Homeಕರ್ನಾಟಕಕಾಗೇರಿ ಸ್ಪೀಕರಿಕೆ ಸುತ್ತ ಛೂಮಂತ್ರಿ ಗಾಳಿ!!

ಕಾಗೇರಿ ಸ್ಪೀಕರಿಕೆ ಸುತ್ತ ಛೂಮಂತ್ರಿ ಗಾಳಿ!!

ಉತ್ತರಕನ್ನಡದ ಇನ್ನುಳಿದ ಮೂವರು ಬಿಜೆಪಿ ಶಾಸಕರು ಶಿವರಾಮ ಹೆಬ್ಬಾರ್ ವನವಾಸ ಮುಗಿಸಿ ಬರುವವರೆಗೆ ಆತನ ಪಾದುಕೆ ಇಟ್ಟುಕೊಂಡು ಮಂತ್ರಿಗಿರಿ ಮಾಡುವ ಮಾತಾಡುತ್ತಿದ್ದಾರೆ.

- Advertisement -
- Advertisement -

ಕಾಗೇರಿ ತನಗೇ ಅರಿವಿಲ್ಲದೆ ಸ್ಪೀಕರ್ ಪೀಠ ಏರಿಬಿಟ್ಟಿದ್ದಾರೆ. ಹೊಸ ಸ್ಪೀಕರ್ ಅಭಿನಂದಿಸುತ್ತಾ ನಿರ್ಗಮಿತ ಸ್ಪೀಕರ್ ರಮೇಶ್‍ಕುಮಾರ್ ಆಡಿದ ಅರ್ಥಪೂರ್ಣ ಮಾತುಗಳು ಕಾಗೇರಿಯ ಕಂಗೆಟ್ಟ ಸ್ಥಿತಿಗತಿಗೆ ಹಿಡಿದ ಕನ್ನಡಿಯಂತಿತ್ತು!

“ಸ್ಪೀಕರ್ ಸ್ಥಾನ ತುಂಬ ದೊಡ್ಡದು… ಒದ್ದು ಮೇಲಕ್ಕೆ ಕಳಿಸ್ತಾರೆ… ಕೇಳಿದ್ರೆ ನೀನು ತುಂಬಾ ಎತ್ತರದಲ್ಲಿದ್ದೀಯಾ ಅಂತಾರೆ… ಸಾಮಾನ್ಯವಾಗಿ ಸ್ಪೀಕರ್ ಮಾಡೋದು, ಯಾರನ್ನು ಮಂತ್ರಿ ಮಾಡಲಿಕ್ಕೆ ಆಗೋದಿಲ್ಲವೋ ಅಥವಾ ಯಾರು ನಿವೃತ್ತಿ ಅಂಚಿನಲ್ಲಿರ್ತಾರೋ ಅಂಥೋರಿಗೆ” ಎಂದು ರಮೇಶ್‍ಕುಮಾರ್ ಹೇಳಿದಾಗ ಇಡೀ ಸದನ ನಗೆಗಡಲಲ್ಲಿ ತೇಲಿತ್ತು.

ಮೇಲುನೋಟಕ್ಕೆ ರಮೇಶ್ ಕುಮಾರ್ ಮಾತುಗಾರಿಕೆ ತಮಾಷೆಯಾಗಿ ಕಂಡರೂ ವಾಸ್ತವಿಕವಾಗಿ ಕಾಗೇರಿ ಸ್ಪೀಕರ್ ಹುದ್ದೆ ಒಪ್ಪಿಕೊಳ್ಳಬೇಕಾಗಿ ಬಂದ ಸಂದರ್ಭಕ್ಕೆ ಅಕ್ಷರಶಃ ಅನ್ವಯವಾಗುತ್ತದೆ. ಕಾಗೇರಿ ಸಭಾಧ್ಯಕ್ಷತೆ ಬಯಸಿ ಪಡೆದದ್ದಲ್ಲ, ಆ ಉಸಾಬರಿ ತನಗೆ ಬೇಡವೆಂದು ಕೊನೆಕ್ಷಣದವರೆಗೂ ಕಾಗೇರಿ ಕ್ಯಾತೆ ತೆಗೆಯುತ್ತಲೇ ಇದ್ದರು. ತನಗೆ ಸ್ಪೀಕರ್ ಪೀಠ ಅನಿವಾರ್ಯವಾಗಬಹುದೆಂದು ಕನಸುಮನಸಿನಲ್ಲಿಯೂ ಕಾಗೇರಿ ಎಣಿಸಿರಲಿಲ್ಲ. ತನಗೆಂದೂ ನಿಷ್ಠನಲ್ಲದ, ವಿರೋಧಿ ಬ್ರಾಹ್ಮಣ ಲಾಬಿಯ ಕಾಗೇರಿಯನ್ನು ಸ್ಪೀಕರ್ ಪೀಠದಲ್ಲಿ ಪ್ರತಿಷ್ಠಾಪಿಸುವ ಮನಸ್ಸು ಯಡ್ಡಿಗೂ ಒಂಚೂರು ಇರಲಿಲ್ಲ. ಯಡ್ಡಿಯ ಶತ್ರುವೂ, ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿರುವ ಬಿ.ಎಲ್.ಸಂತೋಷ್ ತಂಡದ ತಂತ್ರಗಾರಿಕೆಯಿಂದಾಗಿ ಕಾಗೇರಿ ಸ್ಪೀಕರ್ ಆಗಬೇಕಾಗಿ ಬಂತು.

