕರ್ ಮಾಡೋದು, ಯಾರನ್ನು ಮಂತ್ರಿ ಮಾಡಲಿಕ್ಕೆ ಆಗೋದಿಲ್ಲವೋ ಅಥವಾ ಯಾರು ನಿವೃತ್ತಿ ಅಂಚಿನಲ್ಲಿರ್ತಾರೋ ಅಂಥೋರಿಗೆ” ಎಂದು ರಮೇಶ್‍ಕುಮಾರ್ ಹೇಳಿದಾಗ ಇಡೀ ಸದನ ನಗೆಗಡಲಲ್ಲಿ ತೇಲಿತ್ತು.

ಮೇಲುನೋಟಕ್ಕೆ ರಮೇಶ್ ಕುಮಾರ್ ಮಾತುಗಾರಿಕೆ ತಮಾಷೆಯಾಗಿ ಕಂಡರೂ ವಾಸ್ತವಿಕವಾಗಿ ಕಾಗೇರಿ ಸ್ಪೀಕರ್ ಹುದ್ದೆ ಒಪ್ಪಿಕೊಳ್ಳಬೇಕಾಗಿ ಬಂದ ಸಂದರ್ಭಕ್ಕೆ ಅಕ್ಷರಶಃ ಅನ್ವಯವಾಗುತ್ತದೆ. ಕಾಗೇರಿ ಸಭಾಧ್ಯಕ್ಷತೆ ಬಯಸಿ ಪಡೆದದ್ದಲ್ಲ, ಆ ಉಸಾಬರಿ ತನಗೆ ಬೇಡವೆಂದು ಕೊನೆಕ್ಷಣದವರೆಗೂ ಕಾಗೇರಿ ಕ್ಯಾತೆ ತೆಗೆಯುತ್ತಲೇ ಇದ್ದರು. ತನಗೆ ಸ್ಪೀಕರ್ ಪೀಠ ಅನಿವಾರ್ಯವಾಗಬಹುದೆಂದು ಕನಸುಮನಸಿನಲ್ಲಿಯೂ ಕಾಗೇರಿ ಎಣಿಸಿರಲಿಲ್ಲ. ತನಗೆಂದೂ ನಿಷ್ಠನಲ್ಲದ, ವಿರೋಧಿ ಬ್ರಾಹ್ಮಣ ಲಾಬಿಯ ಕಾಗೇರಿಯನ್ನು ಸ್ಪೀಕರ್ ಪೀಠದಲ್ಲಿ ಪ್ರತಿಷ್ಠಾಪಿಸುವ ಮನಸ್ಸು ಯಡ್ಡಿಗೂ ಒಂಚೂರು ಇರಲಿಲ್ಲ. ಯಡ್ಡಿಯ ಶತ್ರುವೂ, ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿರುವ ಬಿ.ಎಲ್.ಸಂತೋಷ್ ತಂಡದ ತಂತ್ರಗಾರಿಕೆಯಿಂದಾಗಿ ಕಾಗೇರಿ ಸ್ಪೀಕರ್ ಆಗಬೇಕಾಗಿ ಬಂತು.