ಕಾಗೇರಿಗೆ ಮತ್ತೊಂದು ಸಂದಿಗ್ಧವೂ ಎದುರಾಗಿತ್ತು. ಆತನ ಶಿರಸಿ ಕ್ಷೇತ್ರದ ಪಕ್ಕದ ಯಲ್ಲಾಪುರದ ಶಾಸಕನಾಗಿದ್ದ ಶಿವರಾಮ ಹೆಬ್ಬಾರ್ ಕಾಂಗ್ರೆಸ್‍ಗೆ ಕೈಕೊಟ್ಟು ಬಿಜೆಪಿ ಪಾಲಾಗಿದ್ದು ಕಾಗೇರಿಗೆ ದುಬಾರಿಯಾಗಿ ಪರಿಣಮಿಸಿತ್ತು. ಬಿಜೆಪಿ ಸರ್ಕಾರ ಹಿಂಬಾಗಿಲ ಮೂಲಕ ಸ್ಥಾಪನೆ ಆಗಿರುವುದೇ ಶಿವರಾಮ ಹೆಬ್ಬಾರ್ ಮತ್ತಿತರ 16 ಶಾಸಕರ ಬುರ್ನಾಸ್ ನಿಷ್ಠಾವಂತರಿಂದಲ್ಲವಾ? ಇವರನ್ನೆಲ್ಲಾ ಮಂತ್ರಿ ಮಾಡಬೇಕಾದ ದರ್ದು ಬಿಜೆಪಿಗಿದೆ. ಹೆಬ್ಬಾರ್‍ಗೆ ಮಂತ್ರಿ ಮಾಡಿದರೆ ಅದೇ ಹವ್ಯಕ ಜಾತಿಯ ಕಾಗೇರಿಗೆ ಸಚಿವ ಸ್ಥಾನ ಕೊಡಲಾಗದು. ಈ ಜಾತಿ-ಪ್ರಾದೇಶಿಕತೆ ಲೆಕ್ಕಾಚಾರ ಕಾಗೇರಿಯ ಆಸೆಗೆ ಕಲ್ಲು ಹಾಕಿತ್ತು. ಸ್ಪೀಕರಿಕೆ ಒಪ್ಪದಿದ್ದರೆ ಬರೀ ಶಾಸಕನಾಗಿ ಮಂತ್ರಿ ಹೆಬ್ಬಾರ್ ಎದುರು ಹೆತ್ಲಾಂಡಿಯಂತಾಗುವ ಆತಂಕ ಶುರುವಾಯಿತು. ಇದೇ ಹೊತ್ತಿಗೆ ಎಬಿವಿಪಿ ಕೇಡರಿನ ಕಾಗೇರಿಗೆ ಸಂಘಿ ಪರಿವಾರದ ಆದೇಶ ಧಿಕ್ಕರಿಸುವ ಧೈರ್ಯವೂ ಬರಲಿಲ್ಲ. ಆರ್‍ಎಸ್‍ಎಸ್ ಆಣತಿಯಂತೆ ಮತ್ತು ಅಸ್ತಿತ್ವದ ಅಂಜಿಕೆಯಿಂದ ಕಾಗೇರಿ ಸ್ಪೀಕರಿಕೆಗೆ ಸಿದ್ಧವಾಗಬೇಕಾಗಿ ಬಂತು, ಪಾಪ!!

ಈ ನೈಚ್ಚಾನುಸಂಧಾನದ ಹೊತ್ತಲ್ಲಿ ಕಾಗೇರಿ ಮಂತ್ರಿಗಿರಿ ತ್ಯಾಗಕ್ಕೆ ಒಂದು ಷರತ್ತು ವಿಧಿಸಿದ್ದಾರೆ. ಹೆಬ್ಬಾರ್ ಬಿಟ್ಟು ಉತ್ತರ ಕನ್ನಡದ ಬೇರ್ಯಾವ ಬಿಜೆಪಿ ಶಾಸಕನಿಗೂ ಮಂತ್ರಿ ಭಾಗ್ಯ ಕೊಡಬಾರದು, ಇದಕ್ಕೆ ಸಮ್ಮತಿಸಿದರಷ್ಟೇ ಸ್ಪೀಕರ್ ಆಫರ್ ಒಪ್ಪುತ್ತೇನೆಂದು ಕಾಗೇರಿ ಕಡ್ಡಿ ಮುರಿದಂತೆ ಯಡ್ಡಿಗೆ ಹೇಳಿದ್ದಾರೆ.

ಇದಕ್ಕೆ ಸಂಘ ಪರಿವಾರದ ಪ್ರಚೋದನೆ, ಅನುಮೋದನೆ ಎರಡೂ ಇತ್ತು. ಆದರೆ ಹೆಬ್ಬಾರ್‍ಗೆ ಬಿಜೆಪಿ ಸರ್ಕಾರದಲ್ಲಿ ಸಚಿವನಾಗುವ ಕಾಲ ಯಾವಾಗ ಕೂಡಿಬರುತ್ತದೋ ಹೇಳಲಾಗದು. ಅನರ್ಹತೆ ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಹೋಗಿರುವ ಅತೃಪ್ತರು ವಿಚಾರಣೆ ಮುಗಿದು ತೀರ್ಪು ಬರುವತನಕ ಮಂತ್ರಿ ಆಗಲಾರರು. ಈ ವಿಚಾರಣೆ ಎಷ್ಟು ದೂರ ಎಳೆದುಕೊಂಡು ಹೋಗುತ್ತದೋ ಹೇಳಲಾಗದು. ಹಿಂದೆ ಯಡ್ಡಿ ಪರ್ವದಲ್ಲಿ ಬಾಲಚಂದ್ರ ಜಾರಕಿಹೊಳಿ, ಆನಂದ್ ಅಸ್ನೋಟಿಕರ್, ಶಿವನಗೌಡ ನಾಯಕ್,,,, ವಗೈರೆಗಳು ಬರೋಬ್ಬರಿ ಒಂಬತ್ತು ತಿಂಗಳು ಅಂತರ್‍ಪಿಶಾಚಿಗಳಾಗಿದ್ದರು.

ಹೆಬ್ಬಾರ್ ಅತಂತ್ರತೆ ಅನಿರ್ದಿಷ್ಟಾವಧಿ ಎಂಬುದಂತೂ ಗ್ಯಾರಂಟಿ. ಹೀಗಾಗಿ ಉತ್ತರಕನ್ನಡದ ಇನ್ನುಳಿದ ಮೂವರು ಬಿಜೆಪಿ ಶಾಸಕರಲ್ಲಿ ನಿಧಾನಕ್ಕೆ ಮಂತ್ರಿ ಆಗುವ ಆಸೆ ಮೊಳೆಯುತ್ತಿದೆ. ಕಾರವಾರದ ರೂಪಾಲಿ ನಾಯಕ್, ಕುಮುಟದ ದಿನಕರ ಶೆಟ್ಟಿ ಮತ್ತು ಭಟ್ಕಳದ ಸುನೀಲ್ ನಾಯ್ಕ ಒಬ್ಬರಿಗೊಬ್ಬರು ಗೊತ್ತಾಗದಂತೆ ಹೆಬ್ಬಾರ್ ಭೇಟಿ ಮಾಡುತ್ತಿದ್ದಾರೆ. ಎಲ್ಲರದೂ ಒಂದೇ ಬೇಡಿಕೆ!! “ಹೆಬ್ಬಾರಣ್ಣ ನಿಮಗೆ ಮಂತ್ರಿ ಮಾಡುವತನಕ ನನಗೊಂದು ಚಾನ್ಸ್ ಕೊಡ್ಸಿ… ಸುಪ್ರೀಂನಲ್ಲಿ ನೀವು ಗೆದ್ದು ಬಂದತಕ್ಷಣ ಅಥವಾ ಉಪಚುನಾವಣೇಲಿ ನೀವು ಗೆದ್ದ ಕ್ಷಣವೇ ಮಂತ್ರಿಗಿರಿ ಬಿಟ್ಟುಕೊಡ್ತೀನಿ…. ನೀವೇ ಮಂತ್ರಿ ಆಗ್ರಿ….” ಎಂದು ಮಸ್ಕ ಹೊಡೆಯುತ್ತಿದ್ದಾರೆ. ಹೆಬ್ಬಾರ್ ವನವಾಸ ಮುಗಿಸಿ ಬರುವವರೆಗೆ ಆತನ ಪಾದುಕೆ ಇಟ್ಟುಕೊಂಡು ಮಂತ್ರಿಗಿರಿ ಮಾಡುವ ಮಾತಾಡುತ್ತಿದ್ದಾರೆ.