ಕಾಗೇರಿಗೆ ಮತ್ತೊಂದು ಸಂದಿಗ್ಧವೂ ಎದುರಾಗಿತ್ತು. ಆತನ ಶಿರಸಿ ಕ್ಷೇತ್ರದ ಪಕ್ಕದ ಯಲ್ಲಾಪುರದ ಶಾಸಕನಾಗಿದ್ದ ಶಿವರಾಮ ಹೆಬ್ಬಾರ್ ಕಾಂಗ್ರೆಸ್‍ಗೆ ಕೈಕೊಟ್ಟು ಬಿಜೆಪಿ ಪಾಲಾಗಿದ್ದು ಕಾಗೇರಿಗೆ ದುಬಾರಿಯಾಗಿ ಪರಿಣಮಿಸಿತ್ತು. ಬಿಜೆಪಿ ಸರ್ಕಾರ ಹಿಂಬಾಗಿಲ ಮೂಲಕ ಸ್ಥಾಪನೆ ಆಗಿರುವುದೇ ಶಿವರಾಮ ಹೆಬ್ಬಾರ್ ಮತ್ತಿತರ 16 ಶಾಸಕರ ಬುರ್ನಾಸ್ ನಿಷ್ಠಾವಂತರಿಂದಲ್ಲವಾ? ಇವರನ್ನೆಲ್ಲಾ ಮಂತ್ರಿ ಮಾಡಬೇಕಾದ ದರ್ದು ಬಿಜೆಪಿಗಿದೆ. ಹೆಬ್ಬಾರ್‍ಗೆ ಮಂತ್ರಿ ಮಾಡಿದರೆ ಅದೇ ಹವ್ಯಕ ಜಾತಿಯ ಕಾಗೇರಿಗೆ ಸಚಿವ ಸ್ಥಾನ ಕೊಡಲಾಗದು. ಈ ಜಾತಿ-ಪ್ರಾದೇಶಿಕತೆ ಲೆಕ್ಕಾಚಾರ ಕಾಗೇರಿಯ ಆಸೆಗೆ ಕಲ್ಲು ಹಾಕಿತ್ತು. ಸ್ಪೀಕರಿಕೆ ಒಪ್ಪದಿದ್ದರೆ ಬರೀ ಶಾಸಕನಾಗಿ ಮಂತ್ರಿ ಹೆಬ್ಬಾರ್ ಎದುರು ಹೆತ್ಲಾಂಡಿಯಂತಾಗುವ ಆತಂಕ ಶುರುವಾಯಿತು. ಇದೇ ಹೊತ್ತಿಗೆ ಎಬಿವಿಪಿ ಕೇಡರಿನ ಕಾಗೇರಿಗೆ ಸಂಘಿ ಪರಿವಾರದ ಆದೇಶ ಧಿಕ್ಕರಿಸುವ ಧೈರ್ಯವೂ ಬರಲಿಲ್ಲ. ಆರ್‍ಎಸ್‍ಎಸ್ ಆಣತಿಯಂತೆ ಮತ್ತು ಅಸ್ತಿತ್ವದ ಅಂಜಿಕೆಯಿಂದ ಕಾಗೇರಿ ಸ್ಪೀಕರಿಕೆಗೆ ಸಿದ್ಧವಾಗಬೇಕಾಗಿ ಬಂತು, ಪಾಪ!!

ಈ ನೈಚ್ಚಾನುಸಂಧಾನದ ಹೊತ್ತಲ್ಲಿ ಕಾಗೇರಿ ಮಂತ್ರಿಗಿರಿ ತ್ಯಾಗಕ್ಕೆ ಒಂದು ಷರತ್ತು ವಿಧಿಸಿದ್ದಾರೆ. ಹೆಬ್ಬಾರ್ ಬಿಟ್ಟು ಉತ್ತರ ಕನ್ನಡದ ಬೇರ್ಯಾವ ಬಿಜೆಪಿ ಶಾಸಕನಿಗೂ ಮಂತ್ರಿ ಭಾಗ್ಯ ಕೊಡಬಾರದು, ಇದಕ್ಕೆ ಸಮ್ಮತಿಸಿದರಷ್ಟೇ ಸ್ಪೀಕರ್ ಆಫರ್ ಒಪ್ಪುತ್ತೇನೆಂದು ಕಾಗೇರಿ ಕಡ್ಡಿ ಮುರಿದಂತೆ ಯಡ್ಡಿಗೆ ಹೇಳಿದ್ದಾರೆ.