ಕುಮಟೆಯ ದಿನಕರ ಶೆಟ್ಟಿಯಂತೂ ಒಂದು ಹೆಜ್ಜೆ ಮುಂದೆಯೇ ಹೋಗಿದ್ದಾರೆ. “ಹೆಬ್ಬಾರ್ ನನ್ನ ಎಲ್‍ಎಚ್ ರೂಮಿಗೆ ಬಂದು ನೀನೆ ಮಂತ್ರಿಯಾಗು… ನಿನ್ನ ಹೆಸರು ಸಿಎಂ ಮತ್ತು ಬಿಜೆಪಿ ಹೈಕಮಾಂಡ್‍ಗೆ ರೆಕಮೆಂಡ್ ಮಾಡ್ತೇನೆ… ನನ್ನ ಚಾನ್ಸ್ ಕುದುರಿದಾಗ ತಕರಾರು ಮಾಡದೆ ಸ್ಥಾನ ಬಿಟ್ಟುಕೊಡುವುದು ಎಂದು ಹೇಳಿದ್ದಾರೆ.” ಹಾಗಾಗಿ ನನಗೇ ಮಂತ್ರಿಖಾತೆ ಎಂದು ಪೊಕಳೆ ಬಿಡುತ್ತಿದ್ದಾನೆ ಪಾಪದ ಕಾರ್ಯಕರ್ತರೆದುರು.

ಮಹಿಳಾ ಕೋಟಾದಲ್ಲಿ “ಯಡ್ಡಿಫಾದರ್” ತನಗೆ ಅವಕಾಶ ಕೊಡೋದು ಖಂಡಿತ ಎಂಬ ಭ್ರಮೆಯಲ್ಲಿ ತೇಲಾಡುತ್ತಿರುವ ರೂಪಾಲಿ ನಾಯಕ್‍ಗೆ ಈಗಾಗಲೇ ಮಂತ್ರಿ ಭೂತ ಆವಾಹನೆ ಆಗಿಹೋಗಿದೆ. ಭಂಡ ಬಂಡುಕೋರ ಶಾಸಕರು ಸ್ವಾರ್ಥಸಾಧನೆಗಾಗಿ ಮುಂಬೈ ಹೊಟೇಲು ಸೇರಿಕೊಂಡು ಸಮ್ಮಿಶ್ರ ಸರ್ಕಾರ ಉರುಳಿಸುವ ಹಿಕಮತ್ತು ಮಾಡುತ್ತಿದ್ದಾಗ ಬಿಜೆಪಿ ಶಾಸಕರನ್ನು ಬೆಂಗಳೂರಿನ ರೆಸಾರ್ಟ್‍ನಲ್ಲಿ ಜಮೆ ಮಾಡಲಾಗಿತ್ತಲ್ಲವಾ? ಅದರಲ್ಲಿ ಕಾರವಾರದ ರೂಪಾಲಿಯೂ ಇದ್ದರು. ಆ ಹೊತ್ತಲ್ಲಿ ಕಾರವಾರ-ಆಂಕೋಲಾ ಮಳೆ ಆರ್ಭಟದಿಂದ ತತ್ತರಿಸುತ್ತಿತ್ತು. ಶಾಸಕಿ ನೊಂದವರ ಕೈಗೆಟುಕಲಿಲ್ಲ. ಜನರು ಕೆರಳಿದ್ದರು. ಇದರಿಂದ ಫಜೀತಿಗೆ ಬಿದ್ದ ರೂಪಾಲಿ ಸ್ಥಳೀಯ ಪತ್ರಿಕೆಯಲ್ಲಿ “ತಪೋಪ್ಪಿಗೆ” (ತಪ್ಪೊಪ್ಪಿಗೆ) ಜಾಹೀರಾತು ಕೊಟ್ಟು ನಗೆಪಾಟಲಿಗೀಡಾಗಿದ್ದಾರೆ. ಇಂಥ ರೂಪಾಲಿ ಮಂತ್ರಿಯಾಗುತ್ತಾಳೆಂದರೆ ಅದು ಕಾರವಾರ ಕ್ಷೇತ್ರದ ದುರಂತವೆಂದೇ ಜನರಾಡಿಕೊಳ್ಳುತ್ತಾರೆ.

ಮಂತ್ರಿಯಾಗಿ ಜೀವನದ ಕೊನೆಯ ಆಸೆ ಈಡೇರಿಸಿಕೊಳ್ಳಬೇಕು ಮತ್ತು ಅದಿರು ಅವ್ಯವಹಾರದ ಕೇಸ್ ಕುಣಿಕೆಯಿಂದ ಬಚಾವಾಗಬೇಕೆಂಬ ಎರಡು ಉದ್ದೇಶವಿಟ್ಟುಕೊಂಡು ಅನೈತಿಕ ರಾಜಕಾರಣ ಹೆಬ್ಬಾರ್ ಶುರುವಿಟ್ಟುಕೊಂಡಿರುವುದು ಕಾಂಗ್ರೆಸ್‍ನಲ್ಲೂ ಕಂಪನಗಳನ್ನೆಬ್ಬಿಸುತ್ತಿದೆ. ಸುಪ್ರೀಂ ತೀರ್ಪು ಹೇಗೆ ಬರಲಿ, ಯಲ್ಲಾಪುರ-ಮುಂಡಗೋಡ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುವುದಂತು ಪಕ್ಕ. ಹೀಗಾಗಿ ಕಾಂಗ್ರೆಸ್ ಕ್ಯಾಂಡಿಡೇಟ್ ತಲಾಷೆಗಿಳಿದಿದೆ.

ಒಂದುಮೂಲದ ಪ್ರಕಾರ ಮಾಜಿ ಮಂತ್ರಿ ದೇಶಪಾಂಡೆ ಈ ಸಮರ ಸೀರಿಯಸ್ಸಾಗಿ ಪರಿಗಣಿಸಿದ್ದರಂತೆ. ಏಕೆಂದರೆ ತಾನು ಕಾಂಗ್ರೆಸ್ ಬಿಡಲು ಬಲಾಢ್ಯ ದೇಶಪಾಂಡೆಯ ಕಿರುಕುಳವೇ ಕಾರಣ ಎಂಬಂತೆ ಸೀನ್ ಸೃಷ್ಟಿಸಿರುವ ಹೆಬ್ಬಾರ್‍ಗೆ ಪಾಠ ಕಲಿಸುವ ಹಟಕ್ಕೆ ದೇಶಪಾಂಡೆ ಬಿದ್ದಿದ್ಧರಂತೆ. ಹಾಗಾಗಿ ಆತ ತನ್ನ ಮಗ ಪ್ರಶಾಂತ ದೇಶಪಾಂಡೆಯನ್ನೇ ಕಾಂಗ್ರೆಸ್ ಕ್ಯಾಂಡಿಡೇಟ್ ಮಾಡಲು ಸ್ಕೆಚ್ ಹಾಕಿದ್ದರಂತೆ. ಇನ್ನೊಂದು ಬಾತ್ಮಿ ಪ್ರಕಾರ ದೇಶಪಾಂಡೆ ಮುದಿ ವಯಸ್ಸಿನಲ್ಲಿ ಮಗನನ್ನು ಪಣಕ್ಕಿಟ್ಟು ರಾಜಕಾರಣ ಮಾಡುವ ರಿಸ್ಕ್ ತೆಗೆದುಕೊಳ್ಳಲು ಸಾಧ್ಯವೇ ಇಲ್ಲವೆಂದು ಕಾಂಗ್ರೆಸ್ ಮೂಲಗಳು ಹೇಳುತ್ತಿವೆ.