ಇದಕ್ಕೆ ಸಂಘ ಪರಿವಾರದ ಪ್ರಚೋದನೆ, ಅನುಮೋದನೆ ಎರಡೂ ಇತ್ತು. ಆದರೆ ಹೆಬ್ಬಾರ್‍ಗೆ ಬಿಜೆಪಿ ಸರ್ಕಾರದಲ್ಲಿ ಸಚಿವನಾಗುವ ಕಾಲ ಯಾವಾಗ ಕೂಡಿಬರುತ್ತದೋ ಹೇಳಲಾಗದು. ಅನರ್ಹತೆ ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಹೋಗಿರುವ ಅತೃಪ್ತರು ವಿಚಾರಣೆ ಮುಗಿದು ತೀರ್ಪು ಬರುವತನಕ ಮಂತ್ರಿ ಆಗಲಾರರು. ಈ ವಿಚಾರಣೆ ಎಷ್ಟು ದೂರ ಎಳೆದುಕೊಂಡು ಹೋಗುತ್ತದೋ ಹೇಳಲಾಗದು. ಹಿಂದೆ ಯಡ್ಡಿ ಪರ್ವದಲ್ಲಿ ಬಾಲಚಂದ್ರ ಜಾರಕಿಹೊಳಿ, ಆನಂದ್ ಅಸ್ನೋಟಿಕರ್, ಶಿವನಗೌಡ ನಾಯಕ್,,,, ವಗೈರೆಗಳು ಬರೋಬ್ಬರಿ ಒಂಬತ್ತು ತಿಂಗಳು ಅಂತರ್‍ಪಿಶಾಚಿಗಳಾಗಿದ್ದರು.

ಹೆಬ್ಬಾರ್ ಅತಂತ್ರತೆ ಅನಿರ್ದಿಷ್ಟಾವಧಿ ಎಂಬುದಂತೂ ಗ್ಯಾರಂಟಿ. ಹೀಗಾಗಿ ಉತ್ತರಕನ್ನಡದ ಇನ್ನುಳಿದ ಮೂವರು ಬಿಜೆಪಿ ಶಾಸಕರಲ್ಲಿ ನಿಧಾನಕ್ಕೆ ಮಂತ್ರಿ ಆಗುವ ಆಸೆ ಮೊಳೆಯುತ್ತಿದೆ. ಕಾರವಾರದ ರೂಪಾಲಿ ನಾಯಕ್, ಕುಮುಟದ ದಿನಕರ ಶೆಟ್ಟಿ ಮತ್ತು ಭಟ್ಕಳದ ಸುನೀಲ್ ನಾಯ್ಕ ಒಬ್ಬರಿಗೊಬ್ಬರು ಗೊತ್ತಾಗದಂತೆ ಹೆಬ್ಬಾರ್ ಭೇಟಿ ಮಾಡುತ್ತಿದ್ದಾರೆ. ಎಲ್ಲರದೂ ಒಂದೇ ಬೇಡಿಕೆ!! “ಹೆಬ್ಬಾರಣ್ಣ ನಿಮಗೆ ಮಂತ್ರಿ ಮಾಡುವತನಕ ನನಗೊಂದು ಚಾನ್ಸ್ ಕೊಡ್ಸಿ… ಸುಪ್ರೀಂನಲ್ಲಿ ನೀವು ಗೆದ್ದು ಬಂದತಕ್ಷಣ ಅಥವಾ ಉಪಚುನಾವಣೇಲಿ ನೀವು ಗೆದ್ದ ಕ್ಷಣವೇ ಮಂತ್ರಿಗಿರಿ ಬಿಟ್ಟುಕೊಡ್ತೀನಿ…. ನೀವೇ ಮಂತ್ರಿ ಆಗ್ರಿ….” ಎಂದು ಮಸ್ಕ ಹೊಡೆಯುತ್ತಿದ್ದಾರೆ. ಹೆಬ್ಬಾರ್ ವನವಾಸ ಮುಗಿಸಿ ಬರುವವರೆಗೆ ಆತನ ಪಾದುಕೆ ಇಟ್ಟುಕೊಂಡು ಮಂತ್ರಿಗಿರಿ ಮಾಡುವ ಮಾತಾಡುತ್ತಿದ್ದಾರೆ.