ಡಿಸಿಸಿ ಅಧ್ಯಕ್ಷ ಭೀಮಣ್ಣ ನಾಯ್ಕ ಇದೇ ಕ್ಷೇತ್ರದವರು. ಆತ ಕಳೆದ ಬಾರಿ ಶಿರಸಿಯಲ್ಲಿ ನಿಂತು ಎಡವಿದ್ದರು. ಈಗ ಯಲ್ಲಾಪುರದಲ್ಲಿ ಗೆಲ್ಲುತ್ತೇನೆಂದು ಹೇಳುತ್ತಿದ್ದಾರೆ. ಆದರೆ ಆತನಿಗೆ ಗೆಲ್ಲುವ ತಾಕತ್ತು ಇಲ್ಲ. ಜನಸಾಮಾನ್ಯರ ವಿಶ್ವಾಸ ಗಳಿಸಿದ ವ್ಯಕ್ತಿತ್ವವೇ ಭೀಮಣ್ಣನದಲ್ಲ. ಆತ ಬರೀ ಡಮ್ಮಿ! ಇದು ಕೆಪಿಸಿಸಿ ಕಿಂಗ್‍ಗಳಿಗೂ ಗೊತ್ತಿದೆ. ಹಾಗಾಗಿ ಬೆಂಗಳೂರು ಮಟ್ಟದಲ್ಲಿ ಸದ್ಯಕ್ಕೆ ಜೆಡಿಎಸ್‍ನಲ್ಲಿರುವ ರಾಮಕೃಷ್ಣ ಹೆಗಡೆಜೀ ದಾಯಾದಿ ಮೊಮ್ಮಗ ಶಶಿಭೂಷಣ ಹೆಗಡೆ ಕಾಂಗ್ರೆಸ್ ಕ್ಯಾಂಡಿಡೇಟ್ ಮಾಡಿದ್ರೆ ಹೇಗೆಂಬ ಚರ್ಚೆ ನಡೆದಿದೆ.

ಹಾಗೊಮ್ಮೆ ಶಶಿಭೂಷಣ ಹೆಗಡೆ ಕಾಂಗ್ರೆಸ್ ಕ್ಯಾಂಡಿಡೇಟ್ ಆದರೆ ಹೆಬ್ಬಾರ್‍ಗೆ ದೊಡ್ಡ ಸವಾಲಾಗೋದು ನಿಸ್ಸಂಶಯ. ಯಲ್ಲಾಪುರ ಕ್ಷೇತ್ರದಲ್ಲಿ ದೊಡ್ಡ ಸಂಖ್ಯೆಯಲ್ಲಿ ಹವ್ಯಕ ಬ್ರಾಹ್ಮಣರು ಇರುವುದರಿಂದ ಶಶಿಗೆ ಈ ಸಮುದಾಯದ ಒಂದು ಭಾಗದ ಮತ ಖಂಡಿತ ಸಿಗುತ್ತದೆ. ಜೊತೆಗೆ ಕಾಂಗ್ರೆಸ್‍ನ ಸಾಂಪ್ರದಾಯಿಕ ಮತಗಳು ಮತ್ತು ಹೆಬ್ಬಾರ್‍ನ ವಿರೋಧಿಸುವ ಬಿಜೆಪಿ ಮೂಲನಿವಾಸಿಗಳ ತಂತ್ರ ಶಶಿಗೆ ನೆರವಾಗುತ್ತದೆ.
ಆರ್ಥಿಕವಾಗಿಯೂ ತೊಂದರೆಯಲ್ಲಿರುವ ಹೆಬ್ಬಾರ್‍ಗೆ ಪಕ್ಷದ್ರೋಹ ಆಟ ದುಬಾರಿಯಾಗಿ ಪರಿಣಮಿಸುತ್ತಿದೆ. ಕಂಗಾಲಾಗಿರುವ ಹಬ್ಬಾರ್ ಅಸ್ತಿತ್ವ ಉಳಿಸಿಕೊಳ್ಳಲು ನಿದ್ದೆಗೆಡುವಂತಾಗಿದೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...