ಕುಮಟೆಯ ದಿನಕರ ಶೆಟ್ಟಿಯಂತೂ ಒಂದು ಹೆಜ್ಜೆ ಮುಂದೆಯೇ ಹೋಗಿದ್ದಾರೆ. “ಹೆಬ್ಬಾರ್ ನನ್ನ ಎಲ್‍ಎಚ್ ರೂಮಿಗೆ ಬಂದು ನೀನೆ ಮಂತ್ರಿಯಾಗು… ನಿನ್ನ ಹೆಸರು ಸಿಎಂ ಮತ್ತು ಬಿಜೆಪಿ ಹೈಕಮಾಂಡ್‍ಗೆ ರೆಕಮೆಂಡ್ ಮಾಡ್ತೇನೆ… ನನ್ನ ಚಾನ್ಸ್ ಕುದುರಿದಾಗ ತಕರಾರು ಮಾಡದೆ ಸ್ಥಾನ ಬಿಟ್ಟುಕೊಡುವುದು ಎಂದು ಹೇಳಿದ್ದಾರೆ.” ಹಾಗಾಗಿ ನನಗೇ ಮಂತ್ರಿಖಾತೆ ಎಂದು ಪೊಕಳೆ ಬಿಡುತ್ತಿದ್ದಾನೆ ಪಾಪದ ಕಾರ್ಯಕರ್ತರೆದುರು.

ಮಹಿಳಾ ಕೋಟಾದಲ್ಲಿ “ಯಡ್ಡಿಫಾದರ್” ತನಗೆ ಅವಕಾಶ ಕೊಡೋದು ಖಂಡಿತ ಎಂಬ ಭ್ರಮೆಯಲ್ಲಿ ತೇಲಾಡುತ್ತಿರುವ ರೂಪಾಲಿ ನಾಯಕ್‍ಗೆ ಈಗಾಗಲೇ ಮಂತ್ರಿ ಭೂತ ಆವಾಹನೆ ಆಗಿಹೋಗಿದೆ. ಭಂಡ ಬಂಡುಕೋರ ಶಾಸಕರು ಸ್ವಾರ್ಥಸಾಧನೆಗಾಗಿ ಮುಂಬೈ ಹೊಟೇಲು ಸೇರಿಕೊಂಡು ಸಮ್ಮಿಶ್ರ ಸರ್ಕಾರ ಉರುಳಿಸುವ ಹಿಕಮತ್ತು ಮಾಡುತ್ತಿದ್ದಾಗ ಬಿಜೆಪಿ ಶಾಸಕರನ್ನು ಬೆಂಗಳೂರಿನ ರೆಸಾರ್ಟ್‍ನಲ್ಲಿ ಜಮೆ ಮಾಡಲಾಗಿತ್ತಲ್ಲವಾ? ಅದರಲ್ಲಿ ಕಾರವಾರದ ರೂಪಾಲಿಯೂ ಇದ್ದರು. ಆ ಹೊತ್ತಲ್ಲಿ ಕಾರವಾರ-ಆಂಕೋಲಾ ಮಳೆ ಆರ್ಭಟದಿಂದ ತತ್ತರಿಸುತ್ತಿತ್ತು. ಶಾಸಕಿ ನೊಂದವರ ಕೈಗೆಟುಕಲಿಲ್ಲ. ಜನರು ಕೆರಳಿದ್ದರು. ಇದರಿಂದ ಫಜೀತಿಗೆ ಬಿದ್ದ ರೂಪಾಲಿ ಸ್ಥಳೀಯ ಪತ್ರಿಕೆಯಲ್ಲಿ “ತಪೋಪ್ಪಿಗೆ” (ತಪ್ಪೊಪ್ಪಿಗೆ) ಜಾಹೀರಾತು ಕೊಟ್ಟು ನಗೆಪಾಟಲಿಗೀಡಾಗಿದ್ದಾರೆ. ಇಂಥ ರೂಪಾಲಿ ಮಂತ್ರಿಯಾಗುತ್ತಾಳೆಂದರೆ ಅದು ಕಾರವಾರ ಕ್ಷೇತ್ರದ ದುರಂತವೆಂದೇ ಜನರಾಡಿಕೊಳ್ಳುತ್ತಾರೆ.

ಮಂತ್ರಿಯಾಗಿ ಜೀವನದ ಕೊನೆಯ ಆಸೆ ಈಡೇರಿಸಿಕೊಳ್ಳಬೇಕು ಮತ್ತು ಅದಿರು ಅವ್ಯವಹಾರದ ಕೇಸ್ ಕುಣಿಕೆಯಿಂದ ಬಚಾವಾಗಬೇಕೆಂಬ ಎರಡು ಉದ್ದೇಶವಿಟ್ಟುಕೊಂಡು ಅನೈತಿಕ ರಾಜಕಾರಣ ಹೆಬ್ಬಾರ್ ಶುರುವಿಟ್ಟುಕೊಂಡಿರುವುದು ಕಾಂಗ್ರೆಸ್‍ನಲ್ಲೂ ಕಂಪನಗಳನ್ನೆಬ್ಬಿಸುತ್ತಿದೆ. ಸುಪ್ರೀಂ ತೀರ್ಪು ಹೇಗೆ ಬರಲಿ, ಯಲ್ಲಾಪುರ-ಮುಂಡಗೋಡ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುವುದಂತು ಪಕ್ಕ. ಹೀಗಾಗಿ ಕಾಂಗ್ರೆಸ್ ಕ್ಯಾಂಡಿಡೇಟ್ ತಲಾಷೆಗಿಳಿದಿದೆ.

ಒಂದುಮೂಲದ ಪ್ರಕಾರ ಮಾಜಿ ಮಂತ್ರಿ ದೇಶಪಾಂಡೆ ಈ ಸಮರ ಸೀರಿಯಸ್ಸಾಗಿ ಪರಿಗಣಿಸಿದ್ದರಂತೆ. ಏಕೆಂದರೆ ತಾನು ಕಾಂಗ್ರೆಸ್ ಬಿಡಲು ಬಲಾಢ್ಯ ದೇಶಪಾಂಡೆಯ ಕಿರುಕುಳವೇ ಕಾರಣ ಎಂಬಂತೆ ಸೀನ್ ಸೃಷ್ಟಿಸಿರುವ ಹೆಬ್ಬಾರ್‍ಗೆ ಪಾಠ ಕಲಿಸುವ ಹಟಕ್ಕೆ ದೇಶಪಾಂಡೆ ಬಿದ್ದಿದ್ಧರಂತೆ. ಹಾಗಾಗಿ ಆತ ತನ್ನ ಮಗ ಪ್ರಶಾಂತ ದೇಶಪಾಂಡೆಯನ್ನೇ ಕಾಂಗ್ರೆಸ್ ಕ್ಯಾಂಡಿಡೇಟ್ ಮಾಡಲು ಸ್ಕೆಚ್ ಹಾಕಿದ್ದರಂತೆ. ಇನ್ನೊಂದು ಬಾತ್ಮಿ ಪ್ರಕಾರ ದೇಶಪಾಂಡೆ ಮುದಿ ವಯಸ್ಸಿನಲ್ಲಿ ಮಗನನ್ನು ಪಣಕ್ಕಿಟ್ಟು ರಾಜಕಾರಣ ಮಾಡುವ ರಿಸ್ಕ್ ತೆಗೆದುಕೊಳ್ಳಲು ಸಾಧ್ಯವೇ ಇಲ್ಲವೆಂದು ಕಾಂಗ್ರೆಸ್ ಮೂಲಗಳು ಹೇಳುತ್ತಿವೆ.

ಡಿಸಿಸಿ ಅಧ್ಯಕ್ಷ ಭೀಮಣ್ಣ ನಾಯ್ಕ ಇದೇ ಕ್ಷೇತ್ರದವರು. ಆತ ಕಳೆದ ಬಾರಿ ಶಿರಸಿಯಲ್ಲಿ ನಿಂತು ಎಡವಿದ್ದರು. ಈಗ ಯಲ್ಲಾಪುರದಲ್ಲಿ ಗೆಲ್ಲುತ್ತೇನೆಂದು ಹೇಳುತ್ತಿದ್ದಾರೆ. ಆದರೆ ಆತನಿಗೆ ಗೆಲ್ಲುವ ತಾಕತ್ತು ಇಲ್ಲ. ಜನಸಾಮಾನ್ಯರ ವಿಶ್ವಾಸ ಗಳಿಸಿದ ವ್ಯಕ್ತಿತ್ವವೇ ಭೀಮಣ್ಣನದಲ್ಲ. ಆತ ಬರೀ ಡಮ್ಮಿ! ಇದು ಕೆಪಿಸಿಸಿ ಕಿಂಗ್‍ಗಳಿಗೂ ಗೊತ್ತಿದೆ. ಹಾಗಾಗಿ ಬೆಂಗಳೂರು ಮಟ್ಟದಲ್ಲಿ ಸದ್ಯಕ್ಕೆ ಜೆಡಿಎಸ್‍ನಲ್ಲಿರುವ ರಾಮಕೃಷ್ಣ ಹೆಗಡೆಜೀ ದಾಯಾದಿ ಮೊಮ್ಮಗ ಶಶಿಭೂಷಣ ಹೆಗಡೆ ಕಾಂಗ್ರೆಸ್ ಕ್ಯಾಂಡಿಡೇಟ್ ಮಾಡಿದ್ರೆ ಹೇಗೆಂಬ ಚರ್ಚೆ ನಡೆದಿದೆ.

ಹಾಗೊಮ್ಮೆ ಶಶಿಭೂಷಣ ಹೆಗಡೆ ಕಾಂಗ್ರೆಸ್ ಕ್ಯಾಂಡಿಡೇಟ್ ಆದರೆ ಹೆಬ್ಬಾರ್‍ಗೆ ದೊಡ್ಡ ಸವಾಲಾಗೋದು ನಿಸ್ಸಂಶಯ. ಯಲ್ಲಾಪುರ ಕ್ಷೇತ್ರದಲ್ಲಿ ದೊಡ್ಡ ಸಂಖ್ಯೆಯಲ್ಲಿ ಹವ್ಯಕ ಬ್ರಾಹ್ಮಣರು ಇರುವುದರಿಂದ ಶಶಿಗೆ ಈ ಸಮುದಾಯದ ಒಂದು ಭಾಗದ ಮತ ಖಂಡಿತ ಸಿಗುತ್ತದೆ. ಜೊತೆಗೆ ಕಾಂಗ್ರೆಸ್‍ನ ಸಾಂಪ್ರದಾಯಿಕ ಮತಗಳು ಮತ್ತು ಹೆಬ್ಬಾರ್‍ನ ವಿರೋಧಿಸುವ ಬಿಜೆಪಿ ಮೂಲನಿವಾಸಿಗಳ ತಂತ್ರ ಶಶಿಗೆ ನೆರವಾಗುತ್ತದೆ.
ಆರ್ಥಿಕವಾಗಿಯೂ ತೊಂದರೆಯಲ್ಲಿರುವ ಹೆಬ್ಬಾರ್‍ಗೆ ಪಕ್ಷದ್ರೋಹ ಆಟ ದುಬಾರಿಯಾಗಿ ಪರಿಣಮಿಸುತ್ತಿದೆ. ಕಂಗಾಲಾಗಿರುವ ಹಬ್ಬಾರ್ ಅಸ್ತಿತ್ವ ಉಳಿಸಿಕೊಳ್ಳಲು ನಿದ್ದೆಗೆಡುವಂತಾಗಿದೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....